ಮೈಸೂರು : ಯಾವ ಜಾತಿಯ ಮತ ಯಾರಿಗೆ?

ಚಾಮುಂಡೇಶ್ವರಿ
ನಾಡ ದೇವತೆ ಚಾಮುಂಡೇಶ್ವರಿ ದೇಗುಲ ಇರುವ ಈ ಕ್ಷೇತ್ರ, ಸಿದ್ದರಾಮಯ್ಯ ರಾಜಕೀಯ ಕರ್ಮಭೂಮಿ. ಜೆಡಿಎಸ್ ತೊರೆದು 257 ಮತಗಳ ಅಂತರದಲ್ಲಿ ಅವರು ಉಪಚುನಾವಣೆಯಲ್ಲಿ ಗೆದಿದ್ದು ಇಲ್ಲೇ. ಕಳೆದ ಚುನಾವಣೆಯಲ್ಲಿ ಇಲ್ಲಿ ಇಬ್ಬರ ನಡುವೆ ಸ್ಪರ್ಧೆ ಇತ್ತು. ಈ ಬಾರಿಯೂ ಅದು ಪುನರಾವರ್ತನೆಯಾಗುವ ಸಾಧ್ಯತೆ ಇದೆ. ಸಿದ್ದರಾಮಯ್ಯ ಅವರ ವರ್ಚಸ್ಸಿನ ಮೇಲೆ ಫಲಿತಾಂಶ ಅವಲಂಬಿತವಾಗಿದೆ. ಹಾಲಿ ಶಾಸಕ ಸತ್ಯನಾರಾಯಣ ಕುರಿತಂತೆ ಉತ್ತಮ ಅಭಿಪ್ರಾಯ ಇಲ್ಲ. ಅಲ್ಲದೆ ಕ್ಷೇತ್ರದಲ್ಲಿ ಒಕ್ಕಲಿಗರ ಮತಗಳು ತಮ್ಮ ಕಡೆ ಬರುವ ಕಾರಣ ಗೆಲುವು ನಿಶ್ಚಿತ ಅನ್ನೋದು ಜೆಡಿಎಸ್ನ ಜಿ.ಟಿ. ದೇವೇಗೌಡರ ಲೆಕ್ಕಾಚಾರ.
ಒಂದು ಕಾಲದ ಕುಚಿಕು ಗೆಳೆಯ ಸಿದ್ದರಾಮಯ್ಯ ಅವರ ಗೆಳೆಯರ ವಲಯವೇ ಜಿ.ಟಿ. ದೇವೇಗೌಡರಿಗೂ ಆಪ್ತವಾದ್ದರಿಂದ ಗೆಲವು ನನ್ನದೇ ಅನ್ನೋದು ಜಿಟಿಡಿ ವಿಶ್ವಾಸ. ಅವರ ವಿಶ್ವಾಸಕ್ಕೆ ಮತ್ತೊಂದು ಕಾರಣ ಕ್ಷೇತ್ರದಲ್ಲಿ ಗಣನೀಯ ಸಂಖ್ಯೆಯಲ್ಲಿರುವ ಎಸ್ಟಿ ಮತಗಳು. ಈ ವರ್ಗದ ಮತಗಳ ಮೇಲೆ ಸಿದ್ದರಾಮಯ್ಯ ಅವರಿಗೆ ಹಿಡಿತವಿದ್ದರೂ, ಜೆಡಿಎಸ್ನ ಚಿಕ್ಕಮಾದು ಇದನ್ನು ಛಿದ್ರ ಮಾಡಿ ನನ್ನ ಜೇಬಿಗೆ ಹಾಕ್ತಾರೆ ಅನ್ನೋದು ಜೆಡಿಎಸ್ ನಂಬಿಕೆ. ಆದರೆ, ಇದೇ ಎಸ್ಟಿ ಪ್ರವರ್ಗಕ್ಕೆ ಸೇರಿದ ಅಪ್ಪಣ್ಣ ಅವರನ್ನು ಕೆಜೆಪಿ ಕಣಕ್ಕಿಳಿಸುವ ಮೂಲಕ ರಾಜಕೀಯ ಜಾಣ್ಮೆ ಮೆರೆದಿದೆ. ಸಿದ್ದರಾಮಯ್ಯ ಅವರ ವರ್ಚಸ್ಸು ಇನ್ನೂ ಕ್ಷೇತ್ರದಲ್ಲಿ ಇದೆ. ಹೀಗಾಗಿ, ಅವರು ಒಮ್ಮೆ ಬಂದು ಪ್ರಚಾರ ಮಾಡಿದರೂ ಸಾಕು ಕಾಂಗ್ರೆಸ್ ಗೆಲುವು ನಿಶ್ಚಿತ ಅನ್ನೋ ಲೆಕ್ಕ ಕೈ ಪಾಳಯದಲ್ಲಿದೆ.
ನರಸಿಂಹರಾಜ
ರಾಜಕೀಯ ಮುತ್ಸದ್ದಿಯಾಗಿದ್ದ ಅಜೀಜ್ ಸೇಠ್ ಅವರ ಪುತ್ರ ತನ್ವೀರ್ ಸೇಠ್ ಪ್ರತಿನಿಧಿಸುತ್ತಿರುವ ಕ್ಷೇತ್ರವಿದು. ಹ್ಯಾಟ್ರಿಕ್ ಬಾರಿಸಿರುವ ತನ್ವೀರ್, ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಮುಸ್ಲಿಮರ ಪ್ರಭಾವ ಇರುವ ಈ ಕ್ಷೇತ್ರ ವ್ಯಾಪ್ತಿಯಲ್ಲಿ ಈಚೆಗೆ ನಡೆದ ಪಾಲಿಕೆ ಚುನಾವಣೆಯಲ್ಲಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷ 3 ಕಡೆ ಗೆದ್ದಿದೆ. ಆ ಪಕ್ಷವೇನಾದರೂ ಮತ ವಿಭಜನೆ ಮಾಡಿದರೆ, ತನ್ವೀರ್ಗೆ ಹಿನ್ನಡೆ ಸಂಭವ. ಆದರೂ ಮುಸ್ಲಿಮರು ತಮ್ಮನ್ನು ಕೈ ಬಿಡಲ್ಲ ಅನ್ನೋದೇ ಸೇಠ್ ಲೆಕ್ಕಾಚಾರ. ಮುಸ್ಲಿಂ ಮತದಾರರನ್ನು ಗುರಿಯಾಗಿಸಿಕೊಂಡಿರೋ ಎಸ್ಡಿಪಿಐ ಮುಸ್ಲಿಂ ಮತಗಳನ್ನು ವಿಭಜಿಸೋ ಕಾರಣ ಜೆಡಿಎಸ್ಗೆ ಅನುಕೂಲವಾಗಬಹುದು ಎಂಬ ಲೆಕ್ಕ ಜೆಡಿಎಸ್ನಲ್ಲಿದೆ. ಬಿಜೆಪಿಯಿಂದ ಬಿ.ಪಿ. ಮಂಜುನಾಥ್ ಅವರು ಸ್ಫರ್ಧಿಸುತ್ತಿದ್ದಾರೆ.
ಪಿರಿಯಾಪಟ್ಟಣ
ಟಿಬೆಟಿಯನ್ ನಿರಾಶ್ರಿತರು ವಾಸವಾಗಿರುವ ಬೈಲುಕುಪ್ಪೆ, ಪ್ರಸಿದ್ಧ ಪ್ರವಾಸಿ ತಾಣ. ತಂಬಾಕು ಮುಖ್ಯ ಬೆಳೆ. ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ 787 ಮತಗಳ ಅಂತರದಿಂದ ಗೆದ್ದಿದ್ದರು. ಕ್ಷೇತ್ರದಲ್ಲಿ ಕುರುಬರು, ಪರಿಶಿಷ್ಟ ಜಾತಿ ಮತ್ತು ಒಕ್ಕಲಿಗರೇ ನಿರ್ಣಾಯಕ. ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ನೇರ ಹಣಾಹಣಿ ಇದೆ. ಸಿದ್ದು ಸಿಎಂ ಅಭ್ಯರ್ಥಿಯಾಗಿರೋ ಕಾರಣ, ಕುರುಬರ ಮತಗಳು ಕಾಂಗ್ರೆಸ್ ಕೈ ತಪ್ಪುವುದು ಅನುಮಾನ. ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಪೈಪೋಟಿ ಇದೆ.
ಕೆ.ಆರ್ ನಗರ
ಭತ್ತದ ಕಣಜವಾಗಿರುವ ಕೃಷ್ಣರಾಜ ನಗರ, ಮೈಸೂರು ಸಂಸದ ಎಚ್. ವಿಶ್ವನಾಥ್ ಪ್ರತಿನಿಧಿಸುತ್ತಿದ್ದ ಕ್ಷೇತ್ರ. ಕಳೆದ ಎರಡು ಚುನಾವಣೆಗಳಲ್ಲಿ ವಿಶ್ವನಾಥ್ ಇಲ್ಲಿ ಸೋಲು ಕಂಡಿದ್ದಾರೆ. ಜೆಡಿಎಸ್ ಟಿಕೆಟ್ ಆಕಾಂಕ್ಷಿತರಾಗಿದ್ದ ಬಸಂತ್ ಕೆಜೆಪಿಗೆ ಜಿಗಿದಿದ್ದಾರೆ. ಜೆಡಿಎಸ್ ಅಭ್ಯರ್ಥಿ ಮಹೇಶ್ ನಾಗಾಲೋಟಕ್ಕೆ, ಇದರಿಂದ ತುಸು ಹಿನ್ನಡೆಯಾಗಬಹುದು. ಬಸಂತ್ ಒಕ್ಕಲಿಗರಾಗಿರೋ ಕಾರಣ, ಅವರು ಒಕ್ಕಲಿಗರ ಮತಗಳು ಮತ್ತು ಲಿಂಗಾಯತ ಮತಗಳನ್ನು ಸೆಳೆಯಬಹುದು. ಜೆಡಿಎಸ್ ಮತ್ತು ಕೆಜೆಪಿ ಗುದ್ದಾಟದಲ್ಲಿ ಕಾಂಗ್ರೆಸ್ಗೆ ಅನುಕೂಲವಾದ್ರೆ ಅಚ್ಚರಿಯೇ ಬೇಡ.












Click it and Unblock the Notifications