Tv 5 ಸಮೀಕ್ಷೆಯಲ್ಲಿ ಬಿಜೆಪಿಗೆ ಬಹುಮತ, ಯಡಿಯೂರಪ್ಪ ಮೆಚ್ಚಿನ ಸಿಎಂ
Recommended Video
ಬೆಂಗಳೂರು, ಮೇ 07: ಕರ್ನಾಟಕ ವಿಧಾನಸಭೆ ಚುನಾವಣೆ 2018ಕ್ಕಾಗಿ ಟಿವಿ 5 ಜನಾಭಿಪ್ರಾಯ ಸಂಗ್ರಹಿಸಿದ್ದು, ಸಮೀಕ್ಷೆ ಪ್ರಕಾರ ಬಿಜೆಪಿಗೆ ಸ್ಪಷ್ಟ ಬಹುಮತ ದೊರೆಯಲಿದೆ.
ಟಿವಿ 5 ಸಮೀಕ್ಷೆಯ ಪ್ರಕಾರ ಬಿಜೆಪಿ 115 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಕಾಂಗ್ರೆಸ್ಗೆ 70 ಮತ್ತು ಜೆಡಿಎಸ್ಗೆ 40 ಸ್ಥಾನ ದೊರೆಯಲಿದೆ. ಈ ಅಂಕಿಸಂಖ್ಯೆಗಳಲ್ಲಿ 5 ಕ್ಷೇತ್ರ ಹೆಚ್ಚು ಅಥವಾ ಕಡಿಮೆ ಸಾಧ್ಯತೆ ಆಗಬಹುದು ಎಂದು ಟಿವಿ 5 ಹೇಳಿದೆ.
ಎಬಿಪಿ ಲೋಕನೀತಿ, ಸಿಎಸ್ ಡಿಎಸ್ ಸಮೀಕ್ಷೆ: ಅಸೆಂಬ್ಲಿ ಅತಂತ್ರ
ಮೆಚ್ಚಿನ ಸಿಎಂ, ಸರ್ಕಾರದ ಯೋಜನೆಗಳ ಯಶಸ್ಸು, ಮುಂದಿನ ಪ್ರಧಾನಿ, ಲಿಂಗಾಯತ ಧರ್ಮ ಇನ್ನೂ ಹಲವು ವಿಷಯಗಳನ್ನು ಇಟ್ಟುಕೊಂಡು ಟಿವಿ5 ಸಮೀಕ್ಷೆ ಮಾಡಿದ್ದು ಜನರ ಮೆಚ್ಚಿನ ಸಿಎಂ ಯಡಿಯೂರಪ್ಪ ಎಂದು ಸಮೀಕ್ಷೆ ಹೇಳುತ್ತಿದೆ.
ಸಿದ್ದರಾಮಯ್ಯಗೆ ಎರಡನೇ ಸ್ಥಾನ
ಟಿವಿ5 ಸಮೀಕ್ಷೆ ಪ್ರಕಾರ ಮುಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಆಗಬೇಕೆಂದು ಹೆಚ್ಚಿನ ಜನ ಅಭಿಪ್ರಾಯಪಟ್ಟಿದ್ದಾರೆ. ಯಡಿಯೂರಪ್ಪ ಮುಂದಿನ ಮುಖ್ಯಮಂತ್ರಿ ಆಗಬೇಕೆಂದು 38.11% ಜನರ ಅಭಿಪ್ರಾಯವಾಗಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಲೆಂದು 37.03% ಅಭಿಪ್ರಾಯಪಟ್ಟಿದ್ದಾರೆ. ಕುಮಾರಸ್ವಾಮಿ ಪರ ಒಲವು ತೋರಿಸಿರುವುದು 18.33% ಅಷ್ಟೆ.
ಈ 5 ಕಾಂಗ್ರೆಸ್ ನಾಯಕರಿಗೆ ಚುನಾವಣೆ ಹಗ್ಗದ ಮೇಲಿನ ನಡುಗೆ
ಯಾವ ಪಕ್ಷಕ್ಕೆ ಎಷ್ಟು ಮತ?
ಟಿವಿ 5 ಸಮೀಕ್ಷೆ ಪ್ರಕಾರ ಬಿಜೆಪಿ ಅತಿ ಹೆಚ್ಚು ಮತಗಳನ್ನು ಪಡೆಯಲಿದೆಯಂತೆ. ಬಿಜೆಪಿಯು 36%-38% ಮತ ಗಳಿಸಿದರೆ. ಕಾಂಗ್ರೆಸ್ ಪಕ್ಷ 33%-35% ಮತಗಳಿಸಲಿದೆಯಂತೆ. ಜೆಡಿಎಸ್ 20%-22% ಮತ ಬುಟ್ಟಿಗೆ ಹಾಕಿಕೊಂಡರೆ, ಇತರರು 6%-8% ಮತ ಗಳಿಸಲಿದ್ದಾರಂತೆ.
ಕಳಪೆ ಎಂದವರು ಕಡಿಮೆ
ಸಿದ್ದರಾಮಯ್ಯ ಸರ್ಕಾರದ ಬಗ್ಗೆಯೂ ಸಮೀಕ್ಷೆ ನಡೆಸಲಾಗಿದ್ದು, ಸಿದ್ದರಾಮಯ್ಯ ಸರ್ಕಾರ ಚೆನ್ನಾಗಿತ್ತು ಎಂದವರ ಸಂಖ್ಯೆಯೇ ಹೆಚ್ಚು. ಸಿದ್ದರಾಮಯ್ಯ ಅವರ ಸರ್ಕಾರ ಉತ್ತಮವಾಗಿತ್ತು ಎಂದು 50.73% ಜನ ಹೇಳಿದ್ದರೆ. 49.27% ಮಂದಿ ಸಿದ್ದರಾಮಯ್ಯ ಅವರದ್ದು ಕಳಪೆ ಸರ್ಕಾರ ಎಂದಿದ್ದಾರೆ.
ಬೇಡ ಎಂದವರೇ ಹೆಚ್ಚು
ಸರ್ಕಾರದ ಪ್ರಮುಖ ನಿರ್ಣಯಗಳಲ್ಲೊಂದಾದ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದ ಬಗ್ಗೆಯೂ ಸಮೀಕ್ಷೆಯಲ್ಲಿ ಪ್ರಶ್ನೆ ಕೇಳಲಾಗಿದ್ದು, ಹೆಚ್ಚು ಜನ ಲಿಂಗಾಯತ ಧರ್ಮದ ವಿರುದ್ಧ ಇದ್ದಾರೆ ಎಂದು ಸಮೀಕ್ಷೆ ಹೇಳುತ್ತಿದೆ. 61.11% ಜನ ಲಿಂಗಾಯತ ಧರ್ಮ ಬೇಡ ಎಂದ್ದಿದ್ದರೆ. 39.89% ಜನ ಲಿಂಗಾಯತ ಧರ್ಮ ಬೇಕು ಎಂದಿದ್ದಾರೆ.
ಮೋದಿಗೆ ಹೆಚ್ಚಿನ ಮತ
ಟಿವಿ 5 ಕರ್ನಾಟಕ ಚುನಾವಣೆ ಜೊತೆ ಮುಂದಿನ ಪ್ರಧಾನಿ ಯಾರಾಗಬೇಕು ಎಂಬ ಸಮೀಕ್ಷೆಯನ್ನೂ ಮಾಡಿದೆ. ಈ ಸಮೀಕ್ಷೆಯಲ್ಲಿ ಹೆಚ್ಚಿನ ಅಂಕ ನರೇಂದ್ರ ಮೋದಿ ಅವರಿಗೆ ಹೋಗಿದೆ. 55% ಜನ ಮೋದಿ ಅವರೇ ಮುಂದಿನ ಪ್ರಧಾನಿ ಆಗಲಿ ಎಂದಿದ್ದರೆ. 45% ಜನ ರಾಹುಲ್ ಅವರು ಪ್ರಧಾನಿ ಆಗಲಿ ಎಂದಿದ್ದಾರೆ.
ನೀರು ಬಹುದೊಡ್ಡ ಸಮಸ್ಯೆ
ಸಮೀಕ್ಷೆಯ ಪ್ರಕಾರ ರಾಜ್ಯದ ಬಹುದೊಡ್ಡ ಸಮಸ್ಯೆ ಕುಡಿಯುವ ನೀರು ಆಗಿದೆ. ಅದರ ಜೊತೆಗೆ ನಿರುದ್ಯೋಗ, ವಿದ್ಯುತ್, ರಸ್ತೆ, ಸಾರಿಗೆ, ಶಿಕ್ಷಣ, ಚರಂಡಿ ನಂತರದ ಸ್ಥಾನಗಳಲ್ಲಿವೆ.