ಕ್ಷೇತ್ರ ಪರಿಚಯ : ದಾವಣಗೆರೆ ಉತ್ತರದಲ್ಲಿ ಯಾರಿಗೆ ಗೆಲುವು?
ದಾವಣಗೆರೆ ಕ್ಷೇತ್ರವನ್ನು ವಿಭಜನೆ ಮಾಡಿದ ಬಳಿಕ ದಾವಣಗೆರೆ ಉತ್ತರ, ದಕ್ಷಿಣ ಕ್ಷೇತ್ರಗಳು ಅಸ್ತಿತ್ವಕ್ಕೆ ಬಂದಿವೆ. 2008ರಲ್ಲಿ ಅಸ್ತಿತ್ವಕ್ಕೆ ಬಂದ ದಾವಣಗೆರೆ ಉತ್ತರ ಕ್ಷೇತ್ರ ಎರಡು ಚುನಾವಣೆಗಳನ್ನು ಮಾತ್ರ ಕಂಡಿದೆ.
ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯಕ್ಕೆ ಸೇರಿದ ಜನರು ಹೆಚ್ಚಾಗಿದ್ದಾರೆ.
ಅವರ ಮತಗಳು ನಿರ್ಣಾಯಕವಾಗಿವೆ, ಶಾಸಕರು ಯಾರಾಗಬೇಕು ಎಂದು ಅವರು ನಿರ್ಧಾರ ಮಾಡುತ್ತಾರೆ.
ಬಿಜೆಪಿಯ ಎಸ್.ಎ.ರವೀಂದ್ರನಾಥ್ ಮತ್ತು ಎಸ್.ಎಸ್.ಮಲ್ಲಿಕಾರ್ಜುನ ನಡುವಿನ ಸ್ಪರ್ಧೆಯಿಂದಾಗಿ ಕ್ಷೇತ್ರದ ಚುನಾವಣಾ ಕಣ ಯಾವಾಗಲೂ ಕುತೂಹಲಕ್ಕೆ ಕಾರಣವಾಗುತ್ತದೆ. ಈ ಕ್ಷೇತ್ರದಿಂದ ಗೆದ್ದವರು ತೋಟಗಾರಿಕಾ ಸಚಿವರಾಗುತ್ತಾರೆ.

ಹಿಂದೆ ಬಿಜೆಪಿಯ ರವೀಂದ್ರನಾಥ್ ತೋಟಗಾರಿಕಾ ಸಚಿವರಾಗಿದ್ದರು. ಈಗ ಕ್ಷೇತ್ರದ ಹಾಲಿ ಶಾಸಕ ಎಸ್.ಎಸ್.ಮಲ್ಲಿಕಾರ್ಜುನ ಅವರು ತೋಟಗಾರಿಕಾ ಖಾತೆಯ ಜವಾಬ್ದಾರಿವಹಿಸಿಕೊಂಡಿದ್ದಾರೆ.
ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕರು ಅವರು ಪುತ್ರ ಎಸ್.ಎಸ್.ಮಲ್ಲಿಕಾರ್ಜುನ ಅವರು ಉತ್ತರ ಕ್ಷೇತ್ರದ ಶಾಸಕರು. ಶಾಮನೂರು ಶಿವಶಂಕರಪ್ಪಗೆ ಸಚಿವ ಸ್ಥಾನ ಕೈ ತಪ್ಪಿದ ಬಳಿಕ ಮಲ್ಲಿಕಾರ್ಜುನ ಅವರು ಸಚಿವರಾದರು.
ಎಸ್.ಎಸ್.ಮಲ್ಲಿಕಾರ್ಜುನ ಅವರು 2013ರ ಚುನಾವಣೆಯಲ್ಲಿ ಬಿಜೆಪಿಯ ಎಸ್.ಎ. ರವೀಂದ್ರನಾಥ್ ಅವರನ್ನು 57 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದಾರೆ. ಮಲ್ಲಿಕಾರ್ಜುನ ಅವರು 2008ರ ಚುನಾವಣೆಯಲ್ಲಿ ರವೀಂದ್ರನಾಥ್ ವಿರುದ್ಧ ಸೋತಿದ್ದರು.
2013ರ ಚುನಾವಣೆಯಲ್ಲಿ ಎಸ್.ಎಸ್.ಮಲ್ಲಿಕಾರ್ಜುನ ಅವರು 88,101 ಮತಗಳನ್ನು ಪಡೆದು ಜಯಗಳಿಸಿದ್ದರು. ಬಿಜೆಪಿಯ ಎಸ್.ಎ.ರವೀಂದ್ರನಾಥ್ 30,821 ಮತ, ಜೆಡಿಎಸ್ನ ಟಿ.ಗಣೇಶ ದಾಸಕರಿಯಪ್ಪ 3,537 ಮತಗಳನ್ನು ಪಡೆದಿದ್ದರು.












Click it and Unblock the Notifications