ಕಾಂಗ್ರೆಸ್ ನಾಯಕರಿಗೆ ಆಘಾತ ತಂದ ಎಚ್ಡಿಕೆ-ರಾಹುಲ್ ಗಾಂಧಿ ಮಾತುಕತೆ!
Recommended Video
ಬೆಂಗಳೂರು, ಜೂನ್ 11: ಸದ್ಯಕ್ಕೆ ಕಾಂಗ್ರೆಸ್ ಮಟ್ಟಿಗೆ ರೆಬೆಲ್ ಸ್ಟಾರ್ ಆಗಿರುವ ಮಾಜಿ ಸಚಿವ, ಬಬಲೇಶ್ವರ ಕ್ಷೇತ್ರದ ಹಾಲಿ ಶಾಸಕ ಎಂ ಬಿ ಪಾಟೀಲರನ್ನು ಜೂನ್ 8 ರಂದು ಎಚ್ ಡಿ ಕುಮಾರಸ್ವಾಮಿ ಭೇಟಿಯಾಗಿ ಬಂಡಾಯ ಶಮನಕ್ಕೆ ಪ್ರಯತ್ನಿಸಿದ್ದು ಹಳೇ ಸುದ್ದಿ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಈ ನಡೆಯ ಹಿಂದೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಲಹೆ ಇತ್ತು ಎಂಬ ಅಚ್ಚರಿಯ ಮಾಹಿತಿಯೊಂದು ಲಭ್ಯವಾಗಿದೆ.
ಕಳೆದ ಮೂರು ದಿನಗಳ ಹಿಂದೆ ಮುಖ್ಯಮಂತ್ರಿಗಳಿಗೆ ಫೋನಾಯಿಸಿದ್ದ ರಾಹುಲ್ ಗಾಂಧಿ, ಕಾಂಗ್ರೆಸ್ ನಲ್ಲಿನ ಬಂಡಾಯ ಶಮನಕ್ಕಾಗಿ ಎಚ್ ಡಿ ಕುಮಾರಸ್ವಾಮಿಯವರ ನೆರವು ಬೇಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು ರಾಜಕೀಯ ವಲಯದಲ್ಲಿ ಕೊಂಚ ತಲ್ಲಣವನ್ನೆಬ್ಬಿಸಿದೆ.
ಸಂಪುಟ ಸಂಕಟ: ಕೈ ಪಾಳಯ ಸ್ವಲ್ಪ ನಿರಾಳ, ಜೆಡಿಎಸ್ ನಲ್ಲಿ ಕಾರ್ಮೋಡ
ಅದರಲ್ಲೂ ಪಕ್ಷದ ಅಧ್ಯಕ್ಷರ ಈ ನಡೆ ಕಾಂಗ್ರೆಸ್ ನಾಯಕರಲ್ಲಿ ಸಾಕಷ್ಟು ಆಘಾತ ಸೃಷ್ಟಿಸಿದೆ. ಕಾಂಗ್ರೆಸ್ ಹಿರಿಯ ನಾಯಕರನ್ನೆಲ್ಲ ಬಿಟ್ಟು ರಾಹುಲ್ ಗಾಂಧಿಯವರೇಕೆ ಕುಮಾರಸ್ವಾಮಿಯವರ ನೆರವು ಬೇಡಿದರು ಎಂಬುದೇ ಕಾಂಗ್ರೆಸ್ ನಾಯಕರಿಗೆ ಅರ್ಥವಾಗದ ಪ್ರಶ್ನೆಯಾಗಿ ಉಳಿದುಕೊಂಡಿದೆ.
ಎಚ್ಡಿಕೆಗೆ ಕರೆ ಮಾಡಿದ್ದೇಕೆ?
ಕಾಂಗ್ರೆಸ್ ನಲ್ಲಿ ಹಲವು ಹಿರಿಯ, ಅನುಭವಿ ನಾಯಕರಿದ್ದಾಗಿಯೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕುಮಾರಸ್ವಾಮಿಯವರಿಗೆ ಕರೆ ಮಾಡಿದ್ದೇಕೆ? ಕರ್ನಾಟಕದಲ್ಲಿ ಎದ್ದಿರುವ ಬಂಡಾಯ ಶಮನ ಮಾಡುವಲ್ಲಿ ಕಾಂಗ್ರೆಸ್ ನಾಯಕರು ವಿಫಲರಾದ ಹಿನ್ನೆಲೆಯಲ್ಲಿ ಈ ಸಮಸ್ಯೆ ಪರಿಹರಿಸುವುದಕ್ಕೆ ಎಚ್ ಡಿ ಕುಮಾರಸ್ವಾಮಿಯವರಿಗೆ ಸಾಧ್ಯ ಎಂದು ರಾಹುಲ್ ಗಾಂಧಿ ಭಾವಿಸಿದ್ದರೇ? ಒಟ್ಟಿನಲ್ಲಿ ರಾಹುಲ್ ಗಾಂಧಿಯವರ ನಡೆ ಕಾಂಗ್ರೆಸ್ ನಾಯಕರಿಗೆ ಆಘಾತವುಂಟು ಮಾಡಿರುವುದು ಸತ್ಯ.
ಎಂ ಬಿ ಪಾಟೀಲ ಭೇಟಿ ಹಿಂದೆಯೂ ರಾಹುಲ್ ಸಲಹೆ
ಜೂನ್ 08 ರಂದು ಎಚ್ ಡಿ ಕುಮಾರಸ್ವಾಮಿಯವರು ಎಂ ಬಿ ಪಾಟೀಲರನ್ನು ಭೇಟಿಯಾಗುವ ಮೂಲಕ ಅಚ್ಚರಿ ಮೂಡಿಸಿದ್ದರು. ಅದುವರೆಗೂ ಮಾಧ್ಯಮಗಳಿಗೆ ಸಿಗದ ಎಂ ಬಿ ಪಾಟೀಲ ಸಹ ಮುಖ್ಯಮಂತ್ರಿಗಳ ಭೇಟಿ ನಂತರ ಕೊಂಚ ತಣ್ಣಗಾದಂತೆ ಕಂಡರು. ಮಾಧ್ಯಮಗಳೊಂದಿಗೆ ಮಾತನಾಡಿದರು. ಈ ಎಲ್ಲ ಬೆಳವಣಿಗೆಯ ಹಿಂದೆ ಸೂತ್ರಧಾರರ ಹಾಗೆ ಇದ್ದಿದ್ದು ರಾಹುಲ್ ಗಾಂಧಿ! ಹೌದು, ರಾಹುಲ್ ಗಾಂಧಿ ಅವರ ಸಲಹೆ ಮೇರೆಗೇ ಕುಮಾರಸ್ವಾಮಿ, ಎಂ ಬಿ ಪಾಟೀಲರನ್ನು ಭೇಟಿಯಾಗಿದ್ದರು. ಬಂಡಾಯ ಶಮನಕ್ಕೆ ತಮ್ಮ ಕೈಲಾದ ಪ್ರಯತ್ನ ಪಟ್ಟಿದ್ದರು.
'ರೆಬೆಲ್ ಸ್ಟಾರ್' ಎಂಬಿ ಪಾಟೀಲರಿಗೆ ರಾಹುಲ್ ಗಾಂಧಿ ಕಿವಿಮಾತು?
ಎಚ್ಡಿಕೆ ಮುಂದೆ ಬೇಸರ ತೋಡಿಕೊಂಡರೇ ರಾಹುಲ್ ಗಾಂಧಿ?!
ರಾಜ್ಯದಲ್ಲಿ ಕೆಲ ಕಾಂಗ್ರೆಸ್ ನಾಯಕರು ನಡೆದುಕೊಳ್ಳುತ್ತಿರುವ ರೀತಿ ಕೇಂದ್ರದ ರಾಜಕೀಯ ನಾಯಕರಲ್ಲಿ ಸಾಕಷ್ಟು ಬೇಸರವನ್ನುಂಟು ಮಾಡಿದೆ. ಹೀಗೆ ವರ್ತಿಸುವುದಕ್ಕಿಂತ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವುದೇ ಉತ್ತಮವಾಗಿತ್ತು ಎಂದು ರಾಹುಲ್ ಗಾಂಧಿಯವರೇ ಕುಮಾರಸ್ವಾಮಿಯವರ ಬಳಿ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಮೈತ್ರಿ ಸರ್ಕಾರದಲ್ಲಿ ಹೊಂದಾಣಿಕೆ ಮಾಡಿಕೊಂಡು ಆಡಳಿತ ನಡೆಸುವುದನ್ನು ಬಿಟ್ಟು, ಅಸಮಾಧಾನ ಮಾಡಿಕೊಂಡು ಕೂರುವುದು ಸರಿಯಲ್ಲ, ಮೈತ್ರಿ ಸರ್ಕಾರದಲ್ಲಿ ಎಲ್ಲರಿಗೂ ಮಂತ್ರಿ ಸ್ಥಾನ ಸಿಗಬೇಕು ಎಂದರೆ ಸಾಧ್ಯವಿಲ್ಲ ಎಂದು ಅವರು ಖಡಕ್ಕಾಗಿ ಹೇಳಿದ್ದಾರೆ.
ಕಾಂಗ್ರೆಸ್ ನಾಯಕರಿಗೆ ಮುಖಭಂಗ?
ರಾಹುಲ್ ಗಾಂಧಿಯವರು ಕುಮಾರಸ್ವಾಮಿಯವರಿಗೆ ಫೋನಾಯಿಸಿದ್ದು ಕಾಂಗ್ರೆಸ್ ನಾಯಕರಿಗೆ ಮುಖಭಂಗವನ್ನುಂಟು ಮಾಡಿದೆ. ರಾಜ್ಯ ಕಾಂಗ್ರೆಸ್ ನ ಆಪದ್ಬಾಂಧವ ಎನ್ನಿಸಿದ್ದ ಡಿಕೆ ಶಿವಕುಮಾರ್ ಈ ಎಲ್ಲ ಬಂಡಾಯವನ್ನೂ ಶಮನ ಮಾಡುವ ಸಾಮರ್ಥ್ಯ ಉಳ್ಳವರಾಗಿದ್ದರೂ ಅವರೇ ಸ್ವತಃ ಅಸಮಾಧಾನದಿಂದಿರುವುದರಿಂದ ಈ ಕುರಿತು ತಲೆಕೆಡಿಸಿಕೊಳ್ಳುತ್ತಿಲ್ಲ ಎಂಬ ಮಾತೂ ಕೇಳಿಬರುತ್ತಿದೆ. ಇದರಿಂದಾಗಿ ಹೈಕಮಾಂಡ್ ಗೆ ರಾಜ್ಯದ ನಾಯಕರ ವರ್ತನೆ ತಲೆನೋವನ್ನುಂಟು ಮಾಡಿದೆ. ಭಿನ್ನಮತ ಶಮನದ ಜವಾಬ್ದಾರಿ ವಹಿಸಬೇಕಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾದಾಮಿ ಪ್ರವಾಸದಲ್ಲಿ ಬ್ಯುಸಿಯಾಗಿದ್ದಾರೆ! ಈ ಎಲ್ಲ ಕಾರಣದಿಂದ ರಾಹುಲ್ ಗಾಂಧಿ ಎಚ್ ಡಿ ಕುಮಾರಸ್ವಾಮಿಯವರ ನೆರವಿಗೆ ಮೊರೆಹೋಗಿದ್ದಾರೆ.