Get Updates
Get notified of breaking news, exclusive insights, and must-see stories!

ಸ.ರಘುನಾಥ್ ಅಂಕಣ: ಪೈರುಗಳು ತಲೆದೂಗಿ ಆಲಿಸಿದವು

ಗೋವಿನ ಹಾಡು ದೃಶ್ಯ ರೂಪ ಕಟ್ಟಿಕೊಳ್ಳುತ್ತಿದ್ದಾಗ ಒಂದು ಎಡವಟ್ಟಾಯಿತು. ಮುನೆಂಕಟೇಗೌಡ ಕೆಲಸದ ಮೇಲೆ ತಾಲೂಕು ಕಚೇರಿಗೆ ಹೋಗಿದ್ದಾಗ, ಅಲ್ಲಿನ ಬಿಕ್ಲಂದಾರ (ಪತ್ರ ಬರೆಯುವವನು) ನಿಮ್ಮೂರಲ್ಲಿ ಬೊಮ್ಮನಹಳ್ಳಿ ಕಿಂದರಿ ಜೋಗಿ ನಾಟಕ ಆಡಿದರಂತೆ, ಚೆನ್ನಾಗಿತ್ತಂತೆ. ಅದನ್ನು ಬರೆದ ಕುವೆಂಪೂದು ನಮ್ಮ ಜಾತಿ ಎಂದನಂತೆ.

ಇಂಥವೆಲ್ಲ ಒಕ್ಕಲಿಗರೂ ಬರೀತಾರ ಎಂದು ಆಶ್ಚರ್ಯ ಹಾಗೂ ಹೆಮ್ಮೆಯಿಂದ ಬೀಗಿದ ಮುನೆಂಕಟೇಗೌಡ, ಊರಿಗೆ ಬಂದು ತನ್ನವರಿಗೆಲ್ಲ ಹೇಳಿದ. ಇದು ಇನ್ನೆಲ್ಲಿಗೆ ಹೋಗುವುದೋ ಎಂದು ಆತಂಕಗೊಂಡ ನರಸಿಂಗರಾಯ, ಕುವೆಂಪು ಹುಟ್ಟಿದ್ದು ಒಕ್ಕಲಿಗನಾಗಿ. ಆದರೆ ಬೆಳೆದು ಬರೆದದ್ದು ಕನ್ನಡಿಗನಾಗಿ. ಬದುಕಿದ್ದು ಜಾತಿಯನ್ನು ಮೀರಿದ ವಿಶ್ವಮಾನವಾಗಿ. ಅವರಿಗೆ ಜಾತಿ ಒಂದು ಸುಳ್ಳು. ಅವರು ಬದುಕಿದ್ದು ಈಗ ನಮ್ಮೂರಿನಲ್ಲಿ ನಾವಿಲ್ಲವ ಹಾಗೆ. ಎಂದು ಮನವರಿಕೆ ಮಾಡಿಕೊಟ್ಟು, ನಾವು ಹೀಗೆ ಬಾಳಿದರೆ ಅವರ ಆತ್ಮಕ್ಕೆ ಶಾಂತಿ ಎಂದು ಹೇಳಿ, ಕುವೆಂಪು ಅವರನ್ನು ಎಲ್ಲರವರನ್ನಾಗಿ ಮನಸ್ಸುಗಳಲ್ಲಿ ನಿಲ್ಲಿಸಲು ಹೆಣಗಾಡಿದ.

ಒಂದು ದಿನ ಆ ಬಿಕ್ಲಂದಾರ ಸಿಕ್ಕಿದಾಗ ಕಲಿತೋನು ನೀನು, ನೀನು ಮಣ್ಣು ತಿನ್ನೋದಲ್ಲದೆ, ತಿಳಿಯದ ನನ್ನಂಥವರಿಗೂ ತಿನ್ನುಸುತ್ತೀಯ. ಇದು ನಿನಗೆ ಯೋಗ್ಯತೆ ಅಲ್ಲ ಎಂದು ಬೈದುದಾಗಿ ಹೇಳಿದ ಮನೆಂಕಟೇಗೌಡ. ಈ ಮಾತಿನಿಂದ ನರಸಿಂಗರಾಯನ ಮನಸ್ಸಿನಲ್ಲಿ ಉಳಿದಿದ್ದ ಆತಂಕ ಹೊರ ಹೋಯಿತು.

Sa Raghunath Column: Crops Listened With A Head Nod

ನರಸಿಂಗರಾಯ ಗೋವಿನ ಹಾಡಿನ ಯಾವ ಪದ್ಯವನ್ನು ಅಭಿನಯಕ್ಕೆ ತರಬೇಕು, ಯಾವುದನ್ನು ನೇಪಥ್ಯದಲ್ಲಿ ಹಾಡಬೇಕು ಎಂಬುದನ್ನು ಪುರುಷೋತ್ತಮರಾಯನೊಂದಿಗೆ ಚರ್ಚಿಸಿ ಗುರುತು ಮಾಡಿಕೊಂಡ. ತಬ್ಬಲಿತನದ ನೋವು, ಹುಲಿಯ ಸಾವಿನ ದೃಶ್ಯ ಕರುಣಾರಸ ಪೂರಿತವಾಗಿರಬೇಕೆಂದು ಅವರಿಗೆ ಮನವರಿಕೆ ಮಾಡಿಕೊಟ್ಟ.

ಪುಣ್ಯಕೋಟಿ ದೊಡ್ಡಿಗೆ ಬಂದ ನಂತರದ ಪದ್ಯಗಳನ್ನು ಹಾಗೂ ಹಿಂದಿರುಗಿ ಅರ್ಬುದನಲ್ಲಿ ತನ್ನನ್ನು ತಿನ್ನುವಂತೆ ನಿವೇದಿಸುವ ಪದ್ಯಗಳನ್ನು ಸುನಂದ, ಆಗ ಅರ್ಬುದನ ಅಂತರಾಳದಿಂದ ಬರುವ ಪದ್ಯಗಳನ್ನು ಪುರುಷೋತ್ತಮರಾಯ ಹಾಡುವುದು, ಉಳಿದವುಗಳನ್ನು ಪಾತ್ರಧಾರಿಗಳು ಹಾದುವುದೆಂದು ನಿರ್ಣಯಿಸಿದ.

ಮಕ್ಕಳಿಂದ ಗೋವಿನ ಹಾಡು ಕೊಂಚ ಅರೆಕೊರೆಗಳಿಂದ ಪ್ರದರ್ಶನಗೊಂಡಿತು. ಆದರೆ ಅದು ಗೌಣವಾಗಿ ಊರಿನವರ ಮನಸ್ಸನ್ನು ಸೆಳೆಯಿತು. 'ತಬ್ಬಲಿಯು ನೀನಾದೆ ಮಗನೆ.....', 'ಕಂದ ನಿಮ್ಮವನೆಂದು ಕಾಣಿರಿ ...' ಎಂದು ಹಾಡುವಾಗ ಸುನಂದ ತುಂಬಿಕೊಂಡ ಭಾವುಕ ಧ್ವನಿ ನೋಡುಗರ ಹೃದಯವನ್ನು ಆರ್ದ್ರಗೊಳಿಸಿತು. ಕಣ್ಣೀರು ತಂದಿತು. ಮೃದು ಧ್ವನಿಯ ಪುರುಷೋತ್ತಮರಾಯ 'ಎನ್ನ ಒಡಹುಟ್ಟಕ್ಕ ನೀನು.... ' ಎಂಬುದನ್ನು ದುಃಖಾರ್ದ್ರ ಧ್ವನಿಯಲ್ಲಿ ಹಾಡಿ, ಪುನರಾವರ್ತಿಸುವಾಗ, ಕರುಣೆ ರಸ ತುಂಬಿ ಹಾಡಿದಾಗ ಜನ ಮೌನ ಹೃದಯಿಗಳಾದರು. ಮನಸ್ಸುಗಳು ಹೂವಾಗಬೇಕೆಂಬ ತನ್ನ ಉದ್ದೇಶ ಕೊಂಚಮಟ್ಟಿಗಾದರೂ ಸಫಲವಾದುದನ್ನು ಮನಗಂಡು ನರಸಿಂಗರಾಯ ಆನಂದಿಸಿದ.

ಪ್ರರ್ಶನದ ಕೊನೆಯಲ್ಲಿ ಸುನಂದ, ನರಸಿಂಗರಾಯ ಮಕ್ಕಳೊಗೂಡಿ ಎರಡು ಸಲ ಹಾಡಿದ. ಮೂರನೆಯ ಬಾರಿ ಜನರಿಗೆ ಹೇಳಿಕೊಟ್ಟ. ನಾಟಕ ನೋಡಿದ್ದು, ಕಡೆಯಲ್ಲಿ ಹೇಳಿದ್ದರಿಂದ ಹಾಡು ಬಹುತೇಕ ಜನರ ಬಾಯಿಗೆ ಬಂದಿತ್ತು.

ಹೊಲಗದ್ದೆ ತೋಟಗಳಲ್ಲಿ ದುಡಿಯುವಾಗ ಹಾಡುತ್ತಿದ್ದ ಹಾಡುಗಳೊಂದಿಗೆ ಈ ಹಾಡು ಕೇಳತೊಡಗಿತು. ಹಾಡುವವರು ಮರೆತಲ್ಲಿ, ನೆನಪಿದ್ದವರು ಎತ್ತಿ ಕೊಡುತ್ತಿದ್ದರು. ಇದರ ಜೊತೆಗೆ ಬೊಮ್ನಹಳ್ಳಿಯ ಕಿಂದರಿ ಜೋಗಿಯ ಕೆಲವು ಪದ್ಯಗಳೂ ಕೇಳಿಸುತ್ತಿದ್ದವು. ನಾಗವೇಣಿಯ ಜಡೆಯನ್ನು ಇಲ್ಲಿಗಳು ಕಡಿದ, ಸುಬ್ಬಾಭಟ್ನ ಜನಿವಾರಕ್ಕೆ ಒಂದಗಿದ ಸ್ಥಿತಿ, ಕೋಟಿನ ಜೇಬಿನಿಂದ ಜಿಗಿದ ಇಲ್ಲಿ, ಇಲಿಗಳ ಹೆಸರು ಬರುವ ಪದ್ಯಗಳನ್ನು ಹಾಡುತ್ತ ನಗುತ್ತಿದ್ದರು. ಹೀಗೆ ಈ ಹಾಡು ಅವರು ಹಾಡುತ್ತಿದ್ದ ಪದಗಳಲ್ಲಿ ಒಂದಾಗಿದ್ದು ಮುಂದಿನವರು ಇದನ್ನು ಜಾನಪದ ಗೀತೆಯೆಂದೇ ಭಾವಿಸುವಂತಾಯಿತು.

ಇದರಿಂದ ಅಮಿತ ಸಂತೋಷಪಟ್ಟವನು ನರಸಿಂಗರಾಯ. ಕನ್ನಡದ ಅನೇಕ ಒಳ್ಳೆಯ ಕವಿತೆಗಳು ಹೀಗೇಯೆ ಜನರ ಹಾಡುಗಳಾಗಬೇಕೆಂದು ಅವನು ಸುನಂದಳಿಗೆ ಹೇಳಿದ. ಹಾಗೆಯೇ ಪುರುಷೋತ್ತಮರಾಯನಿಂದ ಭಾವಗೀತೆಗಳನ್ನು ಕಲಿಯುವಂತೆ ಸೂಚಿಸಿದ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+