ಯಾರೂ ರೋಲ್ ಮಾಡೆಲ್ಲುಗೊಳೇ ಇಲ್ಲ ಅನ್ನೂದು ಸುಳ್ಳು
ಈ ಸಲಾ ನಾನು ಸಿಂಗಾಪುರದಿಂದ ಬರ್ಲಿಕ್ಹತ್ತಾಗ ವಿಮಾನದೊಳಗ ಬೆಂಗಳೂರಿನ್ಯಾಗ ಐಟಿ ಕಂಪನಿಯೊಳಗ ಕೆಲಸದಾಗಿದ್ದ ಒಬ್ರು ಸಿಕ್ಕಿದ್ರು. ಕನ್ನಡದವರು ಅಂದ ಮ್ಯಾಲ ಮಾತುಕತಿ ಶುರು ಆಗಲೇ ಬೇಕಲಾ? ಹಂಗ ಆತು. ಮಾತು ಅವರ ಕೆಲಸಾ, ನನ್ನ ಕೆಲಸಾ, ಅವರ ಫ್ಯಾಮಿಲಿ ನನ್ನ ಫ್ಯಾಮಿಲಿ ಎಲ್ಲಾದರ ಮ್ಯಾಲೂ ಹೋಗಿ ಕೊನೀಗ ನಮ್ಮ ಫೆವೊರಿಟ್ ವಿಷಯಾ ಬಂದೇ ಬಿಡ್ತು ನೋಡ್ರಿ.
ಅದ ರೀ ನಮ್ಮ ದೇಶದ ಹೋಲಿಕಿ ನಾವು ಹೋಗಿ ಬಂದಿದ್ದ ಬ್ಯಾರೇ ದೇಶಗಳ ಜೊತಿ ಮಾಡೂದು. ಆದ ಹ್ಯಾಂಗ ಬ್ಯಾರೇ ದೇಶಗೋಳು ನಮಕಿಂತಾ ಆಮ್ಯಾಲ ಸ್ವಾತಂತ್ರ ಪಡದ್ರೂ ನಮಕಿಂತ ಮ್ಯಾಲ ಹೋಗ್ಯಾವ ಅನ್ನೂ ವಿಷಯಾ. ಈ ವಿಷಯಕ್ಕೆ ಯಾವುದೂ ಲಿಮಿಟ್ಟೂ ಗಿಮಿಟ್ಟೂ ಏನೂ ಇಲ್ಲ ನೋಡ್ರಿ. ಹಿಂಗಾಗಿ ನಮ್ಮ ಚರ್ಚಾ ಒಂದು ಗಂಟೀ ಮ್ಯಾಲ ನಡೀತು. ನಮ್ಮ ಸುತ್ತಲಿನ ಎಲ್ಲ ಪ್ರಯಾಣಿಕರು ಬ್ಯಾಸತ್ತು ಕಿವಿ ಒಳಗ ಈಯರ್ ಫೋನ್ ಹಾಕ್ಕೊಂಡು ಸಿನಿಮಾ ನೋಡ್ಲಿಕ್ಕೆ ಶುರು ಮಾಡಿದ್ರೂ ಅಂತ ಕಾಣಸ್ತದ.
ಶಾಲಾ ದಿನಗಳ ನೆನಪಿನ ಜಾಡಿನಲ್ಲಿ ಸಂಕೇಶ್ವರದತ್ತ ಪಯಣ
ಹಿಂಗ ನಮ್ಮ ಚರ್ಚಾ ನಡಕೋತ ನಡಕೋತ ಅವರು ಒಂದು ಮಾತು ಹೇಳೀದ್ರು ನೋಡ್ರಿ. "ನಿಮ್ಮ ಸಿಂಗಾಪುರದಾಗ ಲೀ ಕುಆನ್ ಯೂ, ಮಲಯೇಶಿಯಾದಾಗ ಮಹಾತಿರ್ ಮೊಹಮ್ಮದ್ ಅಂತಾ ದೇಶಭಕ್ತ ರೋಲ್ ಮಾಡೆಲ್ ಇದ್ದಾರ ನೋಡ್ರಿ. ನಮ್ಮ ಭಾರತದೊಳಗ ಆ ಕಡೆ ನೋಡಿದ್ರ ಕೆಲಸಕ್ಕ ಬಾರದ ಸಿನೇಮಾ ನಟರು, ಈ ಕಡೆ ನೋಡಿದ್ರ ಮಂತ್ರಕ್ಕಿಂತ ಉಗುಳೇ ಹೆಚ್ಚು ಅನ್ನೂ ಹಾಂಗಿರೋ ಕ್ರಿಕೆಟ್ಟಿನವರು, ಇಬ್ಬರೂ ಇಲ್ಲದಿದ್ರ ತಮ್ಮೊಳಗ ಬಡಿದಾಡಿ ಸಾಯೂ ರಾಜಕಾರಣದವ್ರು. ಇವರೊಳಗ ಪ್ರೇರಣಾ ಆಗಿ ನಿಲ್ಲೂ ಅಂಥಾ ಯಾರೂ ರೋಲ್ ಮಾಡೆಲ್ಗೋಳು ಇಲ್ಲ ನೋಡ್ರಿ" ಅಂದರು.
ಆ ಕ್ಷಣಕ್ಕ ನನಗೂ ಖರೇ ಅನ್ನಿಸ್ತು ನೋಡ್ರಿ. ನಮ್ಮ ದೇಶದಾಗ ಯುವ ಶಕ್ತಿಗೆ ಪ್ರೇರಣಾ ಅಗಿ ನಿಲ್ಲೂ ಅಂತಾ ಮತ್ತ ಯಾವುದ ವಿವಾದಗೊಳು ಇರದಂತಾ ರೋಲ್ ಮಾಡೆಲ್ಗೋಳು ಭಾಳ ಕಮ್ಮಿ ಅನ್ನಿಸ್ತು. ಎಪಿಜೆ ಅಬ್ದುಲ್ ಕಲಾಂ ಮತ್ತ ಅಟಲ್ ಬಿಹಾರಿ ವಾಜಪೇಯಿ (ಇಂದು ಅವರ ಹುಟ್ಟುಹಬ್ಬ) ಅವ್ರನ್ನ ಬಿಟ್ಟರ ಇನ್ನ್ಯಾರಿದ್ದಾರರೀ ಅನ್ನಿಸ್ತು. ಇಂಥಾ ದೊಡ್ಡ ದೇಶದಾಗ ಇವರಿಬ್ಬರೇ ರೋಲ್ ಮಾಡೆಲ್ ಗೊಳು? ಅನ್ನಿಸ್ತು.
ಬದುಕಿನ ದಿಕ್ಕನ್ನೇ ಬದಲಿಸಿದ ಹಿರಣ್ಯಕೇಶಿ ದಂಡೆ ಮೇಲಿನ ಸಂಕೇಶ್ವರ
ಲಾಸ್ಟ್ ಕೆಲವು ದಿನದಾಗ ಇದ ವಿಷಯಾ ಮೆಲುಕು ಹಾಕ್ತಿದ್ದೆ ನೋಡ್ರಿ. ಹಂಗ ನೋಡಿದ್ರ ನಮ್ಮ ಗಾಂಧಿ, ಟ್ಯಾಗೋರ್, ಸರ್ದಾರ್ ಪಟೇಲ್, ಸುಭಾಷಚಂದ್ರ ಬೋಸ್ ಎಲ್ಲಾ ಇದ್ದಾರ. ಆದರ ಅವರು ಎರಡು ತಲೆಮಾರು ಹಿಂದಿನವ್ರು. ಈಗ ಯಾರಿದ್ದಾರ ಅಂತ ವಿಚಾರ ಮಾಡಿದೆ. ವಿಚಾರ ಮಾಡಿದಂಗ ಒಂದೊಂದಾಗೇ ಭಾಳ ಹೆಸರುಗಳು ನೆನಪಿಗೆ ಬರ್ಲಿಕ್ಕೆ ಶುರು ಆಯ್ತು ನೋಡ್ರಿ. ನಮ್ಮ ನಡಬರಕ ಇದ್ದಕೊಂಡು ಎಂಥೆಂಥಾ ಕೆಲಸಾ ಮಾಡಿದ ಜನ ಇದ್ದಾರ ನೋಡ್ರಿ. ಎರಡು ವರ್ಷದ ಹಿಂದ ನೋಬೆಲ್ ಶಾಂತಿ ಬಹುಮಾನ ತೊಗೊಂಡಂಥಾ ಕೈಲಾಸ್ ಸತ್ಯಾರ್ಥಿ, ಹಿಂದಿನ ಹದಿನೈದು ವರ್ಷದಾಗ ಎಂಭತ್ತೇಳು ಸಾವಿರ ಸಣ್ಣ ಹುಡುಗೂರನ್ನ ಜೀತದಿಂದ ಮುಕ್ತ ಮಾಡ್ಯಾರ ಅಂದ್ರ ಎಂಥಾ ಮಹತ್ವದ ಕೆಲಸ ನೋಡ್ರಿ. ಅದರ ಹಾಂಗ ನಾಗಪುರದ ಹತ್ತಿರ ಆದಿವಾಸಿಗಳ ಆರೋಗ್ಯ ಮತ್ತ ಶಿಕ್ಷಣದ ಸಲುವಾಗಿ ತಮ್ಮ ಜೀವನಾನ ಮುಡಿಪು ಇಟ್ಟಂತ ಡಾ. ಪ್ರಕಾಶ ಆಮ್ಟೆ ಮತ್ತು ಅವರ ಶ್ರೀಮತಿ ಮಂದಾಕಿನಿ ಆಮ್ಟೆ, ಇನ್ಫೋಸಿಸ್ ಪ್ರತಿಷ್ಠಾನದ ಶ್ರೀಮತಿ ಸುಧಾ ಮೂರ್ತಿ, ಗುಲಬರ್ಗಾದ ಗಾಂಧಿ ಅನ್ನಿಸಿಕೊಂಡಂತಾ ದಿವಂಗತ ಶ್ರೀ ವೆಂಕಟೇಶ ಗುರುನಾಯಿಕ್ ಅವರಂತಹ ಅದೆಷ್ಟು ಮಂದಿ ನೆನಪಾಗತಾರ ಅಲ್ಲ? ಇವರೆಲ್ಲ ಏನೂ ಸದ್ದೇ ಇಲ್ಲದಾಂಗ ಎಷ್ಟೊಂದ ಸಮಾಜ ಸೇವಾ ಮಾಡ್ಯಾರ, ಸಮಾಜದಾಗ ಎಂಥಾ ದೊಡ್ಡ ದೊಡ್ಡ ಬದಲಾವಣಾ ತಂದಾರ ಅನ್ನೂದನ್ನು ನೆನೆಸಿದರ ಎಷ್ಟ ಛಲೋ ಅನ್ನಿಸ್ತದ ಅಲ್ಲ?
ಬರೀ ಸಮಾಜ ಸೇವಾನೇ ಅಲ್ಲರೀ. ಎಷ್ಟೋ ಜನ ವಿಜ್ಞಾನಿಗೊಳು ಸುದ್ದಾ ಇದ್ದಾರ ನೋಡ್ರಿ. ಅದೇ ನಮ್ಮ ಇಸ್ರೋದಾಗ ಚಂದ್ರನ ಮ್ಯಾಲ ಮತ್ತು ಮಂಗಳ ಗ್ರಹದ ಮ್ಯಾಲ ಉಪಗ್ರಹಗೊಳನ್ನ ಕಳಿಸಿಲಿಕ್ಕೆ ಅದೆಷ್ಟು ವಿಜ್ಞಾನಿಗೊಳು ಹಗಲ ರಾತ್ರಿ ಕೆಲಸಾ ಮಾಡಿರಬೇಕಲಾ? ನಮಗ ಅವರ ಎಲ್ಲಾರ ಹೆಸರು ಗೊತ್ತಿರಲಿಕ್ಕಿಲ್ಲ. ಆದರ ಅವರೆಲ್ಲಾ ಮಾಡಿದ ಕೆಲಸ ನಮಗೆಲ್ಲಾ ದೊಡ್ದ ಪ್ರೇರಣಾ ಕೊಡ್ತದ ಅಲ್ಲಾ? ಹಂಗೇನ ನಮ್ಮ ಖಗೋಳ ವಿಜ್ಞಾನಿಗೊಳು ಇತ್ತೀಚಿನ್ಯಾಗ ಆಕಾಶ ಎಲ್ಲಾ ಕಣ್ಣಾಗ ಕಣ್ಣಿಟ್ಟು ನೋಡಿ ಒಂದು ಭಾಳ ದೊಡ್ಡ ಸುಪರ್ ಕ್ಲಸ್ಟರ್ ಒಂದನ್ನ ಪತ್ತೇ ಮಾಡ್ಯಾರ, ಈ ಸುಪರ್ ಕ್ಲಸ್ಟರ್ ಒಳಗ ಇಪ್ಪತ್ತ ಮಿಲಿಯನ್ ಬಿಲಿಯನ್ ಸೂರ್ಯನಂತಹ ನಕ್ಷತ್ರಗೊಳು ಅವ ಅಂತ. ಅದಕ್ಕ "ಸರಸ್ವತಿ" ಸುಪರ್ ಕ್ಲಸ್ಟರ್ ಅಂತ ಹೆಸರು ಇಟ್ಟಾರ ಅಂತ ನೋಡ್ರಿ. ಅಲ್ಲದ ಒಂದ ಸಲಾ ನೂರಾ ನಾಲ್ಕು ಉಪಗ್ರಹಗೊಳನ್ನ ಒಂದೇ ರಾಕೆಟ್ಟು ಉಪಯೋಗಿಸಿ ಹಾರಿ ಬಿಟ್ಟರಂತ. ಇಂಥಾ ದೊಡ್ಡ ದೊಡ್ಡ ಕೆಲಸಾ ಮಾಡಿದ ನಮ್ಮ ವಿಜ್ಞಾನಿಗೊಳು ಯಾವದೇ ಹೀರೋಗಳಿಗೆ ಏನೂ ಕಡಿಮಿ ಅಲ್ಲ ಹೌದಲಾ? ನಮ್ಮ ಹೋಮಿ ಭಾಭಾ, ವಿಕ್ರಮ್ ಸಾರಾಭಾಯಿ, ಜಾರ್ಜ್ ಸುದರ್ಶನ್, ಜಯಂತ ನಾರಳೀಕರ್, ಸಿ ಎನ್ ಆರ್ ರಾವ್, ಯೂ ಆರ್ ರಾವ್, ರಾಜಾರಾಮಣ್ಣಾ ಅವರಂತಹ ದೊಡ್ಡ ದೊಡ್ಡ ವಿಜ್ಞಾನಿಗೊಳು ಯಾವದೂ ಛಲೋ ವ್ಯವಸ್ಥಾ ಇಲ್ಲ ಅಂತ ಸೋಲು ಒಪ್ಪಿಕೊಳ್ಳದ ನಿರಂತರ ಕೆಲಸಾ ಮಾಡಿ ವ್ಯವಸ್ಥಾ ಕಟ್ಟಿ ತಮ್ಮ ಮುಂದ ಬರೂ ವಿಜ್ಞಾನಿಗೊಳಿಗೆಲ್ಲಾ ಛಲೋ ಹಾದಿ ಹಾಕಿ ಕೊಟ್ರಲಾ, ಅವರು ಯಾರಿಗೇನು ಕಡಿಮಿರಿ? ಅವರೆಲ್ಲಾ ನಮಗ ದೊಡ್ಡ ಹೀರೋಗಳೇ.
ಕನಸಾಗಿಯೇ ಉಳಿದ ವೈಜ್ಞಾನಿಕ ಸಂಶೋಧಕನಾಗಬೇಕೆಂಬ ಕನಸು!
ಹಂಗ ನೋಡಿದ್ರ ನಮ್ಮ ಉದ್ಯಮದ ಮಂದೀನ ನೋಡ್ರಿ. ಎಂತೆಂತಾ ಛಲೋ ಕೆಲಸಾ ಮಾಡ್ಯಾರ. ಜೆ ಆರ್ ಡಿ ಟಾಟಾ, ರತನ್ ಟಾಟಾ, ಧೀರೂಭಾಯಿ ಅಂಬಾನಿ, ಅಜೀಮ್ ಪ್ರೇಮಜಿ, ನಾರಾಯಣಮೂರ್ತಿ, ಆನಂದ ಮಹೀಂದ್ರಾ , ಆದಿತ್ಯ ಬಿರ್ಲಾ ಅವರಂತಾ ಶ್ರೇಷ್ಠ ಜನರೆಲ್ಲಾ ನಮ್ಮಲ್ಲೇ ಹುಟ್ಟಿ ಅದೆಷ್ಟು ಲಕ್ಷ ಜನರಿಗಿ ಜೀವನೋಪಾಯಕ್ಕ ಹಾದಿ ಮಾಡ್ಯಾರಲಾ, ಇವರೆಲ್ಲಾ ದೊಡ್ಡ ಪ್ರೇರಣಾ ನಮ್ಮ ಯುವಪೀಳಿಗಿ ಜನರಿಗೆ ಅಲ್ಲೇನ್ರೀ?
ಇವರನ್ನೆಲ್ಲಾ ನೆನಪು ಮಾಡಿಕೊಂಡ ಮ್ಯಾಲ ನಮ್ಮಲ್ಲಿ ಯಾರೂ ರೋಲ್ ಮಾಡೆಲ್ಲುಗೊಳೇ ಇಲ್ಲ ಅನ್ನೂದು ಸುಳ್ಳು ಅನ್ನಿಸಲಿಕ್ಕೆ ಶುರು ಆಯ್ತು ನೋಡ್ರಿ. ಅಲ್ಲದ ಈ ಪ್ರಸಿದ್ಧ ಜನರನ್ನು ಬಿಟ್ಟರೂ ಅದೆಷ್ಟು ಜನ ಯಾವುದೇ ಪ್ರಸಿದ್ಧಿ ಪಡೀಲಾರದನ ಎಷ್ಟ ಒಳ್ಳೇ ಕೆಲಸಾ ಮಾಡತಿರ್ತಾರ ಅಂತ ನಾವೆಲ್ಲಾ ಎಷ್ಟೋ ಸಲ ಟಿವಿ ಒಳಗ ಮತ್ತ ಪೇಪರಿನ್ಯಾಗ ಓದತಿರ್ತೀವಿ ಅಲ್ಲ? ಅದ್ಯಾರೋ ತಮಿಳುನಾಡಿನೊಳಗ ಮಾನಸಿಕ ಅಸ್ವಸ್ಥರಿಗಿ ತಾನೇ ಅಡಗಿ ಮಾಡಿ ಒಯ್ದು ಉಣ್ಣಿಸಿ ಬರ್ತಾರಂತ, ಮತ್ತ್ಯಾರೋ ಹೋಟೇಲ್ಲುಗೊಳ ಒಳಗ ಮಾಡಿ ಉಳದ ಹೆಚ್ಚಿನ ಆಹಾರ ಒಯ್ದು ಬಡವರಿಗೆ, ಅನಾಥರಿಗೆ ಕೊಡ್ತಾರಂತ, ಮತ್ಯಾರೋ ಮುಂಬಯಿ ಟಾಟಾ ಕ್ಯಾನ್ಸರ್ ಹಾಸ್ಪಿಟಲ್ ಗೆ ಬರೂ ಅಂತ ಬಡಜನರಿಗೆ ಇರಲಿಕ್ಕ ಫ್ರೀ ಛತ್ರ ಕಟ್ಟಿಸ್ಯಾರಂತ. ಇಂಥವರಿಗಿಂತ ಬ್ಯಾರೇ ರೋಲ್ ಮಾಡೆಲ್ಲುಗೊಳು ಯಾಕ ಬೇಕ್ರಿ?
ಕನ್ನಡ ನೆಲವೆಂಬ ಸಂಗೀತ ದಿಗ್ಗಜಗಳ ಉಗಮ ಸ್ಥಾನಕ್ಕೆ ಸಾಷ್ಟಾಂಗ ನಮಸ್ಕಾರ
ಎಲ್ಲಾ ರೋಲ್ ಮಾಡೆಲ್ಲುಗೋಳು ಭಾಳ ಪ್ರಸಿದ್ಧರೇ ಆಗಬೇಕು ಅಂತ ಯಾಕ ಅನಕೋಬೇಕು? ಛಲೋ ಕೆಲಸಾ ಮಾಡತಿರೋ ಅಂಥಾ ಎಲ್ಲಾ ಜನ ರೋಲ್ ಮಾಡೆಲ್ಲುಗೋಳನ. ಇಂಥವರ ಕೆಲಸಕ್ಕ ನಾವೆಲ್ಲಾ ದಾದ ಕೊಟ್ಟು ಅವರಿಗಿ ನಮ್ಮಿಂದಾದಷ್ಟ ಸಹಾಯ ಮಾಡಿ ಅವರು ಮತ್ತು ಅವರ ಕೆಲಸಾ ಪ್ರಸಿದ್ಧ ಆಗೂ ಹಂಗ ನೋಡಿಕೋಬೇಕು. ಸಾಧ್ಯ ಆದರ ಅವರಂತಾ ಕೆಲಸಾ ಮಾಡಲಿಕ್ಕೆ ಪ್ರಯತ್ನ ಮಾಡಬೇಕು.
ಅಷ್ಟ ಅಲ್ಲದ ನಾವು ನಮ್ಮ ಸುತ್ತಮುತ್ತಲ ನೋಡಿಕೊಂಡ್ರ ನಮ್ಮದೇ ಆಸುಪಾಸಿನ್ಯಾಗ ಭಲೇ ಅನ್ನೂ ಹಂಗ ಕೆಲಸ ಮಾಡ್ತಿರೋ ಶ್ರೀಸಾಮಾನ್ಯರು ಕಾಣಸ್ತಾರ. ಯಾರೋ ಮನೀ ಒಳಗ ಹಾಸಿಗಿ ಹತ್ತಿಕೊಂಡ ಅತ್ತೀ ಮಾವಂದಿರನ್ನ ತಮ್ಮ ಕೂಸುಗಳೇ ಅನ್ನೂ ಥರಾ ಜೋಪಾನ ಮಾಡತಿರ್ತಾರ. ಮತ್ತ ಯಾರೋ ಮನೀ ಒಳಗ ಮರೆವಿನ ರೋಗದಿಂದ ಬಳಲ್ತಿರೋ ತಂದೆ ತಾಯಿಗೊಳು ಮತ್ತ ಅತ್ತೀ ಮಾವಂದಿರನ್ನ ಭಾಳ ಜ್ವಾಕಿಯಿಂದ ನೋಡಿಕೋತಿರ್ತಾರ. ಇನ್ನ ಯಾರೋ ತಮ್ಮ ಟೈಮೆಲ್ಲಾ ಯಾರೋ ಬಡ ರೋಗಿಗಳಿಗೆ ಕಡಿಮಿ ರೊಕ್ಕದಾಗ ಛಲೋ ಸುಶ್ರೂಷಾ ಕೊಡಿಸಲಿಕ್ಕೆ ಪ್ರಯತ್ನ ಮಾಡತಿರ್ತಾರ, ಮತ್ತ ಯಾರೋ ಬಡ ಮಕ್ಕಳಿಗೆ ಓದಲಿಕ್ಕೆ ಸಹಾಯ ಮಾಡತಿರ್ತಾರ.
ಇಂಥಾ ಜನ ಯಾವುದೆ ಪ್ರಸಿದ್ಧಿ ಮತ್ತು ಹಣಾ ಬಯಸದ ತಮ್ಮ ಕರ್ತವ್ಯ ಅಂತ ಅನಕೊಂಡು ಭಾಳ ಅಂತಃಕರುಣದಿಂದ ಈ ಕೆಲಸಾ ಮಾಡತಿರ್ತಾರ. ಇವರು ಯಾವ ರೋಲ್ ಮಾಡೆಲ್ಲುಗಳಿಗಿಂತಾ ಏನೂ ಕಮ್ಮಿ ಇಲ್ಲ. ಇವರನ್ನ ನೋಡೂ ಅಂತಾ ನಮ್ಮ ದೃಷ್ಟಿ ಬದಲಾಗಬೇಕು ಅಷ್ಟ. ಮತ್ತ ಅವರ ಕೆಲಸಾ ಪ್ರಶಂಸಾ ಮಾಡಿ ಅವರನ್ನ ಎತ್ತಿ ಹಿಡೀಬೇಕು ಅಲ್ಲದೇ ಅವರ ಹಾಂಗೇ ಏನಾದ್ರೂ ಛಲೋ ಕೆಲಸಾ ಮಾಡೂ ಹಂಗ ನಮಗ ಪ್ರೇರಣಾ ಆಗಬೇಕು ನೋಡ್ರಿ. ಬ್ಯಾರೇ ಯಾರೂ ದೊಡ್ಡ ರೋಲ್ ಮಾಡೆಲ್ಲುಗಳಿಗೆ ನಾವು ಕಾಯೂದ ಬ್ಯಾಡ. ನೀವೇನಂತೀರ್ರಿ?