Get Updates
Get notified of breaking news, exclusive insights, and must-see stories!

ಹಿಟ್ಟು-ಗೊಜ್ಜು ಉಣಬಡಿಸಲಿದ್ದಾರೆ ಸ ರಘುನಾಥ ಮೇಷ್ಟ್ರು...

ಮುಂದಿನ ವಾರದಿಂದ ಒನ್ ಇಂಡಿಯಾ ಕನ್ನಡದ ಅಂಕಣಕಾರರಾಗಿ ಸ.ರಘುನಾಥ ಅವರು ಲೇಖನಗಳನ್ನು ನೀಡಲು ಆರಂಭಿಸಲಿದ್ದಾರೆ. ಅವರ ಬಗೆಗಿನ ಪರಿಚಯ ಇಲ್ಲಿದೆ. -ಸಂಪಾದಕ

***
ನಾನು ಹುಟ್ಟಿದ್ದು ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಲಿಯಪ್ಪನಹಳ್ಳಿಯಲ್ಲಿ. 13ನೇ ಆಗಸ್ಟ್, 1954ರಲ್ಲಿ. ಹತ್ತನೇ ತರಗತಿಯವರೆಗೆ ವ್ಯಾಸಂಗ. ಪ್ರಾಥಮಿಕ ಶಾಲಾ ಉಪಾಧ್ಯಾಯನಾಗಿ, ನಿವೃತ್ತನಾಗಿ ಶ್ರೀನಿವಾಸಪುರದಲ್ಲಿ ನೆಲೆಸಿದ್ದೇನೆ.

ಪ್ರಕಟಿತ ಕೃತಿಗಳು 34. ಅವುಗಳಲ್ಲಿ ಆರು ಸಂಕಲನಗಳಲ್ಲಿ ಕವಿತೆ, ಮೂರು ಸಂಕಲನಗಳಲ್ಲಿ ಕಥೆ, ಒಂದು ಮಕ್ಕಳ ಕತೆ-ಮೂರು ಕವಿತೆಗಳ ಸಂಕಲನ, ಐದು ಸಾಂಸ್ಕೃತಿಕ ಲೇಖನಗಳ ಸಂಕಲನ ಪ್ರಕಟಿಸಿದ್ದು, ತೆಲುಗಿನಿಂದ ಕನ್ನಡಕ್ಕೆ, ಕನ್ನಡದಿಂದ ತೆಲುಗಿಗೆ 14 ಕೃತಿಗಳನ್ನು ಅನುವಾದ ಮಾಡಿದ್ದೇನೆ.

Hittu-Gojju New column in Oneindia Kannada, Columnist Sa Raghunatha introduction

ಕೃತಿ ಪರಿಶೀಲನೆಗಳೂ ಸೇರಿದಂತೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ತೊಡಗಿಕೊಂಡಿರುವ ನನ್ನ ಈಚಿನ ಕೃತಿಗಳು ಹಬ್ದ ಸಂತೆ(ಈವರೆಗಿನ ಕಥೆಗಳು), ಓದು(ತೆಲುಗು ಸಾಂಸ್ಕೃತಿಕ -ಸಾಹಿತ್ಯ ಲೇಖನಗಳು), ಪರದೆ(ತೆಲುಗಿನ ಊತ್ತಮ 30 ಕಥೆಗಳು), ಕೂಡು ಕವನಸಂಕಲನ. ಕನಕದಾಸರ ಸಮಗ್ರ ಕೃತಿಗಳ ತೆಲುಗು ಅವತರಣಿಕೆಯ ಸಂಪಾದಕ, ಅನುವಾದಕರಲ್ಲಿ ಒಬ್ಬನಾಗಿದ್ದೇನೆ.

ಕೆಲವು ವಚನಕಾರರ ವಚನಗಳನ್ನು ತೆಲುಗಿಗೆ ಅನುವಾದಿಸಿದ್ದೇನೆ. ಅನುವಾದಿಸಿದ ಕಂದಕೂರಿ(2007), ಮೋನಿಷಾದ(2012) ಕೃತಿಗಳಿಗೆ ಕುವೆಂಪು ಭಾಷಾಭಾರತಿ ಪ್ರಶಸ್ತಿ, ದಾರಿ ಮತ್ತು ಆಕಾಶ ಕವನಸಂಕಲನಕ್ಕೆ 1991ರ ಮುದ್ದಣ ಕಾವ್ಯ ಪ್ರಶಸ್ತಿ ದೊರೆತಿದೆ. ನಾನು ಬರೆದ ಮಕ್ಕಳಕಥೆಗಳನ್ನು ಆರ್.ವಿಜಯರಾಘವನ್ (ಭೀಮಾ ಗ್ರೋ ಟ್ರೀಸ್) ಇಂಗ್ಲಿಷ್ ಗೆ ಅನುವಾದಿಸಿದ್ದಾರೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಗಳಿಗೆ ಅನುವಾದ/ಕೃತಿ ವಿಮರ್ಶೆ ಮಾಡಿಕೊಟ್ಟಿದ್ದು, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅನುವಾದ ಕಾರ್ಯಗಳಲ್ಲಿ ಸಹ ಭಾಗವಹಿಸಿದ್ದೇನೆ.

'ನಮ್ಮ ಮಕ್ಕಳು' ಎಂಬುದರ ಮೂಲಕ ಅನೇಕ ನಿರ್ಲಕ್ಷಿತ, ಕೆಳವರ್ಗದ ಮಕ್ಕಳ ಏಳಿಗೆಯಾಗಿದೆ. ನಿವೃತ್ತಿಯ ನಂತರವೂ ಇದು ಮುಂದುವರೆದಿದೆ. ಇದರೊಂದಿಗೆ 'ಹಸಿರು ಹೊನ್ನು ಬಳಗದ' (ಕೋಲಾರ-ಚಿಕ್ಕಬಳ್ಳಾಪು ಜಿಲ್ಲೆ) ಸ್ಥಾಪಕ ಕಾರ್ಯದರ್ಶಿಯಾಗಿದ್ದೇನೆ. ಇಪ್ಪತ್ತು ವರ್ಷಗಳಿಂದ ಈ ಬಳಗ ನೆಟ್ಟಿರುವ ಗಿಡಗಳ ಸಂಖ್ಯೆ 48000ಕ್ಕೂ ಹೆಚ್ಚು.

ಅವುಗಳಲ್ಲಿ ನಿಖರವಾಗಿ 32000 ಗಿಡಗಳು ಬೆಳವಣಿಗೆಯಾಗಿವೆ. ಗಾಯಗೊಂಡ ಪಕ್ಷಿ-ಪ್ರಾಣಿಗಳ ಆರೈಕೆ ಮಾಡಿ ಅವುಗಳನ್ನು ಮೂಲ ನೆಲೆಗೆ ಸೇರಿಸುವ ಕಾಯಕವನ್ನೂ ಮಾಡಲು ಅವಕಾಶ ಸಿಕ್ಕಿದೆ. ಹೀಗೆ ಆರೈಕೆ ಪಡೆದ ಜೀವಿಗಳ ಸಂಖ್ಯೆ ಸುಮಾರು 1200.

ತತ್ವಪದ ಗಾಯಕರ ಸಂಘಟಿಸುವ ಕಾರ್ಯದಲ್ಲಿ ಸ್ವಲ್ಪ ಮಟ್ಟಿಗೆ ತೊಡಗಿದ್ದೇನೆ. ಬಯಲು ಸೀಮೆಗೆ ಶುದ್ಧ ನೀರು ಒದಗಿಸುವ ಒತ್ತಾಯದ ಹೋರಾಟವೂ ಸೇರಿದಂತೆ ಅನೇಕ ಹೋರಾಟಗಳಲ್ಲಿ ಇಂದಿಗೂ ಸಕ್ರಿಯನಾಗಿದ್ದೇನೆ.

ಒನ್ ಇಂಡಿಯಾಗೆ ನಾನು ಬರೆಯಲಿರುವ ಅಂಕಣ 'ಹಿಟ್ಟು-ಗೊಜ್ಜು.' ಹಿಟ್ಟು(ಮುದ್ದೆ) ಗೊಜ್ಜು ಕನ್ನಡ ನಾಡಿನ ಸಾಮಾನ್ಯ ಜನರ ಊಟೋಚಾರದಲ್ಲಿ ಜನಪ್ರಿಯವಾದುದು. 'ಗೊಜ್ಜು' ವಿವಿಧ ಬಗೆಯದು. ಹಾಗೆಯೇ ರುಚಿಯಲ್ಲಿಯೂ ವೈವಿಧ್ಯತೆಯಿಂದ ಕೂಡಿದುದು. ಅ(ಹ)ಸಿಗೊಜ್ಜು, ಹುಣಿಸೆ ಗೊಜ್ಜು, ಟೊಮಾಟೋ ಗೊಜ್ಜು, ಹುಣಿಸೆಹಣ್ಣು-ಮೆಣಸಿನಪುಡಿ ಗೊಜ್ಜು ಹೀಗೆ ಅನೇಕವಿಧ.

ಇದು ಜಾನಪದೀಯವಾದುದು ಮತ್ತು ಪಕ್ಕ ಹಳ್ಳಿಗಾಡಿನದು. ಬಡವರ ಉಣಿಸು. ಈ ಗೊಜ್ಜುಗಳಂತೆಯೇ ನನ್ನ ಲೇಖನಗಳು ಮೂಡಿಬರಲಿವೆ. ಗುರುಗಳೇ ಪ್ರೀತಿ ಇರಲಿ...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+