ಹರಸಾಹಸ ಪಟ್ಟರೂ ಪಟ್ಟುಬಿಡದೇ ಕಣದಲ್ಲುಳಿದವರು
ಬೆಂಗಳೂರು, ಏ 22: ನಾನಾ ಆಮಿಷಗಳನ್ನು ಒಡ್ಡಿ ಬಂಡಾಯಗಾರರನ್ನು ಓಲೈಸಲು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಹರಸಾಹಸ ಪಟ್ಟರೂ ಸಂಪೂರ್ಣ ಯಶಸ್ವಿಯಾಗಲಿಲ್ಲ. ಪಕ್ಷದ ವಿರುದ್ದ 18 ಕ್ಷೇತ್ರಗಳಲ್ಲಿ ತಿರುಗಿ ಬಿದ್ದಿದ್ದ 22 ಮಂದಿಯಿಂದ ನಾಮಪತ್ರ ಹಿಂತೆಗಿಸುವಲ್ಲಿ ಕಾಂಗ್ರೆಸ್ ಪಕ್ಷ ಯಶಸ್ವಿಯಾಗಿದೆ.
ಜೆಡಿಎಸ್ ಬಂಡಾಯಗಾರರ ಮನವೊಲಿಸುವಲ್ಲಿ ತುಸು ಎಡವಿದೆ. ಪಕ್ಷದ ಪ್ರಾಭಲ್ಯವಿರುವ ಏಳು ಕ್ಷೇತ್ರಗಳಲ್ಲಿ ಬಂಡಾಯ ಅಭ್ಯರ್ಥಿಗಳು ಆಖಾಡದಲ್ಲಿ ಉಳಿಯುವ ಮೂಲಕ ಪಕ್ಷಕ್ಕೆ ಭಾರೀ ಪೆಟ್ಟು ನೀಡಿದ್ದಾರೆ.
ಭದ್ರಾವತಿಯಲ್ಲಿ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ಸೂಚಿಸಿ ಕೆಜೆಪಿ ಅಭ್ಯರ್ಥಿ ಕಡೇ ಕ್ಷಣದಲ್ಲಿ ನಾಮಪತ್ರ ಹಿಂಪಡೆದಿದ್ದಾರೆ. ಟಿಕೆಟ್ ಸಿಗದೆ ಬೇಸರಗೊಂಡಿದ್ದ ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆತ್ಮಾನಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಬಿಜೆಪಿಗೆ ಈ ತಾಪತ್ರಯವಿಲ್ಲದೆ ಪ್ರಚಾರದಲ್ಲಿ ತಲ್ಲೀನರಾಗಿದ್ದಾರೆ. ಕಣದಲ್ಲಿ ಉಳಿದ ಪ್ರಮುಖ ಬಂಡುಕೋರರು ಮತ್ತು ಸ್ಪರ್ಧಿಸುತ್ತಿರುವ ಕ್ಷೇತ್ರಗಳು
ಭದ್ರಾವತಿ
ಕಾಂಗ್ರೆಸ್ ಟಿಕೆಟ್ ಸಿಗದೆ ಹಿನ್ನಲೆಯಲ್ಲಿ ಹಾಲಿ ಶಾಸಕ ಬಿ ಕೆ ಸಂಗಮೇಶ್ ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಸಿ ಎಂ ಇಬ್ರಾಹಿಂ ಸ್ಪರ್ಧಿಸುತ್ತಿದ್ದಾರೆ.
ಶ್ರೀರಂಗಪಟ್ಟಣ
ಅಂಬರೀಶ್ ವಿರುದ್ದ ಬಂಡಾಯವೆದ್ದಿದ್ದ ರವೀಂದ್ರ ಶ್ರೀಕಂಠಯ್ಯ ಪಕ್ಷದ ನಾಯಕರ ಮನವಿಗೆ ಒಪ್ಪಿ ಮಂಡ್ಯದಿಂದ ನಾಮಪತ್ರ ವಾಪಾಸ್ ಪಡೆದಿದ್ದರು. ಆದರೆ ಶ್ರೀರಂಗಪಟ್ಟಣದಲ್ಲಿ ಪಕ್ಷಕ್ಕೆ ಸಡ್ಡು ಹೊಡೆದು ಕಣದಲ್ಲಿ ಉಳಿದಿದ್ದಾರೆ. ಕಾಂಗ್ರೆಸ್ ಟಿಕೆಟಿನಿಂದ ಲಿಂಗರಾಜು ಸ್ಪರ್ಧಿಸುತ್ತಿದ್ದಾರೆ.
ಕಾರವಾರ
ರಮಾನಂದ ನಾಯಕ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದ ಹಿನ್ನಲೆಯಲ್ಲಿ ಕ್ಷೇತ್ರದ ಪ್ರಭಾವಿ ನಾಯಕ ಸತೀಶ್ ಶೈಲ್ ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ.
ಕಂಪ್ಲಿ
ಜೆ ಎನ್ ಗಣೇಶ್ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಈ ಕ್ಷೇತ್ರದಲ್ಲಿ ಗುಜ್ಜಲ್ ನಾಗರಾಜ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ. ನಾಮಪತ್ರ ವಾಪಾಸ್ ತೆಗೆದುಕೊಂಡರೆ ಆತ್ಮಾಹುತಿ ಮಾಡಿಕೊಳ್ಳುವುದಾಗಿ ಬೆಂಬಲಿಗರು ಬೆದರಿಸಿದ್ದರಿಂದ ಗಣೇಶ್ ಕಣದಲ್ಲಿ ಉಳಿದಿದ್ದಾರೆ.
ಕೆ ಆರ್ ಪೇಟೆ
ಜೆಡಿಎಸ್ ಪಕ್ಷಕ್ಕೆ ಆದ ತೀವ್ರ ಹಿನ್ನಡೆ. ಮಾಜಿ ಸ್ಪೀಕರ್ ದೇವೇಗೌಡ ಆಪ್ತರಾಗಿದ್ದ ಕೃಷ್ಣ ಪಕ್ಷಕ್ಕೆ ಸಡ್ಡು ಹೊಡೆದು ಕಣದಲ್ಲಿ ಉಳಿದಿದ್ದಾರೆ. ಜೆಡಿಎಸ್ ಟಿಕೆಟಿನಿಂದ ನಾರಾಯಣ ಗೌಡ ಸ್ಪರ್ಧಿಸುತ್ತಿದ್ದಾರೆ.
ಮದ್ದೂರು
ಪತಿಯ ನಿಧನದ ನಂತರ ಕಳೆದ ಬಾರಿ ಜೆಡಿಎಸ್ ಟಿಕೆಟಿನಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದ ಕಲ್ಪನಾ ಸಿದ್ದರಾಜು ಅವರಿಗೆ ಈ ಬಾರಿ ಜೆಡಿಎಸ್ ಟಿಕೆಟ್ ನಿರಾಕರಿಸಿತ್ತು. ಜೆಡಿಎಸ್ ದೇವೇಗೌಡ ಕುಟುಂಬದ ಸದಸ್ಯರಾದ ಡಿ ಸಿ ತಮ್ಮಣ್ಣ ಅವರಿಗೆ ಅಲ್ಲಿಂದ ಟಿಕೆಟ್ ನೀಡಿದೆ. ಕಲ್ಪನಾ ಸಿದ್ದರಾಜು ಪಕ್ಷೇತರರಾಗಿ ಕಣದಲ್ಲಿದ್ದಾರೆ.
ಮಂಡ್ಯ
ಅಶೋಕ್ ಜಯರಾಂ ಬಂಡಾಯ ಅಭ್ಯರ್ಥಿ. ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಇವರು ಪಕ್ಷದ ಅಭ್ಯರ್ಥಿ ಎಂ ಶ್ರೀನಿವಾಸ್ ವಿರುದ್ದ ಬಂಡೆದ್ದು ಕಣದಲ್ಲಿ ಉಳಿದಿದ್ದಾರೆ.
ಗೌರಿಬಿದನೂರು
ಜೈಪಾಲ್ ರೆಡ್ಡಿ ಜೆಡಿಎಸ್ಸಿಗೆ ಸಡ್ಡು ಹೊಡೆದು ಕಣದಲ್ಲಿ ಉಳಿದುಕೊಂಡಿದ್ದಾರೆ. ಅಶ್ವಥ್ ನಾರಾಯಣ ರೆಡ್ಡಿ ಕಣದಲ್ಲಿರುವ ಜೆಡಿಎಸ್ ಅಭ್ಯರ್ಥಿ.
ಮುಳಬಾಗಿಲು
ಆದಿನಾರಾಯಾಣ ಜೆಡಿಎಸ್ ಬಂಡಾಯ ಅಭ್ಯರ್ಥಿ. ಎಸ್ ಮುನಿ ಆಂಜನಪ್ಪ ಕ್ಷೇತ್ರದ ಅಧಿಕೃತ ಜೆಡಿಎಸ್ ಅಭ್ಯರ್ಥಿ.
ದೊಡ್ದಬಳ್ಳಾಪುರ
ಜೆಡಿಎಸ್ ಟಿಕೆಟ್ ವಂಚಿತ ಮುನೇಗೌಡ ಬಂಡಾಯ ಅಭ್ಯರ್ಥಿ. ಪಕ್ಷದ ಅಧಿಕೃತ ಅಭ್ಯರ್ಥಿ ಸಿ ಚನ್ನಿಗಪ್ಪ
ದಾಸರಹಳ್ಳಿ
ಗೋವಿಂದೇ ಗೌಡ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಪಕ್ಷದ ಅಧಿಕೃತ ಅಭ್ಯರ್ಥಿ ಅಂದಾನಪ್ಪ
ಕಾಪು
ಕಾಂಗ್ರೆಸ್ ಟಿಕೆಟ್ ವಂಚಿತ ವಸಂತ್ ಸಾಲ್ಯಾನ್ ಜೆಡಿಎಸ್ ಟಿಕೆಟಿನಿಂದ ಸ್ಪರ್ಧಿಸಿ ಕಾಂಗ್ರೆಸ್ಸಿಗೆ ಸಡ್ಡು ಹೊಡೆದಿದ್ದಾರೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ