ರಾಜಕಾರಣಿಗಳು ಕೊಡುವ 'ಭಿಕ್ಷೆ' ಇಸಿದುಕೊಳ್ಳಬೇಕೆ?
ಬೆಂಗಳೂರು, ಮಾರ್ಚ್ 01 : "ಇಸಿದುಕೊಳ್ಳುವವರು ಇರುವವರೆಗೆ ಕೊಡುವವರು ಇದ್ದೇ ಇರುತ್ತಾರೆ!" ಹಾಗೆಯೇ, "ಕೊಡುವವರು ಇರುವವರೆಗೆ ಇಸಿದುಕೊಳ್ಳುವವರೂ ಇದ್ದೇ ಇರುತ್ತಾರೆ!"
ಇದು ನಮ್ಮ ದೇಶದ ವಿಪರ್ಯಾಸ. ಈ ಕಾರಣದಿಂದಾಗಿಯೇ ಭ್ರಷ್ಟಾಚಾರ ಭಾರತದಲ್ಲಿ ತಾಂಡವವಾಡುತ್ತಿದೆ. ನರೇಂದ್ರ ಮೋದಿ ಸರಕಾರ ಎಷ್ಟೇ ಕ್ರಮಗಳನ್ನು ಜರುಗಿಸುತ್ತಿದ್ದರೂ ಭ್ರಷ್ಟಾಚಾರವನ್ನು ನಿಗ್ರಹಿಸಲು ಇನ್ನೂ ಸಾಧ್ಯವಾಗಿಲ್ಲ.
ಇದು ಸಾಧ್ಯವಾಗುವುದು, ದೇಶದ ಪ್ರಜ್ಞಾವಂತ ನಾಗರಿಕರು ಇಂತಹ ಆಚರಣೆಗೆ ಪೂರ್ಣವಿರಾಮ ಹಾಕಿದಾಗ ಮಾತ್ರ. ಇದಕ್ಕೆ ದೃಢವಾದ ಸಂಕಲ್ಪ ಮಾಡಬೇಕು. ಇನ್ನೆಂದೂ ಲಂಚ ನೀಡುವುದಿಲ್ಲ, ನೀಡಿದ್ದನ್ನು ಇಸಿದುಕೊಳ್ಳುವುದಿಲ್ಲ. ಇಂತಹ ಅನೈತಿಕ ಚಟುವಟಿಕೆಗಳಿಗೆ ಅವಕಾಶವನ್ನೂ ನೀಡುವುದಿಲ್ಲ ಎಂದು ಸಂಕಲ್ಪ ಮಾಡಬೇಕು.

ಇದು ಸಾಧ್ಯವೆ? ಕರ್ನಾಟಕದ ಚುನಾವಣೆಯನ್ನೇ ನೋಡಿ. ನಾವು ಭ್ರಷ್ಟಾಚಾರದ ವಿರುದ್ಧ ಎಂದು ಸಮಾವೇಶಗಳಲ್ಲಿ ಎದೆತಟ್ಟಿ ಹೇಳುತ್ತಿರುವವರು, ಕಂಡಕಂಡಲ್ಲಿ ಸೀರೆ, ಕುಕ್ಕರು, ಮಿಕ್ಸರ್ ಗ್ರೈಂಡರ್, ಹಣ, ಮತ್ತಿತರ ವಸ್ತುಗಳನ್ನು ಬಡಬಗ್ಗರಿಗೆ ಹಂಚುತ್ತಿದ್ದಾರೆ. ಇನ್ನು ಸ್ವಲ್ಪ ದಿನಗಳಲ್ಲಿ ಮದ್ಯದ ಹೊಳೆಯೂ ಹರಿಯಲಿದೆ.
ಇವನ್ನು ಇಸಿದುಕೊಂಡವರು ಉದ್ಧಾರವಾಗುತ್ತಾರಾ? ನೀವು ನಿಜವಾದ ನಾಗರಿಕರೇ ಆಗಿದ್ದರೆ, ಮತಭಿಕ್ಷೆಗೆಂದು ಬರುವ ರಾಜಕಾರಣಿಗಳು ಕೊಡುವ ಬಿಟ್ಟಿ ಉಡುಗೊರೆಗಳನ್ನು, ಭಿಕ್ಷೆಯನ್ನು ಅವರ ಮುಖದ ಮೇಲೆ ಬಿಸಾಕಿ. ನಿಮಗೆ ಮತ ಹಾಕುವುದಿಲ್ಲ ಅಂತ ಮುಖಕ್ಕೆ ಬಾರಿಸಿದ ಹಾಗೆ ಹೇಳಿರಿ.
ಮತ ಹಾಕುವುದು ನಿಮ್ಮ ಅತ್ಯಮೂಲ್ಯವಾದ ಹಕ್ಕು ಮತ್ತು ಆಸ್ತಿ. ರಾಜಕಾರಣಿಗಳು ಒಡ್ಡುವ ಆಮಿಷಕ್ಕೆ ಮರುಳಾಗಿ ಮತವನ್ನು ಮಾರಿಕೊಳ್ಳಬೇಡಿ. ಇಂಥ ಆಚರಣೆಗೆ ನಮ್ಮ ಕರ್ನಾಟಕ ವಿಧಾನಸಭೆ ಚುನಾವಣೆಯೇ ನಾಂದಿ ಹಾಡಲಿ. ಏನಂತೀರಿ? ನಿಮ್ಮ ಅಭಿಪ್ರಾಯಗಳನ್ನು ಕೆಳಗಿನ ಕಾಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ.












Click it and Unblock the Notifications