ಸ.ರಘುನಾಥ್ ಅಂಕಣ: ಚಿನ್ನಪಾಪಳಿಗೆ ವರನಾದ ಕೆಂಪರಾಜ

ಚುನಾವಣೆ ಅನೇಕ ತಂತ್ರಗಳ ಒಂದು ವ್ಯೂಹವೆಂದು ನರಸಿಂಗರಾಯ ತಿಳಿದಿದ್ದ. ಮನೆಮನೆಗೆ ಹೋಗಿ ಸಮ್ಮತಿಯೊಂದಿಗೆ ವಚನ ಪಡೆಯುವ ತಂತ್ರವನ್ನು ಕೈಬಿಟ್ಟ. ಈವರೆಗೆ ನಡೆಸಿದ್ದನ್ನು ಗುಟ್ಟು ಮಾಡಿದ. ಒಳಗೊಳಗೇ ಗಾಳವನ್ನು ಸಿದ್ಧಮಾಡುತ್ತ ದೊಡ್ಡಗೋವಿಂದಪ್ಪ ಅದಕ್ಕೆ ಬೀಳುವ ತಂತ್ರವೊಂದನ್ನು ಹೆಣೆಯತೊಡಗಿದ.

ಗಾಳ ಹಾಕುವ ಮೊದಲು ಕೆಂಪರಾಜನೊಂದಿಗೆ ಮೂರು ಗಂಡುಗಳು ತಪ್ಪಿಹೋಗಿ ಗೋವಿಂದಪ್ಪನಿಗೆ ಚಿಂತೆತಂದಿದ್ದ ಮಗಳು ಚಿನ್ನಪಾಪಳ ವಿಷಯ ಪ್ರಸ್ತಾಪಿಸಿ, ನಿನಗೆ ಅವಳ ಮೇಲೆ ಮನಸಿರುವುದು ನನಗೆ ತಿಳಿದಿದೆ ಅಂದವನು, ಮೂರೂ ಗಂಡುಗಳನ್ನು ತಪ್ಪಿಸಿದ್ದು ನೀನೇ ಅಂತಲೂ ಗೊತ್ತು ಎಂದು ಊಹೆಯ ಗಾಳಿ ಊದಿದ. ಎರಡನೆಯ ಮಾತಿಗೆ ತಬ್ಬಿಬ್ಬಾದ ಕೆಂಪರಾಜ, ಮನಸಿರುವುದು ನಿಜ. ಆದರೆ ನಮ್ಮಮ್ಮನಾಣೆ ತಪ್ಪಿಸಿದ್ದು ನಾನಲ್ಲ ಅಂದ.

ಹಾಗಾದರೆ ಚಿನ್ನಪಾಪಳನ್ನು ಮದುವೆ ಆಗಲು ಸಿದ್ಧ ಅನ್ನು ಅಂದ. ಕೆಂಪರಾಜ, ಹುರುಳಿ ತಿಂತೀಯ ಬಸವಣ್ಣ ಅಂದರೆ ಹೂಂ ಅನ್ನುವಂತೆ ತಲೆ ಆಡಿಸಿದ. ವಿಷಯ ತಿಳಿದ ಸಾದಮ್ಮ, ನಮ್ಮಣ್ಣ ಒಪ್ಪಿದರೆ ಆಯಿತು ಅಂದಳು. ಈ ಮಾತಿನಿಂದ ಮುಂದುವರೆಯಬಹುದು ಅನ್ನಿಸಿ, ನರಸಿಂಗರಾಯ ಮುನೆಂಕಟೇಗೌಡನಲ್ಲಿ ಪ್ರಸ್ತಾಪಿಸಿದಾಗ, ಇದನೆಲ್ಲ ಎಲ್ಲಿ ಕಲಿತೆ ಎಂದು ಅವನ ನೆತ್ತಿಯ ಮೇಲೆ ಮೊಟುಕಿ, ಏನೇನು ನಡೆಸುತ್ತೀಯೊ ನಡೆಸು ಅಂದ.

Sa.Raghunath Column: Kemparajas Marriage Was Fix With Chinnapapa

ಮೂರು ಗಂಡುಗಳು ತಪ್ಪಿವೆ ನಾರಾಯಣಕ್ಕ. ಮಗಳು ಬಲೀತಿರೋದು ಕಂಡೆಯ? ಹೀಗೆ ಆದರೆ ಎರಡನೇ ಸಂಬಂಧಾನೋ, ಕೂಡಾವಳಿಯೋ ನೋಡಬೇಕಾಗುತ್ತೆ. ಇದು ಬೇಕಾ? ಅಂದ ನರಸಿಂಗರಾಯ. ನಾನೇನು ಮಾಡೋಳಿದ್ದೇನೆ. ಎಲ್ಲ ನನ್ನ ಕರ್ಮ ಎಂದು ಅವಳು ಸೆರಗಿನಲ್ಲಿ ಕಣ್ಣೀರೊರೆಸಿಕೊಡಳು. ನೀನು ಗೋವಿಂದಪ್ಪನನ್ನು ಗಟ್ಟಿಯಾಗಿ ಕುರಿಸಿಕೊಂಡು ಮಾತಾಡಬೇಕು ಅಂದ. ಅದೂ ಆಯ್ತೊ ಮಾರಾಯ. ಹಂಗಾರೆ ನೀನೇ ಗಂಡು ನೋಡು ಅಂದು ಬಾಯಿ ಮುಚ್ಚಿಸಿಬಿಟ್ಟ ಅಂದಳು. ಹಾಗಿದ್ದರೆ ನೋಡು ಅಂದ. ನನಗಾ ಬೊಗಿಸೀನ (ಯೋಗ್ಯತೆಯೆ) ಅಂದಳು. ಈ ಮಾತಿನಿಂದ ನರಸಿಂಗರಾಯನಿಗೆ ಕೋಟೆಗೆ ನುಸುಳಲು ದಾರಿ ಸಿಕ್ಕಿತು, ನುಸುಳಿಬಿಟ್ಟ.

ನಾರಾಯಣಕ್ಕ ನನಗೆ ಗೊತ್ತಿರೊ ಒಂದು ಗಂಡಿದೆ, ಯೋಗ್ಯ. ಚಿನ್ನಪಾಪ ರಾಣಿ ಹಾಗಿರ್ತಾಳೆ. ಅವನು ನಿನಗೆ ದೂರದಿಂದ ಸಂಬಂಧಿಕನೂ ಹೌದು. ನೀನು ಮನಸು ಮಾಡಿದರೆ ಗೋವಿಂದಪ್ಪನೂ ಒಪ್ಪದೆ ಇರೋದಿಲ್ಲ. ಮನಸ್ಸು ಮಾಡಬೇಕಷ್ಟೆ ಅಂದ. ಹೌದಾ! ಎಲ್ಲಿನೋನು? ಈ ಸಂಬಂಧದ ಋಣ ಕೂಡಿಬಂದರೆ ನಿನಗೆ ಮುದ್ದೆ ಬೆಲ್ಲ ಕೊಡ್ತೀನಿ ಅಂದಳು. ಅದು ಆಮೇಲಿನದು. ಎಲ್ಲಿಯೋನೊ ಅಲ್ಲ, ಈ ಊರಿನೋನೆ, ನಿನಗೆ ಚೆನ್ನಾಗಿ ಗೊತ್ತಿರೋನು ಎಂದು, ಕೋಳಿ ಕೈಗೆ ಸಿಗಲು ಕಾಳು ಹಾಕಿದ.

ಈ ಊರೋನಾ? ಯಾರಪ್ಪಾ? ಅಂದು, ನರಸಿಂಗರಾಯನ ಎರಡೂ ಕೈ ಹಿಡಿದುಕೊಂಡಳು. ಇನ್ನಾರು ನಾರಾಯಣಕ್ಕ, ನಂ ಸಾದಮ್ಮನ ಮಗ ಕೆಂಪರಾಜ. ಅವನಿಗಿಂತ ಗಂಡ? ಒಬ್ಬಳೇ ಮಗಳು ಊರಲ್ಲೆ ಕಣ್ಣೆದುರೇ ಇರ್ತಾಳೆ. ಇದಕ್ಕಿಂತ ಬೇಕಾ? ಎಂದ. ಸಾದಮ್ಮ, ಮುನೆಂಕಟೇಗೌಡ ಒಪ್ಪೋದುಂಟಾ? ಅಂದಳು. ನೀನು ಒಪ್ಪಿ, ಗೋವಿಂದಪ್ಪನನ್ನು ಒಪ್ಪಿಸೋದಾದರೆ ಉಳಿದದ್ದು ನನಗೆ ಬಿಡು ಅಂದ. ಒಪ್ಪದಿದ್ರೆ ಮಗಳನ್ನು ಮುದುಕಿ ಮಾಡಿ ಮುಂದೆ ಕೂಳಿಸಿಕೊಂಡು ಅಳ್ತಾನೇನು? ಇವತ್ತು ರಾತ್ರಿಗೆ ಫೈಸುಲು ಮಾಡ್ತೀನಿ. ಒಪ್ಪದಿದ್ದರೆ ಹೊತ್ತುಟ್ಟೊ ಹೊತ್ಗೆ ನಮ್ಮಣ್ಣನ ಮನೆಗೆ ಹೊರಡ್ತೀನಿ. ಇದು ನನ್ನ ಗಟ್ಟಿ ಮಾತು ಅಂದಳು. ಹಾಗಾದರೆ ನಾನು ಒಪ್ಪಿಸೋದೂ ಗಟ್ಟಿ ಮಾತೇ ಅಂದ ನರಸಿಂಗರಾಯ.

ಇದಾದ ಎರಡನೆಯ ದಿನ ಸಾದಮ್ಮ, ಮುನೆಂಕಟೇಗೌಡನ ಸಮ್ಮತಿಯ ಮಾತನ್ನು ನರಸಿಂಗರಾಯ ಖದ್ದು ನಾರಾಯಣಮ್ಮ, ಗೋವಿಂದಪ್ಪನಿಗೆ ತಿಳಿಸಿದ. ನೀವು ತೀರ್ಮಾನಿಸಿದ್ದರೆ, ನಿಮ್ಮ ಸಂಪ್ರದಾಯದಂತೆ ಗಂಡಿನವರು ಹೆಣ್ಣನ್ನು ನೋಡುವ ಶಾಶ್ತ್ರಕ್ಕೆ ಬರುತ್ತಾರೆ. ನೀವು ಹಾಂ, ಹೂಂ ಅಂದರೆ ಒಳ್ಳೆಯ ಗಂಡು, ಮನೆ ಕೈತಪ್ಪುತ್ತೆ ಅಂದ. ಬರಲಿ ಅಂದ ಗೋವಿಂದಪ್ಪ. ಎಲ್ಲ, ಎಲ್ಲರೂ ಗೊತ್ತಿರೋದೆ. ಅವತ್ತೇ ಗಟ್ಟಿಮಾತು ಆಗಿಬಿಡಲಿ. ಪೂಜಾರ್ರ ಶೇಷಪ್ಪನನ್ನು ಕರೆದುಬಿಡಿ ಎಂದು ಅವನೇ ತೀರ್ಮಾನವನ್ನೂ ಕೊಟ್ಟುಬಿಟ್ಟ.

ಮುನೆಂಕಟೇಗೌಡ ಗಂಡಿನ ಕಡೆಯ ಹಿರೀಕನಾಗಿ ಮಡದಿಯೊಂದಿಗೆ ಕುಳಿತ. ಕುಲದವರು, ಊರಿನ ಹಿರಿಯರ ಸಮಕ್ಷಮ ಮಾತು, ತಾಂಬೂಲ ವಿನಿಮಯ ನಡೆದು, ಶೇಷಪ್ಪ ಲಗ್ನಪತ್ರಿಕೆ ಬರೆದು ಓದಿದ. ಇವತ್ತು ದಶಮಿ, ಮುಂದಿನ ಶುಕ್ಲಪಕ್ಷ ದಶಮಿಯಂದು, ಅಂದರೆ ತಿಂಗಳಿಗೆ ಗೋಪಾಲಸ್ವಾಮಿ ಗುಡಿಯ ಮುಂದೆ ಮದುವೆ ಎಂದು ನಿಶ್ಚಯವಾಯಿತು.

ಅಲ್ಲಿಂದ ನರಸಿಂಗರಾಯನ್ನು ಜೊತೆಗಿಟ್ಟುಕೊಂಡು ಮನೆಗೆ ಬಂದ ಮುನೆಂಕಟೇಗೌಡ, ಚುನಾವಣೆ ಯಾವಾಗ ಆದೀತು ಅಂದ. ಆದರೆ ಮದುವೆಯಾದ ಎರಡು ತಿಂಗಳಿಗೆ. ಒಂದು ವೇಳೆ ಒಂದೆರಡು ತಿಂಗಳು ಮುಂದೆ ಹೋದರೂ ಹೋದಿತು ಅಂದ. ಹಾಗಾದರೆ ಸರಿ ಬಿಡು. ಅಂತೂ ನಿನ್ನ ಗಾಳಕ್ಕೆ ಮೀನು ಬಿದ್ದೇಬಿಟ್ಟಿತು. ಮುಖ್ಯವಾಗಿ ಹೆಂಗೆಂಗೋ ಇದ್ದ ಕೆಂಪರಾಜನ್ನು ದಾರಿಗೆ ತಂದು, ಗಟ್ಟಿ ಕುಳ ಗೋವಿಂದಪ್ಪನಿಗೆ ಅಳಿಯನನ್ನಾಗಿ ಮಾಡಿಬಿಟ್ಟಿ ಎಂದು ಅಭಿಮಾನದಿಂದ ಹೇಳಿದ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+