ಸ ರಘುನಾಥ ಅಂಕಣ; ಅವನಿಗೆ ಪಾರ್ಟೂ ಕೊಡು, ಸುನಂದಾಳನ್ನೂ ಕೊಟ್ಟುಬಿಡು...
ಈಗ ಹೇಳಪ್ಪ ನರಸಿಂಗ ನಿನ್ನ ಇರಾದೆ ಎಂದು ಮೋಟಪ್ಪ ಕೇಳಿದ. ರಾಜಮಾರ್ತಾಂಡನ ಪಾರ್ಟು ಸೋಮೇಶನಿಗೆ, ಕಲಹಂಸನ ಪಾರ್ಟು ರಂಗ ಇಲ್ಲವೇ ಸಿದ್ಧನಿಗೆ ಕೊಡಬಹುದು. ಇನ್ನು ಸದಾರಮೆ ಪಾರ್ಟಿಗೆ ಗಂಡಸೋ, ಹೆಂಗಸೋ? ಗಂಡಸಾದರೆ ಯಾರು, ಹೆಂಗಸಾದರೆ ಯಾರು ಅಂತ ಅಪ್ಪ ಹೇಳಲಿ ಅಂದ ನರಸಿಂಗರಾಯ. ಅಪ್ಪ ಕೂಡಲೇ ಗಂಡಸು ಬೇಡ. ಹೆಂಗಸಾಗಲಿ ಅಂದ.
Recommended Video
ಯಾರು ಆ ಹೆಂಗಸು? ಎಂದು ತನ್ನ ಮನಸ್ಸಿನಲ್ಲಿದ್ದುದನ್ನು ಹೊರ ಹಾಕದೆ ಕೇಳಿದ ಮೋಟಪ್ಪ. ನಮ್ಮ ಸುನಂದಾಳಿಗಿಂತ ಬೇರಾರು? ಉತ್ತರವಿರುವ ಮರು ಪ್ರಶ್ನೆ ಕೇಳಿದ ಅಪ್ಪ. ನನ್ನ ಮನಸ್ಸಿನಲ್ಲಿದ್ದುದೂ ಅವಳೇ ಅಂದ ಮೋಟಪ್ಪ. ಅಲ್ಲಿದ್ದವರು ಬಯಸಿದ್ದೂ ಅದೇ, ಹಿರಿಯರಿಬ್ಬರು ಹೇಳಿದ್ದೂ ಅದೇ.
ಬೋಡೆಪ್ಪ, ಪಿಲ್ಲಣ್ಣನದು ಒಂದೇ ತಕರಾರಿನ ಪ್ರಶ್ನೆ, 'ಸೋಮೇಶನಿಗೇಕೆ ರಾಜಮಾರ್ತಾಂಡನ ಪಾರ್ಟು?' ಮುನೆಕ್ಕ ನನ್ನದೂ ಅದೇ ಮಾತು ಎಂದಳು. ನರಸಿಂಗರಾಯ ಯಾಕಾಗಬಾರದು? ತಪ್ಪೇನು ಅಂದ. ಪಿಲ್ಲಣ್ಣ ದೆವ್ವ ಹೊಕ್ಕವನಂತೆ ಆವೇಶದಿಂದ, ಕೊಂಚ ಏರುಧ್ವನಿಯಲ್ಲೇ 'ರಾಜಮಾರ್ತಾಂಡನ ಪಾರ್ಟೂ ಕೊಡು, ಸುನಂದಾಳನ್ನೂ ಕೊಟ್ಟುಬಿಡು. ಏದ್ದು ಬಾರೋಲೇ ಬೋಡಿಗ' ಎಂದು ಎದ್ದು ನಿಂತು ಅವನ ಕೈ ಹಿಡಿದೆಳೆದ. ಬೋಡಪ್ಪನಿಗೂ ಮೊದಲು ಮುನೆಕ್ಕ ಎದ್ದು ನಿಂತಳು. ಕೆಲ ನಿಮಿಷ ಆಘಾತದ ಮೌನ!

ಮಾತು ಎಲ್ಲಿಗೋ ಹೋಗೋದು ಬೇಡ ಪಿಲ್ಲ. ಇಲ್ಲಿ ಪಾರ್ಟು ವಿಚಾರ ನಡೀತಿರೋದು. ಅದಾಗಲಿ ಅಂದ ಮೋಟಪ್ಪ. ಆದರೆ ವಿಷಯ ಪಾರ್ಟಿನ ಆಚೆ ಹೋಗಿತ್ತು. ಅಪ್ಪ ಮಗ ಇಬ್ಬರೂ ಅನ್ಯ ಮನಸ್ಕರಾಗಿದ್ದರು. ಪಾರ್ಟಿನ ವಿಷಯ ಇನ್ನೊಂದು ದಿನಕ್ಕಿರಲಿ ಅನ್ನಿಸಿತ್ತು ಅಪ್ಪಯ್ಯನ ಮನಸ್ಸಿಗೆ. ಆದರೆ ಸಂಜೆ ವೇಳೆಗೆ ತೀರ್ಮಾನವಾಗಿ ಪ್ರಕಟವಾಗದಿದ್ದರೆ ಏನೇನೋ ಅನುಮಾನಗಳು ಹುಟ್ಟಿಕೊಳ್ಳುವುವು. ಪಿಲ್ಲಣ್ಣನ ಮಾತಿನ ಮರ್ಮವೇನು? ನರಸಿಂಗ ಮತ್ತು ಸುನಂದಾ... ನಿಜವೆ? ಮುನೆಕ್ಕ, ಬೋಡೆಪ್ಪ, ಪಿಲ್ಲಣ್ಣ ಒಂದಾಗಿ ಅವರಿಗೆ ಕುಮ್ಮಕ್ಕೆ?
ಮೋಟಪ್ಪ ಚಿಂತಿತನಾಗಿದ್ದ. ಮಾತು ಅವನಿಂದಲೇ ಹೊರಡಬೇಕಿತ್ತು. ಆದರೆ ಅದು ಯಾವುದೆಂದು ತಿಳಿಯದಾಗತ್ತು. ಬಹಳ ಹೊತ್ತಿನ ನಂತರ ಅವನ ನಾಲಗೆ ಚೇತನಗೊಂಡಿತು. ಈಗ ಪಾರ್ಟಿನ ವಿಚಾರವಾಗಲಿ. ಪಿಲ್ಲಣ್ಣನ ಮಾತಿನ ವಿಷಯ ರಾತ್ರಿ ಮನೆಯಲ್ಲಾಗಲಿ. ಅವರೇನೋ ಹುಡುಗರು. ನೀನೂ ಹೀಗೆ ಎದ್ದರೆ ಹೇಗೆ ಮುನೆಕ್ಕ? ಮೊದಲು ಕುಳಿತುಕೊಳ್ಳಿ ಎಂದ. ಅವರು ಕುಳಿತರು. ರಾಜಮಾರ್ತಾಂಡನ ಪಾರ್ಟು ನರಸಿಂಗ ಮಾಡಲಿ ಎಂದಳು ಮುನೆಕ್ಕ. ಅದು ಸರಿ ಎಂದ ಪಿಲ್ಲಣ್ಣ.
ಹೌದೆಂದ ಬೋಡೆಪ್ಪ. ಅಪ್ಪಯ್ಯ ಮೌನಿ. ಏನಂತೀ ನರಸಿಂಗ ಅಂದ ಮೋಟಪ್ಪ. ನನಗೆ ಬೇಡ. ಪಿಲ್ಲಣ್ಣನೇ ಮಾಡಲಿ, ಇಲ್ಲವೆ ಬೋಡೆಪ್ಪ ಮಾಡಲಿ ಅಂದ. ನಡಿಯೊಲೇ ನಮಗ್ಯಾಕೆ? ಯಾರಿಗೆ ಯಾವ ಪಾರ್ಟು ಕೊಟ್ಟುಕೊಂಡರೆ ನಮಗೇನು? ಎಂದು ಪಿಲ್ಲಣ್ಣನಿಗೆ ಹೇಳಿ ಮೇಲೆದ್ದ ಬೋಡೆಪ್ಪ, ಪರಿಸ್ಥಿತಿಯನ್ನು ಮೊದಲಿಗೆ ತಂದ. ಖಿನ್ನನಾಗಿದ್ದ ನರಸಿಂಗರಾಯ, ವ್ಯಗ್ರನಾದ. ಬೋಡೆಪ್ಪನನ್ನು ಹೊಡೆಯಲು ಹೋದ. ಮೋಟಪ್ಪ ಅಡ್ಡ ನಿಂತು ತಡೆದ. ಅಪ್ಪಯ್ಯನಲ್ಲಿ ಯಾವ ಚಲನೆಯೂ ಇಲ್ಲ. ಇಲ್ಲೇನೋ ನಾಟಕ ನಡೆಯುತ್ತಿದೆ. ನನಗೇನೋ ಸೂಚನೆ ಕೊಡಲು ಈ ನಾಟಕವೇ? ಮೊದಲ ಬಾರಿಗೆ ಮಗನನ್ನು ಅನುಮಾನಿಸಿದ. ಅದು ಸುನಂದಾಳ ಕಡೆಗೂ ಹರಿಯುತ್ತಿತ್ತು.
ಸೋಮೇಶನಿಗೇಕೆ ಆ ಪಾತ್ರ ಕೊಡಬೇಕಂತಿ ನರಸಿಂಗ ಎಂದು ಕೇಳಿದ ಮೋಟಪ್ಪ. ಆ ಮುಖ್ಯ ಪಾತ್ರಾನ ಅವನು ನಿಭಾಯಿಸುತ್ತಾನೆ ಅಂತಲಾ? ಆ ಹುಟ್ಟು ಅವನದಾ? ಚುಚ್ಚಿದ ಪಿಲ್ಲಣ್ಣ. ನಿನಗೆ ಹೇಳಲಿಲ್ಲ ಎಂದ ನರಸಿಂಗರಾಯ. ಸರಿಯಪ್ಪ. ಸಿದ್ಧ, ರಂಗ ಯಾಕೆ? ಮೋಟಪ್ಪನದೇ ಪ್ರಶ್ನೆ. ಅವರು ಒಳ್ಳೆಯವರಾಗಲಿ ಅಂತ. ನರಸಿಂಗರಾಯನ ಉತ್ತರ. ಓ, ಇವನು ಪಾತ್ರ ಕೊಟ್ಟ ಅಂತ ಅವರು ಲಕ್ಷ್ಮಣ, ಭರತ, ಶತ್ರುಘ್ನರಾಗಿಬಿಡುತ್ತಾರೆ. ಇವನು ಅವರಿಗೆ ರಾಮ. ಮುಂದಿನ ನಾಟಕ ರಾಮ ಸೋದರರು. ಬೋಡಪ್ಪನ ವ್ಯಂಗ್ಯ.
ನರಸಿಂಗ ಹೇಳಿದಂತೆಯೇ ಆಗಲಿ ಎಂದು ಗಂಭೀರ ಧ್ವನಿಯಲ್ಲಿ ಹೇಳಿದ ಅಪ್ಪಯ್ಯ. ಆಯ್ತು ಮಾಡಿಕೊಳ್ಳಿ, ನಮಗೂ ನಿಮ್ಮ ನಾಟಕಕ್ಕೂ ಸಂಬಂಧವಿಲ್ಲ ಎಂದು, ಬರ್ತಿಯೇನು ಮುನೆಕ್ಕ ಹೋಗೋಣ ಎಂದರು ಗೆಳೆಯರಿಬ್ಬರು. ಅಪ್ಪಯ್ಯನಿಗೆ ಏಕೋ ಇದು ಕೆಟ್ಟ ಬೆಳವಣಿಗೆ ಅನ್ನಿಸಿತು. ಹೆಜ್ಜೆ ಎತ್ತಿದವರನ್ನು ತಡೆದು, ರಾತ್ರಿಗೆ ಮನೆಗೆ ಬನ್ನಿ. ಬರದಿದ್ದರೆ ದೇವರಾಣೆ. ನಾನು ಅನ್ನ ನೀರು ಮುಟ್ಟುವುದಿಲ್ಲ ಎಂದ. ಅವರು ಏನೂ ಮಾತನಾಡದೆ ಹೊರಟು ಹೋದರು. ನೀವು ನಡಿಯಿರಿ, ನಾನು ಬರುತ್ತೇನೆ ಅಂದ ನರಸಿಂಗರಾಯ. ಮುನೆಕ್ಕ, ಅಪ್ಪಯ್ಯ, ಮೋಟಪ್ಪ ಮೌನವಾಗಿ ಹೆಜ್ಜೆ ಹಾಕಿದರು.












Click it and Unblock the Notifications