Get Updates
Get notified of breaking news, exclusive insights, and must-see stories!

ಬರಹ ರವಾನಿಸುವ ಅಕ್ಷರ ಸೈನಿಕರಲ್ಲಿ ಸವಿನಯ ವಿನಂತಿ

SK Shama Sundara
ನಮ್ಮ ವೆಬ್ ಸೈಟಿಗೆ ಬರಹಗಳನ್ನು ರವಾನಿಸುವ ಅಕ್ಷರ ಸೈನಿಕರಲ್ಲಿ ಸವಿನಯ ವಿನಂತಿ. ಲೇಖನ, ಕಥೆ, ಕವನ, ಚಿತ್ರ, ವ್ಯಂಗ್ಯಚಿತ್ರ, ವರದಿ, ಪ್ರತಿಕ್ರಿಯೆ ಮುಂತಾದ ಬರಹ-ಚಿತ್ರ ಸಾಮಗ್ರಿಗಳನ್ನು ದಟ್ಸ್ ಕನ್ನಡ ಡಾಟ್ ಕಾಮಿಗೆ ಕಳಿಸಿಕೊಡುವವರು ಗಮನಿಸಬೇಕಾದ ಹಲಕೆಲವು ಅಂಶಗಳು ಕೆಳಕಂಡಂತಿವೆ. ಬರಹಗಾರರು ದಯವಿಟ್ಟು ಗಮನಿಸಬೇಕು.

ಎಸ್ಕೆ. ಶಾಮಸುಂದರ

ಅ) ಲೇಖಕ-ಲೇಖಕಿಯರು ತಮ್ಮ ಪೂರ್ಣ ವಿಳಾಸ ಮತ್ತು ದೂರವಾಣಿ ಸಂಖ್ಯೆಗಳನ್ನು ಕಡ್ಡಾಯವಾಗಿ ನಮೂದಿಸಬೇಕು. ದಟ್ಸ್ ಕನ್ನಡ ಪ್ರಕಟಣೆಗಾಗಿ ಬರಹ ಕಳಿಸುವಾಗ ಪ್ರತೀಬಾರಿಯೂ, ಇಮೇಲ್ ನಲ್ಲಿ ಈ ವಿವರಗಳನ್ನು ಅಗತ್ಯವಾಗಿ ಬರೆದಿರಬೇಕು. ನಿಮ್ಮ ಸೆಲ್ ಫೋನ್ ನಂಬರು ಕೊಟ್ಟರೆ ಅನುಕೂಲ. ನಿಮ್ಮ ಸಂಕ್ಷಿಪ್ತ ವೃತ್ತಿವಿವರ ನಮೂದಿಸಿದರೆ ಮತ್ತೂ ಒಳ್ಳೆಯದು. ಹೆಚ್ಚಿನ ವಿವರಗಳು ಬೇಕಿದೆ ಎನಿಸಿದಲ್ಲಿ, ಸಮಾಲೋಚನೆ ಅವಶ್ಯವಿದ್ದಲ್ಲಿ ಸಂಪಾದಕರು ನಿಮಗೆ ಕರೆಮಾಡುತ್ತಾರೆ.

ಆ) ಸಂದರ್ಭೋಚಿತವಾಗಿ ಲೇಖಕ-ಲೇಖಕಿಯರ ಭಾವಚಿತ್ರ ಪ್ರಕಟಿಸುವುದಕ್ಕೆ ನಮಗೆ ಸಹಕಾರಿಯಾಗಲು ಬರಹಗಾರರು ತಮ್ಮ ಫೋಟೋ ಲಗತ್ತು ಮಾಡಬೇಕು. ದಟ್ಸ್ ಕನ್ನಡ ಪುಟದಲ್ಲಿ 'ಹೆಸರು ಬೇಡ, ಊರು ಬೇಡ' ಎಂದು ಆಶಿಸುವ ಲೇಖಕರು ತಮ್ಮ ಭಾವಚಿತ್ರವನ್ನು ಕಡ್ಡಾಯವಾಗಿ ಕಳಿಸಬೇಕು.

ಇ) ಬರಹಗಳನ್ನು ಕಳಿಸುವ ಮುಂಚೆ ಮತ್ತೊಮ್ಮೆ ತಾವೇ ಓದಿ, ಪರಿಷ್ಕರಿಸಿ, ಅಗತ್ಯವಿದ್ದರೆ ಮಾರ್ಪಾಡುಗಳನ್ನು ಮಾಡಿದ ನಂತರ ರವಾನಿಸುವುದು ಲೇಸು.

ಈ) ಬರಹ ಎಷ್ಟೇ ಗುಣಮಟ್ಟದ್ದಾಗಿದ್ದರೂ ಕಾಗುಣಿತದ ಬಗ್ಗೆ ತೀರ ತಾತ್ಸಾರವಿರುವ ಬರಹಗಾರರ ನುಡಿ ಕಾಣಿಕೆಗಳನ್ನು ಪ್ರಕಟಣೆಗೆ ಪರಿಶೀಲಿಸಲಾಗುವುದಿಲ್ಲ.

ಉ) ನೀವು ಏನು ಹೇಳಬೇಕೆಂದಿದ್ದೀರೋ ಅದನ್ನು ಆದಷ್ಟೂ ನೇರವಾಗಿ ಬರೆಯಿರಿ. ಅನಗತ್ಯ ಶಬ್ದಾಡಂಬರ, ಪುನರುಕ್ತಿಯನ್ನು ತಪ್ಪಿಸಿ. ಇಂಟರ್ನೆಟ್ ಓದುಗರ ಸೀಮಿತ ಸಮಯದ ಬಗೆಗೆ ಬರಹಗಾರ ಸಮುದಾಯಕ್ಕೆ ಕಾಳಜಿ ಇರಲಿ.

ಊ) ಕನ್ನಡ ನಾಡಿನ ನಾನಾ ಊರು ಕೇರಿಗಳಲ್ಲಿ ಈಗ ಬ್ರಾಡ್ ಬ್ಯಾಂಡ್ ಬಳಕೆ ಹೆಚ್ಚಾಗಿದೆ. ಪರಿಣಾಮವಾಗಿ ಓದುಗರ ಬರಹಗಾರರ ಪ್ರಮಾಣ ದುಪ್ಪಟ್ಟು ಮೂರ್ಪಟ್ಟಾಗಿದೆ. ಗ್ರಾಮಾಂತರ ವರದಿಗಾರರು, ಉತ್ಸಾಹಿಗಳು ನಮ್ಮ ವೆಬ್ ಸೈಟಿಗೆ ಸುದ್ದಿ, ಸುದ್ದಿ ವಿಶ್ಲೇಷಣೆಗಳನ್ನು ಮೇಲಿಂದಮೇಲೆ ರವಾನಿಸುತ್ತಿದ್ದಾರೆ. ಸ್ವಾಗತವೆ. ಅವುಗಳನ್ನು ಯಥೋಚಿತವಾಗಿ ಬಳಸಿಕೊಳ್ಳಲಾಗುವುದು.

-ಗ್ರಾಮೀಣ ಪ್ರದೇಶಗಳ ಸುದ್ದಿ, ಸುದ್ದಿಸಾರ ಕಲೆಹಾಕುವ ವರದಿಗಾರರು ದಯಮಾಡಿ ತಮ್ಮ ತಮ್ಮ ಊರು, ಅಕ್ಕಪಕ್ಕದ ಊರುಗಳ ವಿಷಯ, ವಿಚಾರ, ವಿವಾದಗಳ ಬಗೆಗೆ ಗಮನ ಕೇಂದ್ರೀಕರಿಸಬೇಕಾಗಿ ವಿನಂತಿ. ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿವಾದಗಳನ್ನು ಕುರಿತಾದ ವಿಶ್ಲೇಷಣೆ ನಮಗೆ ರವಾನಿಸುವುದು ಬೇಡ. ಈ ನಿಯಮಕ್ಕೆ ಕೆಲವು ಅಪವಾದಗಳು ಇವೆ. ಅದು ಸಮಯ, ಸಂದರ್ಭದ ಮೇಲೆ ಅವಲಂಬಿತ.

ಋ) ಒಂದು ವರ್ತಮಾನದ ಬಗೆಗೆ ಅನೇಕರು ಏಕಕಾಲಕ್ಕೆ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸಾಧ್ಯತೆ ಇರುತ್ತದೆ. ಅಂತಹ ಸಂದರ್ಭದಲ್ಲಿ ನಮ್ಮ ಸಂಪಾದಕೀಯ ಮಂಡಳಿ ತೆಗೆದುಕೊಳ್ಳುವ ನಿರ್ಧಾರ ಅಂತಿಮವಾಗುತ್ತದೆ. ಉದಾಹರಣೆಗೆ ಪದ್ಮಪ್ರಿಯ ಆತ್ಮಹತ್ಯೆ, ಇಗರ್ಜಿಗಳ ಮೇಲಿನ ದಾಳಿ, ಮತಾಂತರ ಮುಂತಾದ ಖಾರವಾದ ವಿಚಾರಗಳಿಗೆ ಅನೇಕ ಪ್ರತಿಕ್ರಿಯೆಗಳು ಲೇಖನ ರೂಪದಲ್ಲಿ ಹರಿದುಬಂದವು. ಲೇಖಕರ ಅಭಿಪ್ರಾಯಗಳೇನೇ ಇರಲಿ, ಬರಹದ ಗುಣಮಟ್ಟ ಮತ್ತು ತರ್ಕಶುದ್ಧಿಯ ಮಾನದಂಡ ಅನುಸರಿಸಿ ಲೇಖನ ಪ್ರಕಟಗೊಂಡವು. ಹೊಳೆದದ್ದು ತಾರೆ, ಉಳಿದದ್ದು ಆಕಾಶ!

ಎ) ನಮ್ಮ ವೆಬ್ ಸೈಟಿನಲ್ಲಿ ಓದುಗರ ಓಲೆ ಎಂಬ ವಿಭಾಗ ಇದೆ. ಇ-ಮೇಲ್ ಮುಖಾಂತರ ಬರುವ ಪ್ರತಿಕ್ರಿಯೆಗಳನ್ನು ಆರಿಸಿ ಶೋಧಿಸಿ ಆ ವಿಭಾಗದಲ್ಲಿ ಪ್ರಕಟಿಸುವ ಪರಿಪಾಠ ಇಟ್ಟುಕೊಂಡಿದ್ದೆವು. ಬರಬರುತ್ತಾ ಓದುಗರ ಓಲೆಗಳ ಪ್ರಮಾಣ ಅಪಾರವಾಯಿತು. ಅಷ್ಟೊಂದು ಪತ್ರಗಳನ್ನು ಪ್ರಕಟಿಸುವುದಕ್ಕೆ ನಮ್ಮಲ್ಲಿ ಮಾನವ ಸಂಪನ್ಮೂಲದ ಕೊರತೆ ತಲೆದೋರಿತು. ಕ್ರಮೇಣ ಇದಕ್ಕೆ ಪರಿಹಾರ ಹುಡುಕುವ ಯತ್ನದಲ್ಲಿ ತೊಡಗಿದೆವು.

ಏ) ಅಂತಿಮವಾಗಿ ಆಯಾ ಪುಟದಲ್ಲೇ ಓದುಗರು ತಮ್ಮ ಪ್ರತಿಕ್ರಿಯೆಗಳನ್ನು ಇಂಗ್ಲಿಷ್ ಮತ್ತು ಅಥವಾ ಕನ್ನಡದಲ್ಲಿ ದಾಖಲಿಸಲು ನೆರವಾಗುವ ಕಾಮೆಂಟ್ಸ್ ಅಂಕಣ ತೆರೆದೆವು. ಅಂತರ್ಜಾಲ ಕನ್ನಡ ಸಮುದಾಯದಲ್ಲಿ ಎಷ್ಟು ದೃಷ್ಟಿಕೋನಗಳಿವೆಯೋ ಅಷ್ಟೂ ದೃಷ್ಟಿಕೋನಗಳು ಈ ವಿಭಾಗದಲ್ಲಿ ತಮ್ಮತನಗಳನ್ನು ಕಂಡುಕೊಂಡವು, ಕಂಡುಕೊಳ್ಳುತ್ತಿವೆ.

ವಿಸೂ : ದಟ್ಸ್ ಕನ್ನಡ ಹವ್ಯಾಸಿ ಬರಹಗಾರರ ಸಮೂಹ ವಿಶಾಲವಾಗಿದೆ. ಪರಸ್ಪರ ಅನುಕೂಲ, ಅನುಸಂಧಾನಕ್ಕೆ ರೂಪಿತವಾಗಿರುವ ನಿಯಮಗಳನ್ನು ತಪ್ಪದೆ ಪಾಲಿಸುತ್ತಾ ಬಂದಿರುವ ಬರಹಗಾರ ಮಿತ್ರರಿಗೆ ಈ ಮೇಲೆ ತಿಳಿಸಿರುವ ಸೂಚನೆಗಳು ಅನ್ವಯವಾಗುವುದಿಲ್ಲ! ಮುಗಿಸುವ ಮುನ್ನ, ನೀವು ಕಳಿಸುವ ಲೇಖನಗಳನ್ನು ಯುನಿಕೋಡ್, ಬರಹ ಅಥವಾ ನುಡಿ ಬಳಸಿ ಕಳುಹಿಸಬೇಕು.

ಹೆಚ್ಚಿನ ವಿವರಗಳಿಗೆ ಈ ಕೊಂಡಿಯನ್ನು ಕ್ಲಿಕ್ ಮಾಡಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+