ಮುಳಬಾಗಲು ಕ್ಷೇತ್ರ ಉದ್ಧಾರ ಮಾಡುವುದಕ್ಕೆ ಇನ್ಯಾರು ಎದ್ದುಬರಬೇಕೋ
ಈ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಕೊತ್ತನೂರು ಜಿ.ಮಂಜುನಾಥ್. ಇವರ ಜಾತಿ ಪ್ರಮಾಣ ಪತ್ರದ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ದಲಿತ ಮತಗಳು ಇಲ್ಲಿ ಹೆಚ್ಚು ಪ್ರಭಾವ ಬೀರುತ್ತವೆ. ಆರ್ಥಿಕವಾಗಿ ಬಹಳ ಹಿಂದುಳಿದ ತಾಲೂಕಿದು. ಆಲಂಗೂರು ಶ್ರೀನಿವಾಸ್ ಅವರು ಬದುಕಿರುವವರೆಗೆ ಜೆಡಿಎಸ್ ನ ಪ್ರಭಾವ ಇಲ್ಲಿ ದಟ್ಟವಾಗಿತ್ತು.
ಇನ್ನು ಮುಳಬಾಗಿಲಿನ ರಸ್ತೆಗಳು ಬಹಳ ಇಕ್ಕಟ್ಟಾದದ್ದು. ವಾಹನಗಳ ಸಂಚಾರಕ್ಕೆ ಬಹಳ ಕಷ್ಟ. ಆಕರ್ಷಕ ಕಟ್ಟಡಗಳಿಲ್ಲ. ರಾಷ್ಟ್ರೀಯ ಹೆದ್ದಾರಿ ಪಟ್ಟಣದ ಪಕ್ಕದಲ್ಲೇ ಹಾದುಹೋಗಿದೆ. ಅದರಿಂದ ಹೆಚ್ಚಿನ ಫಾಯಿದೆ ಏನೂ ಆಗಿಲ್ಲ. ಬೇರೆಲ್ಲೆಡೆಗಿಂತ ಇಲ್ಲಿನ ಗ್ರಾಮೀಣ ನಿರುದ್ಯೋಗದ ಪ್ರಮಾಣ ಹೆಚ್ಚು. ಆ ಕಾರಣಕ್ಕೆ ವಲಸೆ ಪ್ರಮಾಣವೂ ಹೆಚ್ಚು.
ರೆಡ್ಡಿಗಳು, ಒಕ್ಕಲಿಗರ ಮತಗಳು ಮುಖ್ಯವಾದವು. ಆದರೆ ಚುನಾವಣೆ ವೇಳೆ ಮುಸ್ಲಿಮರ ಮತಗಳು ನಿರ್ಣಾಯಕವಾಗುತ್ತವೆ. ಇಡೀ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ದಂಧೆ ಹೆಮ್ಮರವಾಗಿ ಬೆಳೆದಿದೆ. ಆದರೆ ಮುಳಬಾಗಲಿನಲ್ಲಿ ಆ ಪ್ರಮಾಣ ಹೆಚ್ಚು. ರಾಜಕೀಯ ನಾಯಕರೇ ಮರಳು ದಂಧೆಯ ತಂದೆ-ತಾಯಿ ಎಂಬುದು ಸ್ಥಳೀಯರ ಆರೋಪ.
ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಇಲ್ಲಿ ಕೆಲ ಸಮಸ್ಯೆಗಳಿವೆ. ಅದಕ್ಕೆ ಕಾರಣ ಏನೆಂದರೆ, ರಾಜಕೀಯ ವ್ಯಕ್ತಿಗಳ ಹಸ್ತಕ್ಷೇಪ ಎಂಬ ಉತ್ತರ ಎದುರಾಗುತ್ತದೆ. ಜಮೀನು ವಿವಾದ, ರಾಜಕೀಯ ವೈಷಮ್ಯಗಳಿಗೆ ಜಾತಿ ನಿಂದನೆ ಪ್ರಕರಣಗಳು ಹೆಚ್ಚಾಗಿ ಬಳಕೆಯಾಗುತ್ತವೆ. ಜತೆಗೆ ಮತದಾರರನ್ನು ಸೆಳೆಯಲು ಯಾತ್ರೆ ಆಯೋಜನೆಗಳನ್ನು ಸಹ ರಾಜಕೀಯ ಮುಖಂಡರು ಮಾಡುತ್ತಾರೆ.
ಡಿ.ವಿ.ಗುಂಡಪ್ಪ ಅವರು ಇದೇ ಮುಳಬಾಗಲಿನವರು. ಅಂಥ ಎತ್ತರದ ವ್ಯಕ್ತಿತ್ವದ ಸಾಹಿತಿ ಹುಟ್ಟಿದ ಊರಿನಲ್ಲಿ ಅವರ ನೆನಪನ್ನು ಉಳಿಸಿಕೊಳ್ಳುವ ಸ್ಪಷ್ಟ ಪ್ರಯತ್ನಗಳು ಕಾಣುವುದಿಲ್ಲ. ಕುರುಡುಮಲೆ ಗಣಪತಿ, ನರಸಿಂಹ ತೀರ್ಥ, ನಗರದೊಳಗಿನ ಆಂಜನೇಯ ದೇವಸ್ಥಾನ, ಆವನಿ ರಾಮಲಿಂಗೇಶ್ವರ ದೇವಸ್ಥಾನ ಬಹಳ ಪ್ರಸಿದ್ಧವಾದವು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ
ಈ ಬಾರಿ ಮಂಜುನಾಥ್ ಕಾಂಗ್ರೆಸ್ ನಿಂದ ಸ್ಪರ್ಧಿಸುತ್ತಾರಾ ಎಂಬ ಬಗ್ಗೆ ಪ್ರಶ್ನೆಯಿದೆ. ಸ್ಥಳೀಯವಾಗಿ ಯುವಕರ ಗುಂಪುಗಳ ಮೂಲಕ ವಿವಿಧ ಸ್ಪರ್ಧೆಗಳು ಮತ್ತೊಂದು ನಡೆಸಿ, ಸದಾ ಸುದ್ದಿಯಲ್ಲಿರುವ ಮಂಜುನಾಥ್ ಮೇಲೆ ಭ್ರಷ್ಟಾಚಾರದ ಆರೋಪಗಳಿಲ್ಲ. ಆದರೆ ಅಭಿವೃದ್ಧಿ ಕೆಲಸಗಳಾಗಿವೆಯಾ ಅಂತ ಪ್ರಶ್ನಿಸಿದರೆ ಅದಕ್ಕೆ ಉತ್ತರವೂ ಇಲ್ಲ.