ರಾಜ್ಯೋತ್ಸವದ ಬೆನ್ನಲ್ಲಿ ಒಂದೆರಡು ಖುಷಿ ಸಮಾಚಾರ

ರಾಜ್ಯೋತ್ಸವದ ಹೊಸ್ತಿಲಲ್ಲಿ ನಿಂತು, ಈ ಹೊತ್ತಿನಲ್ಲಿ ಕೆಲ ಸಂಗತಿಗಳನ್ನು ಹಂಚಿಕೊಳ್ಳುವುದು ನಿಜಕ್ಕೂ ಖುಷಿಯ ಸಂಗತಿ. ಇಂಥ ಸಂಗತಿಗಳು ನಿಮಗೆ ಇನ್ನಷ್ಟು ಗೊತ್ತಿರಬಹುದು. ಗೊತ್ತಿದ್ದರೇ, ನಮಗೆ ಕಳುಹಿಸಿ. ವಿಶ್ವ ಕನ್ನಡಿಗರ ಜೊತೆ ಹಂಚಿಕೊಳ್ಳೋಣ.

  • ಎಸ್ಕೆ.ಶಾಮಸುಂದರ

ರಾಜ್ಯೋತ್ಸವದ ಬೆನ್ನಲ್ಲಿ ಒಂದೆರಡು ಖುಷಿ ಸಮಾಚಾರಇನ್ನೊಂದು ರಾಜ್ಯೋತ್ಸವ ಕನ್ನಡಿಗರ ಮನೆಬಾಗಿಲಿಗೆ ಬಂದು ಕರೆಗಂಟೆ ಒತ್ತುತ್ತಿದೆ. ನಮ್ಮ ಚೆಲುವ ಕನ್ನಡನಾಡಿನ ಇತಿಹಾಸ ಮತ್ತು ಪರಂಪರೆಯ ವೈಶಿಷ್ಟ್ಯವನ್ನು ಸ್ಮರಿಸುವಂತೆ, ಕೊಂಡಾಡುವಂತೆ ಹಾಗೂ ಕನ್ನಡ ಪ್ರೀತಿಯನ್ನು ದುಪ್ಪಟ್ಟು ಮಾಡಿಕೊಳ್ಳುವಂತೆ ಪ್ರೇರೇಪಿಸುತ್ತಿದೆ. ಕನ್ನಡ ನಾಡಿನ ಚಿನ್ನದ ಹಬ್ಬದ ಸಂಭ್ರಮದ ಸಂದರ್ಭದಲ್ಲಿ ಕನ್ನಡ ಓದುವ, ಕನ್ನಡದಲ್ಲಿ ಮಾತನಾಡುವ ಮತ್ತು ಕರ್ನಾಟಕದ್ದೆಲ್ಲವನ್ನೂ ಅನನ್ಯ ಪ್ರೀತಿಯಿಂದ ಕಾಣುವ ಸಂಕಲ್ಪವನ್ನು ಮತ್ತೊಮ್ಮೆ ಕೈಗೊಳ್ಳುವ ಸುಸಂದರ್ಭವೂ ಕನ್ನಡಿಗರ ಪಾಲಿಗೆ ಒದಗಿಬಂದಿದೆ ಎನ್ನುತ್ತಿದೆ.

ರಾಜ್ಯೋತ್ಸವದ ಮುನ್ನಾ ಶುಭಾಶಯಗಳನ್ನು ನಮ್ಮ ಜಾಲದ ಚಾರಣಿಗರಿಗೆ ಅರ್ಪಿಸುವ ಸಂತೋಷ ನಮ್ಮದು. ಈ ರಾಜ್ಯೋತ್ಸವದ ರಜಾಕಾಲದಲ್ಲಿ ನಿಮ್ಮ ಬಳಕೆಗಾಗಿ ಎರಡು ಕೊಂಡಿಗಳನ್ನು ಸೂಚಿಸಲಾಗಿದೆ. ಕರ್ನಾಟಕದ ಸುಂದರ ಪ್ರಕೃತಿ ಮತ್ತು ವಾಸ್ತುಶಿಲ್ಪಗಳ ದೃಶ್ಯಾವಳಿ ನೋಡಿ ಆನಂದಿಸುವ ಯುಟ್ಯೂಬ್ ವಿಡಿಯೋ ಪಾರ್ಲರ್ ಗೆ ಭೇಟಿಕೊಡಿ. ನಿಮ್ಮ ಸ್ನೇಹಿತರಿಗೂ ಈ ಕೊಂಡಿ ಕಳುಹಿಸಿ. ಈ ಕೊಂಡಿಯನ್ನು ದಟ್ಸ್ ಕನ್ನಡಕ್ಕೆ ಕಳಿಸಿಕೊಟ್ಟವರು ಹೊನಲುಲುವಿನಿಂದ ಸಂಪಿಗೆ ಶ್ರೀನಿವಾಸ.

ವಿಹರಿಸಿ : http://www.youtube.com/watch?v=__TKG2qUXrA

***

ಪ್ರತಿದಿನ ಏನಾದರೊಂದು ಹೊಸ ಚಟುವಟಿಕೆಗೆ ಕೈಹಾಕುವ ಗೂಗಲ್ ನಮ್ಮನಿಮ್ಮ ಅನುಕೂಲಕ್ಕಾಗಿ ಹೊಸ ಪ್ರಾಡಕ್ಟ್ ಬಿಡುಗಡೆ ಮಾಡಿದೆ. ಕನ್ನಡ ಬರೆಯುವುದು ಹೇಗೆ ಎಂದು ನಿತ್ಯ ಕೇಳುವ ಕನ್ನಡಿಗರಿಗೆ ಇದೊಂದರ್ಥದಲ್ಲಿ ಉತ್ತರವಾಗುತ್ತದೆ. ಈ ಹಲಗೆಯಲ್ಲಿ ನೀವು ಕನ್ನಡ ಅಕ್ಷರಗಳನ್ನು ಸಲೀಸಾಗಿ ಬರೆಯಬಹುದು. ಇಂಗ್ಲಿಷ್ ಅಕ್ಷರದಲ್ಲಿ ಸರಳವಾಗಿ ಕನ್ನಡ ಶಬ್ದಗಳನ್ನು ಬರೆಯಿರಿ. ಕನ್ನಡ ಅಲ್ಲೆ ಮೂಡುತ್ತದೆ.

ಇಂಗ್ಲಿಷ್ ಅಕ್ಷರ ಬರೆದು 'ಸ್ಪೇಸ್'ಕೊಟ್ಟ ಕೂಡಲೇ ಅದು ತಾನಾಗಿಯೇ ಭಾಷಾಂತರಗೊಳ್ಳುತ್ತದೆ. ತಪ್ಪಿದ್ದಲ್ಲಿ ಅಕ್ಷರದ ಮೇಲೆ ಕ್ಲಿಕ್ ಮಾಡಿ. ಅದು ತಿದ್ದಲು/ಕನ್ನಡ ಕೀಬೋರ್ಡಿನಲ್ಲಿ ಟೈಪಿಸಲು ಅವಕಾಶ ನೀಡುತ್ತದೆ. ರಾಜ್ಯೋತ್ಸವ ಹಬ್ಬಕ್ಕೆ ಈ ಸಾಧನವು ಗೂಗಲ್ ಕಂಪನಿ ಕನ್ನಡಿಗರಿಗೆ ಕೊಟ್ಟ ಉಡುಗೊರೆ ಎಂದು ಭಾವಿಸಿ ಸ್ವೀಕರಿಸೋಣ.

ನಿಮ್ಮ ಲೇಖನ, ಕವನ, ಕವಿತೆ ಏನಾದರೊಂದು ಬರೆದ ನಂತರ ಅದನ್ನು ನಕಲು ಮಾಡಿ ನೋಟ್ ಪ್ಯಾಡ್ ನಲ್ಲಿ ಸೇವ್ ಮಾಡಿಕೊಂಡು ಆನಂತರ ಇ-ಮೇಲ್ ಮೂಲಕ ರವಾನಿಸಬಹುದು. ಈ ಲಿಂಕ್ ಅನ್ನು ನಮಗೆ ಅನೇಕರು ಕಳಿಸಿಕೊಟ್ಟಿದ್ದಾರೆ. ಮೊದಲ ಇ-ಮೇಲ್ ಬಂದದ್ದು ಶ್ರೀಹರ್ಷ ಅವರಿಂದ. ಅವರು ಕಾಸರಗೋಡಿನ ಪೆರ್ಲ ನಿವಾಸಿ. ಅವರು ಹೇಳುತ್ತಾರೆ : ಮಿತವಾಗಿ ಬಳಸಿ ಕನ್ನಡ ಉಳಿಸಿ!

ಕ್ಲಿಕ್ ಮಾಡಿ : http://www.google.com/transliterate/indic/KANNADA

***

ಇಮೇಲು , ಎಸ್ಎಂಎಸ್ ಕಾಲದಲ್ಲಿ ಪತ್ರಬರೆಯುವ ಹವ್ಯಾಸ ನಶಿಸಿಹೋಯಿತು ಎಂದು ಯಾರೂ ಕೊರಗಬೇಕಾಗಿಲ್ಲ. ಕೈಬರಹದಲ್ಲಿ ಪತ್ರ ಬರೆಯುತ್ತಾ ಆ ಕಲೆ ಮತ್ತು ಸಂಹವನ ಮಾಧ್ಯಮವನ್ನು ಜೀವಂತವಾಗಿಡುವ ಉತ್ಸಾಹ ಕನ್ನಡಿಗರಲ್ಲಿ ಇನ್ನೂ ಜತನವಾಗಿದೆ. ಅದಕ್ಕೆ ಸಾಕ್ಷಿ ಭದ್ರಾವತಿಯ ದಾಳೆಗೌಡ. ಅವರು ಪ್ರತಿವರ್ಷ ಪತ್ರಮಿತ್ರರ ಸಮಾವೇಶವನ್ನು ನಡೆಸಿಕೊಂಡು ಬಂದಿದ್ದಾರೆ. ಈ ಬಾರಿಯ ಸಮಾವೇಶ ಅ.31ರ ಬುಧವಾರ ಭದ್ರಾವತಿಯಲ್ಲಿ ಏರ್ಪಾಟಾಗಿದೆ.

ಕೆಪಿಸಿಎಲ್ ನಲ್ಲಿ ಕಾರ್ಯಪಾಲಕ ಸಹಾಯಕ ಅಭಿಯಂತರರಾಗಿ ಕಾರ್ಯ ನಿರ್ವಹಿಸುತ್ತಿರುವ ದಾಳೇ ಗೌಡರವರು, ಸುಮಾರು 7ವರ್ಷಗಳ ಹಿಂದೆ ತಮ್ಮ ಆಪ್ತ ಮಿತ್ರರೊಂದಿಗೆ ಪ್ರಾರಂಭಿಸಿದ ಪತ್ರ ಜಾಲ, ಇಂದು ರಾಜ್ಯದ ಗಡಿ ದಾಟಿ ಹೊರ ರಾಜ್ಯಗಳಿಗೂ ಹಬ್ಬಿದೆ. ಏನಿದು ಪತ್ರ ಮಿತ್ರ ಜಾಲ ಎನ್ನುವಿರಾ?
ಪ್ರತಿ ವರ್ಷ ಒಂದು ವಿಷಯವನ್ನು ಆಯ್ದು ದಾಳೆಗೌಡರವರು ತಮ್ಮ ಸದಸ್ಯ ಮಿತ್ರರಿಗೆ ನೀಡುತ್ತಾರೆ. ಹೊಸದಾಗಿ ಸೇರ್ಪಡೆಯಾದ ಸದಸ್ಯ ಆಯ್ದ ವಿಷಯದ ಬಗ್ಗೆ ಇವರಿಗೆ ಪತ್ರ ಬರೆಯುತ್ತಾ ಹೋಗುತ್ತಾರೆ.

ನಾಳೆ ನಡೆಯುವ ಸಮಾರಂಭದಲ್ಲಿ ವರ್ಷದಿಂದ ಸಂಗ್ರಹವಾದ ಪತ್ರಗಳನ್ನು ಶೇಖರಿಸಿ, ಪುಸ್ತಕ ರೂಪದಲ್ಲಿ ಅನಾವರಣಗೊಳಿಸಲಾಗುತ್ತದೆ. ಜೊತೆಗೆ ಒಂದು ವರ್ಷ ಪೂರೈಸಿದ ಸದಸ್ಯರಿಗೆ ಹಿರಿಯ ಸದಸ್ಯರ ವಿವರವುಳ್ಳ ಕೈಪಿಡಿ ಲಭ್ಯವಾಗುತ್ತದೆ. ಅದರಲ್ಲಿ ತಮಗೆ ಬೇಕಾದ ಕ್ಷೇತ್ರದ ಸದಸ್ಯರೊಂದಿಗೆ ಗೆಳೆತನ ಬೆಳೆಸಬಹುದು.

ಪತ್ರ ಬರೆಯಿರಿ : ಇಮೇಲ್ ಇರುವುದಿಲ್ಲ. ಅಂಚೆ ಕಾಗದ, ಅಂತರ್ ದೇಶೀಯ ಪತ್ರ, ಏರ್ ಮೇಲ್ ಅಥವಾ ಕೂರಿಯರ್ ಮೂಲಕ ಪತ್ರ ಬರೆಯುವವರು ದಾಳೆಗೌಡರ ವಿಳಾಸ ಗುರುತು ಹಾಕಿಕೊಳ್ಳಿ. ಎಚ್. ದಾಳೆಗೌಡ,ನಂ 11, ಕೆಪಿಸಿ ಕಾಲೋನಿ, ಬಿಆರ್ ಪ್ರಾಜೆಕ್ಟ್, ಭದ್ರಾವತಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ. ಪಿನ್ ಕೋಡ್ : 577 115- ಸಂಪರ್ಕ ಸಂಖ್ಯೆ : 9480141808

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+