ಕ್ಷೇತ್ರ ಪರಿಚಯ: ಮಂಗಳೂರು ನಗರ ದಕ್ಷಿಣ ಮತ್ತೆ ಬಿಜೆಪಿ ತೆಕ್ಕೆಗೆ?
ಮಂಗಳೂರು ಮಹಾನಗರ ವ್ಯಾಪ್ತಿಯ ಮೂರನೇ ವಿಧಾನಸಭಾ ಕ್ಷೇತ್ರ ಮಂಗಳೂರು ನಗರ ದಕ್ಷಿಣ. ಈ ಹಿಂದಿನ ಮಂಗಳೂರು ಕ್ಷೇತ್ರವನ್ನು ಪುನರ್ ವಿಂಗಡಣೆ ಮಾಡಿ ಮಂಗಳೂರು ದಕ್ಷಿಣ ಕ್ಷೇತ್ರವನ್ನು ಸೃಷ್ಟಿ ಮಾಡಲಾಯಿತು.
ಮಂಗಳೂರು ನಗರ ಉತ್ತರ ಮತ್ತು ಮಂಗಳೂರಿನಂತೆ ಮಂಗಳೂರು ದಕ್ಷಿಣವನ್ನೂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರುವವರೇ ಪ್ರತಿನಿಧಿಸುತ್ತಿರುವುದು ವಿಶೇಷ. ಮಂಗಳೂರು ಮತ್ತು ಮಂಗಳೂರು ಉತ್ತರವನ್ನು ಮುಸ್ಲಿಂ ಸಮುದಾಯಕ್ಕೆ ಸೇರಿದ ಯು.ಟಿ. ಖಾದರ್ ಮತ್ತು ಮೊಯ್ದೀನ್ ಬಾವಾ ಪ್ರತಿನಿಧಿಸುತ್ತಿದ್ದರೆ, ದಕ್ಷಿಣ ಕ್ಷೇತ್ರದ ಶಾಸಕರು ಕ್ರೈಸ್ತ ಸಮುದಾಯಕ್ಕೆ ಸೇರಿದ ಜೆ.ಆರ್. ಲೋಬೋ.
ಮಂಗಳೂರಿನ ಪ್ರಮುಖ ಪ್ರವಾಸಿ ತಾಣ ಪಿಲಿಕುಳ ನಿಸರ್ಗಧಾಮ, ಕದ್ರಿ ಪಾರ್ಕ್ ಮತ್ತು ದೇವಸ್ಥಾನ, ಕುದ್ರೋಳಿ ದೇವಸ್ಥಾನ, ಪಣಂಬೂರು ಬೀಚ್, ಮಂಗಳಾದೇವಿ ದೇವಸ್ಥಾನ, ತಣ್ಣೀರುಬಾವಿ ಬೀಚ್, ಬಂದರು ಪ್ರದೇಶ, ಮಂಗಳೂರು ನಗರದ ಕೇಂದ್ರ ಭಾಗಗಳು ಇದೇ ವಿಧಾನಸಭಾ ವ್ಯಾಪ್ತಿಗೆ ಬರುತ್ತವೆ.
ಹಿಂದಿನ ಮಂಗಳೂರು ಕ್ಷೇತ್ರದಲ್ಲಿ 1983ರಲ್ಲೇ ಬಿಜೆಪಿ ಗೆದ್ದಿತ್ತು. ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರಿರುವ ಹಿರಿಯ ರಾಜಾಕಾರಣಿ ಬಿ. ಧನಂಜಯ ಕುಮಾರ್ ಇಲ್ಲಿ ಅವತ್ತು ಅಚ್ಚರಿಯ ಜಯ ಸಾಧಿಸಿದ್ದರು. ನಂತರ ಧನಂಜಯ ಕುಮಾರ್ ಕೇಂದ್ರ ಸಚಿವರಾಗಿದ್ದೆಲ್ಲಾ ಇವತ್ತಿಗೆ ಇತಿಹಾಸ.
1985 ಮತ್ತು 1989ರಲ್ಲಿ ಕಾಂಗ್ರೆಸಿನ ಬ್ಲೇಸಿಯಸ್ ಎಂ. ಡಿಸೋಜಾ ಇಲ್ಲಿ ಗೆದ್ದರು. ಅದೇ ಕೊನೆ. ಮುಂದಿನ ಚುನಾವಣೆಗಳಲ್ಲಿ ಬಿಜೆಪಿ ತನ್ನ ನಾಗಲೋಟವನ್ನು ಇಲ್ಲಿ ಮುಂದುವರಿಸಿತು.
ಬಿಜೆಪಿಯ ಎನ್. ಯೋಗೀಶ್ ಭಟ್ 1994, 1999, 2004 ರಲ್ಲಿ ಸತತವಾಗಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಕಣಕ್ಕಿಳಿಸುತ್ತಿದ್ದ ಕ್ರಿಶ್ಚಿಯನ್ ಅಭ್ಯರ್ಥಿಗಳ ವಿರುದ್ಧ ಜಯಗಳಿಸಿದರು. ಜಯದ ಅಂತರವೂ ಚೆನ್ನಾಗಿಯೇ ಇತ್ತು.
2008ರಲ್ಲಿ ಮಂಗಳೂರು ಹೋಗಿ ಮಂಗಳೂರು ನಗರ ದಕ್ಷಿಣ ಕ್ಷೇತ್ರವಾದ ಬಳಿಕ ನಡೆದ ಮೊದಲ ಚುನಾವಣೆಯಲ್ಲಿಯೂ ಯೋಗೀಶ್ ಭಟ್ ಗೆಲುವಿನ ನಗೆ ಬೀರಿ ತಮ್ಮ ಜಯದ ಸರಣಿಯನ್ನು ನಾಲ್ಕಕ್ಕೆ ಮುಂದುವರಿಸಿದರು. 2008ರಲ್ಲಿ ಅವರು 9 ಸಾವಿರ ಮತಗಳ ಅಂತರದಿಂದ ಇವತ್ತು ಕಾಂಗ್ರೆಸ್ ಎಂಎಲ್ಸಿಯಾಗಿರುವ ಐವನ್ ಡಿ. ಸೋಜಾರನ್ನು ಸೋಲಿಸಿದ್ದರು.
2008ರಲ್ಲಿ ಗೆದ್ದ ಎನ್. ಯೋಗೀಶ್ ಭಟ್ ಉಪಸಭಾಪತಿಯೂ ಆದರು. ಮುಂದೆ ಇವರಿಗೆ ಸೋಲುಣಿಸಿದವರು ಮಾಜಿ ಕೆಎಎಸ್ ಅಧಿಕಾರಿ ಜೆ.ಆರ್ ಲೋಬೋ. 1999 ರಿಂದ 2003ರವರೆಗೆ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರೂ ಆಗಿದ್ದ ಜೆ.ಆರ್ ಲೋಬೋ ಸರಕಾರಿ ಸೇವೆಗೆ ಸ್ವಯಂ ನಿವೃತ್ತಿ ಘೋಷಿಸಿ 2013ರಲ್ಲಿ ಇಲ್ಲಿ ಕಾಂಗ್ರೆಸ್ ನಿಂದ ಕಣಕ್ಕಿಳಿದರು. ಅವರ ಅದೃಷ್ಟವೂ ಖುಲಾಯಿಸಿತು.
ಸ್ಪರ್ಧಿಸಿದ ಮೊದಲ ಚುನಾವಣೆಯಲ್ಲೇ ಅವರು 67,829 ಮತಗಳನ್ನು ಪಡೆದು ನಾಲ್ಕು ಬಾರಿಯ ಶಾಸಕ ಯೋಗೀಶ್ ಭಟ್ ರನ್ನು ನೆಲಕಚ್ಚಿಸಿದರು ಸಾಧಿಸಿದರು. ಈ ಚುನಾವಣೆಯಲ್ಲಿ ಯೋಗೀಶ್ ಭಟ್ ಕೇವಲ 55,554 ಮತಗಳನ್ನು ಪಡೆದು ಸುಮಾರು 12 ಸಾವಿರ ಮತಗಳ ಅಂತರದಿಂದ ಸೋಲೊಪ್ಪಿಕೊಂಡರು.
ಸದ್ಯ ಇಲ್ಲಿ ಜೆ.ಆರ್ ಲೋಬೋ ಮತ್ತೆ ಗೆದ್ದರೆ ಆಚ್ಚರಿಯೇನಿಲ್ಲ. ಆದರೆ ಕ್ಷೇತ್ರದಲ್ಲಿ ಸತತ ನಾಲ್ಕು ಗೆಲುವು ಕಂಡಿದ್ದ ಬಿಜೆಪಿ ಕ್ಷೇತ್ರವನ್ನು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಹವಣಿಸುತ್ತಿದೆ. ಇಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಲು ಹಲವರ ನಡುವೆ ಪೈಪೋಟಿ ಇದೆ. ಬಿಜೆಪಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುದೂ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ.