ಗುಜರಿ ವಾಹನ ನೀತಿಗೆ ವಾಣಿಜ್ಯ ವಾಹನ ಮಾಲೀಕರ ತೀವ್ರ ವಿರೋಧ
ಬೆಂಗಳೂರು, ನ. 15: ವಾಯುಮಾಲಿನ್ಯ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪರಿಚಯಿಸಿರುವ "ನೂತನ ಗುಜರಿ ನೀತಿ" ವಿರುದ್ಧ ವಾಣಿಜ್ಯ ವಾಹನ ಮಾಲೀಕರು ತಿರುಗಿ ಬಿದ್ದಿದ್ದಾರೆ. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕುವ ಯೋಜನೆಯಲ್ಲಿ ಹಲವು ಬದಲಾವಣೆ ತರುವಂತೆ ಕೋರಿ ಕೇಂದ್ರ ಸಾರಿಗೆ ಸಚಿವಾಲಯಕ್ಕೆ ರಾಜ್ಯ ಲಾರಿ ಮಾಲೀಕರ ಸಂಘ ಮನವಿ ನೀಡಿದೆ. ಇಂಜಿನ್ನಿಂದ ವಾಯುಮಾಲಿನ್ಯ ಉಂಟಾಗುವುದಿದ್ದರೆ, ವಾಹನದ ಚಾರ್ಸಿ ಮತ್ತು ಬಾಡಿ ಏನು ಮಾಡಿತು? ಇಂಜಿನ್ ಬದಲಿಸಷ್ಟೇ ಅವಕಾಶ ಮಾಡಿಕೊಡಿ ಎಂದು ಲಾರೀ ಮಾಲೀಕರ ಸಂಘ ಮನವಿ ಮಾಡಿದೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಗುಜರಿ ನೀತಿಯನ್ನು ಯಥಾವತ್ತಾಗಿ ಜಾರಿಗೆ ತಂದರೆ ಲಕ್ಷಾಂತರ ವಾಹನ ಮಾಲೀಕರು ಬೀದಿಗೆ ಬೀಳಲಿದ್ದಾರೆ. ಹದಿನೈದು ವರ್ಷ ಅವಧಿ ಮುಗಿದ ವಾಣಿಜ್ಯ ವಾಹನಗಳನ್ನು ಗುಜರಿಗೆ ಹಾಕುವ ಕೇಂದ್ರ ನೂತನ ಗುಜರಿ ನೀತಿಯ ಬಗ್ಗೆ ದೆಶದೆಲ್ಲೆಡೆ ಅಪಸ್ವರ ಎದ್ದಿದೆ. ಇಂಜಿನ್ಗಳಿಂದ ವಾಯು ಮಾಲಿನ್ಯ ಆಗುವುದು ಸಹಜ. ಬೇಕಾದರೆ ಹದಿನೈದು ವರ್ಷ ತುಂಬಿದ ವಾಹನಗಳ ಇಂಜಿನ್ ಬದಲಾವಣೆ ಮಾಡಲಿ. ಬಾಡಿಗೆ ಮತ್ತು ಚಾರ್ಸಿ ಬದಲಾವಣೆ ಮಾಡುವ ಅಗತ್ಯವಿಲ್ಲ. ವಾಹನಗಳನ್ನು ಈ ಅವೈಜ್ಞಾನಿಕವಾಗಿ ಗುಜರಿಗೆ ಹಾಕಿದರೆ ವಾಹನ ಮಾಲೀಕರು ಬೀದಿಗೆ ಬೀಳಬೇಕಾಗುತ್ತದೆ.
ಗುಜರಿ ನೀತಿ ಜಾರಿಗೆ ಬಂದ ವರ್ಷವೇ ದೇಶದಲ್ಲಿ 18. 50 ಲಕ್ಷ ವಾಹನಗಳನ್ನು ಗುಜರಿಗೆ ಹಾಕಬೇಕಾಗುತ್ತದೆ. ಕರ್ನಾಟಕ ರಾಜ್ಯದಲ್ಲಿ 2.5 ಲಕ್ಷ ವಾಹನಗನ್ನು ಗುಜರಿಗೆ ಹಾಕಬೇಕಾಗುತ್ತದೆ. ದೇಶದ ಸಂಪತ್ತನ್ನು ಅನಾವಶ್ಯಕವಾಗಿ ನಷ್ಟ ಮಾಡಿದಂತಾಗುತ್ತದೆ. ನೂತನ ಗುಜರಿ ನೀತಿಯ ನಿಯಮಗಳಿಗೆ ಬದಲಾವಣೆ ತರುವಂತೆ ಕೇಂದ್ರ ಸಾರಿಗೆ ಮಂತ್ರಾಲಯಕ್ಕೆ ಮನವಿ ಮಾಡಿದ್ದೇವೆ ಎಂದು ಕರ್ನಾಟಕ ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಅವರು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.
ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತಾಗಿದೆ
ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತಾಗಿದೆ. ಇಂಜಿನ್ನಿಂದ ವಾಯು ಮಾಲಿನ್ಯಕ್ಕೆ ಕಾರಣವಾಗಬಹುದು. ಇಂಜಿನ್ ಮಾತ್ರ ಬದಲಿಸಲು ಅವಕಾಶ ಕೊಡಬೇಕು. ಇಲ್ಲದಿದ್ದರೆ ಕೆ.ಜಿ.ಗೆ ಸರಾಸರಿ 40 ರೂ. ನಂತೆ ಸರ್ಕಾರವೇ ಖರೀದಿ ಮಾಡಲಿ. ಕನಿಷ್ಠ ಈ ಶುಲ್ಕವನ್ನು ನಿಗದಿ ಮಾಡಿ ಸರ್ಕಾರವೇ ಖರೀದಿ ಮಾಡಲಿ. ವಾಹನ ಖರೀದಿ ಮೇಲಿನ ಜಿಎಸ್ಟಿ ಸುಂಕವನ್ನು ಸಂಪೂರ್ಣವಾಗಿ ರದ್ದು ಮಾಡಬೇಕು. ಕೇಂದ್ರ ಸರ್ಕಾರ ನಮ್ಮ ಮನವಿಗೆ ಸ್ಪಂದಿಸದಿದ್ದರೆ, ದೇಶದಾದ್ಯಂತ ವಾಣಿಜ್ಯ ವಾಹನ ಸಂಚಾರ ಸ್ಥಗಿತಗೊಳಿಸಿ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ. ಇದನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದು ಷಣ್ಮುಗಪ್ಪ ಇದೇ ವೇಳೆ ತಿಳಿಸಿದ್ದಾರೆ.
ಏನಿದು ಗುಜರಿ ನೀತಿ
ದೇಶದಲ್ಲಿ ವರ್ಷಗಳಿಂದ ಚಾಲನೆಯಲ್ಲಿರುವ ಹಳೇ ವಾಹನಗಳನ್ನು ನಾಶ ಪಡಿಸುವುದು. ಈ ಮೂಲಕ ಪರಿಸರ ಸಂರಕ್ಷಣೆ ಮಾಡವುದು. ಆಟೋ ಮೊಬೈಲ್ ಕ್ಷೇತ್ರದ ಪ್ರಗತಿಗೆ ಅವಕಾಶ ಕೊಡುವ ಜತೆಗೆ ರಸ್ತೆ ಸುರಕ್ಷತೆ ಕಾಪಾಡುವುದು ಈ ಯೋಜನೆಯ ಉದ್ದೇಶ. ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಈ ಗುಜರಿ ನೀತಿಯಿದೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಹೊಸ ನೀತಿ ಜಾರಿಗೆ ತರಲಾಗಿದೆ.
ದೇಶದ ರಸ್ತೆಗಳಲ್ಲಿ ಸಂಚರಿಸುತ್ತಿವ ವಾಣಿಜ್ಯ ವಾಹನಗಳು ಹದಿನೈದು ವರ್ಷದ ಬಳಿಕ ಅವುಗಳ ಅರ್ಹತೆ ಬಗ್ಗೆ ತಪಾಸಣೆ ನಡೆಸಿ ಗುಜರಿಗೆ ಹಾಕುವುದು. ವಾಹನ ಖರೀದಿಸಿದ ಎಂಟು ವರ್ಷದ ಬಳಿಕ ಹದಿನೈದು ವರ್ಷದವರೆಗೂ ವಾಣಿಜ್ಯ ವಾಹನಗಳಿಗೆ ರಸ್ತೆ ತೆರಿಗೆಯ ಶೇ. 10 ರಿಂದ 15 ಪರ್ಸೆಟ್ ಗ್ರೀನ್ ಟ್ಯಾಕ್ಸ್ ವಿಧಿಸಲಾಗುತ್ತದೆ ಮತ್ತು ಸ್ವಂತಕ್ಕೆ ಬಳಸುವ ವೈಟ್ ಬೋರ್ಡ್ ವಾಹನಗಳಿಗೆ ಹದಿನೈದು ವರ್ಷದ ಬಳಿಕ ಶೇ. 50 ರಷ್ಟು ಗ್ರೀನ್ ಟ್ಯಾಕ್ಸ್ ವಿಧಿಸುವ ಪ್ರಸ್ತಾವನೆ ಹೊಂದಿದೆ.
ಈ ಯೋಜನೆ ಜಾರಿಗೆ ತರಲಾಗಿದೆ
ಈ ಮೂಲಕ ಹಳೇ ವಾಹನಗಳನ್ನು ಮಾಲೀಕರು ಸ್ವಯಂ ಪ್ರೇರಿತವಾಗಿ ಗುಜರಿಗೆ ಹಾಕುವಂತಹ ವಾತಾವರಣ ನಿರ್ಮಿಸುವ ಉದ್ದೇಶದೊಂದಿಗೆ ಈ ಯೋಜನೆ ಜಾರಿಗೆ ತರಲಾಗಿದೆ. ಹೊಸದಾಗಿ ಖರೀದಿಸುವ ವಾಹನವು ನೋಂದಣಿಯಾದ ದಿನದಿಂದ ಹದಿನೈದು ವರ್ಷ ಮಾತ್ರ ಚಾಲನೆಗೆ ಅವಕಾಶ ನೀಡಲಾಗುತ್ತದೆ. ಆನಂತರ ಗುಜರಿಗೆ ಹಾಕಬೇಕು. ಸರ್ಕಾರಿ ವಾಹನಗಳು ಕೂಡ ಈ ಯೋಜನೆ ವ್ಯಾಪ್ತಿಗೆ ಒಳಪಡಲಿವೆ. ಈ ಯೋಜನೆ 2022 ಏಪ್ರಿಲ್ 1 ರಿಂದ ವಾಣಿಜ್ಯ ವಾಹನಗಳಿಗೆ ಅನ್ವಯವಾಗಲಿದೆ. 2023 ಏಪ್ರಿಲ್ನಿಂದ ವೈಟ್ ಬೋರ್ಡ್ ಸ್ವಂತ ವಾಹನಗಳಿಗೆ ಅನ್ವಯವಾಗಲಿದೆ.
2023 ರಿಂದ ಹಳೇ ವಾಹನಗಳಿಗೆ ಫಿಟ್ನೆಸ್ ಪರೀಕ್ಷೆ
ಖರೀದಿಸಿದ ಹದಿನೈದು ವರ್ಷದ ಬಳಿಕ ವಾಣಿಜ್ಯ ವಾಹನಗಳಿಗೆ ಫಿಟ್ನೆಸ್ ಪರೀಕ್ಷೆ ನಡೆಸಲಾಗುತ್ತದೆ. ಸ್ವಂತ ವಾಹನಗಳಿಗೆ 20 ವರ್ಷದ ಬಳಿಕ ಫಿಟ್ನೆಸ್ ಪರೀಕ್ಷೆ ನಡೆಸಲಾಗುತ್ತದೆ. ವಾಹನ ತಪಾಸಣೆಗೆಂದೇ ಪ್ರತಿ ನೂರು ಕಿ.ಮೀ. ದೂರದಲ್ಲಿ ಆಟೋಮೇಟೆಟ್ ಫಿಟ್ನೆಸ್ ಸೆಂಟರ್ ತೆರೆಯಲಾಗುತ್ತದೆ. ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ತೆರೆಯುವ ಈ ಫಿಟ್ನೆಸ್ ಸೆಂಟರ್ನಲ್ಲಿ ವಾಹನಗಳನ್ನು ಅಂತಾರಾಷ್ಟ್ರೀಯ ಮಾನದಂಡ ಇಟ್ಟುಕೊಂಡು ತಪಾಸಣೆ ಮಾಡಲಾಗುತ್ತೆ. ಈ ಫಿಟ್ನೆಸ್ ಸೆಂಟರ್ನಲ್ಲಿ ಬ್ರೇಕ್ ಸಿಸ್ಟಮ್, ಮಾಲಿನ್ಯದ ಪ್ರಮಾಣ, ವಾಹನ ಚಾಲನೆಯ ಸುರಕ್ಷತೆ ಮಾನದಂಡ ಇಟ್ಟುಕೊಂಡು ಪರೀಕ್ಷೆ ನಡೆಸಲಾಗುತ್ತದೆ. ಈಗಾಗಲೇ 26 ಸ್ವಯಂ ಚಾಲಿತ ಪರೀಕ್ಷಾ ಕೇಂದ್ರಗಳ ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ಏಳು ಕೇಂದ್ರಗಳು ಕಾರ್ಯ ನಿರ್ವಹಣೆಗೆ ಸಜ್ಜಾಗಿವೆ.
2022 ಏಪ್ರಿಲ್ 1 ರಿಂದ ಸರ್ಕಾರದ ವಾಹನಗಳ ತಪಾಸಣೆ
ಮೊದಲ ಹಂತದಲ್ಲಿ 75 ಕೇಂದ್ರ ಸ್ಥಾಪನೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ 450 ರಿಂದ 500 ಕೇಂದ್ರಗಳನ್ನು ದೇಶದಲ್ಲಿ ಸ್ಥಾಪನೆ ಮಾಡಲಾಗುತ್ತದೆ. 2022 ಏಪ್ರಿಲ್ 1 ರಿಂದ ಸರ್ಕಾರದ ವಾಹನಗಳ ತಪಾಸಣೆ ನಡೆಸಲಾಗುತ್ತದೆ. 2023 ಏಪ್ರಿಲ್ನಿಂದ ಗೂಡ್ಸ್ ವಾಹನಗಳ ತಪಾಸಣೆ ಅರಂಭವಾಗಲಿದೆ. ಸ್ವಂತ ವಾಹನಗಳ ತಪಾಸಣೆ 2024 ಜೂನ್ನಿಂದ ಪ್ರಾರಂಭವಾಗಲಿದೆ. ಹೀಗೆ ಹಂತ ಹಂತವಾಗಿ ದೇಶದ ಎಲ್ಲಾ ವಾಹನಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಕೇಂದ್ರ ಸಾರಿಗೆ ಮಂತ್ರಾಲಯದ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ 10 ಮಿಲಿಯನ್ ವಾಹನ (1 ಕೋಟಿ ) ತುರ್ತು ಗುಜರಿಗೆ ಸೇರಲಿವೆ. ವಾಣಿಜ್ಯ ವಾಹನಗಳ ಫಿಟ್ನೆಸ್ ಪರೀಕ್ಷೆ 2023 ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ.
ಗುಜರಿ ನೀತಿಯಿಂದ ಪರಿಸರ ಮಾಲಿನ್ಯ ನಿಯಂತ್ರಣ
ದೇಶದಲ್ಲಿ ಜಾರಿಗೆ ಬರುತ್ತಿರುವ ಗುಜರಿ ನೀತಿ ಬಹು ಚರ್ಚೆಗೆ ನಾಂದಿ ಹಾಡಿದೆ. ಹತ್ತರಿಂದ ಹನ್ನೆಡು ವರ್ಷ ಚಾಲನೆಗೊಂಡಿರುವ ವಾಹನಗಳಿಂದ ಆಗುತ್ತಿರುವ ಮಾಲಿನ್ಯದಿಂದ ಪರಿಸರ ಹಾಳಾಗುತ್ತಿದೆ. ರಸ್ತೆ ಸುರಕ್ಷತಾ ವಿಚಾರದಲ್ಲೂ ದೊಡ್ಡ ಸಮಸ್ಯೆ ಎದುರಾಗಿದೆ. ಭಾರತದಲ್ಲಿ 51 ಲಕ್ಷ ಲಘು ವಾಹನಗಳು (ಕಾರು, ಜೀಪು) 20 ವರ್ಷಕ್ಕೂ ಹೆಚ್ಚು ಅವಧಿ ಮೀರಿದವು. 34 ಲಕ್ಷ ವಾಹನಗಳಿಗೆ ಹದಿನೈದು ವರ್ಷ ಮುಗಿದಿದೆ. 17 ಲಕ್ಷ ಮಧ್ಯಮ ವರ್ಗದ ವಾಹನಗಳು ಹದಿನೈದು ವರ್ಷ ಅವಧಿ ಮುಗಿದರೂ ಯಾವ ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲದೇ ರಸ್ತೆಗಳಲ್ಲಿ ಓಡಾಡುತ್ತಿವೆ. ಇಂತಹ ಹಳೆ ವಾಹನಗಳಿಗೆ ಮುಕ್ತಿ ಕೊಡಿಸಿ ಪರಿಸರ ಮಾಲಿನ್ಯ ತಡೆಗಟ್ಟುವ ಜತೆಗೆ ರಸ್ತೆ ಸುರಕ್ಷತೆ ಕಾಪಾಡುವುದು ಈ ಯೋಜನೆಯ ಮೂಲ ಉದ್ದೇಶ. ಇದರಿಂದ ಆಟೋ ಮೊಬೈಲ್ ಕ್ಷೇತ್ರದ ಪ್ರಗತಿಕೊಂಡು ಉದ್ಯೋಗದಲ್ಲಿ ಕ್ರಾಂತಿಕಾರಿಯಾಗಲಿದೆ ಎಂದೇ ಅಂದಾಜಿಸಲಾಗಿದೆ.
35 ಲಕ್ಷ ಮಂದಿಗೆ ಉದ್ಯೋಗ
ಇದರ ಜತೆಗೆ ಗುಜರಿ ಉಪಕರಣಗಳ ಬೆಲೆ ತೀರಾ ಕಡಿಮೆಯಾಗಲಿದ್ದು, ಹೊಸ ವಾಹನಗಳ ಉತ್ಪಾದನೆ ವೆಚ್ಚ ಕೂಡ ಕಡಿಮೆಯಾಗಲಿದೆ. ಇದರಿಂದ ದೇಶದಲ್ಲಿ 3.70 ಕೋಟಿ ಮಂದಿಗೆ ಉದ್ಯೋಗ ಸಿಗಲಿದೆ ಎಂದು ಅಂದಾಜಿಸಲಾಗಿದೆ. ನೂತನ ಗುಜರಿ ನೀತಿಯಿಂದ 35 ಲಕ್ಷ ಮಂದಿಗೆ ಉದ್ಯೋಗ ಸಿಗಲಿದ್ದು, 10 ಸಾವಿರ ಕೋಟಿ ರೂ. ಬಂಡವಾಳ ಹರಿದು ಬರಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ 30 ಸಾವಿರದಿಂದ 40 ಸಾವಿರ ಕೋಟಿ ರೂ. ಹಣ ಜಿಎಸ್ ಟಿ ರೂಪದಲ್ಲಿ ಆದಾಯ ಹರಿದು ಬರಲಿದೆ. ಇನ್ನು ಈ ಫಿಟ್ನೆಸ್ ಕೇಂದ್ರ ತೆರೆಯುವರು ರಾಜ್ಯ ಸರ್ಕಾರದಿಂದ ಅನುಮತಿ ಪಡೆದು ಸರ್ಕಾರ ಸೂಚಿಸಿದ ಮೊತ್ತವನ್ನು ಇಎಂಡಿ ಇಟ್ಟು ಫಿಟ್ನೆಸ್ ಸೆಂಟರ್ ನಡೆಸಬೇಕಾಗುತ್ತದೆ.
ಮಾಲೀಕರ ಹೆಸರಿನಲ್ಲಿ ಚಲಾವಣೆಯಾದರೆ ಅಪಾಯ ಕಟ್ಟಿಟ್ಟ ಬುತ್ತಿ
ಗುಜರಿ ನೀತಿ ನಿಯಮಗಳು: ಹಳೇ ವಾಹನ ಗುಜರಿಗೆ ಹಾಕುವಾಗ ಹಳೇ ಚಾರ್ಸಿ ನಂಬರ್ನ್ನು ನಾಶ ಮಾಡಲಾಗುತ್ತದೆ. ವಾಹನ ಮಾಲೀಕರು ಸರ್ಕಾರ ಸೂಚಿತ ಗುಜರಿ ಕೇಂದ್ರದಲ್ಲಿ ವಾಹನ ಗುಜರಿಗೆ ಹಾಕಬೇಕು. ಪರಿಸರಕ್ಕೆ ಹಾನಿ ಮಾಡದಂತೆ ಹಳೇ ವಾಹನ ವಿಲೇವಾರಿ ಮಾಡಬೇಕು. ವಾಹನವನ್ನು ಗುಜರಿಗೆ ಹಾಕುತ್ತಿರುವ ಬಗ್ಗೆ ಸ್ಥಳೀಯ ಆರ್ಟಿಒ ಅಧಿಕಾರಿಗೆ ಮಾಹಿತಿ ನೀಡಬೇಕು. ಗುಜರಿಗೆ ಹಾಕುವ ವಾಹನದ ನೊಂದಣಿಯನ್ನು ರದ್ದು ಮಾಡಿಸಬೇಕು. ಗುಜರಿಗೆ ಹಾಕುವ ವಾಹನವನ್ನು ಗುಜರಿ ಮೊತ್ತವನ್ನು ಅದರ ತೂಕ ಇತರೆ ಮಾನದಂಡ ಆಧರಿಸಿ ನಿಗದಿ ಮಾಡಬೇಕು. ವಾಹನ ಮಾಲೀಕರು ವಾಹನಕ್ಕೆ ನಿಗದಿ ಮಾಡಿದ ಗುಜರಿ ಮೊತ್ತ ಕ್ಕೆ ಸಮ್ಮತಿಸಿದ ಬಳಿಕವೇ ವಾಹನವನ್ನು ನಾಶ ಮಾಡಬೇಕು. ಪ್ಲಾಸ್ಟಿಕ್, ರಬ್ಬರ್, ಕಬ್ಬಿಣ ಪ್ರತ್ಯೇಕ ಮಾಡಬೇಕು.
ಗುಜರಿ ವಾಹನ ಮಾಲೀಕರು ವಾಹನದ ಬ್ಯಾಟರಿ, ಟೈರ್, ಕಾರಿನ ಇತರೆ ಉಪಕರಣಕ್ಕೆ ನಿಗದಿ ಮಾಡುವ ಬೆಲೆಯ ಬಗ್ಗೆ ಮಾತುಕತೆ ಮಾಡಿ ಬೆಲೆ ನಿಗದಿ ಮಾಡಬಹುದು. ವಾಹನ ಮಾಲೀಕರು ಅಧಿಕೃತ ಗುಜರಿ ವಾಹನ ಡೀಲರ್ ಖಾತ್ರಿ ಪಡಿಸಿಕೊಳ್ಳಬೇಕು. ಅನಧಿಕೃತ ಗುಜರಿ ಡೀಲರ್ಗಳಿಗೆ ಮಾರಾಟ ಮಾಡಿದರೆ ಅದು ಅಪರಾಧಕ್ಕೆ ಕಾರಣವಾಗುತ್ತದೆ. ಆ ವಾಹನ ಹಳೇ ಮಾಲೀಕರ ಹೆಸರಿನಲ್ಲಿ ಚಲಾವಣೆಯಾದರೆ ಅಪಾಯ ಕಟ್ಟಿಟ್ಟ ಬುತ್ತಿ.