ಒಂದು ಪೋಸ್ಟ್ ಕಾರ್ಡಿನಲ್ಲಿ ಸಿಕ್ಕ ಇತಿಹಾಸ, ಭೂಗೋಳ ಹಾಗೂ ಸಮಾಜ ವಿಜ್ಞಾನ
ದಾಖಲೆಗಳು ದೇಶ ಚರಿತ್ರೆಯನ್ನು, ವ್ಯಕ್ತಿ ಚಿತ್ರವನ್ನು, ಸಾಮಾಜಿಕ (ಕೌಟುಂಬಿಕ), ಆರ್ಥಿಕ, ರಾಜಕೀಯ, ಸಾಂಸ್ಕೃತಿಕ ಸಂಗತಿಗಳನ್ನು ಕಾಲಗಣನೆಯೊಂದಿಗೆ ತಿಳಿಸುತ್ತವೆ. ಈಗಿನ ಸಂಗತಿ ಅರವತ್ತೈದು ವರ್ಷಗಳು ದಾಟಿದ ಒಂದು ಪೋಸ್ಟ್ ಕಾರ್ಡಿನದು. (ಇಂಥವು ಯಾರಲ್ಲೂ ಇದ್ದಾವು. ಹುಡುಕಿ) ಇದರಲ್ಲಿ ಹಸಿರು ಬಣ್ಣದಲ್ಲಿ ಮುದ್ರಿತವಾದ ಸ್ಟಾಂಪಿನ ಮೇಲೆ 9PS ಎಂದಿದೆ. ಅದರ ಮುಖಬೆಲೆ. ಇದು ಒಂಬತ್ತು ಪೈಸೆಗಳು.
ಈ ಸ್ಟಾಂಪಿನ ಮೇಲೆ MALUR -KOLAR ಎಂದು, ಅದರಡಿಯಲ್ಲಿ 6 SEP 54. ಅದರ ಕೆಳಗೆ 5 PM ಎಂಬ ದಿನಾಂಕ ಹಾಗೂ ಸಮಯದ ಸೀಲು ಹಾಕಿದೆ. ಈ ಮುದ್ರೆಯ ಎಡಕ್ಕೆ ಹಸಿರು ಬಣ್ಣದಲ್ಲಿ ಹಿಂದಿಯಲ್ಲಿ ದಪ್ಪ ಅಕ್ಷರಗಳಲ್ಲಿ 'ಪೋಸ್ಟ್ ಕಾರ್ಡ್' ಎಂದು, ಅದರ ಕೆಳಗೆ 'ಕೇವಲ್ ಪತಾ' ಎಂದಿದ್ದು, ಅದರ ಮೇಲೆ BANGALORE CITY, 9HAR, 7 SEP 1954 ಎಂಬ ಮುದ್ರೆಯನ್ನು ಒತ್ತಲಾಗಿದೆ.
ಇದರಡಿ ಇರುವುದು ವಿಳಾಸದ ಭಾಗ. ನಾಲ್ಕು ಹಸಿರು ಗೆರೆಗಳು. ಮೊದಲ ಗೆರೆಯ ಆದಿಯಲ್ಲಿ ಹಿಂದಿಯಲ್ಲಿ 'ನಾಮ್' ಎಂದು, ಎರಡನೇ ಗೆರೆಯಲ್ಲಿ 'ಪತಾ', ಮೂರನೇ ಗೆರೆಯಲ್ಲಿ 'ಡಾಕ್ಖಾನಾ' ನಾಲ್ಕನೇ ಗೆರೆಯಲ್ಲಿ 'ಜಿಲಾ' ಎಂದು ಮುದ್ರಿಸಲಾಗಿದೆ. B.S.Ramamurthy, No.6, Tulasi ThoTada galli, Bale pet, Bangalore city. ಇದು ಅಲ್ಲಿ ಬರೆದಿರುವ ವಿಳಾಸ. ಈ ವಿಳಾಸಕ್ಕೆ ಬರೆದ ಕಾಗದದ ಒಕ್ಕಣೆ ಹೀಗಿದೆ,

Safe Sri Sri Maliyppanahally
6.9.54
Dear Subbanna
ಇಲ್ಲಿ ಎಲ್ಲರಾದಿಯಾಗಿ ಕ್ಷೇಮ. ಚಿ.ಸೌ. ಪದ್ದಮ್ಮನು 2.9.54 ಗುರುವಾರ ರಾತ್ರಿ ಸುಮಾರು 10 ಗಂಟೆಗೆ ಗಂಡುಮಗುವಿಗೆ ಜನ್ಮ ಇತ್ತು ಮಗು ಬಾಣಂತಿ ಸೌಖ್ಯವಾಗಿದ್ದಾರೆ. ತಾವು ಖಂಡಿತ ಬರುವುದು. ಬರುವಾಗ್ಗೆ ಸಾಂಬ್ರಾಣಿ, ಹಾಲುಮಡ್ಡಿ, ಅರಿಸಿನ, ಅಕ್ಕಿ, ಓಮು, ಮೆಣಸು, ಜೀರಿಗೆ, ಬಾಣಂತಿ ಔಷಧಿ, ಕಡಲೆ, ತೊಗರಿಬೇಳೆ, ಅಡಿಕೆ, ಕಾಪಿಪುಡಿ, ಸಕ್ಕರೆ, ರವೆ ಇತ್ಯಾದಿ ಸಾಮಾನುಗಳನ್ನ ಮತ್ತು ಅಚ್ಚೆಳ್ಳೆಣ್ಣೆ, ಸೀಗೇಪುಡಿ ತರುವುದು. ಅಕ್ಕ, ಅಣ್ಣ ಇವರಿಗೆ ಪದ್ದಮ್ಮನ ನಮಸ್ಕಾರ. ರಾಮು, ಸುಮಿತ್ರಾ ಇವರಿಗೆ ಆಶೀರ್ವಾದ ಹೇಳುವುದು. ಎಲ್ಲಾ ಮಕ್ಕಳಾದಿಯಾಗಿ ಕ್ಷೇಮವಾಗಿದ್ದಾರೆ.
ಚಿ.ರಾ. ಒ.ಓ.ರಾಮಕುಮಾರ್
ಈ ಕಾಗದ ಒಂದು ಜನ್ಮ ದಾಖಲೆಯಷ್ಟೇ ಆಗಿದ್ದರೆ ಇದಕ್ಕೆ ಅಂಥ ಮಹತ್ವ ಇರದು. ಸ್ವಾತಂತ್ರ್ಯ ಪಡೆದದ್ದೇ ಹಿಂದಿಯನ್ನು ವ್ಯವಹಾರಿಕ ಭಾಷೆಯಾಗಿ ಬಳಸಿರುವುದನ್ನು ಇದು ತಿಳಿಸುತ್ತದೆ. ಹೋರಾಟದ ನಂತರ ಕನ್ನಡವೂ ಸೇರಿ ಪ್ರದೇಶ ಭಾಷೆಗಳು ರಾಜ್ಯಾಧಿಕಾರ ಪಡೆದವು. ಎಲ್ಲಾ ಭಾಷೆಗಳಲ್ಲೂ ಪುಟ್ಟ ಕಾರ್ಡಿನಲ್ಲಿ ವಿಳಾಸ ಸೂಚಿಯನ್ನು ಮದ್ರಿಸಲಾಗಿದೆ. ಹಾಗಾಗಿ ಇಂದು ಅದನ್ನು ಕೈಬಿಟ್ಟಿದೆ. ಈ ಬದಲಾವಣೆಯ ದಾಖಲೆಗಾಗಿಯೂ ಇದನ್ನು ಗಮನಿಸಬಹುದು.
ಇಂದಿನ ಅಲೋಪತಿ ವೈದ್ಯ ಯುಗದಲ್ಲಿ ಕಾಣೆಯಾದ ಬಾಣಂತಿ - ಮಗುವಿನ ಆರೈಕೆಯ ವಸ್ತು ಸರಂಜಾಮುಗಳನ್ನು ಇಲ್ಲಿ ಪರಿಚಯಿಸಿಕೊಳ್ಳಬಹುದು. ಇಂದು ಸಾಮ್ರಾಣಿ, ಹಾಲುಮಡ್ಡಿಗಳ ಧೂಪವನ್ನು ಬಾಣಂತಿ, ಮಗುವಿಗೆ ಹಾಕುವುದು ಹಳ್ಳಿಗಳಲ್ಲಿ ಮಾತ್ರ. ಏಕೆಂದರೆ ನಗರ, ಪಟ್ಟಣಗಳ ಮನೆಗಳಲ್ಲಿ ಕೆಂಡ ಸಿಗುವುದಿಲ್ಲ. ಕಷ್ಟಪಟ್ಟು ಇದ್ದಿಲು ಸಂಪಾದಿಸಿ ಕೆಂಡ ಮಾಡುವುದಾದರೆ ಇದು ಸಾಧ್ಯ.

ಆದರೆ ಮೊಸಾಯಿಕ್ ಮನೆಗಳಲ್ಲಿ ಇದರ ಪ್ರವೇಶ ನಿಷಿದ್ಧ. ಕಾರಣಗಳು ಹಲವು. ಸಮಯಾಭಾವ, ಹೊಗೆ ಮನೆಯ ಅಂದವನ್ನು ಕೆಡಿಸುತ್ತದೆ. ಕೆಂಡ ಮಾಡುವಾಗ ಏಳುವ ಬೂದಿ ಮನೆಯಲ್ಲಿ ಹರಡುತ್ತದೆ. ಅದು ನೆರಮನೆಗೂ ಹೋಗುವುದರಿಂದ ಅವರ ತಕರಾರು ಇದ್ದದ್ದೆ. ಹಾಗಾಗಿ ಇಲ್ಲಿನ ಬಾಣಂತಿ ಮತ್ತು ಮಗು ಇವುಗಳಿಂದ ವಂಚಿತ.
ಇನ್ನು ಓಮಿನ ಬಳಕೆ ವಿರಳ. ಅಂಥ ಅಜ್ಜಿ ಇದ್ದು, ಅವಳ ಮಾತು ನಡೆಯುವುದಾದಲ್ಲಿ ಬಳಕೆ ಇದ್ದೀತು. ಅಂದಿನ ಬಾಣಂತಿ ಔಷಧಿ ಅಂದರೆ ಹಲವು ಗಿಡಮೂಲಿಕೆಗಳ ನಾರು, ಬೇರು, ಬೀಜಗಳಿಂದ ತಯಾರಾದ ಲೇಹ್ಯ. ಅದು ಇಂದಿನವರಲ್ಲಿ ಯಾರಿಗಾದರೂ ಸಹ್ಯವಾದರೆ ಅದೊಂದು ಅದ್ಭುತವೇ ಸರಿ.
ಕಾಗದದಲ್ಲಿ ಕಡಲೆಗೆ ಅಡಿಗೆರೆ ಹಾಕಿದೆ. ಇದು ಬಾಣಂತಿಗೆ ನೀರು ಹಾಕುವ ಹನ್ನೊಂದನೇ ದಿನಕ್ಕೆ ಬೇಕಾದುದು. ಅಂದು ಅದರಿಂದ ಗುಗ್ಗರಿ ತಯಾರಿಸಿ ಸೂಲಗಿತ್ತಿಯಿಂದ ಹಿಡಿದು ಎಲ್ಲರಿಗೂ ಹಂಚುವರು. ನೆನೆಸಿ ಬೇಯಿಸಿದ ಕಡಲೆ ಬಾಣಂತಿಗೂ ಪುಷ್ಟಿ. ಓಮು ಶೀತ ಹರ. ಬಾಣಂತಿಗೆ ಶೀತವಾಗಬಾರದು. ಬಾಣಂತಿಗೆ ಮೆಣಸು, ಜೀರಿಗೆ, ಹಾಕಿದ ಸಾರನ್ನೇ ಹಾಕುತ್ತಿದ್ದುದು. ಇದು ಶೀತಹರವಾದುದಲ್ಲದೆ ಜೀರ್ಣಕಾರಿ.
ಇನ್ನು ತೊಗರಿಬೇಳೆ. ಇದು ಎಂದೆಂದಿಗೂ ಅತ್ಯಗತ್ಯದ ಗುಣ ಹೊಂದಿದೆ. ಈ ಕಾಗದ ಜಾನಪದ ವೈದ್ಯವನ್ನೂ ನೆನಪಿಸುತ್ತದೆ. ಇದರಲ್ಲಿ ಇನ್ನೊಂದು ಸೂಕ್ಷ್ಮವಿದೆ. ಅದು, ತವರುಮನೆಯ ಬಡತನ ಇಲ್ಲವೆ ಅನನುಕೂಲ. ಹಾಗಾಗಿ ಈ ಎಲ್ಲವಕ್ಕೂ ಅಳಿಯನನ್ನೇ ಆಶ್ರಯಿಸಿದೆ. 65 ವರ್ಷಗಳ ಹಿಂದಿನ ಕಾಗದ ಯಾರು ಹುಟ್ಟಿದಾಗ ಬರೆದದ್ದೆಂಬ ಪ್ರಶ್ನೆಯೆ? ಅದು ನಾನು ಹುಟ್ಟಿದಾಗ ನನ್ನ ಸೋದರ ಮಾವ (ತಾಯಿಯ ಅಣ್ಣ), ನನ್ನ ತಂದೆಯ ತಂಗಿಯ (ಸೋದರತ್ತೆ) ಮಗನಿಗೆ ನಾನು ಹುಟ್ಟಿದಾಗ ಬರೆದ ಕಾಗದ.












Click it and Unblock the Notifications