ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಮಾಜಿಕ ಭದ್ರತೆ ಅಂದ್ರೇನು ಮಗು?

By Sridhar L
|
Google Oneindia Kannada News

Oldage
ಆತ ನಗರದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ವೈದ್ಯ,ಮೂರು ಜನ ಹೆಣ್ಣುಮಕ್ಕಳು. ಬೇರೇನೂ ಕೊಡಲಿಕ್ಕೆ ಆಗದೆ ಇದ್ದರೂ ಕನಿಷ್ಠ ಉತ್ತಮ ವಿದ್ಯಾಭ್ಯಾಸ ನೀಡಬೇಕು ಎಂದು ನಂಬಿರುವ ಅಸಂಖ್ಯಾತ ತಾಯಿ ತಂದೆಯರ ಪ್ರತಿನಿಧಿ. ಏಳೂ ಮಕ್ಕಳನ್ನು ನಗರದ ಪ್ರತಿಷ್ಟಿತ ಶಾಲೆಗೇ ಸೇರಿಸಿದ.ಸರ್ಕಾರಿ ವೈದ್ಯನ್ನಾದರೂ ಸರ್ಕಾರ ಕೊಟ್ಟಷ್ಟೇ ಸಂಬಳ...ನೋ ಅದು ಇದು !

* ಧವಳ

ದೊಡ್ಡ ಮಗಳು ಇಂಜಿನಿಯರಿಂಗ್ ಮಾಡಬೇಕು ಅಂದ್ಲು ಆಯ್ತು ಕಣಮ್ಮ ಎಂದು ಸೇರಿಸಿದ ಆಕೆ ಓದು ಪೂರೈಸುವಷ್ಟರಲ್ಲಿ ಮತ್ತೊಬ್ಬ ಮಗಳು ಸಿದ್ಧಳಾಗಿದ್ದಳು ,ದೊಡ್ಡವಳಿಗೆ ಒಳ್ಳೆ ಕಡೆ ಸಂಬಂಧ ನೋಡಿ ಮದುವೆ ಮಾಡಿದರು,ಎರಡನೆಯವಳ ಹೊಣೆ ,ಅದಕ್ಕಾಗಿ ತನ್ನ ಪಿತ್ರಾರ್ಜಿತ ಆಸ್ತಿ ಮಾರಿ ಅವಳ ಬದುಕಿಗೆ ದಾರಿ ಮಾಡಿದರು .ಅಷ್ಟರಲ್ಲಿ ಸಾಲಗಾರ ಮಗನಾಗಿ ಕುಳಿತಿದ್ದರು.

ಇನ್ನುಳಿದ ಎರಡು ಹೆಣ್ಣು ಮಕ್ಕಳಿಗೆ ನೆಲೆ ಕಾಣಿಸಬೇಕಿತ್ತು.ಮೈ ಪೂರ ಸಾಲ,ಕೊನೆಗೆ ವಾಲೆಂಟರಿ ರಿಟೈರ್ ಮೆಂಟ್ ತೆಗೆದುಕೊಳ್ಳುವ ನಿರ್ಧಾರ,ಅದರಿಂದ ಬಂದ ಹಣದಲ್ಲಿ ಆತ ಸಾಲ ತೀರಿಸಿ ಉಳಿದ ಹಣದಲ್ಲಿ ಮೂರನೆಯವಳಿಗೆ ನರ್ಸಿಂಗ್ ಶಿಕ್ಷಣ ನೀಡಿದರು,ಆಕೆಗೆ ಸರ್ಕಾರಿ ಉದ್ಯೋಗ ಸಿಕ್ಕಿತು,ಕೊನೆಯವಳು ಡಿಗ್ರಿ ಪೂರೈಸಿ ಕೆಲಸಕ್ಕೆ ಸೇರಿದಳು,ಇಷ್ಟು ದಿನ ಹೇಗೋ ಇದ್ದ ಆತನಿಗೆ ಪಾರ್ಶ್ವವಾಯು ಆಗಿ ಹಾಸಿಗೆಯಲ್ಲಿ ಉಳಿಯುವ ಸ್ಥಿತಿ.ಆಗ ಮನೆಯ ಚಿತ್ರಣ ಬದಲಾಯಿತು.

ಮಕ್ಕಳಿಗೆ ತಂದೆ ಬೇಡದ ವಸ್ತು.ತನ್ನ ತಮ್ಮನಿಗೆ ಫೋನ್ ಮಾಡಿ ಕಷ್ಟ ಹೇಳಿಕೊಂಡರು ಆತ ,ಆ ತಮ್ಮನ ಕರಳು ಬೆಂದು ಅಣ್ಣನನ್ನು ಕರೆದು ಕೊಂಡು ತನ್ನ ಊರಲ್ಲಿ ಇಟ್ಟುಕೊಂಡರು,ದೇಹ ಸ್ವಲ್ಪ ಕುದುರಿತು,ಹಾಳಾದ ಮೋಹ,ತನ್ನ ಮಕ್ಕಳನ್ನು ನೋಡುವ ಆಸೆಯಿಂದ ನಗರಕ್ಕೆ ಬಂದಾಗ ಅಲ್ಲಿ ಸಿಕ್ಕಿದ್ದು ತಿರಸ್ಕಾರ.ದಿಗ್ಬ್ರಾಂತಿಯಿಂದ ಆತನಿಗೆ ಏನು ಮಾಡಲು ತೋಚದೆ ಮೊರೆ ಹೊಕ್ಕಿದ್ದು ಆತ್ಮಹತ್ಯೆಗೆ.ತನ್ನ ಮೊಮ್ಮಗನನ್ನು ಕಣ್ಣಲ್ಲಿ ಕಣ್ಣಿಟ್ಟು ಸಾಕಿತು ಅಜ್ಜಿ.ಸ್ವಲ್ಪ ಬೆಳೆದವ ಅಜ್ಜಿಯನ್ನು ಕೈ ಕಾಲಿನಿಂದ ಮಾತನಾಡಲು ಆರಂಭಿಸಿದ .ಈಗ ಆಕೆ ವೃದ್ಧಾಶ್ರಮದ ಸದಸ್ಯೆ!

ಹೀಗೆ ಹೇಳ್ತಾ ಹೋದರೆ ಲಕ್ಷಾಂತರ ಕಥೆಗಳು,ಆ ಕತೆಗಳು ನಿಮೂ ಗೊತ್ತಿರುವುದರಿಂದ ಹೆಚ್ಚು ಬರೆಯಲಾರೆ!ಸೀನಿಯರ್ ಸಿಟಿಜನ್ಸ್ ಹೃದಯ ಕದ ತಟ್ಟಿದಾಗ ಇಂತಹ ಅನೇಕ ಕಥೆಗಳು...! ಎದ್ದು ಕಾಣುವುದು ಅವರ ಒಂಟಿತನ, ಬೇಸರ ಆತಂಕ, ದುಃಖ. ಅದನ್ನು ದೂರಮಾಡುವ ಶಕ್ತಿ ನಮಗಿದ್ದರೂ ಆ ವಿಷಯದಲ್ಲಿ ನಮ್ಮದು ಋಷಿ ಮೌನ ! ಕೆರಿಯರ್,ಗಡಿಬಿಡಿ ಬದುಕು,ಜೀವನ ಶೈಲಿ,ಪುಟ್ಟ ಕುಟುಂಬ ಎಲ್ಲದರ ಹಿಂದೆ ಓಡುತ್ತಿರುವ ನಮಗೆ ಅವರ ಖಾಲಿತನದತ್ತ ಗಮನ ಹರಿಸುವಷ್ಟು ಟೈಂಇಲ್ಲ.

ಪ್ರಾಯಶಃ ಈ ಕಾರಣದಿಂದಲೇ ಇರಬೇಕು ಸಾಕಷ್ಟು ಸೀನಿಯರ್ ಸಿಟಿಜನ್ ಗಳು ತಾವು ಇರುವ ಸ್ಥಳ ,ಊರು,ಪರಿಸರ ಬಿಟ್ಟು ಹೋಗುವುದಕ್ಕೆ ಇಷ್ಟ ಪಡ್ತಾ ಇಲ್ಲ.ಹಾಗೆಂದು ತಮ್ಮ ಮಕ್ಕಳ ವಿರುದ್ಧವೂ ಚಕಾರ ಎತ್ತುತ್ತಿಲ್ಲ ,ತಮ್ಮ ಜೀವನವನ್ನು ಬಂದಂತೆ ಸ್ವೀಕರಿಸಿ ಬಾಳ್ವೆ ನಡೆಸುತ್ತಿದ್ದಾರೆ.ಇದುವೆ ಜೀವ ಇದು ಜೀವನ.

ಮೌನ ವೇದನೆ !

ಹಣಕಾಸಿನ ಸ್ಥಿತಿ ಉತ್ತಮ ಆಗಿರುವ ಅನೇಕ ವೃದ್ಧ ಸ್ತ್ರೀ ಪುರುಷರು ಬಾಳಿನಲಿ ತಮ್ಮ ಸಂಗಾತಿಯನ್ನು ಶಾಶ್ವತವಾಗಿ ಕಳೆದು ಕೊಂಡಿದ್ದರು ಮಕ್ಕಳ ಆಶ್ರಯಕ್ಕೆ ಹೋಗರು( 2001 ರ ಸರ್ವೆಯಿಂದ ತಿಳಿದು ಬಂದ ಸಂಗತಿ). ಆದರೆ ಕೈಲಿ ಬಿಡಿಗಾಸು ಇಲ್ಲದೆ,ಮಕ್ಕಳು ಎಸೆಯುವ ಕೂಳಿಗಾಗಿ ಕಾಯುವ ಹಿರಿಯ ಜೀವಗಳ ಪಾಡು ಯಾರಿಗೂ ಬೇಡ! ಅವರಿಗೆ ಗೋಡೆಯೇ ಸ್ನೇಹಿತರು,ಹಳೆಯ ನೆನಪುಗಳೇ ಬಂಧುಗಳು. ನಾನೇ ಕಂಡಹಾಗೆ ಒಬ್ಬ ಹಿರಿಯ ಜೀವಿಗೆ ಆಕೆಗೆ ಇದ್ದ ಒಬ್ಬಳೇ ಮಗಳು ತುತ್ತು ತುತ್ತಿಗೂ ಬೈಯುತ್ತಿದ್ದಳು,ಊಟಕ್ಕಿಂತ ಹೆಚ್ಚಾಗಿ ಬೈಗುಳ,ಪ್ರೀತಿಗಿಂತ ಅನಾದರವೇ ಆಕೆಗೆ ಕೊನೆಗಾಲದಲ್ಲಿ ಸಿಕ್ಕಿದ್ದು ,ಆ ಘಟನೆ ನೆನೆದರೆ ಕರಳು ಹಿಂಡುತ್ತದೆ.ಇಂತಹವು...!

ಪುರುಷರಾದರೆ ಕನಿಷ್ಠ ಪಾರ್ಕ್ , ದೇವಸ್ಥಾನ ಅಲ್ಲಿಇಲ್ಲಿ ಅಡ್ಡಾಡಿ ಸಮಯ ಕಳೆದು ರಿಫ್ರೆಶ್ ಆಗ್ತಾರೆ. ಆದರೆ ಹೆಣ್ಣು ಜೀವಕ್ಕೆ ಅಂತಹ ಸೌಭಾಗ್ಯ ತುಂಬಾ ಕಡಿಮೆ.ಶಕ್ತಿ ಇರುವಷ್ಟು ಕಾಲ ದುಡ್ತ,ಆ ಬಳಿಕ ....! ಅನಿವಾಸಿ ಭಾರತೀಯರ ವೃದ್ಧ ತಾಯ್ತಂದೆಯರ ಕಥೆ ಹೇಳುವಷ್ಟೇ ಇಲ್ಲ.ಆತನಿಗೆ ಒಂಬತ್ತು ಜನ ಗಂಡು ಮಕ್ಕಳು ಎಲ್ಲರು ವಿದೇಶದಲ್ಲಿ ಸೆಟಲ್ ಆಗಿದ್ದಾರೆ.ತಾಯಿತಂದೆ ಹನಿ ನೀರಿಗಾಗಿ ಇಲ್ಲಿ ಪರದಾಡುತ್ತಿದ್ದಾರೆ, ಇಂತಹ ಹಿರಿಯ ಜೀವಗಳಿಗೆ ಅಲ್ಲಿ ಬದುಕಲಾರದ,ಇಲ್ಲಿ ಜೀವಿಸಲಾಗದ ಸ್ಥಿತಿ.

ನಿಜ ನಾವು ಹೇಳಿದಷ್ಟು ಸುಲಭ ಅಲ್ಲ ! ಆದರೆ ಹಣ,ಅಧಿಕಾರ ತಾಯಿತಂಗಿಂತ ದೊಡ್ಡದೇ? ಹಿರಿಯ ಜೀವಗಳಿಗೆ ಕೊನೆಗಾಲದಲ್ಲಿ ಸಣ್ಣ ನೆಮ್ಮದಿ ಕೊಡಲಾಗದಷ್ಟು ಮುಖ್ಯನಾ ನಮ್ಮ ಕೆರಿಯರ್? ಈ ವೃದ್ಧಾಪ್ಯ ಕೇವಲ ನಮ್ಮ ಹಿರಿಯರ ಸ್ವತ್ತು ಅಲ್ಲ ತಾನೇ? ಅದು ನಂತರ ನಮ್ಮ ಬಿಡುವುದಿಲ್ಲ. ನಾವೆಷ್ಟೇ ವೈದ್ಯಕ್ಕಿಯ ಚಿಕಿತ್ಸೆಯಿಂದ ಯಂಗ್ ಎನ್ ಎನರ್ಜಿಟಿಕ್ ಆದರು! ಒಂದು ಅಂದಾಜಿನ ಪ್ರಕಾರ ನಮ್ಮ ದೇಶ ಒಂದರಲ್ಲಿ ಅರವತ್ತು ವರ್ಷಕ್ಕೂ ಮೀರಿದ ಹಿರಿಯರು ಏಳುಕೋಟಿ ಎಪ್ಪತ್ತು ಲಕ್ಷಕ್ಕಿಂತ ಅಧಿಕ ಪ್ರಮಾಣದಲ್ಲಿ ಇದ್ದಾರೆ.ಇವರ ಸಾಮಾನ್ಯ ಸಮಸ್ಯೆ ಒಂಟಿತನ,ಮಾತನಾಡುವುದಕ್ಕೆ ಯಾರು ಇಲ್ಲದೆ ಇರುವುದು.

ಪರಿಹಾರ ನನ್ನ ಬಳಿ ಇಲ್ಲ.ನಿಮ್ಮಲ್ಲೂ ಇಲ್ಲ. ಯಾಕೆಂದರೆ,ಸಾಮಾಜಿ ಭದ್ರತೆ ಎಂಬ ಪದವನ್ನೇ ನಮ್ಮ ಸಮಾಜ ಕೇಳಿಲ್ಲ. ಸದ್ಯದಲ್ಲೇ ಪದವನ್ನು ಕೇಳುವುದು ಖಂಡಿತ. ಆದರೆ,ನಮಗೂ ವಯಸ್ಸಾಗುವುವರೆಗೆ,ಮುದುಕ ಮುದುಕಿ,ಮುದಿಗೂಬೆ ಪಟ್ಟವನ್ನು ಯಾರಾದರೂ ಕಟ್ಟುವುವರೆಗೆ ಕಾಯಬೇಕು,ಕಾಯೋಣ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X