ಜಯನಗರದಲ್ಲಿ ಸೌಮ್ಯಾ ರೆಡ್ಡಿ ಗೆಲುವಿಗೆ 4 ಕಾರಣಗಳು
Recommended Video
ಬೆಂಗಳೂರು, ಜೂನ್ 13: ತಮ್ಮ ಮೊದಲ ಪ್ರಯತ್ನದಲ್ಲೇ ಶಾಸಕರಾಗಿ ಆಯ್ಕೆಯಾಗುವ ಮೂಲಕ ಕಾಂಗ್ರೆಸ್ಸಿನ ಸೌಮ್ಯಾರೆಡ್ಡಿ ವಿಜಯಮಾಲೆ ಧರಿಸಿದ್ದಾರೆ. ಆರಂಭದಲ್ಲಿ ಅಷ್ಟು ಕುತೂಹಲ ಕೆರಳಿಸದಿದ್ದರೂ ಮತ ಎಣಿಕೆಯ ಕೊನೆಯ ಕೆಲವು ಸುತ್ತುಗಳಲ್ಲಿ ಸೌಮ್ಯಾ ರೆಡ್ಡಿ ಮತ್ತು ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಅವರ ಮತಗಳ ಅಂತರ ಇಳಿಕೆಯಾಗುತ್ತ ರೋಚಕತೆ ಸೃಷ್ಟಿಯಾಗಿತ್ತು.
ಆದರೆ ಕೊನೆಯಲ್ಲಿ ಸೌಮ್ಯಾರೆಡ್ಡಿ ಅವರು 2,889 ಮತಗಳ ಅಂತರದಿಂದ ಪ್ರಹ್ಲಾದ್ ವಿರುದ್ಧ ಜಯ ಸಾಧಿಸಿದರು.
LIVE: ಜಯನಗರದಲ್ಲಿ ಸೌಮ್ಯ ರೆಡ್ಡಿ ಕೊರಳಿಗೆ ವಿಜಯಮಾಲೆ
ಜಯನಗರ ವಿಧಾನಸಭೆ ಚುನಾವಣೆಯ ಫಲಿತಾಂಶ ಬಿಡುಗಡೆಯಾಗಿದೆ. ಕಾಂಗ್ರೆಸ್ಸಿನ ಸೌಮ್ಯಾ ರೆಡ್ಡಿ 54457 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದರೆ, ಬಿಜೆಪಿಯ ಬಿ ಎನ್ ಪ್ರಹ್ಲಾದ್ 51568 ಮತ ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರವಿಕೃಷ್ಣಾ ರೆಡ್ಡಿ 1861 ಮತಗಳನ್ನಷ್ಟೇ ಪಡೆದು, ಸೋಲೊಪ್ಪಿಕೊಂಡರು.
ಗೆದ್ದರೆ ಸೌಮ್ಯಾ ರೆಡ್ಡಿಗೆ ಸಚಿವಸ್ಥಾನ? ಕಾಂಗ್ರೆಸ್ ನಲ್ಲಿ ಮತ್ತೆ ಕಿಚ್ಚು?
ಕಣದಿಂದ ಹಿಂದೆ ಸರಿದ ಜೆಡಿಎಸ್ ಅಭ್ಯರ್ಥಿ, ಬಿಜೆಪಿಯಿಂದ ಹೆಚ್ಚು ಜನರಿಗೆ ಪರಿಚಿತರಲ್ಲದ ವ್ಯಕ್ತಿಯ ಸ್ಪರ್ಧೆ, ಕಾಂಗ್ರೆಸ್ ನಿಂದ ಉತ್ತಮ ಪ್ರಚಾರ ಎಲ್ಲವೂ ಸೇರಿ ಸೌಮ್ಯಾ ರೆಡ್ಡಿ ಅವರನ್ನು ಗೆಲ್ಲಿಸಿವೆ. ಈ ಕ್ಷೇತ್ರದಲ್ಲಿ ಸೌಮ್ಯಾ ಅವರು ಗೆಲ್ಲುವುದಕ್ಕೆ ಕಾರಣವಾದ 4 ಪ್ರಮುಖ ಅಂಶಗಳು ಇಲ್ಲಿವೆ.
ಜೆಡಿಎಸ್ ಅಭ್ಯರ್ಥಿ ಕಣದಿಂದ ಹಿಂದೆ ಸರಿದಿದ್ದು
ಜಯನಗರ ಕ್ಷೇತ್ರದಲ್ಲಿ ಮೇ 12 ರಂದು ನಡೆಯಬೇಕಿದ್ದ ಚುನಾವಣೆ ಇಲ್ಲಿನ ಆಗಿನ ಶಾಸಕರೂ, ಬಿಜೆಪಿ ಅಭ್ಯರ್ಥಿಗಳೂ ಆಗಿದ್ದ ಬಿ ಎನ್ ವಿಜಯಕುಮಾರ್ ಅವರ ಅಕಾಲಿಕ ಮರಣದಿಂದಾಗಿ ಮುಂದೂಡಲ್ಪಟ್ಟಿತ್ತು. ಈ ಚುನಾವಣೆ ಜೂನ್ 11 ರಂದು ನಡೆದಿತ್ತು. ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಜಯನಗರದಲ್ಲಿ ಜೆಡಿಎಸ್ ಅಭ್ಯರ್ಥಿ ಕಾಳೇಗೌಡ ಸ್ಪರ್ಧೆಯಿಂದ ಹಿಂದೆ ಸರಿದು, ತಮ್ಮ ಬೆಂಬಲವನ್ನು ಕಾಂಗ್ರೆಸ್ಸಿಗೆ ಘೋಷಿಸಿದರು. ಇದರಿಂದ ತ್ರಿಕೋನ ಸ್ಪರ್ಧೆಯ ಬದಲಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಆದರೆ ಜೆಡಿಎಸ್ ಪ್ರಬಲ ಅಭ್ಯರ್ಥಿಯನ್ನೇನೂ ನಿಲ್ಲಿಸಿರಲಿಲ್ಲವಾದ್ದರಿಂದ ಈ ಕ್ಷೇತ್ರದಲ್ಲಿ ಜೆಡಿಎಸ್ ಕಾಂಗ್ರೆಸ್ ಮೈತ್ರಿಯೇ ಸೌಮ್ಯ ರೆಡ್ಡಿ ಗೆಲುವಿಗೆ ಕಾರಣವಾಯಿತು ಎಂಬಂತಿಲ್ಲ. ಆದರೆ ಗೆಲುವಿನ ಮತಗಳ ಅಂತರ ಕಡಿಮೆ ಇರುವುದರಿಂದ ಜೆಡಿಎಸ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದನ್ನು ಸಹ ಸೌಮ್ಯ ಗೆಲುವಿಗೆ ಒಂದು ಕಾರಣ ಎನ್ನಬಹುದು.
ಅಭ್ಯರ್ಥಿ ಆಯ್ಕೆಯಲ್ಲಿ ಎಡವಿದ ಬಿಜೆಪಿ?
ಈ ಕ್ಷೇತ್ರದಲ್ಲಿ ಕಳೆದ ಎರಡು ಚುನಾವಣೆಗಳಲ್ಲಿ ಜಯಗಳಿಸಿದ್ದ ಬಿಜೆಪಿ, ಈ ಬಾರಿ ಅನುಕಂಪದ ಅಲೆ ಇದ್ದರೂ ಸೋತಿದ್ದು ಅಚ್ಚರಿಯ ಸಂಗತಿ. ಬಹುಶಃ ಬಿಜೆಪಿ ಈ ಕ್ಷೇತ್ರಕ್ಕೆ ಸಮರ್ಥ ಅಭ್ಯರ್ಥಿಯನ್ನು ಆಯ್ಕೆ ಮಾಡುವಲ್ಲಿ ಎಡವಿತ್ತೇ? ಬಿ ಎನ್ ವಿಜಯಕುಮಾರ್ ಅವರ ಮರಣದ ನಂತರ ತೆರವಾಗಿದ್ದ ಈ ಕ್ಷೇತ್ರದ ಅಭ್ಯರ್ಥಿಯ ಆಯ್ಕೆಯ ಹುಡುಕಾಟದಲ್ಲಿದ್ದ ಬಿಜೆಪಿಗೆ ಕಂಡಿದ್ದು ವಿಜಯ ಕುಮಾರ್ ಅವರ ಸಹೋದರ ಬಿ ಎನ್ ಪ್ರಹ್ಲಾದ್. ಬಿಜೆಪಿ-ಆರೆಸ್ಸೆಸ್ ಜೊತೆ ಗುರುತಿಸಿಕೊಂಡಿದ್ದರೂ, ಹೆಚ್ಚು ಜನರಿಗೆ ಪರಿಚಯವಿಲ್ಲದ ಕಾರಣ ಅವರು ಸೋತಿರಬಹುದು. ಅನುಕಂಪದ ಅಲೆ ಎಲ್ಲ ಬಾರಿಯೂ ಕೆಲಸ ಮಾಡುತ್ತದೆ ಎಂಬ ನಂಬಿಕೆಯನ್ನು ಇದು ಸುಳ್ಳು ಮಾಡಿದೆ. ಅಭ್ಯರ್ಥಿ ಆಯ್ಕೆಯಲ್ಲಿ ಬಿಜೆಪಿ ಎಡವಿದ್ದು ಸಹ ಸೌಮ್ಯ ಅವರಿಗೆ ವರದಾನವಾಯಿತು.
ಸೌಮ್ಯಾ ಅವರಿಂದ ಉತ್ತಮ ಪ್ರಚಾರ
ವಿಧಾನಸಭೆ ಚುನಾವಣೆಗೆ ಜಯನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎಂದು ಸೌಮ್ಯ ರೆಡ್ಡಿ ಅವರ ಹೆಸರು ಕೇಳಿಬಂದಾಗಗಿನಿಂದಲೂ ಅವರು ಈ ಕ್ಷೇತ್ರದಲ್ಲಿ ಸಾಕಷ್ಟು ಪ್ರಚಾರ ನಡೆಸಿದ್ದಾರೆ. ಜನರೊಂದಿಗೆ ಒಡನಾಡಿ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ಇದು ಅವರು ಜನರನ್ನು ಬಹುಬೇಗನೇ ತಲುಪಲು ಸಹಾಯಕವಾಗಿತ್ತು.
ಯುವಕರಿಗೆ ಅವಕಾಶ
ಕಾಂಗ್ರೆಸ್ ಪಕ್ಷದ ಕೇಂದ್ರದ ನಾಯಕರು ಸಹ ಪಕ್ಷದಲ್ಲಿ ಯುವಕರಿಗೆ ಹೆಚ್ಚು ಹೆಚ್ಚು ಅವಕಾಶ ನೀಡಲು ನಿರ್ಧರಿಸಿರುವುದು ಸೌಮ್ಯಾ ರೆಡ್ಡಿ ಅವರಿಗೆ ವರದಾನವಾಗಿ, ಅವರಿಗೆ ಟಿಕೆಟ್ ಸಿಕ್ಕಿತ್ತು. ತಂದೆ ಮಾಜಿ ಗೃಹಸಚಿವ ರಾಮಲಿಂಗರೆಡ್ಡಿ ಅವರ ಪ್ರಭಾವವೂ ಇಲ್ಲದಿಲ್ಲ. ಜನರು ಮತಚಲಾಯಿಸುವಾಗಲೂ ಯುವ ಅಭ್ಯರ್ಥಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದಂತಿದೆ. ಅದೂ ಅಲ್ಲದೆ, ಸಂಪುಟದಲ್ಲಿ ಮಹಿಳಾ ಪ್ರಾತಿನಿಧ್ಯವೂ ಹೆಚ್ಚಿಲ್ಲದಿರುವುದು ಸೌಮ್ಯ ರೆಡ್ಡಿ ಅವರ ಗೆಲುವಿಗೆ ಒಂದು ಕಾರಣವಾಯಿತು.