ಸ್ವಾಮಿ ವಿವೇಕಾನಂದರ ಶಿಕಾಗೋ ಭಾಷಣ, ವಿಡಿಯೋ
1893ರ ಸೆಪ್ಟೆಂಬರ್ 11ರಂದು ಅಮೆರಿಕಾದ ಶಿಕಾಗೋದಲ್ಲಿ ಸ್ವಾಮಿ ವಿವೇಕಾನಂದ ಅವರು ಮಾಡಿದ ಐತಿಹಾಸಿಕ ಭಾಷಣ ಭಾರತದ ಇತಿಹಾಸದ ಪುಟಗಳಲ್ಲಿನ ಮರೆಯಲಾಗದ ಕ್ಷಣ. ವಿಭಿನ್ನ ಜಾತಿ, ಮತಗಳ ಮಾನವ ಸಂಕುಲವನ್ನು ಒಂದೇ ಗೂಡಿನಲ್ಲಿ ಪೋಷಿಸುತ್ತಿರುವ ಭಾರತವನ್ನು ಪ್ರತಿನಿಧಿಸಿ ವಿವೇಕಾನಂದರು ಮಾಡಿದ ಭಾಷಣ ಭಾರತೀಯರಲ್ಲಿ ಸ್ವಾಭಿಮಾನವನ್ನು ಬಡಿದೆಬ್ಬಿಸುನಂತಹುದು.
ಸ್ವಾಮಿ ವಿವೇಕಾನಂದರ 150ನೇ ಹುಟ್ಟುಹಬ್ಬದ ಸಂದರ್ಭದಲ್ಲಿ 118 ವರ್ಷಗಳ ಹಿಂದೆ ಅವರು ನುಡಿದ ಆ ನುಡಿಗಳು ಇಂದಿಗೂ ಯುವಜನತೆಗೆ ಪ್ರೇರಣಾದಾಯಿಯಾಗಿವೆ. ಅಮೆರಿಕದ ಜನತೆಯನ್ನು ಸಹೋದರ ಸಹೋದರಿಯರೆ ಎಂದು ಉದ್ದೇಶಿಸಿ ಕಂಚಿನ ಕಂಠದಲ್ಲಿ ಸ್ವಾಮಿ ವಿವೇಕಾನಂದರು ಮಾಡಿದ ಭಾಷಣ ಇಲ್ಲಿ ಕೇಳಿ. ಸಾಧ್ಯವಾದರೆ ಅವರು ಸಾರಿದ ಧ್ಯೇಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ. [ಶಿಕಾಗೋ ಭಾಷಣ ಕೇಳಿರಿ]
39 ವರ್ಷದಲ್ಲಿಯೇ ಅಗಾಧವಾದುದನ್ನು ಸಾಧಿಸಿದ ಆ ಮಹಾನ್ ಸಂತನನ್ನು ಪಡೆದ ಈ ಭಾರತ ಮಾತೆ ಮಾತ್ರವಲ್ಲ ಅವರನ್ನು ಹೆತ್ತ ಅಮ್ಮ ಭುವನೇಶ್ವರಿ ಕೂಡ ಧನ್ಯಳು. ಇದೇ ದಿನ ಅಂದರೆ, ಜನವರಿ 12, 1863ರಂದು ಭುವನೇಶ್ವರಿ ದೇವಿಯ ಗರ್ಭದಲ್ಲಿ ಕೋಲ್ಕತಾದಲ್ಲಿ ನರೇಂದ್ರನಾಥ ದತ್ತರಾಗಿ ವಿವೇಕಾನಂದರು ಜನಿಸಿದರು. ಬಾಲ್ಯದಲ್ಲಿ ತಾಯಿಯಿಂದ ಕಲಿತ ಜೀವನದ ಅತ್ಯಮೂಲ್ಯ ಪಾಠಗಳೇ ವಿವೇಕಾನಂದರನ್ನು ಆ ಮಟ್ಟಕ್ಕೆ ಬೆಳೆಸಲು ಸಾಧ್ಯವಾಯಿತು.
ಧಾರ್ಮಿಕ ಭಾವನೆಯವಳಾಗಿದ್ದ ಭುವನೇಶ್ವರಿ ದೇವಿಯಿಂದ ಭಕ್ತಿಯ ಜೊತೆಗೆ ತಮ್ಮನ್ನು ತಾವು ನಿಗ್ರಹಿಸುವುದನ್ನು ವಿವೇಕಾನಂದರು ಕಲಿತರು. ಅವರು ತಾಯಿ ಹೇಳಿದ "ನಿರ್ಮಲ ಜೀವನ ಸಾಗಿಸು, ಗೌರವದಿಂದ ಬಾಳು, ಅನ್ಯರ ಗೌರವಕ್ಕೆ ಧಕ್ಕೆ ತರಬೇಡ. ಯಾವಾಗಲೂ ಶಾಂತವಾಗಿರು. ಆದರೆ, ಅವಶ್ಯಕತೆ ಬಿದ್ದಾಗ ಸಿಡಿದೇಳು" ಎಂಬ ನುಡಿಗಳು ಎಲ್ಲ ಭಾರತೀಯರಿಗೆ ಅನ್ವಯವಾಗುತ್ತದೆ. ಅತ್ಯುತ್ತಮ ಮೌಲ್ಯಗಳನ್ನು ಬೋಧಿಸಿದ ಆ ಮಾತೆಯನ್ನು ಪಡೆದ ಈ ಭಾರತ ಕೂಡ ಧನ್ಯ. ಆಕೆಯನ್ನು ನಮಿಸೋಣ.