ಅಯ್ಯೋ ದೇವ್ರೆ, ಏನ್ ನಡೀತಿದೆ ನಮ್ಮ ಭಾರತದಲ್ಲಿ?
ಭಾರತದಲ್ಲಿದ್ದುಕೊಂಡು ಭಾರತದ ರಾಜಕೀಯ ಬೆಳವಣಿಗೆಗಳನ್ನು ವೀಕ್ಷಿಸುವುದು ಮತ್ತು ಅವುಗಳ ಬಗ್ಗೆ ಬರೆಯುವುದರಲ್ಲಿ ಒಂದು ಮಜವಿದೆ. ರಾಜಕಾರಣಿಗಳ ತಿಪ್ಪರಲಾಗ ಮತ್ತು ಅವರು ಬಹಳ ಸೀರಿಯಸ್ಸಾಗಿ ಕೊಡುವ ಢೋಂಗಿ ಹೇಳಿಕೆಗಳನ್ನು ನೋಡಿದರೆ ಸರ್ಕಸ್ಸಿನಲ್ಲಿಯ ವಿದೂಷಕರ ನೆನಪಾಗುತ್ತದೆ.
ಮಾತೆ ಮಹಾದೇವಿ ವಿರುದ್ಧ ಹುಬ್ಬಳ್ಳಿ ವೀರಶೈವ ಯುವ ವೇದಿಕೆ ಪ್ರತಿಭಟನೆ
ನಾನೀಗ ಭಾರತಕ್ಕೆ ಬಂದು ಸುಮಾರು ಒಂದು ವಾರವಾಯಿತು. ಇಲ್ಲಿದ್ದಾಗ ಕೆಲವು ಕುತೂಹಲಕಾರಿ ಘಟನೆಗಳು ನಡೆದವು. ಅವುಗಳಲ್ಲಿ ಮುಖ್ಯವಾದುದೆಂದರೆ ಬಿಹಾರದ ರಾಜಕೀಯ ಪ್ರಸಂಗ. ಇಲ್ಲಿಯವರೆಗೆ ಕೇಂದ್ರ ಸರಕಾರವನ್ನು ಅಲ್ಲಲ್ಲಿ ದೂಷಿಸುತ್ತಲೇ ಅದನ್ನು ಜಿ ಎಸ್ ಟಿ, ನೋಟುಗಳ ರದ್ದತಿಯಂತಹ ಕೆಲವು ಮುಖ್ಯ ವಿಷಯಗಳಲ್ಲಿ ಬೆಂಬಲಿಸಿದ ನೀತೀಶ್ ಕುಮಾರ್ ತಮ್ಮ ಮಹಾಘಟಬಂಧನಕ್ಕೆ ಮಹಾ ಕೊಕ್ ನೀಡಿದ್ದಾರೆ.
ಪ್ರೊ ಯುಆರ್ ರಾವ್ ಅವರು ನಿಜಕ್ಕೂ 'ಭಾರತದ ರತ್ನ'!
ಒಂದು ಕಾಲದ ತಮ್ಮ ರಾಜಕೀಯ ಪ್ರತಿಸ್ಪರ್ಧಿಯಾಗಿದ್ದ ಲಾಲೂ ಯಾದವ್ ಅವರನ್ನು ದೂಷಿಸುತ್ತಲೇ ಬಿಜೆಪಿಯೊಂದಿಗೆ ಮೈತ್ರಿ ಸರಕಾರ ರಚಿಸಿ ಹಲವಾರು ವರ್ಷ ಆಡಳಿತ ನಡೆಸಿದ ನಿತೀಶ್ಕುಮಾರ್, ಮೋದಿಯವರು ಬಿಜೆಪಿಯ ಚುಕ್ಕಾಣಿ ಹಿಡಿದಾಗ ಅವರ ವಿರುದ್ಧ ನಿಂತು ಲಾಲೂರ ಜೊತೆ ಕೈಜೋಡಿಸಿದ್ದರು. ಈಗ ಲಾಲೂ ಮತ್ತು ಮಕ್ಕಳ ಭ್ರಷ್ಟಾಚಾರಕ್ಕೆ ಬೇಸತ್ತು ಮತ್ತೆ ಬಿಜೆಪಿಯ ಗೆಳೆತನ ಬಯಸಿದ್ದಾರೆ.
'ಧರ್ಮದ ಗೊಂದಲ ಹುಟ್ಟುಹಾಕಿದ್ದೇ ಮುಖ್ಯಮಂತ್ರಿ ಸಿದ್ದರಾಮಯ್ಯ'
ಅವರು ಲಾಲೂ ಮತ್ತು ಕಾಂಗ್ರೆಸ್ಸುಗಳ ಜೊತೆ ಮೈತ್ರಿಯಲ್ಲಿದ್ದಷ್ಟು ದಿನ ಅವರನ್ನು ಸೆಕ್ಯೂಲರ್ ರಾಜಕಾರಣದ ಉನ್ನತ ನಾಯಕ ಮತ್ತು ಪ್ರಧಾನಿ ಹುದ್ದೆಗೆ ಮೋದಿಯವರ ಸ್ಪರ್ಧಿ ಎಂದು ಬಿಂಬಿಸಿದ ಅನೇಕ ನ್ಯೂಸ್ ಚಾನೆಲ್ಗಳಿಗೆ ಅವರು ಒಮ್ಮೆಗೇ ಅವಕಾಶವಾದಿ ರಾಜಕಾರಣಿಯಾಗಿ ಕಂಡಿದ್ದಾರೆ. ಅದೇನೇ ಇರಲಿ ನಿತೀಶ್ ಅವರ ಈ ಮಹಾ ಕೊಕ್ನಿಂದ ಮೋದಿಯವರ ವಿರುದ್ಧ ಸೆಕ್ಯೂಲರ್ ಮಹಾ ಮೈತ್ರಿಕೂಟ ರಚಿಸುವ ಪ್ರತಿಪಕ್ಷಗಳ ಮುಖಂಡರ ಕನಸಿಗೆ ದೊಡ್ಡ ಹೊಡೆತ ಬಿದ್ದಿದೆ.
ಮನದಲ್ಲಿ ಹುದುಗಿದ್ದ ಕವನ ಅರಳಿಸಿದ ಸಿಂಗಪುರ
ಮುಂಬರುವ 2019ರ ಚುನಾವಣೆಗಳ ಮೇಲೆ ಈ ಹೊಸ ಘಟನೆಯಿಂದಾಗುವ ಪರಿಣಾಮವೇನೋ ಈಗಲೇ ಸ್ಪಷ್ಟವಾಗಿ ಹೇಳಲಾಗದಿದ್ದರೂ ಸದ್ಯಕ್ಕಂತೂ ಮೋದಿ ರಾಜಕೀಯವಾಗಿ ಮತ್ತಷ್ಟು ಬಲ ಪಡೆದಿದ್ದಾರೆ. ಸ್ವತಃ ನಿತೀಶ್ ಕುಮಾರ್ ಅವರ ರಾಜಕೀಯ ಭವಿಷ್ಯ ಕೇವಲ ಬಿಹಾರದ ಗದ್ದುಗೆಗೆ ಸೀಮಿತಗೊಳ್ಳುವುದೋ ಅಥವಾ ರಾಷ್ಟ್ರ ರಾಜಕಾರಣದಲ್ಲಿ ಅವರ ಮಹತ್ವಾಕಾಂಕ್ಷೆಗೆ ಬಿಜೆಪಿ ಇಂಬುಕೊಡುವದೋ ಎಂಬುದನ್ನು ತಿಳಿಯಲು ಕಾದು ನೋಡಬೇಕಾಗಿದೆ.
ಇತಿಹಾಸ ಬದಲಿಸುವರೆ ನಿತೀಶ್, ಮೋದಿ?
ಮೋದಿ ಮತ್ತು ನಿತೀಶ್ ಇಬ್ಬರೂ ಸ್ವಚ್ಛ, ಚಾಣಾಕ್ಷ ಮತ್ತು ಪ್ರಬಲ ರಾಜಕೀಯ ನೇತಾರರು. ಅವರು ಮುಂಬರುವ ದಿನಗಳಲ್ಲಿ ತಮ್ಮ ಅಹಮಿಕೆಗೆ ಕಡಿವಾಣ ಹಾಕಿ ದೇಶಹಿತಕ್ಕೆ ಹೆಚ್ಚು ಒತ್ತು ಕೊಡುವರೋ ಅಥವಾ ತಮ್ಮ ಅಹಮಿಕೆಯನ್ನೇ ಮುಂದಿಟ್ಟುಕೊಂಡು ಮತ್ತೊಂದು ಹೊಸ ರಾಜಕೀಯ ನಾಟಕಕ್ಕೆ ನಾಂದಿ ಹಾಡುವರೋ ಕಾದು ನೋಡಬೇಕು. ಇಬ್ಬರೂ ಒಟ್ಟಾಗಿ ದೇಶಹಿತದ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಭಾರತದ ಇತಿಹಾಸ ಬದಲಾಗುವುದರಲ್ಲಿ ಸಂದೇಹವಿಲ್ಲ. ಹೆಚ್ಚಿನ ಜನ ಅವರಿಬ್ಬರಿಂದ ಇದನ್ನೇ ಬಯಸುತ್ತಾರೆ ಎಂಬುವುದನ್ನು ಒತ್ತಿ ಹೇಳಬೇಕಾಗಿಲ್ಲ ತಾನೇ?
ಬೆಂಗಳೂರಿನಲ್ಲಿ ರೆಸಾರ್ಟ್ ರಾಜಕಾರಣ
ಒಂದು ಕಡೆ ಈ ಪ್ರಸಂಗ ನಡೆಯುತ್ತಿದ್ದ ಹಿನ್ನೆಲೆಯಲ್ಲಿಯೇ ಗುಜರಾತಿನಲ್ಲಿ ಮತ್ತೊಂದು ನಾಟಕ ನಡೆಯುತ್ತಿದೆ. ಕಾಂಗ್ರೆಸ್ನ ಶಾಸಕರನ್ನು ಬಿಜೆಪಿ ತನ್ನತ್ತ ಸೆಳೆಯುತ್ತಿದೆ ಎಂಬ ಆರೋಪದ ಮೇಲೆ ಕಾಂಗ್ರೆಸ್ ತನ್ನೆಲ್ಲ ಶಾಸಕರನ್ನು ಒಟ್ಟುಗೂಡಿಸಿ ಅವರನ್ನು ಬೆಂಗಳೂರಿನ ರೆಸಾರ್ಟ್ ಒಂದರಲ್ಲಿ ಕೂಡಿಹಾಕಿದೆ. ಒಂದು ಕಾಲದಲ್ಲಿ ಇದು ಕಾಂಗ್ರೆಸ್ ಆಡಿದ ನಾಟಕವೇ. ಈ ಪ್ರಸಂಗದ ಕಾರಣಾಂತರಗಳೇನೇ ಇರಲಿ. ಬಿಜೆಪಿ ನಿಜವಾಗಿಯೂ ಇದರಲ್ಲಿ ಪಾತ್ರವಹಿಸಿದೆಯೇ?
ಬಿಜೆಪಿ ತನ್ನ ಇಮೇಜ್ ಹಾಳುಮಾಡಿಕೊಳ್ಳುತ್ತಿದೆಯೆ?
ಒಂದಂತೂ ನಿಜ. ಅನೇಕ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ರಾಜಕಾರಣಿಗಳು ಬಿಜೆಪಿ ಸೇರುತ್ತಿದ್ದಾರೆ. ಇದರಿಂದ ಬಿಜೆಪಿಗೂ ಮತ್ತು ಇತರ ಪಕ್ಷಗಳಿಗೂ ಏನು ವ್ಯತ್ಯಾಸ ಎಂಬ ಒಂದು ಮುಖ್ಯ ಪ್ರಶ್ನೆ ಏಳುತ್ತದೆ. ಕಾಂಗ್ರೆಸ್ನಲ್ಲಿದ್ದುಕೊಂಡು ದೇಶದ ರಾಜಕಾರಣದಲ್ಲಿ ಗಬ್ಬೆನ್ನಿಸುವ ಹೊಲಸನ್ನು ಸೃಷ್ಟಿ ಮಾಡಿದ ರಾಜಕಾರಣಿಗಳನ್ನು ಬಿಜೆಪಿ ಸೆಳೆದುಕೊಂಡರೆ ಅದರ ಸ್ವಚ್ಛ ಪಕ್ಷದ ಇಮೇಜು ಎಷ್ಟು ದಿನ ಉಳಿಯಲು ಸಾಧ್ಯ. ಭ್ರಷ್ಟಾಚಾರ ಮುಕ್ತ ಭಾರತವನ್ನು ಸೃಷ್ಟಿ ಮಾಡಲು ಹೊರಟ ರಾಜಕಾರಣಿಗಳು ಪರೋಕ್ಷವಾಗಿ ಅದಕ್ಕೆ ಹೊಸದೊಂದು ಅವತಾರವನ್ನು ನೀಡಹೊರಟಿದ್ದಾರೆಯೇ?
ಕರ್ನಾಟಕದಲ್ಲಿ ಲಿಂಗಾಯತ ವರ್ಸಸ್ ವೀರಶೈವ
ನಮ್ಮ ನೆಚ್ಚಿನ ರಾಜ್ಯದಲ್ಲಿ ಒಡೆದು ಆಳು ನೀತಿಗೆ ಹೆಸರಾಗಿ, ದೇಶವನ್ನು ಅನೇಕ ಜಾತಿ ಧರ್ಮಗಳಲ್ಲಿ ತುಂಡರಿಸಿದ ರಾಜಕಾರಣಿಗಳು ಈಗ ಹೊಸದೊಂದು ವ್ಯಾಖ್ಯಾನ ಬರೆಯಲು ಹೊರಟಿರುವ ಹಾಗಿದೆ. ವೋಟು ರಾಜಕಾರಣಕ್ಕೆ ಕರ್ನಾಟಕದಲ್ಲಿ ಲಿಂಗಾಯತ ಮತ್ತು ವೀರಶೈವ ಎಂಬ ಹೊಸ ಒಡಕೊಂದನ್ನು ಸೃಷ್ಟಿಸಿ ದೇಶದ ಜನರನ್ನು ಮತ್ತೆ ಒಡೆಯಲು ಹೊಸ ಹುನ್ನಾರವನ್ನು ಹುಟ್ಟಿ ಹಾಕುವ ಕೆಲಸ ನಡೆದಿದೆ. ಇಪ್ಪತ್ತೊಂದನೆಯ ಶತಮಾನದಲ್ಲಿ ಹೊಸ ಚಿಂತನೆಯನ್ನು ಸೃಷ್ಟಿಸಿ, ಹಳೆಯ ಒಡಕುಗಳನ್ನು ಮರೆತು, ನಾವೆಲ್ಲ ಒಂದು ದೇಶದ ಜನ, ನಮ್ಮೆಲ್ಲರ ಗುರಿ ಒಂದೇ ಎಂದು ಪ್ರತಿಪಾದಿಸಿ, ಜನರನ್ನು ಒಗ್ಗೂಡಿಸುವ ಕೆಲಸ ಬಿಟ್ಟು ಒಡೆದು ಹಾಕುವ ಈ ಪ್ರಯತ್ನಕ್ಕೆ ಅಮಾಯಕ ಜನ ಬಲಿ ಬೀಳುವರೆ? ಅಲ್ಪಾವಧಿ ಲಾಭಕ್ಕಾಗಿ ದೇಶದ ದೀರ್ಘಾವಧಿ ಹಿತವನ್ನು ಬಲಿಕೊಡುವರೇ?
ಒಡಕು ಮೂಡಿಸುತ್ತಿರುವುದು ವಿಪರ್ಯಾಸ
ಈ ರೀತಿಯ ಒಡಕು ಹುಟ್ಟಿಸುವ ಪ್ರಯತ್ನಗಳಿಗೆ ವಿದ್ಯಾವಂತ ಮತ್ತು ಪ್ರಗತಿಪರ ಚಿಂತನೆಯುಳ್ಳ ಜನರೇ ಬಲಿ ಬೀಳುವುದನ್ನು ನೋಡಿ ದುಃಖವಾಗುತ್ತದೆ. ಹತ್ತು ಶತಮಾನಗಳ ಹಿಂದೆಯೇ ಜಾತಿ ಮತಗಳನ್ನು ಖಂಡಿಸಿ ಜನರೆಲ್ಲರಿಗೆ ಸಮಾನತೆಯ ಪಾಠ ಬೋಧಿಸಿದ ಮಹಾತ್ಮನ ಹೆಸರನ್ನು ಮುಂದಿಟ್ಟುಕೊಂಡು ಹೊಸ ಒಡಕನ್ನು ಸೃಷ್ಟಿಮಾಡುತ್ತಿರುವುದು ವಿಪರ್ಯಾಸದ ಸಂಗತಿ.
ಒಂದು ರಾಷ್ಟ್ರ ಮತ್ತು ಒಂದು ಜನ
ಬಹಳ ವರ್ಷಗಳಿಂದ ದೇಶದಿಂದ ಹೊರಗಿದ್ದುಕೊಂಡು ರಾಜಕೀಯದ ಬೇರೊಂದು ಸ್ವರೂಪವನ್ನು ನೋಡಿದ ನನಗೆ, ನಮ್ಮ ದೇಶದ ರಾಜಕೀಯ ಮತ್ತು ಸಾಮಾಜಿಕ ಪ್ರಕ್ರಿಯೆಗಳಿಂದ ಆಶ್ಚರ್ಯ ಮತ್ತು ನೋವುಗಳೆರಡೂ ಉಂಟಾಗುತ್ತದೆ. ಸಿಂಗಪುರ, ಮಲಯೇಶಿಯ ಮತ್ತು ಜಪಾನುಗಳಂತಹ ರಾಷ್ಟ್ರಗಳು ತಮ್ಮಲ್ಲಿಯ ಜನತೆಯ ಭಿನ್ನತೆಗಳನ್ನು ದೂರ ಮಾಡಿ ತಾವೆಲ್ಲ ಒಂದು ರಾಷ್ಟ್ರ ಮತ್ತು ಒಂದು ಜನ ಎಂಬ ಏಕತೆಯನ್ನು ಸೃಷ್ಟಿಸಲು ಶತಾಯ ಗತಾಯ ಪ್ರಯತ್ನ ಮಾಡಿ ಕೇವಲ ಒಂದು ಪೀಳಿಗೆಯಲ್ಲಿ ಸಾಕಷ್ಟು ಯಶಸ್ಸು ಪಡೆದಿವೆ.
ವಿವಿಧತೆಯಲ್ಲಿ ಏಕತೆ ಎಂಬುದು ಟೊಳ್ಳು
ನಮ್ಮ ರಾಷ್ಟ್ರದಲ್ಲಿ ಮಾತ್ರ ವಿವಿಧತೆಯಲ್ಲಿ ಏಕತೆ ಎಂಬುವುದು ಕೇವಲ ಒಂದು ಟೊಳ್ಳು ಹೇಳಿಕೆಯಾಗಿ ಮಾತ್ರ ಉಳಿದು ಅಸಲಿಯಾಗಿ ನಮ್ಮ ಸಮಾಜ ಅನೇಕ ಬಿರುಕುಗಳುಳ್ಳ ಅವನತಿಗೊಳ್ಳುತ್ತಿರುವ ಭವ್ಯ ಕಟ್ಟಡದಂತೆ ಕಾಣುತ್ತಿದೆ. ಈ ಒಡೆದು ಆಳು ನೀತಿಯ ರಾಜಕಾರಣಕ್ಕೆ ಮತ್ತು ನಮ್ಮ ಜನರ ದೂರದೃಷ್ಟಿ ವಿಹೀನತೆಗೆ ಕೊನೆಯುಂಟೆ? ಯಾವಾಗ ಆಡಳಿತಗಾರರು ದೂರದೃಷ್ಟಿವಿಹೀನರಾಗಿ ಸ್ವಾರ್ಥಿಗಳಾಗುತ್ತಾರೋ ಆವಾಗ ಜನರೇ ಎಚ್ಚೆತ್ತು ಅವರನ್ನು ಸರಿದಾರಿಗೆ ತರಬೇಕಾಗುತ್ತದೆ. ಇಲ್ಲದಿದ್ದರೆ ಈ ಭವ್ಯ ದೇಶದ ಗತಿ ಏನಾಗುತ್ತದೆ ಎಂಬುವುದನ್ನು ಊಹಿಸಲೂ ಅಸಾಧ್ಯ.