ಸಾವಿರಕ್ಕೂ ಅಧಿಕ ಹೆರಿಗೆ ಮಾಡಿಸಿದ ಮಹಾತಾಯಿ ಪದ್ಮಸಾಲಿ ಲಕ್ಷ್ಮೀದೇವಮ್ಮ
'ಕೈಲಿ ಶಕ್ತಿಯಿತ್ತು, ಕಣ್ಣಲ್ಲಿ ದೃಷ್ಟಿ ಇತ್ತು, ಬದುಕಿಗೆ ಕೂಲಿಯಿತ್ತು. ದೇವರ ದಯೆ ಇತ್ತು. ಅವನು ಮಾಡಿದ, ನಾನು ಮಾಡಿದೆ ಅಷ್ಟೆ' ಎಂದು 84 ವರ್ಷದ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ವಳಗೇರನಹಳ್ಳಿಯ ಪದ್ಮಸಾಲಿ ಲಕ್ಷ್ಮೀದೇವಮ್ಮ, ತಾವು ಮಾಡಿದ ಸಾಧನೆಯ ಬಗ್ಗೆ ಕಿಂಚಿತ್ತೂ ಅರಿವಿಲ್ಲದೆ ಹೇಳಿದ ಮಾತಿದು.
ಹೆರಿಗೆ ಮಾಡಿದರೆ ಕೈತುಂಬಿ ಸೋರುವಷ್ಟು ಹಣ ಬರುತ್ತದೆ, ಪ್ರಚಾರ, ಪ್ರಶಸ್ತಿ ಎಂಬುದಿದೆ ಎಂಬುದೂ ತಿಳಿಯದ ಈಕೆ ತಮ್ಮ ಐವತ್ತು ವರ್ಷಗಳ ಸುದೀರ್ಘ ಸೂಲಗಿತ್ತಿ ಕಾಯಕದಲ್ಲಿ ಮಾಡಿಸಿದ ಹೆರಿಗೆಗಳ ಸಂಖ್ಯೆ ಒಂದು ಸಾವಿರಕ್ಕೂ ಅಧಿಕ.
ಲೆಕ್ಕವಿಲ್ಲದಷ್ಟು ಸಲ ಹಿಟ್ಟು-ಗೊಜ್ಜು ಮಾಡಿ ಬಡಿಸಿರುವ ಮತ್ತು ಉಂಡಿರುವ ಈ ತಾಯಿಯನ್ನು 'ಹಿಟ್ಟು-ಗೊಜ್ಜು' ಅಂಕಣಕ್ಕಾಗಿ ಮಾತನಾಡಿಸಿದಾಗ ತಮ್ಮ ಅನುಭವವನ್ನು ಹಂಚಿಕೊಂಡಿದ್ದು ಹೀಗೆ.
ಈಗಲೂ ಹೆರಿಗೆ ಮಾಡಿಸುವ ಆಸೆ ಇದೆ. ಆದರೆ 'ಕಣ್ಣುಗಳು ಕೂಸೋಗವೆ' (ಕಾಣದಾಗಿವೆ). ಆ ದೇವರು ಕಣ್ಣುಗಳಲ್ಲಿ ಬೆಳಕು ಇಟ್ಟದ್ದರೆ ಕೈಗೂ ಶಕ್ತಿ ಇರುತ್ತಿತ್ತು. ಆದರೆ ಕಣ್ಣೇ ಇಲ್ಲದಂತೆ ಆಗೋಗಿದೆ ಎಂದು ವಿಷಾದಿಸಿದರು.

ತಾಯಿಯಿಂದ ಪ್ರೇರಣೆ
ಬಡತನದಲ್ಲಿ ಹುಟ್ಟಿ ಬೆಳೆದ ಇವರ ಕೈ ಹಿಡಿದವರು ಬಡವರೇ ಆದ ರಂಗಪ್ಪ. ಇಬ್ಬರೂ ಕೂಲಿ ಮಾಡಿ ಸಂಸಾರ ನಡೆಸುತ್ತಿದ್ದರು. ತಾಯಿ ಅಚ್ಚಮ್ಮ ಹೆರಿಗೆಗಳನ್ನು ಮಾಡುತ್ತಿದ್ದುದ್ದನ್ನು ನೋಡಿ ಅದರಂತೆ ನಾನೂ ಮಾಡಬೇಕೆಂದು ಕಲಿತೆ. ನನ್ನ ಮೂವತ್ತನೇ ವಯಸ್ಸಿನಲ್ಲಿ ಮೊದಲ ಹೆರಿಗೆ ಮಾಡಿದೆ ಎಂದು ನೆಪಿಸಿಕೊಂಡು, ಗಂಡನ ಪ್ರೋತ್ಷಾಹವನ್ನು ಸ್ಮರಿಸಿದರು.

ಲಚ್ಮೀದೇವಮ್ಮನಿದ್ದಾಳೆ ಎಂಬ ನಂಬಿಕೆ
ಹೆರಿಗೆಯಲ್ಲಿ ಕೈ ಪಳಗಿದಂತೆ ವಳಗೇರನಹಳ್ಳಿ ಮತ್ತು ಸುತ್ತಲ ಗ್ರಾಮಗಳ ಗರ್ಭಿಣಿಯರಿಗೆ ಅವರ ಮನೆಯವರಿಗೆ ಲಚ್ಮೀದೇವಮ್ಮನಿದ್ದಾಳೆ ಎಂಬ ನಂಬಿಕೆ ಹುಟ್ಟಿತ್ತು. ಅದರಂತೆ ಇವರು ಹೆರಿಗೆ ಮಾಡುತ್ತಿದ್ದರು. ನೀವು ಮಾಡಿದ ಹೆರಿಗೆಗಳಲ್ಲಿ ಅತ್ಯಂತ ಕಷ್ಟ ಎನಿಸಿದ ಹೆರಿಗೆ ಯಾವುದೆಂದು ಕೇಳಿದ ಪ್ರಶ್ನೆಗೆ, ಲಚ್ಚುಮಕ್ಕ ಎಂಬ ಹೆಂಗಸಿನ ಹೊಟ್ಟೆಯಲ್ಲಿದ್ದ ಎರಡೂ ಮಕ್ಕಳು ಹೊಟ್ಟೆಯಲ್ಲೇ ಸತ್ತು ಹೋಗಿದ್ದವು. ಆಗ ಹತ್ತಿರದಲ್ಲಿ ಆಸ್ಪತ್ರೆ ಇರಲಿಲ್ಲ. ಪೇಟೆ ಆಸ್ಪತ್ರೆಗೆ ಹೋಗುವುದಕ್ಕೆ ಅನುಕೂಲವಿರಲಿಲ್ಲ. ದೇವರ ಮೇಲೆ ಭಾರ ಹಾಕಿ, ಆಕೆಗೆ ಧೈರ್ಯ ಹೇಳಿ, ಉಪಾಯವಾಗಿ ಕೈ ಹಾಕಿ ಎಳೆದು ಹಾಕಿಬಿಟ್ಟೆ.

ದೊಡ್ಡ ಜೀವ ಉಳಿದುಕೊಂಡಿತು
ಉಸಿರಿರದವು ಹೊರಗೆ ಬಂದವು. ಪುಣ್ಯ ಗಟ್ಟಿಗಿತ್ತು. ದೊಡ್ಡ ಜೀವ ಉಳಿದುಕೊಂಡಿತು ಎಂದು ಸಾಭಿನಯ ತೋರಿಸಿ ಅದು ಇದೀಗ ನಡೆದಂತೆ ನಿಟ್ಟುಸಿರು ಬಿಟ್ಟರು. ಹೆರಿಗೆ ಸಮಯದಲ್ಲಿ ಮೊದಲು ಮಗುವಿನ ತಲೆ ಹೊರಬಂದರೆ ಕಷ್ಟವಿಲ್ಲ. ಆದರೆ ಕೈಯೋ ಕಾಲೋ ಬಂದರೆ ತುಂಬಾ ಕಷ್ಟ. ಒಂದು ಹೆರಿಗೆಯಲ್ಲಿ ಹೀಗಾಗಿತ್ತು. ಆಗ ಆ ಬಸುರಿಗೆ ದೇವರ ಧ್ಯಾನ ಮಾಡಲು ಹೇಳಿ ಮೆಲ್ಲಗೆ ಆ ಕೈಯನ್ನು ಒಳಕ್ಕೆ ತಳ್ಳಿಬಿಟ್ಟೆ. ಆ ಹೆಣ್ಣು ಜೀವ ಹೋದಂತೆ ಕಿರುಚಿಕೊಂಡಳು. ಆ ಕ್ಷಣದಲ್ಲಿ ನನಗೆ ಕೈಕಾಲು ಆಡಲಿಲ್ಲ. ಆ ಮೇಲೆ ಎರಡು ಜೀವ ಎರಡಾದಾಗ ದೇವರಿದ್ದಾನೆ ಅನ್ನಿಸಿತು ಎಂದು ಇನ್ನೊಂದು ಕಷ್ಟದ ಪ್ರಸಂಗವನ್ನು ಹೇಳಿದರು. ಹಾಗೆ ಗರ್ಭಜಲ ಬತ್ತಿದ ಹೆರಿಗೆಗಳನ್ನು ನೆನೆಸಿಕೊಂಡರು.

ನಮೂದಾಗದ ದಾಖಲೆ
ಗರ್ಭದಲ್ಲೇ ನಿರ್ಜೀವಾದ ನಾಲ್ಕು ಮಕ್ಕಳನ್ನು ಹೊರತೆಗೆದು ತಾಯಿಯ ಜೀವವನ್ನೂ ಉಳಿಸಿದ್ದು ನಮೂದಾಗದ ದಾಖಲೆ. ಬಸಿರಲ್ಲಿ ಎರಡು ಮಕ್ಕಳನ್ನು ಹೊತ್ತು ಹೆರಿಗೆಗೆ ಕಷ್ಟವಾಗಿದ್ದ ಭಜಂತ್ರಿ ಜಯಮ್ಮನ ಹೆರಿಗೆಯನ್ನು ಸಲೀಸಾಗಿ ಮಾಡಿದ್ದರು. ಆ ಎರಡು ಮಕ್ಕಳು ಈಗ ತಾತಂದಿರಾಗಿ ಈಕೆಯ ಕಣ್ಣ ಮುಂದೆಯೇ ಇದ್ದಾರೆ.

ಎಲ್ಲ ಅನುಕೂಲಗಳಿರುವ ನುರಿತ ವೈದ್ಯರಿಗೂ ಕಷ್ಟ
ಈ ಕುರಿತು ಶ್ರೀನಿವಾಸಪುರದ ವೈದ್ಯ ವೈ.ವಿ. ವೆಂಕಟಾಚಲ ಅವರನ್ನು ಅಭಿಪ್ರಾಯ ಕೇಳಿದಾಗ, ಗರ್ಭದಲ್ಲಿಯೇ ಮರಣಿಸಿದ ಮಕ್ಕಳನ್ನು ತಾಯಿ ಪ್ರಾಣಕ್ಕೆ ಅಪಾಯವಾಗದಂತೆ ಹೊರತೆಗೆಯುವುದು ಎಲ್ಲ ಅನುಕೂಲಗಳಿರುವ ನುರಿತ ವೈದ್ಯರಿಗೂ ಕಷ್ಟ. ಹಾಗೆ ಗರ್ಭಜಲ ಹರಿದು ಹೋದ ಹೆರಿಗೆಯೂ ಕಷ್ಟ. ಇಂಥ ಕಷ್ಟಕರ ಹೆರಿಗೆಗಳನ್ನು ಈಕೆ ಮಾಡಿರುವುದುನ್ನು ನೋಡಿದರೆ ಈಕೆ ನಿಸ್ಸಂಶಯವಾಗಿ ಮಹಾನ್ ಪ್ರಸೂತಿತಜ್ಞೆ ಎಂದು ಪ್ರಶಂಸಿದರು. ಹಾಗೆಯೇ ಆಕೆ ಬಸುರಿಯರನ್ನು ಮಲಗಿಸಿಯೇ ಹೆರಿಗೆ ಮಾಡುತ್ತಿದ್ದ ವಿಧಾನದ ಕುರಿತು ಇದು ರಿಲ್ಯಾಕ್ಸ್ ಮಾಡಿ ಹೆರಿಗೆ ಮಾಡುವ ಉತ್ತಮ ವಿಧಾನವೆಂದು ಹೇಳಿದರು.

ಪ್ರತಿ ಹೆರಿಗೆಯೂ ಪ್ರಶಸ್ತಿ, ಗೌರವ, ಸನ್ಮಾನ
ತಮ್ಮ ಅನುಭವಗಳ ಕುರಿತು ಹೇಳುವಾಗ ಕಾಣಿಸದ ಕಣ್ಣುಗಳಲ್ಲಿ ಹೊಳಪು ತುಂಬಿ, ಕ್ಲಿಷ್ಟಕರವಾದ ಹೆರಿಗೆಯನ್ನು ಯಶಸ್ವಿಯಾಗಿ ನೆರವೇರಿಸಿ ಬಂದ ಪ್ರಸೂತಿ ತಜ್ಞರಂತೆ ಉತ್ಸಾಹದಿಂದ ವಿವರಿಸುವ ಈ ತಾಯಂದಿರ ತಾಯಿ, ಒಮ್ಮೆ ಆಹ್ವಾನದ ಮೇರೆಗೆ ನರ್ಸುಗಳಿಗೆ ತರಬೇತಿ ಕೊಟ್ಟು ಬಂದಿದ್ದಾರೆ. ಬಡತನವಿದ್ದೂ, ಹಣದ ಅವಶ್ಯಕತೆ ಇದ್ದೂ ಒಂದು ಬಿಡಿಕಾಸನ್ನೂ ಆಶಿಸದ ಈ ಮಹಾಮಾತೆಗೆ ತಾನು ಮಾಡಿದ ಪ್ರತಿ ಹೆರಿಗೆಯೂ ಪ್ರಶಸ್ತಿ, ಗೌರವ, ಸನ್ಮಾನ.
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು












Click it and Unblock the Notifications