ಬಿಜೆಪಿ ಪ್ರಚಾರ ತಂತ್ರದಲ್ಲಿ ಯೋಗಿ ಆದಿತ್ಯನಾಥ ಮಾದರಿ
ಬೆಂಗಳೂರು, ಏಪ್ರಿಲ್ 24: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕರಾವಳಿ ಭಾಗದ ಮತಗಳ ಮೇಲೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಪ್ರಭಾವ ಕಾಣಿಸಲಿದೆಯೇ?
ಮಂಗಳೂರಿನ ಮಠವೊಂದರ ನಂಟು ಹೊಂದಿರುವ ಆದಿತ್ಯನಾಥ ಬಿಜೆಪಿಯ ಪರಿವರ್ತನಾ ಯಾತ್ರೆಯ ಸಮಾವೇಶಗಳಲ್ಲಿ ಡಿಸೆಂಬರ್ ತಿಂಗಳಿನಲ್ಲಿ ಭಾಗವಹಿಸಿದ್ದರು. ಆಗ ಯೋಗಿ ಅವರು ಸಿದ್ದರಾಮಯ್ಯ, ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಅವರ ಭಾಷಣಗಳಲ್ಲಿ ಹಿಂದೂ-ಮುಸ್ಲಿಂ ವಿಚಾರಗಳೇ ಪ್ರಮುಖವಾಗಿದ್ದವು.
ಟೈಮ್ಸ್ ನೌ-ವಿಎಂಆರ್ ಸಮೀಕ್ಷೆ: ಹೆಚ್ಚಿನ ವಿಭಾಗಗಳಲ್ಲಿ ಬಿಜೆಪಿ ಬಲವರ್ಧನೆ
'ಹನುಮಾನ್ ಜಯಂತಿ ಅಥವಾ ಟಿಪ್ಪು ಜಯಂತಿ ಎರಡರ ನಡುವೆ ಒಂದನ್ನು ಆಯ್ದುಕೊಳ್ಳಿ' ಎಂದು ಸಾರ್ವಜನಿಕ ಸಭೆಯಲ್ಲಿ ಹೇಳಿದ್ದ ಯೋಗಿ, ಕಾಂಗ್ರೆಸ್ ಒಂದು ಮುಸ್ಲಿಂ ಪರ ಪಕ್ಷ ಎಂದು ಕಿಡಿಕಾರಿದ್ದರು.
ಯೋಗಿ ಆದಿತ್ಯನಾಥ ಅವರ ಭೇಟಿ ಒಟ್ಟಾರೆ ರಾಜಕೀಯ ಪ್ರಚಾರದ ಮೇಲೆ ಪ್ರಭಾವ ಬೀರುತ್ತಿದೆ ಎನ್ನಲಾಗುತ್ತಿದೆ. ಬಿಜೆಪಿಯ ಇತರೆ ಮುಖಂಡರೂ ಧರ್ಮದ ವಿಚಾರವನ್ನು ಮುನ್ನಲೆಯಲ್ಲಿಟ್ಟುಕೊಂಡು ಮತಯಾಚಿಸುತ್ತಿದ್ದಾರೆ. ಅವರಲ್ಲಿ ಆದಿತ್ಯನಾಥ ಅವರ ಭಾಷಣದ ತೀವ್ರತೆಯ ಪ್ರಭಾವ ಎದ್ದು ಕಾಣುತ್ತಿದೆ. ಇದು ರಾಜ್ಯದ ಎಲ್ಲ ಭಾಗಗಳಲ್ಲಿ ಸಾಮಾನ್ಯವಾಗಿದ್ದರೂ, ಕರಾವಳಿ ಭಾಗದಲ್ಲಿ ತೀವ್ರವಾಗಿದೆ.
ಹಿಂದುತ್ವದ ವಿಚಾರಧಾರೆಗಳನ್ನೇ ಪ್ರಮುಖವಾಗಿಟ್ಟುಕೊಂಡು ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಕರ್ನಾಟಕದಲ್ಲಿ, ಅದರಲ್ಲಿಯೂ ಮುಖ್ಯವಾಗಿ ಕೋಮು ಭಾವನೆಗಳ ವಿಚಾರದಲ್ಲಿ ಸೂಕ್ಷ್ಮವಾಗಿರುವ ಕರಾವಳಿ ಭಾಗಗಳಲ್ಲಿ ಹಿಂದುತ್ವದ ವಿಚಾರ ಪ್ರಮುಖಪಾತ್ರ ವಹಿಸಲಿದೆ.
ಶಾಂತಿ, ನೆಮ್ಮದಿಯ ಕರ್ನಾಟಕ ನಮ್ಮದಾಗಬೇಕು : ಪೂರ್ಣಿಮಾ ಶ್ರೀನಿವಾಸ್
ಬಾಬ್ರಿ ಮಸೀದಿ ಬೇಕು ಎನ್ನುವವರು ಕಾಂಗ್ರೆಸ್ಗೆ ಮತ ನೀಡಿ. ರಾಮಮಂದಿರ ಬೇಕು ಎಂದು ಬಯಸುವವರು ಬಿಜೆಪಿಗೆ ಮತ ಚಲಾಯಿಸಿ ಎಂದು ಶಾಸಕ ಸಂಜಯ್ ಪಾಟೀಲ್ ನೀಡಿದ್ದ ಹೇಳಿಕೆ ವೈರಲ್ ಆಗಿತ್ತು. ಮತದಾರರನ್ನು ರೊಚ್ಚಿಗೆಬ್ಬಿಸಲು ಮತ್ತು ಅವರಲ್ಲಿ ಧಾರ್ಮಿಕ ನಿಲುವುಗಳನ್ನು ಬಿತ್ತಲು ತಂತ್ರಗಳನ್ನು ನಡೆಸಲಾಗುತ್ತಿದೆ.
ಟಿಪ್ಪು ಸುಲ್ತಾನ್ ರಾಷ್ಟ್ರೀಯವಾದಿಯೇ ಅಥವಾ ಹಿಂದೂ ವಿರೋಧಿಯಾಗಿದ್ದನೇ, ಮುಂದೆ ಅಯೋಧ್ಯಾದಲ್ಲಿ ರಾಮಮಂದಿರ ಕಟ್ಟುತ್ತಾರೆಯೇ, ಮುಂತಾದ ಚರ್ಚೆಗಳೆಲ್ಲ ನಾವು ಇಂದು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲವೇ? ಎಂಬುದು ಜನಸಾಮಾನ್ಯರ ಪ್ರಶ್ನೆ. ಈ ಭಾಗದಲ್ಲಿ ಹಿಂದೂ-ಮುಸ್ಲಿಂ ವಿವಾದವಷ್ಟೇ ಚುನಾವಣೆಯ ವಿಷಯ ಹೊರತು ಅಭಿವೃದ್ಧಿಯಲ್ಲ. ಈ ಪರಿಸ್ಥಿತಿ ನಮ್ಮನ್ನು ಮುಂದೆ ಎಲ್ಲಿಗೆ ಕೊಂಡೊಯ್ದು ನಿಲ್ಲಿಸುತ್ತದೆಯೋ ಗೊತ್ತಿಲ್ಲ ಎನ್ನುತ್ತಾರೆ ಅವರು.
ಕರಾವಳಿ ಭಾಗ ಧರ್ಮದ ಆಧಾರದಲ್ಲಿ ಎರಡು ಭಾಗವಾಗುತ್ತಿದೆ ಎಂಬ ಆತಂಕ ಎದುರಾಗಿದೆ. ಕಳೆದ ಚುನಾವಣೆಯಲ್ಲಿ ಕರಾವಳಿ ಭಾಗದ ಮೂರು ಜಿಲ್ಲೆಗಳಲ್ಲಿನ 19 ಸೀಟುಗಳಲ್ಲಿ 2 ಸೀಟುಗಳನ್ನು ಮಾತ್ರ ಬಿಜೆಪಿ ಗೆದ್ದಿತ್ತು. ಆದರೆ, ಲೋಕಸಭೆ ಚುನಾವಣೆಯಲ್ಲಿ ಎಲ್ಲ ಮೂರು ಸೀಟುಗಳನ್ನು ವಶಪಡಿಸಿಕೊಂಡಿತು. ಇದು ಈ ಭಾಗದಲ್ಲಿ ಆರ್ಎಸ್ಎಸ್ ಕಾರ್ಯಕರ್ತರನ್ನು ಸಂಘಟಿಸಿದ್ದು ಮತ್ತು ತೀವ್ರ ಪ್ರಚಾರ ನಡೆಸಿದ್ದರ ಫಲಿತಾಂಶ.
ಸಿದ್ದರಾಮಯ್ಯ ಸರ್ಕಾರ ಬಂದ ಬಳಿಕ ನಡೆದ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆ ಪ್ರಕರಣಗಳನ್ನು ಬಿಜೆಪಿ ಪ್ರಮುಖ ದಾಳವಾಗಿ ಬಳಸಿಕೊಳ್ಳಲು ಮುಂದಾಗಿದೆ. ಹಿಂದೂ ಕಾರ್ಯಕರ್ತರ ಹತ್ಯೆ ನಡೆಸಿರುವುದ ಪಿಎಫ್ಐ ಸಂಘಟನೆಗಳ ಕಾರ್ಯಕರ್ತರು. ಕಾಂಗ್ರೆಸ್ ಸರ್ಕಾರ ಅವರ ರಕ್ಷಣೆಗೆ ನಿಂತಿದೆ ಎಂದು ಬಿಜೆಪಿ ಅಭ್ಯರ್ಥಿಗಳು ಆರೋಪಿಸುತ್ತಾರೆ.
ನಾನೂ
ಹಿಂದೂ:
ಸಿದ್ದರಾಮಯ್ಯ
ಹಿಂದೂ ಜಪ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆಯೂ ಪರಿಣಾಮ ಬೀರಿದೆ. ತಮ್ಮನ್ನು ನಾಸ್ತಿಕ ಎಂದು ಕರೆದುಕೊಳ್ಳುತ್ತಿದ್ದ ಅವರು, ತಾವೂ ಹಿಂದೂ ಎಂದು ಘೋಷಿಸಿಕೊಳ್ಳತೊಡಗಿದರು. 'ರಾಮ ನನ್ನ ಹೆಸರಿನ ಒಂದು ಭಾಗ' ಎಂದು ಸಾರ್ವಜನಿಕ ಸಭೆಗಳಲ್ಲಿ ಹೇಳಿದರಲ್ಲದೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ದೇವಸ್ಥಾನಗಳಿಗೆ ಭೇಟಿ ನೀಡಿ, ತಾವು ಹಿಂದೂ ವಿರೋಧಿಯಲ್ಲ ಎಂದು ಮನದಟ್ಟು ಮಾಡುವ ಪ್ರಯತ್ನ ನಡೆಸಿದರು. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಜಾರಿ ಮಾಡಿ ತಮ್ಮ ಹಿಂದುತ್ವದ ನಂಬಿಕೆ ಉಳಿಸಿಕೊಳ್ಳುವಂತೆ ಯೋಗಿ ಆದಿತ್ಯನಾಥ ಸವಾಲು ಹಾಕಿದರು.
ತಮ್ಮನ್ನು ಜಾತ್ಯಾತೀತ ಹಿಂದೂ ಎಂದು ಕರೆದುಕೊಳ್ಳುತ್ತಿರುವ ಸಿದ್ದರಾಮಯ್ಯ, ಎದುರಾಳಿ ಪಡೆಯನ್ನು ಕೋಮುವಾದಿ ಹಿಂದೂ ಎಂದು ಛೇಡಿಸುತ್ತಿದ್ದಾರೆ. ಅದರ ಜತೆಯಲ್ಲಿಯೇ ತಾವು ಹಿಂದೂ ವಿರೋಧಿಯಲ್ಲ ಎಂದು ಬಿಂಬಿಸಿಕೊಳ್ಳುವ ಪ್ರಯತ್ನವನ್ನೂ ನಡೆಸಿದ್ದಾರೆ.