'ನಮ್ಮ ಕರ್ನಾಟಕಕ್ಕೆ ನಮ್ಮ ವಚನ': ಬಿಜೆಪಿ ಪ್ರಣಾಳಿಕೆ ಮುಖ್ಯಾಂಶ
ಬೆಂಗಳೂರು, ಮೇ 04: "ನಮ್ಮ ಕರ್ನಾಟಕಕ್ಕೆ ನಮ್ಮ ವಚನ" ಎಂಬ ತಲೆಬರಹದೊಂದಿಗೆ ಬಿಜೆಪಿ ಇಂದು ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಹೊತ್ತಲ್ಲಿ ಬಹುನಿರೀಕ್ಷಿತ ಬಿಜೆಪಿ ಪ್ರಣಾಳಿಕೆಯಲ್ಲಿ, ಪಕ್ಷ ರೈತರಿಗೆ ಹೆಚ್ಚಿನ ಆದ್ಯತೆ ನೀಡಿದೆ. ಅದು ಪ್ರಣಾಳಿಕೆಯುದ್ದಕ್ಕೂ ಢಾಳಾಗಿ ಗೋಚರವಾಗುತ್ತದೆ.
ಜಯನಗರ ಶಾಸಕ ಬಿ ಎನ್ ವಿಜಯ ಕುಮಾರ್ ಅವರ ಅಕಾಲಿಕ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ನಂತರ ಬೆಂಗಳೂರಿನ ರೆಡಿಸನ್ ಬ್ಲೂ ಹೊಟೇಲ್ ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಪ್ರಣಾಳಿಕೆ ಬಿಡುಗಡೆಗೊಳಿಸಿದರು.
ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ರೈತರಿಗಾಗಿಯೇ ಪ್ರತ್ಯೇಕ ಬಜೆಟ್ ಮಂಡಿಸಿ ದಾಖಲೆ ಬರೆದಿದ್ದರು. ಇದೀಗ ತನ್ನ ಪ್ರಣಾಳಿಕೆಯಲ್ಲಿಯೂ ರೈತರಿಗೆ ಹೆಚ್ಚಿನ ಆದ್ಯತೆ ನೀಡುವಲ್ಲಿ ಬಿಜೆಪಿ ಸಫಲವಾಗಿದೆ. ರಾಷ್ಟ್ರೀಕೃತ ಬ್ಯಾಂಕು ಮತ್ತು ಸಹಕಾರಿ ಸಂಘಗಳಲ್ಲಿ ಇರುವ 1 ಲಕ್ಷ ರೂ.ವರೆಗೆ ರೈತರ ಬೆಳೆ ಸಾಲ ಮನ್ನಾ ಮಾಡುವುದು ಬಿಜೆಪಿಯ ಪ್ರಣಾಳಿಕೆಯ ಮುಖ್ಯಾಂಶಗಳಲ್ಲೊಂದು.
ಇದರೊಟ್ಟಿಗೆ ಮಹಿಳಾ ಸಬಲೀಕರಣ, ಯುವಜನಾಭಿವೃದ್ಧಿಗೆ ಒತ್ತು, ಆರೋಗ್ಯ ಸೇವೆಗೆ ಮಹತ್ವ, ಪರಿಶಿಷ್ಠ ಜಾತಿ, ಪಂಗಡ ಮತ್ತ ಇತರ ಹಿಂದುಳಿದ ವರ್ಗಗಳಿಗೆ ಆದ್ಯತೆ ನೀಡಿದ್ದು ಪ್ರಳಿಕೆಯ ವಿಶೇಷ. ಅಷ್ಟಕ್ಕೂ ಬಿಜೆಪಿ ಪ್ರಣಾಳಿಕೆಯಲ್ಲೇನಿದೆ? ಇಲ್ಲಿದೆ ಸವಿವರ ಮಾಹಿತಿ.

ರೈತರಿಗೆ ಮೊದಲ ಆದ್ಯತೆ
* ನಮ್ಮ ಸರಕಾರದ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ರಾಷ್ಟ್ರೀಕೃತ ಬ್ಯಾಂಕು ಮತ್ತು ಸಹಕಾರಿ ಸಂಘಗಳಲ್ಲಿ ಇರುವ 1 ಲಕ್ಷ ರೂ.ವರೆಗೆ ರೈತರ ಬೆಳೆ ಸಾಲ ಮನ್ನಾ ಮಾಡಲಾಗುವುದು.
* 20 ಲಕ್ಷ ಸಣ್ಣ ಮತ್ತು ಅತಿ ಸಣ್ಣ ಒಣ ಭೂಮಿ ರೈತರಿಗೆ ತಲಾ
10,000 ಆರ್ಥಿಕ ನೆರವು ನೀಡಲಿದೆ "ನೇಗಿಲ ಯೋಗಿ" ಯೋಜನೆ.
* ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಗೆ, ಬೆಳೆಯ ಒಂದೂವರೆ ಪಟ್ಟು ಆದಾಯ ನೀಡಲಾಗುವುದು.
* ಬೆಲೆ ವ್ಯತ್ಯಯದ ಸಂದರ್ಭದಲ್ಲಿ ರೈತರ ಬೆಂಬಲಕ್ಕಾಗಿ 5,000 ಕೋಟಿ "ರೈತ ಬಂಧು ಆವರ್ತ ನಿಧಿ".
* ರೈತ ಸ್ನೇಹಿ ಯೋಜನೆಗಳ ಅನುಷ್ಠಾನದ ಸೂಕ್ತ ಮೇಲ್ವಿಚಾರಣೆಗಾಗಿ ಮುಖ್ಯಮಂತ್ರಿ ಕಚೇರಿಯಡಿ "ರೈತಬಂಧು ವಿಭಾಗ".
* ಭೂರಹಿತ ಕೃಷಿ ಕಾರ್ಮಿಕರಿಗೆ "ಮುಖ್ಯಮಂತ್ರಿ ರೈತ ಸುರಕ್ಷಾ ವಿಮೆ ಯೋಜನೆ" ಉಚಿತ 2 ಲಕ್ಷದಷ್ಟು ಅಪಘಾತ ವಿಮೆ.
* ರಾಜ್ಯದಲ್ಲಿ ಎಲ್ಲಾ ನೀರಾವರಿ ಯೋಜನೆಗಳನ್ನು 2023ರ ಒಳಗೆ ಪೂರ್ಣಗೊಳಿಸಲು 1.5 ಲಕ್ಷ ಕೋಟಿಯ "ಸುಜಲಾಂ
ಸುಫಲಾಂ ಕರ್ನಾಟಕ".
* ರಾಜ್ಯದಲ್ಲಿರುವ ಎಲ್ಲಾ ಕೆರೆಗಳ ಪುನಶ್ಚೇತನಕ್ಕಾಗಿ "ಮಿಶನ್ ಕಲ್ಯಾಣಿ" ಯೋಜನೆ.
* ರೈತರ ಪಂಪ್ ಸೆಟ್ ಗೆ ಪ್ರತಿ ದಿನ 10 ಗಂಟೆಗಳ ಕಾಲ ತ್ರೀ ಫೇಸ್ ವಿದ್ಯುತ್ ಪೂರೈಕೆ ಸೇರಿದಂತೆ ಹಲವು ರೈತ ಸ್ನೇಹಿ ಯೋಜನೆಗಳನ್ನು ಜಾರಿಗೆ ತರುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದೆ.

ಮಹಿಳಾ ಸಬಲೀಕರಣದತ್ತ...
* ಮಹಿಳೆಯರೇ ನಡೆಸುವ ಅತಿದೊಡ್ಡ ಸಹಕಾರಿ ಸಂಸ್ಥೆ ಸ್ಥಾಪಿಸಿ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಅದರ ಉತ್ಪನ್ನಗಳನ್ನು ಮಾರಾಟ ಮಾಡುವ ಮಳಿಗೆಗಳ ನಿರ್ಮಾಣಕ್ಕೆ 10,000 ಕೋಟಿ. ಇದಕ್ಕಾಗಿ "ಸ್ತ್ರೀ ಉನ್ನತಿ ನಿಧಿ".
* ಸ್ತ್ರೀಶಕ್ತಿ ಮತ್ತು ಸ್ವಸಹಾಯ ಸಂಘಗಳ ಮಹಿಳೆಯರಿಗೆ ಶೇಕಡಾ 1 ರ ಬಡ್ಡಿದರದಲ್ಲಿ 2 ಲಕ್ಷದ ವರೆಗೆ ಸಾಲ.
* ರೂ.100 ಕೋಟಿಯ "ಕರ್ನಾಟಕ ಮಹಿಳಾ ಎಂಟರ್ಪ್ರೈಸಸ್ ಕ್ಲಸ್ಟರ್ ಪ್ರೋಗ್ರಾಮ್" ಸ್ಥಾಪನೆ ಮತ್ತು ಅದರ ಅಡಿಯಲ್ಲಿ ಮಹಿಳೆಯರಿಂದ ನಡೆಸಲ್ಪಡುವ ವ್ಯಾಪಾರ ಬೆಂಬಲಕ್ಕೆ 30 ಹೊಸ MSME ಮಿನಿ ಕ್ಲಸ್ಟರ್ ಗಳ ಸ್ಥಾಪನೆ.
* ಹೈನುಗಾರಿಕಾ ಕ್ಷೇತ್ರದಲ್ಲಿ ಮಹಿಳೆಯರ ಪ್ರೋತ್ಸಾಹಕ್ಕಾಗಿ 100 ಕೋಟಿ ರೂ. ನಿಧಿ ಮೀಸಲಿಡಲಾಗುವುದು.
* "ಮುಖ್ಯಮಂತ್ರಿ ಸ್ಮಾರ್ಟ್ ಫೋನ್ ಯೋಜನೆ" ಅಡಿ ಬಿಪಿಎಲ್ ಕುಟುಂಬದ ಮಹಿಳೆಯರಿಗೆ ಉಚಿತ ಸ್ಮಾರ್ಟ್ ಫೋನ್.
* "ಸ್ತ್ರೀ ಸುವಿಧಾ" ಯೋಜನೆಯಡಿ ಬಿಪಿಎಲ್ ಕುಟುಂಬದ ಮಹಿಳೆಯರು, ವಿದ್ಯಾರ್ಥಿನಿಯರಿಗೆ ಉಚಿತ ನ್ಯಾಪ್ಕಿನ್, ಉಳಿದ ಮಹಿಳೆಯರಿಗೆ ರೂ.1 ಕ್ಕೆ ಸ್ಯಾನಿಟರಿ ನ್ಯಾಪ್ಕಿನ್ ನೀಡಲಾಗುವುದು. * ಭಾಗ್ಯಲಕ್ಷ್ಮೀ ಯೋಜನೆಯಡಿ ಹೆಣ್ಣುಮಕ್ಕಳಿಗೆ ನೀಡುವ ಮೊತ್ತ ರೂ.2 ಲಕ್ಷಕ್ಕೆ ಹೆಚ್ಚಳ.
* "ವಿವಾಹ ಮಂಗಳ" ಯೋಜನೆ ಅಡಿ ಬಿಪಿಎಲ್ ಕುಟುಂಬದ ಯುವತಿಯರ ಮದುವೆಗೆ ರೂ. 25,000 ಮತ್ತು 3 ಗ್ರಾಂ ಚಿನ್ನದ ತಾಳಿ.
* ಮಹಿಳೆಯರ ಮೇಲಿನ ಇತ್ಯರ್ಥಗೊಳ್ಳದ ದೌರ್ಜನ್ಯ ಪ್ರಕರಣಗಳ ತನಿಖೆಗೆ ಮಹಿಳಾ ಪೊಲೀಸ್ ಅಧಿಕಾರಿಯ ನೇತೃತ್ವದಲ್ಲಿ 1,000 ಮಹಿಳಾ ಪೊಲೀಸ್ ಸಿಬ್ಬಂದಿ ಇರುವ ವಿಶೇಷ ತನಿಖಾ ತಂಡ ರಚನೆ.

ಯುವಜನರತ್ತ ಬಿಜೆಪಿ ಚಿತ್ತ
* ಕೌಶಲ್ಯಾಭಿವೃದ್ಧಿ, ಸ್ವಯಂ ಉದ್ಯೋಗ, ಉದ್ಯೋಗ ಸೃಷ್ಟಿ ಮೂಲಕ ಪ್ರತಿಯೊಬ್ಬರಿಗೂ ಉತ್ತಮ ಉದ್ಯೋಗಾವಕಾಶ.
* ರಾಜ್ಯದಲ್ಲಿ 60 ನಮ್ಮ ಬಿಪಿಓ ಸಂಕೀರ್ಣ' ಸ್ಥಾಪನೆ. ಬಿಪಿಓ ಉದ್ದಿಮೆ ಸ್ಥಾಪಿಸಿ ಉದ್ಯೋಗಾವಕಾಶ ಸೃಷ್ಟಿಸಲು ಸ್ಥಳೀಯ ಉದ್ಯಮಿಗಳಿಗೆ
ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲು 250 ಕೋಟಿ.
* "ಮುಖ್ಯಮಂತ್ರಿ ಲ್ಯಾಪ್ಟಾಪ್" ಯೋಜನೆಯಡಿ ಕಾಲೇಜಿಗೆ ಸೇರುವ ಪ್ರತಿ ವಿದ್ಯಾರ್ಥಿಗೆ ಉಚಿತ ಲ್ಯಾಪ್ ಟಾಪ್.
* ಹುಬ್ಬಳ್ಳಿ, ಬೆಂಗಳೂರು, ರಾಯಚೂರು, ಕಲಬುರಗಿ, ಮೈಸೂರು, ಮಂಗಳೂರಿನಲ್ಲಿ ಸ್ಟಾರ್ಟ್ಅಪ್ ಕಂಪನಿಗಳಿಗೆ ಸ್ಥಳಾವಕಾಶ ಇನ್ನಿತರ ಸೌಲಭ್ಯಗಳಿರುವ 6 "ಕೆ-ಹಬ್"ಗಳ ಸ್ಥಾಪನೆ.
* ಸರ್ಕಾರಿ ಶಾಲೆ ಹಾಗೂ ಕಾಲೇಜುಗಳಲ್ಲಿ ಕ್ರೀಡಾ ಸೌಕರ್ಯಗಳನ್ನುಮೇಲ್ದರ್ಜೆಗೇರಿಸಲು ರೂ. 100 ಕೋಟಿ ನಿಧಿ.
* ಪ್ರತಿ ತಾಲೂಕಿನಲ್ಲಿ ಅಥ್ಲೆಟಿಕ್ ಟ್ರ್ಯಾಕ್, ಈಜುಕೊಳ, ಒಳಾಂಗಣ ಕ್ರೀಡಾಂಗಣದಂಥ ಸೌಲಭ್ಯಗಳಿರುವ ಯುವ ಸಮುದಾಯ ಕೇಂದ್ರಗಳ ಅಭಿವೃದ್ಧಿ.

ಸರ್ವೋದಯದಕ್ಕೆ ಒತ್ತು
* ಎಲ್ಲರಿಗೂ ಆಹಾರ ಒದಗಿಸುವ "ಅನ್ನದಾಸೋಹ ಯೋಜನೆ". ಬಿಪಿಎಲ್ ಕಾರ್ಡುದಾರರಿಗೆ ಆಯಾ ಪ್ರದೇಶಕ್ಕೆ ತಕ್ಕಂತೆ ಆಹಾರ. ಧಾನ್ಯ ವಿತರಣೆ ಮತ್ತು ಎಪಿಎಲ್ ಕಾರ್ಡುದಾರರಿಗೆ ಕಡಿಮೆ ದರದಲ್ಲಿ ಆಹಾರ ಧಾನ್ಯ ವಿತರಣೆ.
* ಕೈಗೆಟುಕುವ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಆಹಾರ ಒದಗಿಸಲು 300ಕ್ಕಿಂತಲೂ ಹೆಚ್ಚು "ಮುಖ್ಯಮಂತ್ರಿ ಅನ್ನಪೂರ್ಣ ಕ್ಯಾಂಟೀನ್"ಗಳ (ಜಿಲ್ಲಾ ಕೇಂದ್ರಗಳಲ್ಲಿ 3 ಮತ್ತು ಪ್ರತಿ ತಾಲೂಕು ಕೇಂದ್ರದಲ್ಲಿ 1) ಸ್ಥಾಪನೆ.
* ಅಸ್ತಿತ್ವದಲ್ಲಿರುವ ಎಲ್ಲಾ ಎಸ್ಟಿ ವಿದ್ಯಾರ್ಥಿ ವೇತನ ಹೆಚ್ಚಿಸಲು, 400 ಎಸ್ಟಿ ವಿದ್ಯಾರ್ಥಿಗಳು ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವಂತಾಗಲು ಮತ್ತು ರಾಷ್ಟ್ರೀಯ ಖ್ಯಾತಿಯ ಸಂಸ್ಥೆಗಳಲ್ಲಿ
ಸೇರ್ಪಡೆಯಾದ ಎಸ್ಟಿ ವಿದ್ಯಾರ್ಥಿಗಳ ಶುಲ್ಕ ಪಾವತಿಗೆ ರೂ.1,500 ಕೋಟಿ ಮೊತ್ತದ "ಮಹರ್ಷಿ ವಾಲ್ಮಿಕಿ ವಿದ್ಯಾರ್ಥಿವೇತನ ಯೋಜನೆ".
* ಪ್ರಸ್ತುತ ಇರುವ ಎಲ್ಲಾ ಎಸ್ಸಿ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ಹೆಚ್ಚಿಸಲು, 600 ಎಸ್ಸಿ ವಿದ್ಯಾರ್ಥಿಗಳು ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಸಹಕಾರಿಯಾಗಲು ರೂ. 3,000 ಕೋಟಿ ಮೊತ್ತದ "ಬಾಬು ಜಗಜೀವನ ರಾಮ್ ವಿದ್ಯಾರ್ಥಿವೇತನ ಯೋಜನೆ".
* 8ನೇ ತರಗತಿಯಲ್ಲಿ ಉತ್ತೀರ್ಣರಾದ ಎಸ್ಸಿ ಮತ್ತು ಎಸ್ಟಿ ವಿದ್ಯಾರ್ಥಿಗಳಿಗೆ ರೂ. 500, 9ನೇ ತರಗತಿಯಲ್ಲಿ ಉತ್ತೀರ್ಣರಾದವರಿಗೆ ರೂ. 750, 10ನೇ ತರಗತಿಯಲ್ಲಿ ಉತ್ತೀರ್ಣರಾದವರಿಗೆ ರೂ 1,000 ಒಂದು ಬಾರಿಯ ನಗದು ಬಹುಮಾನ.
* "ಮದಕರಿ ನಾಯಕ ವಸತಿ ಯೋಜನೆ"ಯಡಿ ಎಸ್ಟಿ ಸಮುದಾಯಗಳಿಗೆ ವಸತಿ ನಿರ್ಮಿಸಲು 6,500 ಕೋಟಿ ಮೀಸಲು. ರೂ. 8,500 ಕೋಟಿ ಮೊತ್ತದ 'ಮಾದಾರ ಚೆನ್ನಯ್ಯ ವಸತಿ ಯೋಜನೆ'ಯಡಿ ಎಸ್ಸಿ ಸಮುದಾಯಗಳಿಗೆ ಆಧುನಿಕ ಮನೆಗಳ ನಿರ್ಮಾಣ.

ಹಿಂದುಳಿದ ವರ್ಗಕ್ಕಾಗಿ ಒಂದಷ್ಟು ಯೋಜನೆ
* ಡಾ. ಭೀಮರಾವ್ ರಾಮ್ ಜೀ ಅಂಬೇಡ್ಕರ್ ಅವರ ಬದುಕಿನ ಜತೆ ಸಂಬಂಧ ಹೊಂದಿರುವ ಸ್ಥಳಗಳಾದ ಮೌವ್, ನಾಗಪುರ, 26 ಆಲಿಪುರ ರಸ್ತೆ (ದೆಹಲಿ), ದಾದರ್ ಮತ್ತು ಲಂಡನ್ ಮುಂತಾದೆಡೆ ಭೇಟಿ ನೀಡಲು "ಡಾ. ಭೀಮರಾವ್ ರಾಮ್ ಜೀ ಅಂಬೇಡ್ಕರ್ ತೀರ್ಥಸ್ಥಳ ಯಾತ್ರೆ" ನಿಧಿಗೆ ಹಣ ಮೀಸಲಿಡಲಾಗುವುದು.
* ಸಾಂಪ್ರದಾಯಿಕ ಕಸುಬುಗಳನ್ನು ಲಾಭದಾಯಕವನ್ನಾಗಿಸಲು ಮತ್ತು ಸಾಂಪ್ರದಾಯಿಕ ಕಸುಬು ನಡೆಸುವವರ ಕಲ್ಯಾಣಕ್ಕಾಗಿ
* "ಒಬಿಸಿ ನಿಧಿ"ಯಡಿ ರೂ. 1,000 ಕೋಟಿ ಹಣ.
* ಒಬಿಸಿಗಳಿಗೆ ಆಧುನಿಕ ಸೌಲಭ್ಯ ಹೊಂದಿರುವ ವಸತಿ ಸಂಕೀರ್ಣಗಳನ್ನು ನಿರ್ಮಿಸಲು ರೂ. 7500 ಕೋಟಿ ಮೊತ್ತ ನಿಗದಿ.
* ನಮ್ಮ ಸರಕಾರ ರಚನೆಯಾದ 3 ತಿಂಗಳೊಳಗೆ ನೇಕಾರರ ರೂ.1 ಲಕ್ಷದವರೆಗೆ ಸಾಲ ಮನ್ನಾ ಮಾಡಲಾಗುವುದು.
* ತಿಗಳ, ಸವಿತಾ ಸಮಾಜ, ಈಡಿಗ, ಬಿಲ್ಲವ ಹಾಗೂ ಯಾದವ ಸಮುದಾಯಗಳ ಕಲ್ಯಾಣಕ್ಕಾಗಿ ಕಲ್ಯಾಣ ಮಂಡಳಿ/ಅಭಿವೃದ್ಧಿ ನಿಗಮ ಸ್ಥಾಪನೆ.
* ಪ್ರತಿ ವರ್ಷ ಅಮರಶಿಲ್ಪಿ ಜಕಣಾಚಾರಿ ಜಯಂತಿ.

ಆರೋಗ್ಯ ಭಾಗ್ಯಕ್ಕೆ ಪ್ರಾಮುಖ್ಯ
* ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಏಮ್ಸ್ ಮಾದರಿಯಲ್ಲಿ 2 "ಕರ್ನಾಟಕ ರಾಜ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ" ಗಳ ಸ್ಥಾಪನೆ.
* ರಾಜ್ಯದಲ್ಲಿರುವ ಎಲ್ಲಾ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ (CHCs) ಜನೌಷಧಿ ಸ್ಟೋರ್ ಗಳ ಸ್ಥಾಪನೆ.
* ಎಲ್ಲಾ ಬಡ ಮತ್ತು ದುರ್ಬಲ ವರ್ಗದವರ ಚಿಕಿತ್ಸೆಗಾಗಿ ರೂ.5 ಲಕ್ಷ ವಿಮೆ ಒದಗಿಸಲು "ಆಯುಷ್ಮಾನ್ ಕರ್ನಾಟಕ ಯೋಜನೆ" ಜಾರಿ.
* 108 - ತುರ್ತು ವಾಹನ ಸೇವೆಯಡಿ ಇನ್ನಷ್ಟು ಅಂಬುಲೆನ್ಸ್ ಗಳ ಒದಗಿಸಿ ಅತಿ ಶೀಘ್ರವಾಗಿ ರೋಗಿಗಳನ್ನು ತಲುಪುವಂತೆ ಮಾಡಲಾಗುವುದು.
* ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ "ಆಯುಶ್ ಆರೋಗ್ಯ" ಕೇಂದ್ರ.
* ಎಲ್ಲಾ ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ಮಕ್ಕಳಿಗೆ ಸೀತಾಳ ಸಿಡುಬು, ಹೆಪಟೈಟಿಸ್ ಎ, ನ್ಯುಮೋನಿಯಾಗೆ ಉಚಿತ ಲಸಿಕೆ.
* ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 1 ಸರ್ಕಾರಿ ವೈದ್ಯಕೀಯ ಕಾಲೇಜು ಇರುವಂತೆ ನೋಡಿಕೊಳ್ಳಲಾಗುವುದು.
* ಆಯುರ್ವೇದ, ನ್ಯಾಚುರೋಪತಿ ಮತ್ತು ಇತರ ಭಾರತೀಯ ವೈದ್ಯಕೀಯ ವ್ಯವಸ್ಥೆಗಳನ್ನೊಳಗೊಂಡ ವಿಶ್ವದರ್ಜೆಯ ಸಮಗ್ರ ಪಠ್ಯಕ್ರಮ ಇರುವ ಹೊಸ ಆಯುಶ್ ವಿಶ್ವವಿದ್ಯಾಲಯ.

ಶಿಕ್ಷಣ ಕ್ಷೇತ್ರದ ನವ ಚೈನತ್ಯದ ಸಂಕಲ್ಪ
* ಕರ್ನಾಟಕ ಶಾಲಾ-ಕಾಲೇಜು ಶುಲ್ಕನಿಯಂತ್ರಣ ಪ್ರಾಧಿಕಾರದ" ಸ್ಥಾಪನೆ.
* ರೂ. 1,300 ಕೋಟಿ ಅನುದಾನದಲ್ಲಿ ಅಗತ್ಯವಿರುವ ತಾಲೂಕು ಕೇಂದ್ರಗಳಲ್ಲಿ ಹೊಸ ಪದವಿ ಪೂರ್ವ ಕಾಲೇಜುಗಳ ಸ್ಥಾಪನೆ
* ರೂ. 3,000 ಕೋಟಿಯ "ರಾಷ್ಟ್ರಕವಿ ಕುವೆಂಪು ಜ್ಞಾನ ಯೋಜನೆ"ಯಡಿ 70 ಹೊಸ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ನಿರ್ಮಾಣ ಮತ್ತು ಅಸ್ತಿತ್ವದಲ್ಲಿರುವ ಕಾಲೇಜುಗಳು ಮೇಲ್ದರ್ಜೆಗೆ.
* ವೃತ್ತಿಪರ ಕೋರ್ಸುಗಳನ್ನು ಹೊರತುಪಡಿಸಿ ಪದವಿ ಮಟ್ಟದವರೆಗೆ ಎಲ್ಲ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಸರ್ಕಾರಿ ಕಾಲೇಜುಗಳಲ್ಲಿ ಉಚಿತ ಶಿಕ್ಷಣ.
* ಬಡ ಮತ್ತು ಹಿಂದುಳಿದ ವಿದ್ಯಾರ್ಥಿಗಳ ಅನುಕೂಲಕ್ಕೆ ಅತ್ಯಾಧುನಿಕ ಸೌಲಭ್ಯವಿರುವ 750 ವಸತಿ ನಿಲಯಗಳ ಸ್ಥಾಪನೆ.
* ಜೆಇಇ, ಕ್ಯಾಟ್, ಕೆಪಿಎಸ್ಸಿ ಮತ್ತು ಯುಪಿಎಸ್ಸಿ ಯಂತಹ ಪ್ರವೇಶ ಪರೀಕ್ಷೆ ಬರೆಯುವ ಎಸ್ಸಿ / ಎಸ್ಟಿ / ಒಬಿಸಿ / ಬಿಪಿಎಲ್ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ಕೇಂದ್ರಗಳ ಸ್ಥಾಪನೆ.
* ಉನ್ನತ ಶಿಕ್ಷಣ ಪಡೆಯುವ ಬಿಪಿಎಲ್ ವಿದ್ಯಾರ್ಥಿಗಳಿಗೆ ಬಡ್ಡಿ ರಹಿತ ಸಾಲ. ಪದವಿ ವಿದ್ಯಾರ್ಥಿಗಳಿಗೆ ರೂ. 3 ಲಕ್ಷ ಮತ್ತು ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ರೂ. 5 ಲಕ್ಷದವರೆಗೂ ಸಾಲ.












Click it and Unblock the Notifications