ಕೆಸಿ ವ್ಯಾಲಿ, ಪೈಪ್ ದುಡ್ಡು ಹೊಡೆಯೋ ಯೋಜನೆ: ಜೆಡಿಎಸ್ ಅಭ್ಯರ್ಥಿ ಬಚ್ಚೇಗೌಡ ಸಂದರ್ಶನ

Recommended Video

      ಕೆಸಿ ವ್ಯಾಲಿ, ಪೈಪ್ ದುಡ್ಡು ಹೊಡೆಯೋ ಯೋಜನೆ: ಜೆಡಿಎಸ್ ಅಭ್ಯರ್ಥಿ ಬಚ್ಚೇಗೌಡ ಸಂದರ್ಶನ

      2004ರಲ್ಲಿ ಮೀಸಲು ಅಸೆಂಬ್ಲಿ ಕ್ಷೇತ್ರವಾಗಿದ್ದ ಚಿಕ್ಕಬಳ್ಳಾಪುರ 2008ರಲ್ಲಿ ಸಾಮಾನ್ಯ ಕ್ಷೇತ್ರವಾಯಿತು. 2008ರಲ್ಲಿ ನಡೆದ ಚುನಾವಣೆಯಲ್ಲಿ ಭರ್ಜರಿ 23ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಜೆಡಿಎಸ್ ಅಭ್ಯರ್ಥಿ ಕೆ ಪಿ ಬಚ್ಚೇಗೌಡ ಗೆದ್ದಿದ್ದರು.

      ಆದರೆ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಕೆ ಸುಧಾಕರ್ ವಿರುದ್ದ ಹದಿನೈದು ಸಾವಿರ ಮತಗಳ ಅಂತರದಿಂದ ಸೋತಿದ್ದ ಬಚ್ಚೇಗೌಡ್ರು, ಈ ಬಾರಿ ಮತ್ತೆ ಜೆಡಿಎಸ್ ಟಿಕೆಟಿನಿಂದ ಸ್ಪರ್ಧಿಸುತ್ತಿದ್ದಾರೆ.

      ರಾಜ್ಯದಲ್ಲಿ ಕುಮಾರಣ್ಣನ ಪರ ಹವಾ ಇದೆ, ನನ್ನ ಗೆಲುವು ಖಂಡಿತ ಎನ್ನುವ ವಿಶ್ವಾಸದಲ್ಲಿರುವ ಬಚ್ಚೇಗೌಡ್ರು, 'ಒನ್ ಇಂಡಿಯಾ' ಜೊತೆ ಮಾತುಕತೆ ನಡೆಸಿದ್ದಾರೆ. ಅವರ ಸಂದರ್ಶನದ ಆಯ್ದಭಾಗ ಇಂತಿದೆ:

      ಪ್ರ: ಕಳೆದ ಬಾರಿ ಹದಿನೈದು ಸಾವಿರ ಮತಗಳ ಅಂತರದಿಂದ ಸೋಲು ಅನುಭವಿಸಿದ್ರಿ. ಈ ಬಾರಿ ಹೇಗಿದೆ ವಾತಾವರಣ?
      ಬಚ್ಚೇಗೌಡ: ಕಳೆದ ಬಾರಿ ನಾನು ಅರವತ್ತು ಸಾವಿರ ಮತವನ್ನು ಪಡೆದಿದ್ದರೂ, ಬಿಜೆಪಿ ಕಡಿಮೆ ಮತ ಪಡೆದುಕೊಂಡ ಕಾರಣ ನನಗೆ ಸೋಲು ಉಂಟಾಯಿತು. ಜೊತೆಗೆ, ಕಳೆದ ಬಾರಿ ಕಣದಲ್ಲಿದ್ದ ಕಾಂಗ್ರೆಸ್ ಅಭ್ಯರ್ಥಿಯ ಮೇಲೆ ಜನ ಬಹಳಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಿರಬಹುದು.

      ಇವತ್ತು ಆ ನಿರೀಕ್ಷೆಯೆಲ್ಲಾ ಹುಸಿಯಾಗಿದೆ. ಈ ಕ್ಷೇತ್ರದ ಮತದಾರರು ರೋಸಿ ಹೋಗಿದ್ದಾರೆ. ಬಚ್ಚೇಗೌಡ್ರ ಅವಧಿಯಲ್ಲಿ ಈ ಕ್ಷೇತ್ರಕ್ಕೆ ಸಾಕಷ್ಟು ಅಭಿವೃದ್ದಿ ಕೆಲಸಗಳು ನಡೆದಿದ್ದವು. ಹಾಗೆಯೇ, ಕ್ಷೇತ್ರದಲ್ಲಿ ಯಾವುದೂ ದೌರ್ಜನ್ಯ, ಭ್ರಷ್ಟಾಚಾರ, ದಬ್ಬಾಳಿಕೆಗಳು ಇರಲಿಲ್ಲ. ಹಾಗಾಗಿ ಮತ್ತೆ ನನಗೆ ಮತ ನೀಡಬೇಕು ಎನ್ನುವ ನಿರ್ಧಾರಕ್ಕೆ ಮತದಾರ ಬಂದಿದ್ದಾನೆ.

       ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಕೊಡುಗೆ ಏನು?

      ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಕೊಡುಗೆ ಏನು?

      ಪ್ರ: ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಕುಮಾರಸ್ವಾಮಿಯವರ ಕೊಡುಗೆ ಏನು?
      ಬಚ್ಚೇಗೌಡ: ಚಿಕ್ಕಬಳ್ಳಾಪುರಕ್ಕೆ ಕುಮಾರಣ್ಣನ ಕೊಡುಗೆ ಅಪಾರ. ಜೊತೆಗೆ ಇಡೀ ರಾಜ್ಯದಲ್ಲಿ ಕುಮಾರಣ್ಣನ ಪರ ಅಲೆಯಿದೆ. ಚಿಕ್ಕಬಳ್ಳಾಪುರವನ್ನು ಜಿಲ್ಲೆಯಾಗಿ ಘೋಷಿಸಿರು. ಜಕ್ಕಲಮಡಗು ವಿವಾದ ಬಗೆಹರಿಸಿ, ಶುದ್ದ ನೀರು ಬರುವಂತಾಗಲು ನೇರವಾಗಿ ಕುಮಾರಣ್ಣನೇ ಕಾರಣ.

      ಯುಜಿಡಿ ಅನುದಾನವನ್ನು ಜಿಲ್ಲೆಗೆ ಪರಿಚಯಿಸಿದವರೇ ಕುಮಾರಸ್ವಾಮಿಯವರು. ರೈತರ ಸಾಲಮನ್ನಾ ಮಾಡಿದ್ದು ಕುಮಾರಸ್ವಾಮಿಯವರು. ಇಪ್ಪತ್ತು ತಿಂಗಳ ಅವರ ಆಡಳಿತವನ್ನು ಜನ ಈಗಲೂ ಸ್ಮರಿಸುತ್ತಿದ್ದಾರೆ. ಜೊತೆಗೆ, ಈ ಬಾರಿ ಕುಮಾರಣ್ಣನೇ ಸಿಎಂ ಆಗಬೇಕೆಂದು ಜನ ಬಯಸಿದ್ದಾರೆ.

       ನಿಖಿಲ್ ಪ್ರಚಾರ ಮಾಡಿ ಹೋಗಿದ್ರು, ಹೇಗಿತ್ತು ಜನಸ್ಪಂದನೆ?

      ನಿಖಿಲ್ ಪ್ರಚಾರ ಮಾಡಿ ಹೋಗಿದ್ರು, ಹೇಗಿತ್ತು ಜನಸ್ಪಂದನೆ?

      ಪ್ರ: ನಿಮ್ಮ ಪರ ಪ್ರಚಾರ ಮಾಡಲು ಕುಮಾರಸ್ವಾಮಿಯವರು ಬರುತ್ತಿದ್ದಾರಾ?
      ಬಚ್ಚೇಗೌಡ: ಏಪ್ರಿಲ್ ಹದಿನೇಳನೆ ತಾರೀಕಿಗೆ ಬರುವ ಕಾರ್ಯಕ್ರಮವಿತ್ತು, ಆದರೆ ಕಾರಣಾಂತರದಿಂದ ಬರಲಿಲ್ಲ. ನಾಮಪತ್ರ ಹಿಂಪಡೆಯುವ ದಿನದ ನಂತರ ಒಂದು ದಿನ ಇಲ್ಲಿಗೆ ಬಂದು ಪ್ರಚಾರ ಮಾಡಬೇಕೆಂದು ಕೇಳಿಕೊಂಡಿದ್ದೇನೆ. ಚಿಕ್ಕಬಳ್ಳಾಪುರಕ್ಕೆ ಬಂದು, ಮತಯಾಚನೆ ಮಾಡಿ ಹೋಗುತ್ತಾರೆ.

      ಪ್ರ: ಕುಮಾರಸ್ವಾಮಿಯವರ ಪುತ್ರ ನಿಖಿಲ್ ಪ್ರಚಾರ ಮಾಡಿ ಹೋಗಿದ್ರು, ಹೇಗಿತ್ತು ಜನಸ್ಪಂದನೆ?
      ಬಚ್ಚೇಗೌಡ: ನಿಖಿಲ್ ಅವರು ನಾನು ನಾಮಪತ್ರ ಸಲ್ಲಿಸುವ ದಿನ ಬರುತ್ತೇನೆಂದು ಅವರಾಗಿಯೇ ಹೇಳಿ, ಬಂದು ನಾಮಪತ್ರಿಕೆ ಸಲ್ಲಿಕೆಯ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಅವತ್ತು ಅಪಾರ ಜನಸ್ತೋಮ ಸೇರಿತ್ತು. ಅವರು ಕೂಡಾ, ನಾಮಪತ್ರ ಸಲ್ಲಿಕೆಯಾದ ನಂತರ ಕೆಲವು ಗ್ರಾಮಗಳಿಗೆ ಹೋಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಈ ಭಾಗದ ಜನ, ಜೆಡಿಎಸ್ ಬೆಂಬಲಿಸುತ್ತಾರೆ ಎನ್ನುವ ನಂಬಿಕೆಯಿದೆ.

       ನೀವು ಜಾತಿ ರಾಜಕೀಯವನ್ನು ನಂಬುತ್ತೀರಾ?

      ನೀವು ಜಾತಿ ರಾಜಕೀಯವನ್ನು ನಂಬುತ್ತೀರಾ?

      ಪ್ರ: ಹಾಲೀ ಕಾಂಗ್ರೆಸ್ ಶಾಸಕರ ಬಗ್ಗೆ ನಿಮ್ಮ ಅಭಿಪ್ರಾಯ?
      ಬಚ್ಚೇಗೌಡ: ಅವರ ಬಗ್ಗೆ ನಾನು ಪ್ರತಿಕ್ರಿಯಿಸುವುದಕ್ಕೆ ಹೋಗುವುದಿಲ್ಲ, ಅವರು ಏನು ಎನ್ನುವುದು ಜನತೆಗೆ ಅದರ ಅರಿವಿದೆ. ನಿನ್ನೆ ಕೂಡಾ ಬಸ್ ಪಾಸ್ ವಿಚಾರದಲ್ಲಿ ಪತ್ರಿಕೆಯಲ್ಲಿ ಬಂದಂತಹ ಸುದ್ದಿಯನ್ನು ನೋಡಿದ್ದೇನೆ. ಜನ ಅದರ ಬಗ್ಗೆ ತೀರ್ಮಾನ ಮಾಡುತ್ತಾರೆ.

      ಪ್ರ: ನೀವು ಜಾತಿ ರಾಜಕೀಯವನ್ನು ನಂಬುತ್ತೀರಾ?
      ಬಚ್ಚೇಗೌಡ: ಜಾತಿ ರಾಜಕಾರಣ ಚಿಕ್ಕಬಳ್ಳಾಪುರದಲ್ಲಿ ನಡೆಯುವುದಿಲ್ಲ. ಇಲ್ಲಿನ ಮತದಾರರು ಬಹಳ ಪ್ರಬುದ್ದರು. ಅವರು ಶಾಂತಿ ಸುವ್ಯವಸ್ಥೆಯನ್ನು ಬಯಸುತ್ತಾರೆ. ಅಭಿವೃದ್ದಿ ಪರವಾಗಿ ಇದ್ದವರಿಗೆ, ಇಲ್ಲಿನ ಮತದಾರ ಬೆಂಬಲಿಸುತ್ತಾನೆ.

       ಪೈಪ್ ಲೈನ್ ಲಾಬಿಗಾಗಿ, ಅದರಿಂದ ದುಡ್ಡು ಹೊಡೆಯಲು ಮಾಡಿದ ಯೋಜನೆ

      ಪೈಪ್ ಲೈನ್ ಲಾಬಿಗಾಗಿ, ಅದರಿಂದ ದುಡ್ಡು ಹೊಡೆಯಲು ಮಾಡಿದ ಯೋಜನೆ

      ಪ್ರ: ಕೆ ಸಿ ವ್ಯಾಲಿ ಮತ್ತು ಎತ್ತಿನಹೊಳೆ ಯೋಜನೆಯ ಬಗ್ಗೆ ಜೆಡಿಎಸ್ ನಿಲುವೇನು?
      ಬಚ್ಚೇಗೌಡ: ಕೆ ಸಿ ವ್ಯಾಲಿ ಈ ಭಾಗಕ್ಕೆ ಅನಗತ್ಯ. ಅಂತರ್ಜಲದಲ್ಲಿ ರಾಸಾಯನಿಕ ಪದಾರ್ಥಗಳು ಸೇರಿದಾಗ ಅದು ಮಾರಕ ರೋಗಕ್ಕೆ ಕಾರಣವಾಗುತ್ತದೆ. ಅದರ ಬಗ್ಗೆ ಸೈಂಟಿಸ್ಟ್ ಗಳನ್ನು ಕರೆದು ಸಂಶೋಧನೆಗಳನ್ನೂ ಮಾಡಿದ್ದೇವೆ. ಜನರಿಗೆ ಈ ವಿಚಾರವನ್ನು ತಿಳಿಸಿದ್ದೇವೆ.

      ಇದು ಪೈಪ್ ಲೈನ್ ಲಾಬಿಗಾಗಿ, ಅದರಿಂದ ದುಡ್ಡು ಹೊಡೆಯಲು ಮಾಡಿದ ಯೋಜನೆಯಿದು. ಎತ್ತಿನಹೊಳೆಯಿಂದ ನೀರು ಬರುತ್ತದೆ, ಆದರೆ, ಕಾಮಗಾರಿ ನಡೆಯುತ್ತಿರುವ ವೇಗ ನೋಡಿದರೆ, ಇನ್ನು ಹತ್ತು ವರ್ಷವಾದರೂ ಆ ಯೋಜನೆ ಪೂರ್ಣಗೊಳ್ಳುವುದಿಲ್ಲ. ಶರಾವತಿಯಿಂದ ಹೇಮಾವತಿಗೆ ನೀರನ್ನು ಹರಿಸಿ, ವಾಣಿವಿಲಾಸ ಡ್ಯಾಂಗೆ ನೀರು ತಂದರೆ ತುಮಕೂರು ಜಿಲ್ಲೆಗೆ ನೀರು ಬರುತ್ತದೆ.

      ತುಮಕೂರಿಗೆ ನೀರು ಬಂದರೆ, ಚಿಕ್ಕಬಳ್ಳಾಪುರಕ್ಕೆ ನೀರು ತರಿಸುವುದು ದೊಡ್ಡ ವಿಚಾರವಲ್ಲ. ಈ ಯೋಜನೆಯಿಂದ ಎಷ್ಟು ಲೂಟಿ ಹೊಡೆಯಬಹುದು ಎನ್ನುವುದಷ್ಟೇ ಸರಕಾರದ ಚಿಂತನೆ. ಕುಮಾರಣ್ಣ ಅಧಿಕಾರಕ್ಕೆ ಬಂದ ನಂತರ, ಶೀಘ್ರವೇ ಇದಕ್ಕೆ ಶಾಸ್ವತ ಪರಿಹಾರವನ್ನು ಕಂಡುಕೊಳ್ಳುತ್ತೇವೆ.

       ಚಿಕ್ಕಬಳ್ಳಾಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಚ್ಚೇಗೌಡ ಸಂದರ್ಶನ

      ಚಿಕ್ಕಬಳ್ಳಾಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಚ್ಚೇಗೌಡ ಸಂದರ್ಶನ

      ಪ್ರ: ಕೊನೆಯದಾಗಿ ಚಿಕ್ಕಬಳ್ಳಾಪುರ ಕ್ಷೇತ್ರದ ಮತದಾರರಲ್ಲಿ ನಿಮ್ಮ ಮನವಿ?
      ಬಚ್ಚೇಗೌಡ: ನಾನು ಹೋದಲೆಲ್ಲಾ ಜನರಲ್ಲಿ ಮನವಿ ಮಾಡುತ್ತಿದ್ದೇನೆ, ಒಂದು ದಿವಸ ಅವರು ತೋರಿಸುವಂತಹ ಆಮಿಷಕ್ಕೆ ಒಳಗಾಗಬಾರದು. ಸೀರೆ, ಕುಕ್ಕರ್, ಮಿಕ್ಸಿಗೆ ಮರುಳಾಗದೇ, ಐದು ವರ್ಷ ಹಣೆಬರಹ ಬರೆಯತಕ್ಕಂತಹ ಈ ಚುನಾವಣೆಯಲ್ಲಿ ಮತದಾರರು ನಿರ್ಭಯದಿಂದ ನಿಮ್ಮ ಮನಸಾಕ್ಷಿಗೆ ತಕ್ಕಂತೆ ಮತವನ್ನು ಚಲಾಯಿಸಿ, ಒಳ್ಲೆಯವರಿಗೆ ಮತವನ್ನು ಕೊಡಿ, ಭ್ರಷ್ಟರಿಗೆ ಮಣೆಹಾಕಬೇಡಿ. ಸಜ್ಜನರಿಗೆ ಮತ ನೀಡಿ ಎಂದು ಕೇಳಿಕೊಳ್ಳುತ್ತೇನೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+