'ಪೆಟ್ರೋಲ್, ಡೀಸೆಲ್ ಬೆಲೆ 2014 ರ ವರ್ಷಕ್ಕೆ ಸಮಾನವಾಗುವುದು ಯಾವಾಗ?'
ನವದೆಹಲಿ, ನವೆಂಬರ್ 04: ಈ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಇಳಿಕೆ ಮಾಡಿ ಬುಧವಾರ ಆದೇಶ ಹೊರಡಿಸಿದೆ. ಈ ಬೆನ್ನಲ್ಲೇ ಒಂಬತ್ತು ಬಿಜೆಪಿ ಆಡಳಿತ ಇರುವ ರಾಜ್ಯಗಳು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ವ್ಯಾಟ್ನಲ್ಲಿ ಹೆಚ್ಚುವರಿ ಇಳಿಕೆ ಮಾಡಿದೆ. ಈ ಬೆನ್ನಲ್ಲೇ ಕೇಂದ್ರ ಸರ್ಕಾರದ ವಿರುದ್ಧ ತನ್ನ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್, "ಬೆಲೆಗಳು 2014 ರ ವರ್ಷಕ್ಕೆ ಸಮಾನವಾಗುವುದು ಯಾವಾಗ?," ಎಂದು ಪ್ರಶ್ನೆ ಮಾಡಿದೆ.
ಕೇಂದ್ರ ಸರ್ಕಾರವು ಪೆಟ್ರೋಲ್ 5 ರೂ, ಹಾಗೂ ಡೀಸೆಲ್ ಮೇಲೆ 10 ರೂಪಾಯಿ ಅಬಕಾರಿ ಸುಂಕವನ್ನು ಇಳಿಕೆ ಮಾಡಿ ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರದ ಈ ಆದೇಶ ಹೊರ ಬಂದ ಒಂದು ಗಂಟೆಯಲ್ಲೇ ಬಿಜೆಪಿ ಆಡಳಿತದ ಒಟ್ಟು ಒಂಬತ್ತು ರಾಜ್ಯಗಳು ಹೆಚ್ಚುವರಿ ಅಬಕಾರಿ ಸುಂಕವನ್ನು ಇಳಿಕೆ ಮಾಡಿದೆ. ಈ ಆದೇಶವು ಇಂದಿನಿಂದಲೇ ಅಂದರೆ ನವೆಂಬರ್ 4 ರ ಗುರುವಾರದಿಂದಲೇ ಜಾರಿಗೆ ಬರಲಿದೆ.
ಈ 9 ಬಿಜೆಪಿ ಆಡಳಿತದ ರಾಜ್ಯದಲ್ಲಿ ಇಂಧನ ಬೆಲೆ ಹೆಚ್ಚುವರಿ ಕಡಿತ
ಈ ಬೆನ್ನಲ್ಲೇ ಟ್ವೀಟ್ ಮಾಡಿ ಕೇಂದ್ರ ಸರ್ಕಾರಕ್ಕೆ ಟಾಂಗ್ ನೀಡಿರುವ ಕಾಂಗ್ರೆಸ್ ನಾಯಕ ರಣ್ದೀಪ್ ಸಿಂಗ್ ಸುರ್ಜೇವಾಲಾ, "ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು 2014 ರ ವರ್ಷಕ್ಕೆ ಸಮಾನವಾಗುವುದು ಯಾವಾಗ?," ಎಂದು ಪ್ರಶ್ನೆಯ ಮೂಲಕ ಕೇಂದ್ರ ಸರ್ಕಾರವನ್ನು ಟೀಕೆ ಮಾಡಿದ್ದಾರೆ.
ದರ 2014 ರಷ್ಟು ಆಗುವುದು ಯಾವಾಗ?
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಣ್ದೀಪ್ ಸಿಂಗ್ ಸುರ್ಜೇವಾಲಾ, "ತೆರಿಗೆ-ಪರಾವಲಂಬಿ ಮೋದಿ ಸರ್ಕಾರಕ್ಕೆ "ಸತ್ಯದ ಕನ್ನಡಿ" ತೋರಿಸಿದ್ದಕ್ಕಾಗಿ ಜನರಿಗೆ ವಂದನೆಗಳು. ಆದರೆ ನೆನಪು ಇಡಿ. 2014 ರ ಮೇ ತಿಂಗಳಿನಲ್ಲಿ ದೇಶದಲ್ಲಿ ಪೆಟ್ರೋಲ್ ಬೆಲೆಯು ಲೀಟರ್ಗೆ 71.41 ಆಗಿತ್ತು. ಡೀಸೆಲ್ ಬೆಲೆಯು ಲೀಟರ್ಗೆ 55.49 ಆಗಿತ್ತು. ಆದರೆ ಆಗ ಕಚ್ಚಾ ತೈಲ ಬೆಲೆಯು ಬ್ಯಾರೆಲ್ಗೆ 105.71 ಡಾಲರ್ ಆಗಿತ್ತು. ಆದರೆ ಈಗ ಕಚ್ಚಾ ತೈಲದ ಬೆಲೆಯು ಬ್ಯಾರೆಲ್ಗೆ 82 ಡಾಲರ್ ಆಗಿದೆ. ಹಾಗಿರುವಾಗ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು 2014 ರ ವರ್ಷಕ್ಕೆ ಸಮಾನವಾಗುವುದು ಯಾವಾಗ?," ಎಂದು ಕೇಳಿದ್ದಾರೆ.
ಕಾಂಗ್ರೆಸ್, ಮೋದಿ ಸರ್ಕಾರದ ಅಬಕಾರಿ ಸುಂಕದ ಹೋಲಿಕೆ
ಇನ್ನು ಮತ್ತೊಂದು ಟ್ವೀಟ್ನಲ್ಲಿ ಕಾಂಗ್ರೆಸ್ ನಾಯಕ ರಣ್ದೀಪ್ ಸಿಂಗ್ ಸುರ್ಜೇವಾಲಾ, ಕಾಂಗ್ರೆಸ್ ಸರ್ಕಾರ ಇದ್ದ ಸಂದರ್ಭದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಹಾಕಿದ್ದ ಅಮಬಕಾರಿ ಸುಂಕ ಹಾಗೂ ಪ್ರಸ್ತುತ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಆಡಳಿತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಹೇರಿರುವ ಅಬಕಾರಿ ಸುಂಕವನ್ನು ತುಲನೆ ಮಾಡಿದ್ದಾರೆ. "ಕಾಂಗ್ರೆಸ್ ಸರ್ಕಾರ ಇದ್ದ ಸಂದರ್ಭದಲ್ಲಿ ಪತ್ರಿ ಲೀಟರ್ ಪೆಟ್ರೋಲ್ ಮೇಲೆ 9.48 ರೂಪಾಯಿ ಅಬಕಾರಿ ಸುಂಕ ವಿಧಿಸಲಾಗಿತ್ತು. ಹಾಗೆಯೇ ಪತ್ರಿ ಲೀಟರ್ ಡೀಸೆಲ್ ಮೇಲೆ 3.56 ರೂಪಾಯಿ ಅಬಕಾರಿ ಸುಂಕ ವಿಧಿಸಲಾಗಿತ್ತು. ಆದರೆ ಪ್ರಸ್ತುತ ಬಿಜೆಪಿ ಸರ್ಕಾರದಲ್ಲಿ ಸರ್ಕಾರ ಅಬಕಾರಿ ಸುಂಕ ಇಳಿಕೆ ಮಾಡಿದ ಬಳಿಕ ಪತ್ರಿ ಲೀಟರ್ ಪೆಟ್ರೋಲ್ ಮೇಲೆ 27.90 ರೂಪಾಯಿ, ಪತ್ರಿ ಲೀಟರ್ ಡೀಸೆಲ್ ಮೇಲೆ 21.80 ರೂಪಾಯಿ ಅಬಕಾರಿ ಸುಂಕವನ್ನು ಹೇರಳಾಗಿದೆ," ಎಂಬುವುದನ್ನು ಉಲ್ಲೇಖ ಮಾಡಿರುವ ಸುರ್ಜೇವಾಲಾ, "ಮೋದಿ ಜಿ ದೇಶಕ್ಕೆ ನಿಮ್ಮ ಸುಳ್ಳು ಭರವಸೆಗಳು ಬೇಡ. ಕರಾಳ ತೆರಿಗೆ ಹೆಚ್ಚಳವನ್ನು ಹಿಂದಕ್ಕೆ ತೆಗೆದುಕೊಳ್ಳಿ," ಎಂದು ಆಗ್ರಹ ಮಾಡಿದ್ದಾರೆ.
ಮೋದಿ-ನಾಮಿಕ್ಸ್ ಭರವಸೆಗಳನ್ನು ನೋಡಿ!
ಇನ್ನು ಮೂರನೇ ಟ್ವೀಟ್ನಲ್ಲಿ ಕಾಂಗ್ರೆಸ್ ನಾಯಕ ರಣ್ದೀಪ್ ಸಿಂಗ್ ಸುರ್ಜೇವಾಲಾ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದಯವಿಟ್ಟು "ಮೋದಿ-ನಾಮಿಕ್ಸ್" ನ ಜುಮ್ಲಾ (ಸುಳ್ಳು ಭರವಸೆ) ಗಳನ್ನು ನೋಡಿ!. 2021 ನೇ ವರ್ಷದಲ್ಲಿ ಪೆಟ್ರೋಲ್ ಬೆಲೆಯನ್ನು ಲೀಟರ್ಗೆ 28 ರೂಪಾಯಿ ಏರಿಕೆ ಮಾಡಲಾಗಿದೆ ಹಾಗೂ ಡೀಸೆಲ್ ಬೆಲೆಯನ್ನು ಲೀಟರ್ಗೆ 26 ರೂಪಾಯಿಯಷ್ಟು ಏರಿಕೆ ಮಾಡಲಾಗಿದೆ. 14 ಉಪಚುನಾವಣೆ ಹಾಗೂ 2 ಲೋಕ ಸಭೆ ಚುನಾವಣೆಯಲ್ಲಿ ಸೋತ ಬಳಿಕ ಪೆಟ್ರೋಲ್-ಡೀಸೆಲ್ ಬೆಲೆಯು ಕ್ರಮವಾಗಿ 5 ರೂಪಾಯಿ ಹಾಗೂ 10 ರೂಪಾಯಿ ಕಡಿಮೆ ಮಾಡಿ, ಇದನ್ನು ದೀಪಾವಳಿ ಕೊಡುಗೆ ಎಂದು ಟಮ್ ಟಮ್ ಹೊಡೆಯಲಾಗುತ್ತಿದೆ, ಹೇ ರಾಮ," ಎಂದಿದ್ದಾರೆ.
ಇದು ಹೃಯದಿಂದ ಅಲ್ಲ, ಭಯದಿಂದ
ಇನ್ನು ಈ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಇಳಿಕೆ ಆಗುತ್ತಿದ್ದಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಕೂಡಾ ಟ್ವೀಟ್ ಮಾಡಿದ್ದಾರೆ. "ಈ ಬೆಲೆ ಇಳಿಕೆಯನ್ನು ಹೃದಯದಿಂದ ಅಲ್ಲ ಭಯದಿಂದ ಮಾಡಲಾಗುತ್ತಿದೆ," ಎಂದು ದೂರಿದ್ದಾರೆ. "ಇದು ಹಬ್ಬದ ಸಮಯ. ಹಣದುಬ್ಬರದಿಂದ ಜನರು ಚಿಂತಿತರಾಗಿದ್ದಾರೆ. ಬಿಜೆಪಿ ಸರ್ಕಾರದ ಲೂಟಿಯ ಚಿಂತನೆ ಹಬ್ಬಕ್ಕೂ ಮುನ್ನವೇ ಹಣದುಬ್ಬರ ತಗ್ಗಿಸುವ ಬದಲು ಗ್ಯಾಸ್ ಸಿಲಿಂಡರ್, ಪೆಟ್ರೋಲ್-ಡೀಸೆಲ್, ತೈಲ, ತರಕಾರಿಗಳ ಬೆಲೆಯನ್ನು ಗಗನಕ್ಕೇರಿಸಿದೆ. ಚುನಾವಣೆ ವೇಳೆಗೆ ಬಿಜೆಪಿಯವರು 1-2 ರೂಪಾಯಿ ಕಡಿಮೆ ಮಾಡಿ ಸಾರ್ವಜನಿಕರ ಮಧ್ಯೆ ಹೋಗುತ್ತಾರೆ, ಆಗ ಅದಕ್ಕೆ ತಕ್ಕ ಉತ್ತರ ಸಿಗುತ್ತದೆ. ಜನ ಕ್ಷಮಿಸುವುದಿಲ್ಲ," ಎಂದು ನಿನ್ನೆ ಪ್ರಿಯಾಂಕ ಗಾಂಧಿ ಟ್ವೀಟ್ ಮಾಡಿದ್ದರು. ಈಗ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯ ಬಳಿಕ ಟ್ವೀಟ್ ಮಾಡಿರುವ ಪ್ರಿಯಾಂಕ ಗಾಂಧಿ "ಇದು ಹೃದಯದಿಂದ ಅಲ್ಲ ಭಯದಿಂದ ತೆಗೆದುಕೊಂಡ ನಿರ್ಧಾರವಾಗಿದೆ. ಸರ್ಕಾರದ ಲೂಟಿಗೆ ಮುಂಬರುವ ಚುನಾವಣೆಯಲ್ಲಿಯೇ ಉತ್ತರ ನೀಡಬೇಕು," ಎಂದು ಹೇಳಿದ್ದಾರೆ.