ಸ ರಘುನಾಥ ಅಂಕಣ; ಆ ಒಂದು ಸಂಜೆ, ಗುಡಿಯ ಮುಂದೆ...

ಮುನಿ ನಾರಾಯಣಿಯ ಸಾಟುವ (ಸಾರುವಿಕೆ), ಖುದ್ದು ಕರೆತದಿಂದಾಗಿ ಕೆಲವರು ಆತಂಕದಿಂದ, ಕೆಲವರು ಸಂಭ್ರಮದಿಂದ, ಬೆರಳೆಣಿಕೆಷ್ಟು ಮಂದಿ ಕಾಲು ಕೆರೆದು ಜಗಳಕ್ಕೆ, ಹಲವರು ಕುತೂಹಲದಿದ ಹೊತ್ತು ಮುಳುಗಿದ ಅರ್ಧ ಗಂಟೆಗೆಲ್ಲ ಗುಡಿಯ ಮುಂದೆ ಜಮಾಯಿಸಿದ್ದರು.

ಮುಖ್ಯರಲ್ಲಿ ಬಹುಪಾಲು ಜನ ಬಂದಿದ್ದರು. ಬೀರಪ್ಪ ಸದ್ದು ಸದ್ದು ಎಂದಾಗ ಸದ್ದಡಗಿತು. ಅವನೇ ನರಸಿಂಗರಾಯನತ್ತ ನೋಡಿ ಕಾಸು ಎಷ್ಟು ಜಮಾ ಆಗಿದೆಯೆಂದ. ಅದಕ್ಕೆ ನರಸಿಂಗರಾಯ ಒಂದು ರುಪಾಯೂ ಇಲ್ಲ ಅಂದ. ಹಿಂಗಾದ್ರೆ ಹೆಂಗೆ ಅಂದ ಮೋಟಪ್ಪ. ನಾರಾಯಣಪ್ಪ ಎದ್ದು, ಮೊದಲು ಪಾರ್ಟುಗಳು ಕೊಡಿ. ಜಮಾಯಿಂಪು (ಪ್ರಾಕ್ಟೀಸು) ಶುರವಾಗ್ತಿದ್ದ ಹಾಗೆ ಕೊಡೋರು ಕೊಡೋಕೆ ಶುರು ಮಾಡ್ತಾರೆ ಎಂದ.

ತಕಾರು ತೆಗಿಯೋಕೆ ಅಂತ್ಲೆ ಬಂದಿದ್ದ ತಂಟೆಗಳ ಕುಳ್ಳಪ್ಪ ಇದೇ ಸಮಯಾಂತ, ಕೂಸುಟ್ಟೊ ಮುಂಚೆ ಕುಲಾಯಿ ಅನ್ನೋದು ಇದನ್ನೇ ಅಂದ. ಅವನ ಮಾತಿಗೆ ಗಮನ ಕೊಟ್ಟರೆ ಮಾತು ಸಾಗೊಲ್ಲ, ಮುಗಿಯೊಲ್ಲ ಎಂದು ತಿಳಿದಿದ್ದವರು ಯಾರಾರು ಯಾವ ಯಾವ ಪಾರ್ಟೂಂತ ಅಂದುಬಿಡಿ ಅಂದರು. ಮುನಿಕೃಷ್ಣಪ್ಪ, ನಾರಾಯಣಪ್ಪನ ಪಾರ್ಟು ಹಿಂದೆಯೇ ನಿದಿಯಾಗಿದ್ದರಿಂದ ಉಳಿದ ಪಾರ್ಟುಗಳ ಹಂಚಿಕೆ ಪ್ರಾರಂಭವಾಯಿತು. ಕಳ್ಳನ ಪಾರ್ಟಿಗೆ ಕುಳ್ಳಪ್ಪನಾದಾನೋ ಎಂದ ಅಪ್ಪಯ್ಯ. ಕುಳ್ಳಪ್ಪ ತಕ್ಷಣ ಎದ್ದು ಸತ್ರೂ ಅದು ಬೇಡ.

Distribution Of Drama Parts Took Place Infront Of Temple

ಕೊಂಟೆ (ಪೊಕರಿ) ನನ ಮಕ್ಳು ಕಳ್ಳ ಕುಳ್ಳಪ್ಪ ಅಂತ ಅಡ್ಡೆಸ್ರು ಇಟ್ಟುಬಿಡ್ತಾರೆ. ಕೊಡೋದಾದ್ರೆ ಮಂತ್ರಿ ಮಗನ ಪಾರ್ಟು ಕೊಡಿ. ಇಲ್ಲಾಂದ್ರೆ ನಿಮ್ಮ ನಾಟಕಾನೆ ಬೇಡ ಅಂತ ಕುಳಿತ. ಅದು ಪಿಲ್ಲಣ್ಣನ ಪಾಲಿಗೆ ಹೋಯಿತು. ಶೆಟ್ಟಿ ಪಾತ್ರ ಕೊಂಡಶೆಟ್ಟಳ್ಳಿ ಮುನಿಸ್ವಾಮಿಯದಾದರೆ ಆದಿಮೂರ್ತಿ ಪಾರ್ಟು ಪಿಲ್ಲಣ್ಣನದಾಯಿತು. ಮುನಿಕೃಷ್ಣಪ್ಪ ಸುನಂದ ಸದಾರಮೆ ಅಂದಿದ್ದಕ್ಕೆ ಯಾರೋ ಆಯಮ್ಮ ಸಭೆಗೆ ಬಂದಿಲ್ವಲ್ಲ ಅಂದರು. ಥಟ್ಟನೆ ಮುನೆಕ್ಕ ನಾನು ಬಂದ್ಮೇಲೆ ಅವಳೇನು ಅಂದಳು. ಇನ್ನಾರೊ ಹಂಗಾದ್ರೆ ಇಬ್ಬರು ಸದಾರಮೇರ? ಅಂದರು. ಸಭೆ ಗೊಳ್ಳೆಂದತು.

ಆಗಲೇ ರಾಜಮಾರ್ತಾಂಡನ ಪಾತ್ರದ ಮಾತು ಬಂದು ಚರ್ಚೆ ಶುರುವಾಯಿತು. ನರಸಿಂಗರಾಯ ಅದನ್ನು ಸೋಮೇಶ ಮಾಡ್ತಾನೆ ಅಂದಾಗ ಎಲ್ಲಿ ಸೋಮೇಶ ಎಂದು ನಾರಾಯಣಪ್ಪ ಕೇಳಿದ. ಅವನು ಸಭೆಯಲ್ಲಿರದ್ದು ಆಗ ಗಮನಕ್ಕೆ ಬಂದಿತು. ಅವನಿಲ್ಲದಿದ್ರೆ ಏನಂತೆ, ಬೀರಪ್ಪ ಅದನ್ನು ನೋಡಿಕೊಳ್ತಾನೆ ಅಂದ ಮೋಟಪ್ಪ. ಮುಂದಿನದು... ಅನ್ನುವಾಗಲೇ ಬೀರಪ್ಪನ ಮನೆ ಆಳು ಸೊಣ್ಣ ಓಡೋಡಿ ಬಂದು ಸೊಮೇಶಪ್ಪನ್ನು ಕೆಟ್ಟುಳ ಮುಟ್ಟಿದೆ. ಮನೆ ತಾವುಕ ತಂದು ಮಲಿಗಿಸಿವ್ನಿ ಎಂದು ಕಿರುಚಿದ. ಸಭೆಯೇ ಬೀರಪ್ಪನ ಮನೆಯತ್ತ ನಡೆಯಿತು.

ಆ ಹೊತ್ತಿಗೆ ಚೌಡಮ್ಮ ವೈದೀಕದ ಸುಬ್ಬಣ್ಣನನ್ನು ಕರೆಸಿದ್ದಳು. ಅವನು ಸೋಮೇಶನನ್ನು ಜಗುಲಿಯಲ್ಲಿ ಮಲಗಿಸಿ ಮದ್ದರೆಯುತ್ತಿದ್ದ. ಬೀರಪ್ಪನನ್ನು ಕಂಡಕೂಡಲೆ, ಹುಳ ಮೀನುಖಂಡಕ್ಕೇ ಕಾಟು ಹಾಕಿದೆ. ಹಲ್ಲೂರಿರೋದು ನೋಡಿದ್ರೆ ನಾಗಪ್ಪನೇ ಅನ್ನಿಸುತ್ತೆ. ಭಯ ಬೇಡ. ಮದ್ದು ಕುಡಿಸಿ ಮಂತ್ರ ಹಾಕ್ತೀನಿ. ಅಷ್ಟರಲ್ಲಿ ಒಂದು ಕೋಳಿ ರೆಡಿ ಮಾಡಿ ಅಂದು ಮದ್ದನ್ನು ತನ್ನಲ್ಲಿದ್ದ ಹಳೆಯ ತೆಂಗಿನ ಚಿಪ್ಪಿಗೆ ತುಂಬಿ ಕುಡಿಸತೊಡಗಿದ. ಸೋಮೇಶ ಭಯದಿಂದಲೂ ತೇಲುಗಣ್ಣು ಮೇಲುಗಣ್ಣು ಮಾಡಿದ್ದ. ಸುಬ್ಬಣ್ಣ ಮಂತ್ರ ಹಾಕಿ, ಎಲ್ಲಿ ಕೋಳಿ ಎಂದ. ಕೈಯಲ್ಲೇ ಹಿಡಿದುಕೊಂಡು ಅಳುತ್ತ ನಿಂತಿದ್ದ ಚೌಡಮ್ಮ ಅವನ ಕೈಗೆ ಕೊಟ್ಟಳು. ಈ ಮುಂಚೆ ಮಾಡಿದ್ದ ಗಾಯಕ್ಕೆ ಅದರ ಮುಡ್ಡಿಯನ್ನು ಐದು ನಿಮಿಷ ಒತ್ತಿ ಹಿಡಿದ. ಅದು ನಿರ್ಜೀವವಾಗಿ ಕತ್ತನ್ನು ಪಕ್ಕಕ್ಕೆ ಹೊರಳಿಸಿತು. ಗಾಯದ ಒಂದು ಗೇಣು ಮೇಲಕ್ಕೆ ಹರಿದ ಸೀರೆ ತುಂಡನ್ನು ಕಟ್ಟಿದ. ಇನ್ನು ವಿಷ ಮೈಂಡಿಗೆ ಹತ್ತೊಲ್ಲ. ಆದರೆ ಪೇಷೆಂಟು ಬೆಳಗಿನತನಕ ನಿದ್ದೆ ಮಾಡಬಾರದು. ಹಾಗೆ ನೋಡಿಕೊಳ್ಳಿ. ಸೂರ್ಯನ ಮಕ ನೋಡಿದ ಅಂದರೆ ಗಡ್ಡೆಗೆ ಬಿದ್ದ ಹಾಗೇನೆ ಅಂದ.

ಸೋಮೇಶನಿಗೆ ಕಣ್ಣೆಳೆಯುತ್ತಿತ್ತು. ಅವನ ಎರಡೂ ಕಡೆ ಕುಳಿತ್ತಿದ್ದ ಬೀರಣ್ಣ, ಚೌಡಮ್ಮ ಅವನ ಕೆನ್ನ ತಟ್ಟಿ ತಟ್ಟಿ, ಸೋಮಗ, ಸೋಮಗ ಎಂದು ಕೂಗಿ ಕೂಗಿ ಎಚ್ಚರಗೊಳಿಸುತ್ತಿದ್ದರು. ಅಪ್ಪಯ್ಯನಿಗೆ ಇದು ಹೀಗೇ ಆದರೆ ಆಗದು ಅನ್ನಿಸಿತು. ಮುನೆಕ್ಕ ನೀನು ಸುನಂದಳನ್ನು ಕರೆದುಕೊಂಡು ಬಾ ಹೋಗು. ಅವಳಾದರೆ ಎಷ್ಟು ಹೊತ್ತು ಬೇಕಾದರೂ ಹಾಡುತ್ತಾಳೆ. ಹಾಳು ಕೇಳುತ್ತಿದ್ದರೆ ನಿದ್ದೆ ಬರದು ಎಂದು ಹೇಳಿದ. ಮುನೆಕ್ಕ ಓಡು ನಡಿಗೆಯಲ್ಲಿ ಮನೆಯತ್ತ ಹೊರಟಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+