ಕ್ಷೇತ್ರ ಪರಿಚಯ ಹಾನಗಲ್ನಲ್ಲಿ ಗೆಲ್ಲುವುದು ಯಾರು?
ಹಾವೇರಿ ಜಿಲ್ಲೆಯ ಪ್ರಮುಖ ತಾಲೂಕು ಕೇಂದ್ರ ಹಾನಗಲ್. ಇತಿಹಾಸ ಪ್ರಸಿದ್ಧವಾದ ಜಕಣಾಚಾರಿ ಕಟ್ಟಿಸಿದ ಶ್ರೀ ತಾರಕೇಶ್ವರ ದೇವಾಲಯ ಕ್ಷೇತ್ರದ ಪ್ರಮುಖ ಆಕರ್ಷಣೆ. ಪ್ರಸಿದ್ಧ ಹಿಂದೂಸ್ಥಾನಿ ಗಾಯಕಿ ದಿವಂಗತ ಗಂಗೂಬಾಯಿ ಹಾನಗಲ್ ಅವರು ಜನಸಿದ್ದು ಇದೇ ಕ್ಷೇತ್ರದಲ್ಲಿ.
ಹಾವೇರಿ ಜಿಲ್ಲೆಯಲ್ಲಿ ಭತ್ತ ಬೆಳೆಯುವ ತಾಲೂಕುಗಳಲ್ಲಿ ಹಾನಗಲ್ ಸಹ ಒಂದು. ಭತ್ತ, ಹತ್ತಿ, ಕಬ್ಬು,ಮಾವು, ಅಡಿಕೆ, ಮೆಣಸಿನಕಾಯಿ ಮುಂತಾದ ಬೆಳೆಗಳನ್ನು ಹಾನಗಲ್ ಕ್ಷೇತ್ರದಲ್ಲಿ ಬೆಳೆಯಲಾಗುತ್ತದೆ.
ಕ್ಷೇತ್ರದ ವ್ಯಾಪ್ತಿಯಲ್ಲಿರುವ ಶ್ರೀ ಕುಮಾರೇಶ್ವರ ಮಠ ರಾಜ್ಯಾದ್ಯಂತ ಪ್ರಸಿದ್ಧಿ ಪಡೆದಿದೆ. ಪಟ್ಟಣದ ಹೊರ ಭಾಗದಲ್ಲಿರುವ ಆನೆಕೆರೆ ಕುಡಿಯುವ ನೀರು ಒದಗಿಸುವ ಮೂಲ ನೆಲೆಯಾಗಿದೆ.
ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಪ್ತರಾದ ಸಿ.ಎಂ.ಉದಾಸಿ ಅವರ ಕ್ಷೇತ್ರ ಹಾನಗಲ್. 1985ರಿಂದ ಸಿ.ಎಂ.ಉದಾಸಿ ಕ್ಷೇತ್ರದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ದೇವೇಗೌಡ, ಜೆ.ಎಚ್.ಪಟೇಲ್ ಸಂಪುಟದಲ್ಲಿ ಲೋಕೋಪಯೋಗಿ ಸಚಿವರಾಗಿಯೂ ಅವರು ಕಾರ್ಯ ನಿರ್ವಹಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿ-ಕೆಜೆಪಿ ಗೊಂದಲದಿಂದಾಗಿ ಮತಗಳು ಹರಿದುಹಂಚಿ ಹೋಗಿದ್ದವು.
ಕ್ಷೇತ್ರದ ಹಾಲಿ ಶಾಸಕರು ಮನೋಹರ ಎಚ್.ತಹಶೀಲ್ದಾರ್. ಸಿದ್ದರಾಮಯ್ಯ ಸಂಪುಟದಲ್ಲಿ ಅವರು ಅಬಕಾರಿ ಮತ್ತು ಮುಜರಾಯಿ ಸಚಿವರಾಗಿದ್ದರು. ಸಚಿವ ಸಂಪುಟ ಪುನಾರನೆ ಸಂದರ್ಭದಲ್ಲಿ ಸಂಪುಟದಿಂದ ಕೈಬಿಡಲಾಗಿದೆ.
ಸಂಪುಟದಿಂದ ಕೈ ಬಿಡುವ ಸಂದರ್ಭದಲ್ಲಿ ಅವರನ್ನು ನಡೆಸಿಕೊಂಡ ರೀತಿ ಬಗ್ಗೆ ಈಗಲೂ ಅಸಮಾಧಾನವಿದೆ. ಈ ಬಾರಿ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಯಾರಿಗೆ ಎಂಬುದು ಇನ್ನೂ ಕುತೂಹಲಕ್ಕೆ ಕಾರಣವಾಗಿದೆ.
2013ರ ಚುನಾವಣೆಯಲ್ಲಿ ಮನೋಹರ ಎಚ್.ತಹಶೀಲ್ದಾರ್ 66,324 ಮತಗಳನ್ನು ಪಡೆದಿದ್ದರು. ಕೆಜೆಪಿಯಿಂದ ಸ್ಪರ್ಧಿಸಿದ್ದ ಸಿ.ಎಂ.ಉದಾಸಿ ಅವರು 60,638 ಮತ, ಜೆಡಿಎಸ್ನ ಮೋಹನ್ ಕುಮಾರ್ ಬಿ.ಕೆ. 4,723ಮತ, ಬಿಜೆಪಿ ಅಭ್ಯರ್ಥಿ ಬಸವರಾಜ ಹಾಡಿಮನಿ 7052 ಮತಗಳನ್ನು ಪಡೆದಿದ್ದರು.