ಬೆಂಗಳೂರು, ಏಪ್ರಿಲ್ 11: ಹೈದರಾಬಾದ್ ಕರ್ನಾಟಕ/ಈಶಾನ್ಯ ಕರ್ನಾಟಕ ಪ್ರದೇಶದಲ್ಲಿನ ಮುಸ್ಲಿಂ ನಾಯಕತ್ವದ ಕೊರತೆ ಕಾಂಗ್ರೆಸ್ ಪಕ್ಷದ ನಿರೀಕ್ಷೆಗಳಿಗೆ ಎರವಾಗಲಿದೆಯೇ?
ಅಫಜಲಪುರ : ಬಿಜೆಪಿ ಭಿನ್ನಮತ, ಪದಾಧಿಕಾರಿಗಳ ಸಾಮೂಹಿಕ ರಾಜೀನಾಮೆ
ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಕಲಬುರ್ಗಿ ಮತ್ತು ಬಳ್ಳಾರಿ ಜಿಲ್ಲೆಗಳನ್ನು ಒಳಗೊಂಡ ಈ ಪ್ರದೇಶ, ಯಾವುದೇ ರಾಜಕೀಯ ಪಕ್ಷದ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ಕಾಂಗ್ರೆಸ್ ಒಂದೆಡೆ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಈ ಭಾಗದ ಪ್ರಬಲ ಲಿಂಗಾಯತ ಸಮುದಾಯವನ್ನು ಪ್ರತ್ಯೇಕಿಸುವ ಪ್ರಯತ್ನ ನಡೆಸುತ್ತಿದ್ದರೆ, ಮತ್ತೊಂದೆಡೆ ಮುಂಬರುವ ಚುನಾವಣೆಯಲ್ಲಿ ಈ ಭಾಗದ ಮುಸ್ಲಿಂ ಮತಗಳನ್ನು ಸೆಳೆದುಕೊಳ್ಳಬಲ್ಲ ಹೊಸ ಮುಸ್ಲಿಂ ನಾಯಕತ್ವವನ್ನು ಕಂಡುಕೊಳ್ಳುವುದನ್ನು ಅಲಕ್ಷಿಸಿದೆ.
ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ಮತ್ತು ಈ ಭಾಗದ ಅತ್ಯಂತ ಪ್ರಭಾವಿ ಮುಸ್ಲಿಂ ಮುಖಂಡ ಖಮರುಲ್ ಇಸ್ಲಾಂ ಅವರ ನಿಧನದ ಬಳಿಕ ಮುಸ್ಲಿಂ ಸಮುದಾಯವನ್ನು ಒಂದೆಡೆ ತರುವ ಪ್ರಬಲ ನಾಯಕರ ಗೈರಿನಿಂದ ಪಕ್ಷ ದುರ್ಬಲಗೊಳ್ಳುತ್ತಿದೆ.
ಧರಂ ಸಿಂಗ್ ಅವರು ರಾಜ್ಯದಲ್ಲಿ ಅತಿ ಕಡಿಮೆ ಪ್ರಮಾಣದ ಜನಸಂಖ್ಯೆ ಇರುವ ರಜಪೂತ ಸಮುದಾಯದಿಂದ ಬಂದವರಾಗಿದ್ದರು. ಆದರೆ, ಅವರಿಗೆ ರಾಜಕೀಯ ಎದುರಾಳಿಗಳನ್ನು ಮಣಿಸುವ ಕಲೆ ಸಿದ್ಧಿಯಾಗಿತ್ತು. ಗುಲ್ಬರ್ಗ ಉತ್ತರ ಕ್ಷೇತ್ರದಿಂದ ಆರು ಬಾರಿ ಗೆದ್ದಿದ್ದ ಖಮರುಲ್ ಇಸ್ಲಾಂ ಹೆಸರು ಈ ಪ್ರದೇಶದಲ್ಲಿ ಜನಜನಿತ.
ಖಮರುಲ್ಲ ಇಸ್ಲಾಂ ಅವರು ಪ್ರತಿನಿಧಿಸುತ್ತಿದ್ದ ಗುಲ್ಬರ್ಗ ಉತ್ತರ ಕ್ಷೇತ್ರದಿಂದ ಟಿಕೆಟ್ ನೀಡಿದರೆ ಒಪ್ಪಿಕೊಳ್ಳುವಂತೆ ಅವರ ಪತ್ನಿ ಖಾನೀಸ್ ಫಾತಿಮಾ ಅವರನ್ನು ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಮನವೊಲಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
'ಈ ಪ್ರದೇಶದಲ್ಲಿ ಹೊಸ ಮುಖಂಡರನ್ನು ಹುಡುಕುವುದು ಕಾಂಗ್ರೆಸ್ಗೆ ಅಷ್ಟು ಸುಲಭವಲ್ಲ, ಗುಲ್ಬರ್ಗ ಉತ್ತರ ಕ್ಷೇತ್ರದಲ್ಲಿ ಖಾನೀಸ್ ಫಾತಿಮಾ ಅವರಿಗೆ ಟಿಕೆಟ್ ನೀಡುವ ಮೂಲಕ ಅನುಕಂಪದ ಅಲೆ ಮೇಲೆ ಗೆಲ್ಲುವ ಉದ್ದೇಶ ಪಕ್ಷದ್ದಾಗಿದೆ. ಆದರೆ, ಒಂದು ವೇಳೆ ಅವರಿಗೆ ಟಿಕೆಟ್ ನೀಡುವುದಾದರೆ ಆಂತರಿಕ ಬಂಡಾಯದ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇಲ್ಲಿನ ನಾಯಕತ್ವದ ಕೊರತೆಗೆ ಖಮರುಲ್ ಇಸ್ಲಾಂ ಕೂಡ ಹೊಣೆಗಾರರು. ಅವರಿಗೆ ಹಿಂಬಾಲಕರಿದ್ದರು. ಆದರೆ, ತಮ್ಮ ನಂತರದ ಪೀಳಿಗೆಯ ಮುಸ್ಲಿಂ ಮುಖಂಡತ್ವವನ್ನು ಬೆಳೆಸಲಿಲ್ಲ' ಎಂದು ಮೂಲಗಳು ಒನ್ ಇಂಡಿಯಾಕ್ಕೆ ತಿಳಿಸಿವೆ.
ಈ ಇಬ್ಬರು ಬಲಿಷ್ಠ ಮುಖಂಡರ ಅನುಪಸ್ಥಿತಿಯಿಂದಾಗಿ ಕಾಂಗ್ರೆಸ್ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಮಗ, ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಗಲಮೇಲೆ ಭಾರಿ ಹೊಣೆಗಾರಿಕೆ ಬಿದ್ದಿದೆ. ಅಲ್ಲದೆ, ಮಲ್ಲಿಕಾರ್ಜುನ ಖೂಬಾ, ನಾಗಪ್ಪ ಸಲೋನಿ, ಬಸವರಾಜ ಪಾಟೀಲ್ ಅನ್ವಾರಿ ಮತ್ತು ಮಾಲೀಕಯ್ಯ ಗುತ್ತೇದಾರ್ ಅವರ ಬಿಜೆಪಿ ಸೇರ್ಪಡೆ ಈ ಭಾಗದಲ್ಲಿ ಕಾಂಗ್ರೆಸ್ ನಾಯಕತ್ವದ ಮೇಲೆ ತೀವ್ರ ಒತ್ತಡ ಹೇರಿದೆ.
ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿನ ನಾಯಕತ್ವ ಬಿಕ್ಕಟ್ಟಿಗೆ ಮಲ್ಲಿಕಾರ್ಜುನ ಖರ್ಗೆ ಮತ್ತು ಧರಂ ಸಿಂಗ್ ಅವರೇ ಕಾರಣ ಎಂದು ಬೊಟ್ಟುಮಾಡುತ್ತಾರೆ ರಾಜಕೀಯ ವಿಶ್ಲೇಷಕ ಮಹದೇವ ಪ್ರಕಾಶ್.
'ಇಬ್ಬರೂ ನಾಯಕರು ಪಕ್ಷದಲ್ಲಿ ಆಲದಮರದಂತೆ ಬೆಳೆದರು. ಆದರೆ, ಅವರಿಬ್ಬರೂ ಲಿಂಗಾಯತರು, ಹಿಂದುಳಿದ ವರ್ಗದವರು ಅಥವಾ ಅಲ್ಪಸಂಖ್ಯಾತ ನಾಯಕರನ್ನು ರಾಜಕೀಯವಾಗಿ ಬೆಳೆಯಲು ಬಿಡಲಿಲ್ಲ. ಅಲ್ಲದೆ, ಅವರು ಖಮರುಲ್ ಇಸ್ಲಾಂ ಅವರನ್ನು ಗುಲ್ಬರ್ಗ ಉತ್ತರ ಕ್ಷೇತ್ರಕ್ಕೆ ಸೀಮಿತಗೊಳಿಸಿದರು. ಖಮರುಲ್ ಇಸ್ಲಾಂ ಅವರ ಪತ್ನಿ ಅನುಕಂಪದ ಅಲೆಯ ನೆರವಿನಿಂದ ಗೆಲ್ಲಬಹುದು' ಎನ್ನುತ್ತಾರೆ ಅವರು.
2013ರ ಚುನಾವಣೆಯಲ್ಲಿ 40 ಸೀಟುಗಳ ಪೈಕಿ ಕಾಂಗ್ರೆಸ್ 27 ಸೀಟುಗಳನ್ನು ಜಯಿಸಿತ್ತು. ಲಿಂಗಾಯತ ಮುಖಂಡ ಬಿಎಸ್ ಯಡಿಯೂರಪ್ಪ ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಸ್ಥಾಪಿಸಿದ್ದರಿಂದ ಬಿಜೆಪಿಯ ಮತಗಳು ಒಡೆದ ಕಾರಣ ಸೀಟುಗಳ ಸಂಖ್ಯೆಯಲ್ಲಿ ಏರಿಕೆಯಾಗಿತ್ತು.
ಈ ಭಾಗದ ಮುಸ್ಲಿಮರು ಕಾಂಗ್ರೆಸ್ ಪರವಾಗಿ ನಿಲ್ಲುವುದು ಸಾಂಪ್ರದಾಯಿಕವಾಗಿದೆ. ಈ ಬಾರಿ ಅವರು ಪ್ರಬಲ ಮುಸ್ಲಿಂ ಮುಖಂಡನಿಲ್ಲದೆಯೇ ಕಾಂಗ್ರೆಸ್ಗೆ ಮತ ಚಲಾಯಿಸಬೇಕಾಗಬಹುದು.
Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರ.subscribe to Kannada Oneindia.
ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!