ರಾಜರಾಜೇಶ್ವರಿ ನಗರ : ಬೆಂಗಳೂರಿನ ಪ್ರತಿಷ್ಠಿತ ಬಡಾವಣೆ ಪರಿಚಯ
ಬೆಂಗಳೂರು, ಏಪ್ರಿಲ್ 02 : ಈ ಬಾರಿಯ ಚುನಾವಣೆಯಲ್ಲಿ ಬೆಂಗಳೂರು ನಗರದಲ್ಲಿಯೇ ಅತೀ ಹೆಚ್ಚು ಕುತೂಹಲ ಕೆರಳಿಸಿರುವ ಕ್ಷೇತ್ರ ರಾಜರಾಜೇಶ್ವರಿ ನಗರ. 2008ರಲ್ಲಿ ರಚನೆಗೊಂಡ ಈ ಕ್ಷೇತ್ರ 3ನೇ ಚುನಾವಣೆ ಎದುರಿಸಲು ಸಿದ್ಧವಾಗುತ್ತಿದೆ.
ಮೊದಲು ಬೆಂಗಳೂರು ನಗರದ ಹೊರವಲಯದಲ್ಲಿದ್ದ ಕ್ಷೇತ್ರ ಈಗ, ಬೆಂಗಳೂರು ನಗರದ ಭಾಗವಾಗಿ ಹೋಗಿದೆ. ರಾಜರಾಜೇಶ್ವರಿ ನಗರದಲ್ಲಿ ನೆಲೆಸುವುದು ಎಂದರೆ ಪ್ರತಿಷ್ಟೆಯ ಪ್ರಶ್ನೆ ಎಂಬ ಮಾತು ಚಾಲ್ತಿಯಲ್ಲಿದೆ.
ಬಸವನಗುಡಿ: ಕಾಂಗ್ರೆಸ್ಸಿಗೆ ಗೆಲುವಿನ ವರ ಸಿಗುವುದೇ?
ಕ್ಷೇತ್ರದಲ್ಲಿ ಒಮ್ಮೆ ಸುತ್ತಾಡಿದರೆ ಉತ್ತಮ ರಸ್ತೆ, ಉದ್ಯಾನವನ ಕಣ್ಣಿಗೆ ಕಾಣಿಸುತ್ತದೆ. ಕ್ಷೇತ್ರ ಅಭಿವೃದ್ಧಿಯಾಗಿದೆ ಎಂದು ಹೇಳುವಂತಿಲ್ಲ. ಕೊಳಗೇರಿಗಳೂ ಕ್ಷೇತ್ರದಲ್ಲಿವೆ. ಕುಡಿಯುವ ನೀರಿನ ಪೂರೈಕೆ, ಒಳಚರಂಡಿ ವ್ಯವಸ್ಥೆಗಳು ಇನ್ನೂ ಸುಧಾರಿಸಬೇಕಿದೆ.
ತುಮಕೂರು ರಸ್ತೆಯ ರಾಷ್ಟ್ರೀಯ ಹೆದ್ದಾರಿಯಿಂದ ಮೈಸೂರು ರಸ್ತೆಯ ರಾಷ್ಟ್ರೀಯ ಹೆದ್ದಾರಿ ತನಕ ಹರಡಿಕೊಂಡಿರುವ ಕ್ಷೇತ್ರದಲ್ಲಿ ನೈಸ್ ರಸ್ತೆ, ವಿಶ್ವದರ್ಜೆ ಆಸ್ಪತ್ರೆ, ಮಾಲ್ಗಳಿವೆ. ರಿಯಲ್ ಎಸ್ಟೇಟ್ ಪ್ರಭಾವದಿಂದ ಇಲ್ಲಿ ಬಂದು ನೆಲೆಸುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಕ್ಷೇತ್ರ ಪರಿಚಯ: ಶಾಂತಿನಗರದಲ್ಲಿ ಬದಲಾವಣೆ ಸಾಧ್ಯವೇ?
ರಾಜರಾಜೇಶ್ವರಿ ನಗರ ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿತ್ತು. 2008ರಲ್ಲಿ ಕ್ಷೇತ್ರ ಪುನರ್ ವಿಂಗಡನೆ ಬಳಿಕ ಹೊಸ ಕ್ಷೇತ್ರವಾಯಿತು. 2008ರಲ್ಲಿ ಬಿಜೆಪಿ, 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ.
9 ವಾರ್ಡ್ಗಳನ್ನು ಹೊಂದಿರುವ ವಿಧಾನಭಾ ಕ್ಷೇತ್ರ ರಾಜರಾಜೇಶ್ವರಿ ನಗರ. ಕ್ಷೇತ್ರದ ಹಾಲಿ ಶಾಸಕರು ಕಾಂಗ್ರೆಸ್ನ ಮುನಿರತ್ನ. ಚಿತ್ರ ನಿರ್ಮಾನಪಕರೂ ಆಗಿರುವ ಇವರು 2013ರ ಚುನಾವಣೆಯಲ್ಲಿ 71,064 ಮತಗಳನ್ನು ಪಡೆದು ಜಯಗಳಿಸಿದ್ದಾರೆ.
ಕ್ಷೇತ್ರದ ವ್ಯಾಪ್ತಿಯ ವಾರ್ಡ್ : ಲಕ್ಷ್ಮೀದೇವಿ ನಗರ, ಜಾಲಹಳ್ಳಿ, ಜೆ.ಪಿ.ಪಾರ್ಕ್, ಯಶವಂತಪುರ, ಎಚ್.ಎಂ.ಟಿ, ಲಗ್ಗೆರೆ, ಜ್ಞಾನ ಭಾರತಿ, ರಾಜರಾಜೇಶ್ವರಿ ನಗರ, ಕೊಟ್ಟಿಗೆಪಾಳ್ಯ.
ಈ ಬಾರಿಯ ಚುನಾವಣೆಯಲ್ಲಿ ರಾಜರಾಜೇಶ್ವರಿ ನಗರದಿಂದ ಕಣಕ್ಕಿಳಿಯಲು ಬಿಜೆಪಿ ಮತ್ತು ಜೆಡಿಎಸ್ನಲ್ಲಿ ಹೆಚ್ಚಿನ ಆಕಾಂಕ್ಷಿಗಳಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಮುನಿರತ್ನ ಅವರು ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ.