ತಾಳಿವಂತೆಯರು ತಾಳುತ್ತಲೇ ಇರಬೇಕೇ?
‘ಎಷ್ಟೇ ಆದ್ರೂ ತಾಳಿ ಕಟ್ಟಿದವನಲ್ಲವಾ... ಎಣ್ಣ್ಜೀವಕ್ಕಾಗೊ ಅಂಗೆ ಗಂಡ್ಜೀವಕ್ಕೆ ಒಂಟಿ ಮನೀಕೊಳಕ್ಕಾಯ್ತದಾ?’ ಅನ್ನುವ ಸವಿತಾ, ಗೌರಕ್ಕ, ಉಷಾರಂಥವರಿಗೆ ಏನ್ ಹೇಳೋದು?
- ಗಗನ ಸಖಿ
[email protected]
ಮನಸನ್ನು ಹಂಚಿಕೊಳ್ಳೋದ್ರಿಂದ ನಿರಾಳವಾಗ್ತೀನಿ ಅನ್ನೋ ಉದ್ದೇಶದಿಂದ ನಿಮ್ಮೊಡನೆ ಸಂಭಾಷಣೆ ಶುರು ಮಾಡಿದೆ. ಆದರೆ ಈಗ್ನೋಡಿ ಕಂಡ್ಕಂಡಿದ್ದನ್ನೆಲ್ಲಾ ನಿಮ್ಮ್ಹತ್ರ ಹೇಳಿಬಿಡಬೇಕು, ಮನಸ್ಸಿನ ಅಣು ಅಣುವನ್ನು ನಿಮ್ಮ್ಹತ್ರ ತೋಡ್ಕೊಳ್ಬೇಕು ಅನಿಸ್ತಿದೆ. ಅದಕ್ಕೆ ನಿಮಗಾಗಿ-ನಮ್ಮಿಬ್ಬರಿಗಾಗಿ ಒಂದ್ನಾಲ್ಕು ಸಾಲು ಕವನ ಗೀಚೋಣಾಂತ ಪೆನ್ನು ಪೇಪರ್ ತೊಗೊಂಡೆ. ಕಾಲಿಂಗ್ ಬೆಲ್ ಆಯ್ತು. ನಮ್ಮಿಬ್ಬರ ಮಧ್ಯೆ ಯಾರೇ ಬಂದರು ನನಗೆ ಇರಿಟೇಷನ್. . . .ಆದ್ರೆ ಏನ್ ಮಾಡ್ಲಿ? ಮನಸ್ಸೇ ಬೇರೆ ಬದುಕೇ ಬೇರೆ ಅನ್ನೋ ಪ್ರಪಂಚದ ಒಂದು ಭಾಗವಾಗಿದ್ದೀನಲ್ಲಾ!
ಗೆಳತಿ ಸವಿತ ಕೆಂಪಾಗಿ ಊದಿದ್ದ ಕಣ್ಣುಗಳೊಡನೆ ಒಳಗೆ ಬಂದಳು. ಆಕೆಯ ಗಂಡ ತುಂಬಾ ಸಾಫ್ಟ್ವೇರ್. . . ಇವಳ ಹಾರ್ಡ್ವೇರ್ಗಳಿಗೆ ಗಮನ-ಸಮಯ ಎರಡೂ ಇಲ್ಲದಷ್ಟು !! ಹುಟ್ಟಿದ ಹಬ್ಬ, ಆ್ಯನಿವೆರ್ಸರಿ ತಾರೀಖುಗಳನ್ನು ಮರೀತಾನೆ, ಮನೆ ಕೆಲಸದಲ್ಲಿ ಸಹಾಯ ಮಾಡೋಲ್ಲಾ, ಮಕ್ಕಳನ್ನ ಕಣ್ಣು ಮುಚ್ಚಿ ಪ್ರೀತಿ ಮಾಡೋದೆ ಪೆರ್ಫೆಕ್ಟ್ fatherism ಅಂತ ತಿಳ್ದ್ಕೊಂಡಿದ್ದಾನೆ ! ನೆಂಟರು, ಇಷ್ಟಾನಿಷ್ಟರಿಗೆಲ್ಲಾ ಇವಳೇ ಪಿ.ಆರ್.! ಶನಿವಾರದ ಪಾರ್ಟಿಗಳ ಕಮಟಲು ವಾಸನೆಯನ್ನು ಇವಳು ಬಲವಂತವಾಗಿ ಸಹಿಸಿಕೊಳ್ಳಲೇ ಬೇಕು.
ಇವಳ ಸಾಹಿತ್ಯ ಪ್ರೀತಿ ಅವನ ಇಂಟರ್ನೆಟ್ ಕೆಲಸ ಎರಡೂ ಯಾವತ್ತೂ ಸಮಾನಾಂತರ ರೇಖೆಗಳು. ಸಂಸಾರದ ಜವಾಬ್ದಾರಿ ಎಲ್ಲ ಅವಳದ್ದೇ. ಯಾವ ನಿರ್ಧಾರ ತೆಗೆದುಕೊಳ್ಳಲು ಗಂಡನ ಸಲಹೆ ಇಲ್ಲ, ಆದರೆ ‘ ಯೂ ಆರ್ ಕೇಪಬಲ್’ಅನ್ನುವ ಕಾಮೆಂಟ್ ಸಹಕಾರ ಮಾತ್ರ ಕೊಡ್ತಾನೆಯಿರ್ತಾನೆ ....!
ಪ್ರತೀ ಭೇಟಿಯಲ್ಲೂ ನಮ್ಮಿಬ್ಬರ ಮಾತು-ಕಥೆ ಇದೇ. ಹೊಸದಾಗಿ ಅರ್ಥ ಮಾಡಿಕೊಳ್ಳಲು ಏನೂ ಇರಲಿಲ್ಲ. ಆ ರಾತ್ರಿ ಸವಿತ ನನ್ನ ಮನೆಯಲ್ಲೇ ಇದ್ದಳು. ಬೆಳಗ್ಗೆ ಕೆಲಸದ ಗೌರಮ್ಮ ಚಕ್ಕರ್. ನನಗೆ ಮುಂಚೆಯೇ ಹೇಳದೆ ಅವಳು ಎಂದೂ ರಜ ಹಾಕಿಲ್ಲ. ಹಾಗಾಗಿ ಅವಳ ಈ ‘ಫ್ರೆಂಚ್ ಲೀವ್’ ಸ್ವಲ್ಪ ಮಟ್ಟಿಗೆ ನನ್ನ ಆತಂಕ ಹೆಚ್ಚಿಸಿತು.
ನಾನು ಗೌರಮ್ಮನ ಮನೆ ಹೊಕ್ಕಾಗ ಮೂಲೆಯಲ್ಲಿ ಚಾಪೆಯ ಮೇಲೆ ಮಲಗಿದ್ದವಳು ಎದ್ದು ಕುಳಿತಳು. ತಲೆಗೆ ಸಣ್ಣ ಬ್ಯಾಂಡೇಜ್. ಏನಾಗಿರಬಹುದೆಂದು ನನಗೂ ಗೊತ್ತು ನಿಮಗೂ ಗೊತ್ತು. ಆದರೆ ಮಾತನಾಡಲೇ ಬೇಕಲ್ಲ. ಪಾಪ ತಲೆಗೆ ಹಾಕಿದ್ದ ಹೊಲಿಗೆ ನೋವು ಅವಳ ಮುಖದಲ್ಲೇ ಕಾಣುತಿತ್ತು. ‘ಇಷ್ಟು ನೋವಿದ್ರೂ ರಾತ್ರಿ ಯಾಕೆ ಅವನ ಜೊತೆಗಿದ್ದೆ, ಬೇರೆ ಮಲ್ಲ್ಕೋಬಾರ್ದಿತ್ತಾ? ಇಲ್ಲ ನಮ್ಮನೆಗೇ ಬರಬಾರದಿತ್ತಾ?’ ಅಂದೆ ‘ಎಷ್ಟೇ ಆದ್ರೂ ತಾಳಿ ಕಟ್ಟಿದವನಲ್ಲವಾ ಅಕ್ಕ. . . ಎಣ್ಣ್ಜೀವಕ್ಕಾಗೊ ಅಂಗೆ ಗಂಡ್ಜೀವಕ್ಕೆ ಒಂಟಿ ಮನೀಕೊಳಕ್ಕಾಯ್ತದಾ?’ ಎನ್ನುತ್ತ ತನ್ನ ಕತ್ತಲ್ಲಿದ್ದ ಅರಿಷಿಣ ದಾರದ ನೇಣನ್ನು (ನನಗನಿಸಿದ್ದು!) ಕಣ್ಣಿಗೊತ್ತಿಕೊಂಡಾಗ, ಅತ್ತೆ-ಮಾವ ಊರಿನಿಂದ ಬರುತ್ತಾರೆ ಎಂದಾಗ ಮಾತ್ರ ಕಬ್ಬಿಣದ ಲಾಕರ್ನಿಂದ ಹೊರಗೆ ಬರುತ್ತಿದ್ದ ನನ್ನ ‘ಮಾಂಗಲ್ಯ ಭಾಗ್ಯ’ ನೆನಪಿಗೆ ಬಂತು ! ಗಂಡ ಮಧ್ಯಾಹ್ನ ಊಟಕ್ಕೆ ಬರುತ್ತಾನೆ ಬೇಳೆ ಸಾರು ಮಾಡ ಬೇಕೆಂದು ಅವಳೆದ್ದಳು. . . ನಾನು ಮನಸ್ಸಿನಲ್ಲೇ ನಮ್ಮ ಮನೆಯ ಸಾಂಬಾರಿಗೆ ತರಕಾರಿ ಕತ್ತರಿಸುತ್ತಾ ಹೊರಬಂದೆ!
ಉಷಾಳ ಬಗ್ಗೆ ನಿಮಗೆ ಹೇಳ್ಲೇ ಬೇಕು. ಹೈಸ್ಕೂಲ್ ಓದಿದ್ದ ಅವಳು ಅಕ್ಯೂಟ್ ಆಸ್ತಮಾ ರೋಗಿ. ಖಾಯಿಲೆ ಅವಳನ್ನು ವಿರೂಪಗೊಳಿಸಿತ್ತು. ಆದರೂ ಅವಳನ್ನು ನೋಡುವುದೇ ಏನೋ ವಿಶೇಷ. ವಾರಕ್ಕೆ ಆರು ದಿನವೂ ಒಂದೊಂದು ಬಣ್ಣದ ಸೀರೆ ಉಟ್ಕೊಂಡು ಅದೇ ಬಣ್ಣದ ಹೂವು ಮುಡಿದುಕೊಂಡು ಆಫೀಸಿಗೆ ಬರುತ್ತಿದ್ದಳು. ಒಂದಿವ್ಸ, ಅವಳು ಕಲರ್ ಕಲರ್ ಹೂವು ಸೀರೆಯ ಜಾಗದಲ್ಲಿ ಬಾಸುಂಡೆಗಳನ್ನು ಹೊದ್ದು ಬಂದಾಗ, ನನ್ನ ಬಾಯಿ ಬಂದ್ ಆಗಿರಲು ಸಾಧ್ಯಾನ ಹೇಳಿ? ಕಾರಣ ಕೇಳಿದೆ, ಅದೇ ಮಾಮೂಲು ಉತ್ತರ. . . . ಆ ಗಂಡ ಯಾಕ್ಬೇಕು ಬಿಟ್ಟು ಬರ್ಬಾರ್ದ ಅಂದ್ರೆ ‘ಏನೋ ನನ್ನ ಮೇಲೆ ಹಕ್ಕು ಇರೋದಕ್ಕೆ ಅಲ್ಲ್ವಾ ನಾಲ್ಕೇಟು ಹೊಡೀತಾನೆ. ಈ ಆಸ್ತಮಾದವಳನ್ನ ಕಟ್ಟಿಕೊಂಡು ಬಾಳುಕೊಟ್ಟಿದ್ದಾನಲ್ಲ ಅದಕ್ಕಿಂತ ಇನ್ನೇನ್ ಬೇಕು ಮ್ಯಾಡಂ. . . ’ ಎಂದಳು. ಅವಳ ಮಾತಿನಲ್ಲಾಗಲೀ ಮುಖದಲ್ಲಾಗಲೀ ಎಲ್ಲೂ ನೋವು ವಿಷಾದ ಕಾಣಲಿಲ್ಲ ನನಗೆ. ಬದಲಿಗೆ ಧನ್ಯಳಾದಂತೆ ಉಸಿರು ಬಿಟ್ಟಳು.
ನಮ್ಮ ಹೆಂಗಸರ ಮಾತು ಎಲ್ಲೆಲ್ಲೋ ಹೋಗುತ್ತೆ ನಿಜ ಆದರೆ ಆಲೋಚನೆಗಳನ್ನು ಕನೆಕ್ಟ್ ಮಾಡೋದ್ರಲ್ಲಿ ಮಾತ್ರ ನಮ್ಮದು ಎತ್ತಿದ ಕೈ ಅನ್ನಿಸೋದಿಲ್ಲ್ವಾ ನಿಮಗೆ? ಗೌರಮ್ಮ, ಉಷ ಇಬ್ಬರಲ್ಲೂ ಬಡತನ, ಖಾಯಿಲೆ, ಮೃಗೀಯ ಗಂಡಂದಿರು ಹೀಗೆ ಎಷ್ಟೊಂದು ಸಿಮಿಲ್ಯಾರಿಟೀಸ್ ಜೊತೆಗೆ ಅವರಿಬ್ಬರ ‘ಪತಿಯೇ ಪರ(ರ) ದೈವ’ ದ ಮೇಲೆ ಇದ್ದ ನಂಬಿಕೆ. ಅವರ ಧನ್ಯತಾ ಭಾವ, ಸಂತೋಷ, ನೆಮ್ಮದಿ. . . .ಓಹ್, ನನಗಂತೂ ರೆಡಿಕ್ಯುಲಸ್ ಅನ್ನಿಸಿತು. ಆದ್ರೆ ಯಾಕೋ MSc., PHD in Statistics ಮಾಡಿ ಸದಾಶಿವ ನಗರದಲ್ಲಿ ಸ್ವಂತ ಮನೆಯಿದ್ದ ಸವಿತಳ ಕನವರಿಕೆ, ದುಖಃವನ್ನು ನಾನು ಪೂರ್ತಿ ಒಪ್ಪಿಕೊಂಡಿದ್ದೀನಿ ಅಂತಾನೂ ಅನ್ನಿಸುತ್ತಿಲ್ಲ!
ನಮ್ಮನ್ನು ಯಾರೂ ಅರ್ಥ ಮಾಡಿಕೊಳ್ಳೋಲ್ಲ. . . ನಮ್ಮ ಭಾವನೆಗಳಿಗೆ ಪತಿ ಪ್ರತಿಸ್ಪಂದಿಸುವುದಿಲ್ಲ ಅಂತ ಕೊರಗ್ತಾನೆ ಇರ್ತೀವಿ ಆದ್ರೆ ಸಂತೋಷವಾಗಿದ್ದೀವಿ ಅಂತ ತಿಳ್ಕೊಂಡಿರುವ ಹೆಂಗಸರನ್ನು ನೋಡಿದರೆ ‘ಹೌ ಇಗ್ನೋರೆಂಟ್!’ ಅಂತ ಉದ್ಗಾರ ಎಳಿತೀವಿ. . . ‘ಇದ್ದುದ್ದೆಲ್ಲವ ಬಿಟ್ಟು ಇರದಿರುವುದೆಡೆಗೆ ತುಡಿವುದೇ ಜೀವನ’ ಅನ್ನುವುದನ್ನು ಹೆಜ್ಜೆ ಹೆಜ್ಜೆಗೂ substantiate ಮಾಡ್ತೀವಿ. ಅದಕ್ಕೆ ನನಗೆ ಪದೇ ಪದೇ ಅನ್ನಿಸುತ್ತೆ ನಾವು ಹೆಂಗಸರೇ ಹೀಗೆ!
ಇನ್ನೊಂದು ವಿಷಯ, ಮೇಲುಕೋಟೆಯಲ್ಲಿ ನನ್ನ ಗೆಳತಿ ಅಲಮೇಲು ಇದ್ದಾಳೆ. ಅವಳ ಗಂಡನ ಹೆಸರು ರಾಘವ. ಈಗ ನೀವ್ಹೇಳಿ ಅವಳ ಮಗನ ಹೆಸರೇನು ಅಂತ?! ಮಿತಿ ಮೀರಿದ ಮಾತುಗಳಲ್ಲೂ ಮನಸ್ಸು ಮನಸ್ಸುಗಳನ್ನು ವಿಚಿತ್ರವಾಗಿ ಕನೆಕ್ಟ್ ಮಾಡುವುದು ನಮ್ಮ ಹೆಗ್ಗಳಿಕೆಯಲ್ಲವಾ? ಸೊ, ನನಗೆ ಮೇಲ್ ಮಾಡಿ.












Click it and Unblock the Notifications