'ಕೋವಿಡ್ ಲಸಿಕೆ ವಿಚಾರದಲ್ಲಿ ದೇಶವನ್ನು ತಪ್ಪುದಾರಿಗೆಳೆಯುತ್ತಿರುವ ಪ್ರಧಾನಿ'
ನವದೆಹಲಿ, ಅಕ್ಟೋಬರ್ 22: ಪ್ರಧಾನಮಂತ್ರಿ ನರೇಂದ್ರ ಮೋದಿ ಕೊರೊನಾ ವೈರಸ್ ಸೋಂಕಿನ ವಿರುದ್ಧವಾಗಿ ನೀಡುವ ಲಸಿಕೆಯ ವಿಚಾರದಲ್ಲಿ ದೇಶವನ್ನೇ ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ. "ದೇಶದಲ್ಲಿ ಪ್ರಸ್ತುತ ಕೇವಲ ಶೇಕಡ 21 ರಷ್ಟು ಮಂದಿ ಮಾತ್ರ ಸಂಪೂರ್ಣ ಕೋವಿಡ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಲಸಿಕೆ ವಿಚಾರದಲ್ಲಿ ದೇಶವನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ," ಎಂದು ಹೇಳಿದೆ.
ಶುಕ್ರವಾರ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಗೌರವ್ ವಲ್ಲಭ್, ಎಲ್ಲಾ ವಯಸ್ಕರಿಗೆ ಈ ವರ್ಷದ ಅಂತ್ಯದ ವೇಳೆಗೆ ಲಸಿಕೆ ಹಾಕಲು ಹೇಗೆ ಯೋಜನೆ ರೂಪಿಸಿದೆ ಎಂಬ ಬಗ್ಗೆ ಹಾಗೂ ಈ ಹಿಂದೆ ಭರವಸೆ ನೀಡಿದ್ದ ಬಗ್ಗೆ ಶ್ವೇತಪತ್ರವನ್ನು ಹೊರಡಿಸಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಳಿ ವಿರೋಧ ಪಕ್ಷ ಆಗ್ರಹ ಮಾಡುತ್ತದೆ ಎಂದಿದ್ದಾರೆ.
100 ಕೋಟಿ ಕೊರೊನಾ ಲಸಿಕಾಕರಣ ಟೀಕಾಕಾರರ ಬಾಯ್ಮುಚ್ಚಿಸಿದೆ: ಮೋದಿ
"ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಕ್ರವಾರ ತಾನು ದೇಶವನ್ನು ಉದ್ದೇಶಿಸಿ ಭಾಷಣ ಮಾಡುವ ಸಂದರ್ಭದಲ್ಲಿ ಹಣದುಬ್ಬರ ಹಾಗೂ ಭಯೋತ್ಪಾದನೆಯ ಬಗ್ಗೆ ಯಾವುದೇ ಉಲ್ಲೇಖ ಮಾಡಿಲ್ಲ," ಎಂದು ಟೀಕೆ ಮಾಡಿದ್ದಾರೆ. "ಕೊರೊನಾವೈರಸ್ ಸೋಂಕಿನಿಂದ ಸಾವನ್ನಪ್ಪಿದ 4.53 ಲಕ್ಷ ಜನರ ಕುಟುಂಬಕ್ಕೆ ಸಂತಾಪ ವ್ಯಕ್ತಪಡಿಸುವ ಬದಲಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ," ಎಂದು ಕಾಂಗ್ರೆಸ್ ವಕ್ತಾರ ಆರೋಪ ಮಾಡಿದ್ದಾರೆ.
ತಪ್ಪಾದ ಡೇಟಾ ನೀಡಿದ ಪ್ರಧಾನಿ ಮೋದಿ
"ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ವಿಚಾರಗಳ ಬಗ್ಗೆ ಮಾತನಾಡಬೇಕು. ಆದರೆ ಅದರ ಬದಲಾಗಿ ಪ್ರಧಾನಿ ಮಹೋತ್ಸವವನ್ನು ಮಾಡುತ್ತಿದ್ದಾರೆ. ಈ ಕೊರೊನಾ ಲಸಿಕೆ ವಿಚಾರವನ್ನು ತಪ್ಪಾಗಿ ಜನರ ಬಳಿ ಪ್ರಧಾನಿ ಕೊಂಡೊಯ್ಯುತ್ತಿದ್ದಾರೆ. ದೇಶವನ್ನು ತಪ್ಪು ದಾರಿಗೆ ಎಳೆಯುವ ನಿಟ್ಟಿನಲ್ಲಿ ತಪ್ಪಾದ ಡೇಟಾವನ್ನು ಪ್ರಸ್ತುತ ಪಡಿಸಿದ್ದಾರೆ," ಎಂದು ಕೂಡಾ ಕಾಂಗ್ರೆಸ್ ವಕ್ತಾರ ದೂರಿದ್ದಾರೆ.
ಚೀನಾ ಮೊದಲೇ 216 ಕೋಟಿ ಡೋಸ್ ಲಸಿಕೆ ನೀಡಿದೆ
"ಪ್ರಧಾನ ಮಂತ್ರಿ ನರೇಂದ್ರ ಮೋದಿ ಈಗ ಹೇಳಿರುವುದು ಅರ್ಧ ಸತ್ಯ. ಈ ಅರ್ಧ ಸತ್ಯ ಎಂದಿಗೂ ಅಪಾಯಕಾರಿ. ವಿಶ್ವದಲ್ಲಿ 50 ಕೋಟಿಗಿಂತ ಅಧಿಕ ಜನಸಂಖ್ಯೆಯನ್ನು ಹೊಂದಿರುವುದು ಎರಡು ರಾಷ್ಟ್ರಗಳು ಮಾತ್ರ. ನೂರು ಕೋಟಿಗಿಂತ ಅಧಿಕ ಕೋವಿಡ್ ಲಸಿಕೆ ಡೋಸ್ ಅನ್ನು ನೀಡಿದ ಪ್ರಥಮ ದೇಶ ಭಾರತ ಎಂಬ ಪ್ರಧಾನಿಯ ವಾದ ಸುಳ್ಳು. ಸೆಪ್ಟೆಂಬರ್ನಲ್ಲಿ ಚೀನಾ 216 ಕೋಟಿ ಡೋಸ್ ಕೋವಿಡ್ ಲಸಿಕೆಯನ್ನು ನೀಡಿದೆ. ಈ ಬಗ್ಗೆ ಚೀನಾ ಅಧಿಕೃತ ಘೋಷಣೆಯನ್ನು ಮಾಡಿದೆ," ಎಂದು ಕಾಂಗ್ರೆಸ್ ವಕ್ತಾರ ಗೌರವ್ ವಲ್ಲಭ್ ವಿವರಿಸಿದ್ದಾರೆ. "ಚೀನಾವು ತನ್ನ ದೇಶದ ಶೇಕಡ 80 ರಷ್ಟು ಜನ ಸಂಖ್ಯೆಗೆ ಎರಡು ಡೋಸ್ ಲಸಿಕೆಯನ್ನು ನೀಡಿದೆ. ಆದರೆ ಭಾರತ ಕೇವಲ 20 ಶೇಕಡ ಜನರಿಗೆ ಮಾತ್ರ ಸಂಪೂರ್ಣ ಕೋವಿಡ್ ಲಸಿಕೆಯನ್ನು ನೀಡಿದೆ," ಎಂದು ಕೂಡಾ ಕಾಂಗ್ರೆಸ್ ವಕ್ತಾರರು ಉಲ್ಲೇಖ ಮಾಡಿದ್ದಾರೆ.
"ಪ್ರಧಾನಿ ಮೋದಿ ಮತ್ತು ಖಾಲಿ ತಟ್ಟೆ": ಏನಿದು ಸಿದ್ದರಾಮಯ್ಯ ಟ್ವೀಟ್ ಅಸ್ತ್ರ!?
''ಶ್ವೇತಪತ್ರ ಹೊರಡಿಸಿ ಪ್ರಧಾನಿ ಮೋದಿ" ಎಂದ ಕಾಂಗ್ರೆಸ್ ವಕ್ತಾರ
"ನಾವು ನಮ್ಮ ಶಾಲೆಗೆ ಹೋಗುವ ಹಾಗೂ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಕೊರೊನಾ ವೈರಸ್ ಲಸಿಕೆಯನ್ನು ನೀಡಲು ಆರಂಭ ಮಾಡಿದ ಬಳಿಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಡೇಟಾವನ್ನು ಪ್ರಸ್ತುತ ಪಡಿಸಿದರೆ ಉತ್ತಮವಾದೀತು ಎಂದು ನಾವು ಹೇಳಬಹುದು. ಡಿಸೆಂಬರ್ 31, 2021 ಒಳಗೆ ದೇಶದ ಎಲ್ಲಾ ಜನರಿಗೆ ಕೋವಿಡ್ ಲಸಿಕೆ ನೀಡಲಾಗುವುದು ಎಂದು ಈ ಹಿಂದೆ ಪ್ರಧಾನಿ ನೀಡಿದ್ದ ಭರವಸೆಯನ್ನು ಪೂರ್ಣ ಮಾಡಲು ಸಾಧ್ಯವಾಗುತ್ತದೆಯೇ ಎಂಬುವುದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಉತ್ತರ ನೀಡಬೇಕು," ಎಂದು ಟಾಂಗ್ ನೀಡಿದ್ದಾರೆ. "ಮುಂದಿನ 70 ದಿನಗಳಲ್ಲಿ ದೇಶದ ನಮ್ಮ ಸಂಪೂರ್ಣ ವಯಸ್ಕ ಜನಸಂಖ್ಯೆಗೆ ಲಸಿಕೆ ಹಾಕಲು ಹೇಗೆ 106 ಕೋಟಿ ಲಸಿಕೆಗಳನ್ನು ಪಡೆಯಲಿದ್ದೇವೆ ಎಂಬ ಬಗ್ಗೆ ಶ್ವೇತಪತ್ರವನ್ನು ಹೊರಡಿಸಿ," ಎಂದು ಆಗ್ರಹ ಮಾಡಿರುವ ಕಾಂಗ್ರೆಸ್ ವಕ್ತಾರ, "ನಾವು ಪ್ರಧಾನ ಮಂತ್ರಿ ಭಾಷಣದಲ್ಲಿ ಹಣದುಬ್ಬರದ ಬಗ್ಗೆ ಮಾತನಾಡುತ್ತಾರೆ ಎಂದು ಅಂದುಕೊಂಡಿದ್ದೆವು. ಏಕೆಂದರೆ ಜನವರಿ 1 ರಿಂದ ಪೆಟ್ರೋಲ್ ಬೆಲೆ ಶೇಕಡ 29 ಹಾಗೂ ಡಿಸೇಲ್ ಬೆಲೆ ಶೇಕಡ 27 ಏರಿಕೆ ಆಗಿದೆ. ಕಳೆದ ಒಂಬತ್ತು ತಿಂಗಳಿನಲ್ಲಿ ಪ್ರಧಾನಿ ಮೋದಿಯ ಸ್ನೇಹಿತರನ್ನು ಹೊರತುಪಡಿಸಿ ವಿಶ್ವದಲ್ಲಿ ಬೇರೆ ಯಾರಾದಾದರೂ ಆದಾಯ ಶೇಕಡ 29 ರಷ್ಟು ಏರಿಕೆ ಆಗಿದೆಯೇ," ಎಂದು ಪ್ರಶ್ನಿಸಿದ್ದಾರೆ.
ಯುದ್ಧ ಮುಗಿಯುವವರೆಗೂ ಶಸ್ತ್ರಾಸ್ತ್ರ ಕೆಳಗಿಳಿಸಬೇಡಿ: ನರೇಂದ್ರ ಮೋದಿ
ಹಣದುಬ್ಬರ, ಜಮ್ಮು ಕಾಶ್ಮೀರ ಕೊಲೆಯ ಬಗ್ಗೆ ಮಾತನಾಡದ ಮೋದಿ
"ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಮ್ಮು ಮತ್ತು ಕಾಶ್ಮೀರ ಹಾಗೂ ಹಣದುಬ್ಬರ ಬಗ್ಗೆ ಮಾತನಾಡುತ್ತಾರೆ ಎಂದು ನಾವು ಅಂದುಕೊಂಡಿದ್ದೆವು. ಆದರೆ ಪ್ರಧಾನಿ ಆ ಬಗ್ಗೆ ಮಾತನಾಡಿಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವಾರು ನಾಗರಿಕರ ಹತ್ಯೆ ನಡೆದಿದೆ. ಯೋಧರನ್ನು ಕೂಡಾ ಉಗ್ರರು ಹತ್ಯೆ ಮಾಡಿದ್ದಾರೆ. ಈ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯಾವುದೇ ಮಾತು ಆಡಿಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಈ ಬಗ್ಗೆ ಮಾತನಾಡಲು ಯಾವುದೇ ಸಮಯವಿಲ್ಲ. ಪ್ರಧಾನಿ ಮೋದಿ ಕೊರೊನಾ ವೈರಸ್ ಸೋಂಕಿನಿಂದ ಸಾವನ್ನಪ್ಪಿದವರ ಕುಟುಂಬಕ್ಕೆ ಸಂತಾಪ ಸಲ್ಲಿಸುತ್ತಾರೆ ಅಂದುಕೊಂಡೆವು. ಆದರೆ ಪ್ರಧಾನಿ ಬರೀ ಸಂಭ್ರಮಾಚರಣೆಯಲ್ಲೇ ತೊಡಗಿದ್ದಾರೆ," ಎಂದು ಕ್ರಾಂಗ್ರೆಸ್ ವಕ್ತಾರರು ಆರೋಪ ಮಾಡಿದ್ದಾರೆ.
(ಒನ್ಇಂಡಿಯಾ ಸುದ್ದಿ)