ಮೈಸೂರು : ಅವರಿಗೆ ಪ್ಲಸ್ ಆದ್ರೆ ಇವರಿಗೆ ಮೈನಸ್!

ನಂಜನಗೂಡು
ಶ್ರೀಕಂಠೇಶ್ವರ ದೇಗುಲವಿರುವ ಈ ಕ್ಷೇತ್ರ, ಸಮುದಾಯಗಳ ನಡುವೆ ಘರ್ಷಣೆ ನಡೆಯುವ ಕಾರಣಕ್ಕೆ ನಾಡಿನ ಗಮನ ಸೆಳೆದಿತ್ತು. ಈ ಹಿಂದೆ ಬೆಂಕಿ ಮಹದೇವು ಪ್ರತಿನಿಧಿಸುತ್ತಿದ್ದರು. 2008ರಲ್ಲಿ ಎಸ್ಸಿ ಮೀಸಲು ಕ್ಷೇತ್ರವಾಗಿದೆ. ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಶ್ರೀನಿವಾಸ ಪ್ರಸಾದ್ ಅವರಿಗೆ ತೀವ್ರ ಪೈಪೋಟಿ ನೀಡಿದ್ದ ಎಸ್. ಮಹದೇವಯ್ಯ ಈಗ ಕೆಜೆಪಿಗೆ ಜಿಗಿದಿರುವುದರಿಂದ ಆ ಪಕ್ಷಕ್ಕೆ ಬಲ ಸಿಕ್ಕಂತಾಗಿದೆ. ಕ್ಷೇತ್ರದಲ್ಲಿ ಸಕ್ರಿಯವಾಗಿ ಓಡಾಡದೇ ಇರೋದು ಪ್ರಸಾದ್ ಅವರಿಗೆ ಮೈನಸ್ ಆದರೂ ಸಹಿತ ಎಲ್ಲೂ ಹೆಸರು ಕೆಡಿಸಿಕೊಂಡಿಲ್ಲ. ಅಲ್ಲದೆ, ಇಲ್ಲೂ ಸಿದ್ದು ವರ್ಚಸ್ಸು ಇದೆ. ಹೀಗಾಗಿ, ಕ್ಷೇತ್ರ ಕಾಂಗ್ರೆಸ್ ಕೈ ತಪ್ಪುವುದು ಕಷ್ಟ. ಬಿಜೆಪಿಯಿಂದ ಶಿವರಾಂ ಅವರು ಕಣಕ್ಕಿಳಿದಿದ್ದಾರೆ.
ಹುಣಸೂರು
ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ರಾಜಕೀಯ ಕಾರ್ಯಕ್ಷೇತ್ರ ಇದು. ಇತ್ತೀಚೆಗಷ್ಟೇ ಬಿಜೆಪಿಯಿಂದ ಜೆಡಿಎಸ್ ಸೇರಿರುವ ಜಿ.ಟಿ ದೇವೇಗೌಡ ಪ್ರತಿನಿಧಿಸಿದ್ದ ಕ್ಷೇತ್ರವೂ ಹೌದು. ಜೆಡಿಎಸ್ಗೆ ಬಂದಿರುವ ಜಿಟಿಡಿ, ಸೋಲಿನ ಅನುಕಂಪ ಹಾಗೂ ದೇವೇಗೌಡ, ಕುಮಾರಸ್ವಾಮಿ ಬೆಂಬಲದಿಂದ ಗೆಲ್ಲುವ ಉತ್ಸಾಹದಲ್ಲಿದ್ದಾರೆ. ಎಚ್. ವಿ. ಮಂಜುನಾಥ್, ಶೆಟ್ಟಿ ಸಮುದಾಯಕ್ಕೆ ಸೇರಿದವರಾದ್ರೂ ಕ್ಷೇತ್ರದಲ್ಲಿ ಎಲ್ಲಾ ಜನಾಂಗದವರ ಓಲೈಕೆ ಮಾಡಿಕೊಂಡಿದ್ದಾರೆ. ಇದು ಕಾಂಗ್ರೆಸ್ಗೆ ಪ್ಲಸ್ ಪಾಯಿಂಟ್.
ಎಚ್.ಡಿ. ಕೋಟೆ
ನಾಗರಹೊಳೆ, ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ಹೊಂದಿಕೊಂಡಿರುವ, ಕೇರಳಕ್ಕೆ ತಾಗಿಕೊಂಡಿರುವ ಹಿಂದುಳಿದ ತಾಲೂಕು ಎಚ್.ಡಿ. ಕೋಟೆ. ಈ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ. ಈ ಕ್ಷೇತ್ರದಲ್ಲಿ ಇಬ್ಬರ ನಡುವೆ ಸ್ಪರ್ಧೆ ಏರ್ಪಡುವ ಸಾಧ್ಯತೆ ನಿಚ್ಚಳವಾಗಿದೆ. ಚಿಕ್ಕಣ್ಣಗೆ ಸಿದ್ದರಾಮಯ್ಯ ಅವರ ಆರ್ಶೀವಾದ ಇದೆ. ಸಿದ್ದು ವರ್ಚಸ್ಸು ಕ್ಷೇತ್ರದಲ್ಲಿ ಇದೆ. ಇದು ಕಾಂಗ್ರೆಸ್ ಅಭ್ಯರ್ಥಿಗೆ ಅನುಕೂಲವಾಗಲಿದೆ. ಬಿಜೆಪಿಯ ಸಿದ್ದರಾಜು ಕೂಡ ಉತ್ತಮವಾಗಿ ಸಂಘಟನೆ ಮಾಡಿರೋದು ಅವರಿಗೆ ಪ್ಲಸ್ ಪಾಯಿಂಟ್ ಆಗಲಿದೆ.
ಟಿ. ನರಸೀಪುರ
ತಿರುಮಕೂಡಲು ನರಸೀಪುರ ಎಂದೇ ಹೆಸರುವಾಸಿಯಾಗಿರುವ ಈ ಕ್ಷೇತ್ರ ಸಿದ್ದರಾಮಯ್ಯ ಬೆಂಬಲಿಗ, ಮಾಜಿ ಸಚಿವ ಡಾ. ಎಚ್.ಸಿ ಮಹಾದೇವಪ್ಪ ಅವರು ಪ್ರತಿನಿಧಿಸುತ್ತಿರುವ ಕ್ಷೇತ್ರ. ಸಿದ್ದರಾಮಯ್ಯ ಅವರ ಪ್ರಭಾವ ಇರುವ ಈ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಸಂಪಾದಿಸಿರುವ ಮಹಾದೇವಪ್ಪ ಅಭ್ಯರ್ಥಿಯಾಗಿರುವುದು ಕಾಂಗ್ರೆಸ್ಗೆ ಪ್ಲಸ್ ಪಾಯಿಂಟ್. ಬಿಜೆಪಿ ಸಿ. ರಮೇಶ್ ಅವರನ್ನು ಮತ್ತು ಜೆಡಿಎಸ್ ಸುಂದರೇಶನ್ ಅವರನ್ನು ಕಣಕ್ಕಿಳಿಸಿವೆ.












Click it and Unblock the Notifications