ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆ ಸೆರಾ .., ಸೇರ ! ಆಗಬೇಕಿರುವುದನ್ನ ತಪ್ಪಿಸಲು ಸಾಧ್ಯವೇ ?

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ಪೋರ್ಚುಗೀಸರು ಭಾರತೀಯರಂತೆ ಹಣೆಬರಹದ (Destiny) ಮೇಲೆ ಬಹಳ ನಂಬಿಕೆಯುಳ್ಳವರು. ನಮ್ಮಲ್ಲಿ ಅನೇಕ ರಾಗಗಳಿರುವಂತೆ ಪೋರ್ಚುಗೀಸರ ಒಂದು ಹಾಡಿನ ಪ್ರಕಾರಕ್ಕೆ ಫಾದೋ (fado) ಎನ್ನುವ ಹೆಸರಿದೆ. ಇದರರ್ಥ ಯಾರೊಬ್ಬರೂ ತಮ್ಮ ಹಣೆಬರದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ (one's fate or destiny cannot be escaped) ಎನ್ನುವುದೇ ಆಗಿದೆ.

ಸ್ಪ್ಯಾನಿಶರು ಕೂಡ ಇದಕ್ಕೆ ಹೊರತಲ್ಲ. ಇವರಿಗೂ ನಾಳೆಯ ಬಗ್ಗೆ ಕುತೊಹಲ , ಹಿಂದಿನ ಜನ್ಮದ ಬಗ್ಗೆ ತಿಳಿದುಕೊಳ್ಳುವ ಹಂಬಲ ಇದ್ದೆ ಇದೆ. ಇದರ ಜೊತೆಗೆ ನಮ್ಮಲ್ಲಿ ನಮ್ಮ ಹಣೆ ಬರಹದಲ್ಲಿ ಏನು ಬರೆದಿದೆಯೋ ಅದು ಆಗುತ್ತೆ ಅಥವಾ ಏನಾಗಬೇಕು ಅಂತಿದೆ ಅದು ಆಗುತ್ತೆ ಎನ್ನುವ ವಾಕ್ಯಗಳನ್ನ ಬಳಸುವುದು ಕೇಳಿದ್ದೇವೆ ಅಲ್ಲವೇ?. ಸ್ಪೇನ್ ನಲ್ಲಿ ಕೂಡ ' ಕೆ ಸೆರಾ .., ಸೇರ' ಎನ್ನುತ್ತಾರೆ.

 ರಂಗಸ್ವಾಮಿ ಮೂಕನಹಳ್ಳಿಯವರ 'ಬಾರ್ಸಿಲೋನಾ ನೆನಪುಗಳು' ಪುಸ್ತಕ ಅನಾವರಣ ರಂಗಸ್ವಾಮಿ ಮೂಕನಹಳ್ಳಿಯವರ 'ಬಾರ್ಸಿಲೋನಾ ನೆನಪುಗಳು' ಪುಸ್ತಕ ಅನಾವರಣ

ಇದರರ್ಥ ಅದೇನು ಆಗಬೇಕು ಅಂತಿರುತ್ತೆ ಅದು ಆಗುತ್ತೆ ಎಂದಾಗುತ್ತದೆ. ಮೇಲ್ನೋಟಕ್ಕೆ ತೀರಾ ಸೋಫಾಸ್ಟಿಕೇಟೆಡ್ ಸಮಾಜ ಎನ್ನುವಂತೆ ಕಂಡರೂ ಇಂದಿಗೂ ಇಂತಹ ಹಲವು ಹತ್ತು ನಂಬಿಕೆಗಳು ಇನ್ನೂ ಜನರಲ್ಲಿ ಭದ್ರವಾಗಿವೆ. ಕೊನೆಗೂ ಮೂಲದಲ್ಲಿ ನಮ್ಮ ಭಾವನೆಯೊಂದೇ ಸಾಬೀತು ಪಡಿಸಲು ಇಂತಹ ನೂರಾರು ಘಟನೆಗಳು ಸಿಗುತ್ತವೆ. ವಿಸ್ತೀರ್ಣದಲ್ಲಿ ಕರ್ನಾಟಕದ ಅರ್ಧ ಇರುವ ಯೂರೋಪಿನ ಅತಿ ಹಳೆಯ ದೇಶ ಎನ್ನುವ ಮಾನ್ಯತೆಗೆ ಭಾಜನವಾಗಿರುವ ಪೋರ್ಚುಗಲ್ ನ ಜನಸಂಖ್ಯೆ ಒಂದು ಕೋಟಿ ಮೂವತ್ತು ಲಕ್ಷದಷ್ಟು.

Barcelona Memories Column By Rangaswamy Mookanahalli Part 81

ಸ್ಪೇನ್ ದೇಶದ ಜೊತೆಗೆ ಉತ್ತರದಲ್ಲಿ 750 ಮೈಲಿಗೂ ಹೆಚ್ಚು ಉದ್ದದ ಗಡಿ ಹಂಚಿಕೊಂಡಿದೆ. ಗಡಿಭಾಗದಲ್ಲಿ ಯಾವುದೇ ತಂಟೆ ತಕರಾರು ಇಲ್ಲದೆ ಶಾಂತಿಯಿಂದ ಕೂಡಿದೆ. ಗಡಿ ಭಾಗದ ಒಂದೆರೆಡು ಹಳ್ಳಿಗಳು ನಮಗೆ ಸೇರಬೇಕು ಎನ್ನುವುದು ಪೋರ್ಚುಗೀಸ್ ವಾದ 19ನೇ ಶತಮಾನದಿಂದ ಸ್ಪೇನ್ ಆಳ್ವಿಕೆಗೆ ಒಳಪಟ್ಟ್ಟಿರುವ ಈ ಹಳ್ಳಿಗಳನ್ನು ಪಡೆಯಲೇಬೇಕು ಎಂದು ಪೋರ್ಚುಗೀಸ್ ಎಂದೂ ಯುದ್ಧಕ್ಕೆ ನಿಂತಿಲ್ಲ ಮಾತುಕತೆ ಸಾಗುತ್ತಲೇ ಇದೆ.

ಲಿಸ್ಬನ್ ಪೋರ್ಚುಗೀಸ್ ದೇಶದ ರಾಜಧಾನಿ. ಹಾಗೆ ನೋಡಲು ಹೋದರೆ ಇತಿಹಾಸದಲ್ಲಿ ಲಿಸ್ಬನ್ ಅನ್ನು ಎಂದೂ ಪೋರ್ಚುಗೀಸ್‌ನ ರಾಜಧಾನಿ ಎಂದು ಉಲ್ಲೇಖಿಸಿಲ್ಲ. ಕಾರ್ಯತಃ (DeFacto) ಇದನ್ನು ರಾಜಧಾನಿ ಎಂದು ಎಂದು ಶತಮಾನಗಳಿಂದ ಒಪ್ಪಿಕೊಳ್ಳಲಾಗಿದೆ. ಅದಕ್ಕೆಂದು ಅದ್ಧೂರಿ ಸಮಾರಂಭ ನಡೆದಿಲ್ಲ. ಪೋರ್ಚುಗೀಸ್ ಬದುಕಲು ಉತ್ತಮ ದೇಶ ಎನ್ನುವುದು ಆ ದೇಶದಲ್ಲಿ ಅನೇಕ ಗ್ರಾಹಕರನ್ನು ಹೊಂದಿದ್ದ ಮತ್ತು ಕೆಲಸದ ವಿಷಯವಾಗಿ ಹಲವು ಪೋರ್ಚುಗೀಸರೊಡನೆ ಮಾತನಾಡುವ ಅವಕಾಶ ಸಿಕ್ಕ ನನಗೆ ಗೊತ್ತಿತ್ತು. ಆದರೆ ಕುಟುಂಬ ಸಮೇತ ಹೋಗಬೇಕು ಅಲ್ಲಿಗೆ ಹೋಗಬೇಕು ಅನ್ನಿಸಿದ್ದು ಮಾತ್ರ ವಾಸ್ಕೊಡಗಾಮ ಎನ್ನುವ ನಾವಿಕನಿಂದ!.

ಇಂದಿನ ಜಗತ್ತು ಒಂದು ಸಣ್ಣ ಹಳ್ಳಿಯಂತೆ ಮಾರ್ಪಾಡಾಗಲು ವಾಸ್ಕೊಡ ಗಾಮ (Vasco da Gama) ಮತ್ತು ಬಾರ್ತಲೋಮಿಯ ದಿಯಾಸ್ (Bartolomeu Dias) ಎನ್ನುವ ಇಬ್ಬರು ಪೋರ್ಚುಗೀಸ್ ನಾವಿಕರು ಕಾರಣ ಎನ್ನುವುದನ್ನು ಎಲ್ಲರು ಒಪ್ಪಲೇಬೇಕಾಗಿರುವ ವಿಷಯ. ವಾಸ್ಕೊಡ ಗಾಮ ಭಾರತವನ್ನು ಮತ್ತು ಬ್ರೆಜಿಲ್ ದೇಶವನ್ನು ಕಂಡು ಹಿಡಿದದ್ದು ನಂತರ ಜಗತ್ತಿನಲ್ಲಿ ಆದ ಬದಲಾವಣೆಗೆ ಇತಿಹಾಸ ಸಾಕ್ಷಿ. ಹೀಗೆ ಜಗತ್ತಿನ ಅತ್ಯಂತ ಮಹತ್ವಪೂರ್ಣ ದೇಶಗಳ ಕಂಡು ಹಿಡಿದ ನಾವಿಕರ ದೇಶ ಹೇಗಿದೆ ಎನ್ನುವ ಸಹಜ ಕುತೂಹಲ ನನ್ನ ಲಿಸ್ಬನ್ ನಗರದಲ್ಲಿ ತಂದು ನಿಲ್ಲಿಸಿತ್ತು.

ಲಿಸ್ಬನ್ ನ ಹೂಂಬೆರ್ತೊ ಡೆಲ್ಗಾದೊ ಏರ್ಪೋರ್ಟಿನಲ್ಲಿ ಇಳಿದು ನಾನು ಕಾದಿಸಿರಿದ್ದ ಹೋಟೆಲ್‌ಗೆ ಹೋಗಲು ಟ್ಯಾಕ್ಸಿ ಹಿಡಿದೆವು. ಯೂರೋಪಿನ ಯಾವುದೇ ದೇಶಕ್ಕೆ ಹೋಗಲಿ 'ನಿಮಗೆ ಸ್ಪ್ಯಾನಿಷ್ ಬರುತ್ತದೆಯೇ' ? ಎಂದು ಕೇಳುವುದು ನನ್ನ ಜಾಯಮಾನ ಅವರಿಗೆ ಸ್ಪ್ಯಾನಿಷ್ ಬಂದರೆ ಅವರೊಂದಿಗೆ ಸಂವಹನ ಸುಲಭ. ಮುಕ್ಕಾಲು ಪಾಲು ಯೂರೋಪಿನ ದೇಶಗಳಿನ ಜನರಿಗೆ ಇಂಗ್ಲಿಷ್ ಎಂದರೆ ಅಲರ್ಜಿ. ಜೊತೆಗೆ ತಾತ್ಸಾರ!

ನನ್ನ ಟ್ಯಾಕ್ಸಿ ಡ್ರೈವರ್ ಅನ್ನು ಹಾಗೆಯೇ ನಿನಗೆ ಸ್ಪ್ಯಾನಿಷ್ ಬರುತ್ತದೆಯೇ ಎಂದೇ.. ಆತ ಗತ್ತಿನಿಂದ 'ಸೊಯ್ ಪೋರ್ಚುಗೀಸ್....' (ನಾನು ಪೋರ್ಚುಗೀಸ) ಎಂದ. ಸ್ಪ್ಯಾನಿಷ್ ಮತ್ತು ಪೋರ್ಚುಗೀಸ್ ಕನ್ನಡ ತೆಲುಗು ಇದ್ದಹಾಗೆ. ಮುಕ್ಕಾಲು ಪಾಲು ಪದಗಳು ಹೋಲಿಕೆ ಇದೆ. ನನ್ನ ಸ್ಪ್ಯಾನಿಷ್ ಮಿಶ್ರಿತ ಪೋರ್ಚುಗೀಸ್ ನಲ್ಲಿ ಹೇಗೂ ಸಂಭಾಳಿಸಿದೆ. ನಾನು ನನ್ನ ದೇಶ ಎನ್ನುವ ಭಾವನೆ ಅದೆಷ್ಟು ಇವರ ರಕ್ತದಲ್ಲಿದೆ ಎನ್ನುವುದಕ್ಕೆ ಈ ವಿಷಯವನ್ನು ಉಲ್ಲೇಖಿಸಬೇಕಾಯಿತು.

Barcelona Memories Column By Rangaswamy Mookanahalli Part 81

ಹೀಗೆ ಪೋರ್ಚುಗಲ್ ನಲ್ಲಿ ಪ್ರವಾಸ ಮಾಡುತ್ತಿದ್ದಾಗ ಸಿಕ್ಕವನು ಮಾತಾಯಿಸ್. ಜಗತ್ತಿನಲ್ಲಿ 750 ಕೋಟಿ ಜನರಿದ್ದೇವೆ , ಎಲ್ಲರನ್ನೂ ನಾವು ಭೇಟಿ ಮಾಡಲು , ಮಾತನಾಡಿಸಲು ಸಾಧ್ಯವಿಲ್ಲ. ಯಾವುದಾದರೊಂದು ಕಾರಣಕ್ಕೆ ನಾವು ಈ ಸಮಯದಲ್ಲಿ ಇಲ್ಲಿ ಹೀಗೆ ಮಾತನಾಡುತ್ತ ಕುಳಿತಿದ್ದೇವೆ ಎಂದ ., ಮುಂದುವರಿದು ಹೀಗೆ ಆಗಬೇಕು ಎನ್ನುವುದು ವಿಧಿಲಿಖಿತ ಅದನ್ನ ತಪ್ಪಿಸುವುದು ಸಾಧ್ಯವಿಲ್ಲ , ಎಂದು ಕೆ ಸೆರಾ ., ಸೇರ ಎಂದ.

ಮೊದಲೇ ಹೇಳಿದಂತೆ ಸ್ಪ್ಯಾನಿಷ್ ಮತ್ತು ಪೋರ್ಚುಗೀಸ್ ಭಾಷೆಗಳಲ್ಲಿ ಬಹಳ ಸಾಮ್ಯತೆಯಿದೆ. ನಾನು ಮಾತಾಯಿಸ್ ಏನಂದೆ ಮತ್ತೆ ಹೇಳು ಎಂದ್ದಿದ್ದೆ. ಇದೇನಿದು ನಮ್ಮ ಭಾರತೀಯ ಕರ್ಮ ಸಿದ್ಧಾಂತವನ್ನ ಈತ ಹೇಳುತ್ತಿದ್ದಾನೆ ಎನ್ನುವ ಆಶ್ಚರ್ಯ ಒಂದು ಕಡೆಯಾದರೆ , ನಾನು ಕೇಳಿದ್ದು ನಿಜವೇ ಎನ್ನುವ ಸಂಶಯ ಇನ್ನೊಂದು ಕಡೆ. ಬಾರ್ಸಿಲೋನಾಗೆ ಮರಳಿ ಬಂದ ನಂತರ ಮೊದಲು ಮಾಡಿದ ಕೆಲಸ ಗೆಳೆಯ ಫ್ರಾನ್ಸಿಯ ತಾತನನ್ನ ಇದರ ಬಗ್ಗೆ ವಿಚಾರಿಸಿದ್ದು.

ಈ ಬಾರಿ ಮೊದಲಿನಷ್ಟು ಆಶ್ಚರ್ಯವಾಗಲಿಲ್ಲ. ಏಕೆಂದರೆ ಇಲ್ಲಿಯೂ ಅಂದರೆ ಸ್ಪ್ಯಾನಿಷ್ ನಲ್ಲಿ ಕೂಡ ಏನಾಗುತ್ತೆ ಅದು ಅದಾಗುತ್ತೆ ಎನ್ನುವ ತತ್ವವನ್ನ ಜನತೆ ಒಪ್ಪಿಕೊಂಡಿದ್ದಾರೆ. ದಶಕಗಳ ಕಾಲ ಇಲ್ಲಿದ್ದೂ ಇಲ್ಲಿನ ಈ ವಿಷಯ ತಿಳಿದುಕೊಳ್ಳಲು ಪೋರ್ಚುಗಲ್ ದೇಶಕ್ಕೆ ಹೋಗಬೇಕಾಯ್ತು. ಕೊನೆಗೂ ಏನಾಗಬೇಕು ಅದು ಆಗುತ್ತೆ ಎಂದಿರಾ ? ಸತ್ಯವಾದ ಮಾತು.

ನಾವೆಷ್ಟೇ ಕತ್ತನ್ನ ಹಿಗ್ಗಿಸಿ ಮುಂದೇನಿದೆ ಎನ್ನುವುದನ್ನ ನೋಡಲು ಹೋದರು ಕೂಡ ಅದು ಏನಿದೆ ಎನ್ನುವ ಗುಟ್ಟನ್ನ ಬಿಟ್ಟು ಕೊಡುವುದಿಲ್ಲ. ಬದುಕಿನ ಮಜಾ ಇರುವುದೇ ಇಂತಹ ಸಸ್ಪೆನ್ಸ್ ಗಳಿಂದ ಅಲ್ಲವೇ ? ನಾಳೆ ಏನಾಗುತ್ತೆ ಎನ್ನುವುದು ನಮಗೆ ಮುಂಗಡ ತಿಳಿದು ಬಿಟ್ಟರೆ ಬದುಕಿನಲ್ಲಿ ಲವಲೇಶವೂ ಸ್ವಾರಸ್ಯ ಉಳಿದುಕೊಳ್ಳುವುದಿಲ್ಲ. ಹೀಗಾಗಿ ನಾವು ಏನಾಗುತ್ತೆ ಅದು ಆಗುತ್ತೆ ಎನ್ನುವ ತತ್ವಜ್ಞಾನವನ್ನ , ಕರ್ಮ ಸಿದ್ಧಾಂತವನ್ನ ನಮ್ಮದಾಗಿಸಿ ನಮ್ಮದಾಗಿಸಿ ಕೊಂಡೆವು ಎನ್ನಿಸುತ್ತದೆ.

ಬದುಕು ಹರಿಯುವ ನೀರಿನಂತೆ ಇರಬೇಕು . ನಿಂತ ನೀರಿನಲ್ಲಿ ಕ್ರಿಮಿಗಳು ಜನಿಸಲು ಶುರುವಾಗುತ್ತವೆ . ವಾಸನೆ ಬೀರಲು ಕೂಡ ಪ್ರಾರಂಭವಾಗುತ್ತದೆ . ಹರಿಯುವ ನೀರಿನಲ್ಲಿ ಈ ಸಮಸ್ಯೆಗಳು ಇರುವುದಿಲ್ಲ. ಬದುಕೆಂದರೆ ಸದಾ ಒಂದೇ ರೀತಿಯಲ್ಲಿ ಇರುತ್ತದೆ ಎಂದು ಹೇಳಲು ಕೂಡ ಬರುವುದಿಲ್ಲ. ಸಹಜವಾಗೇ ಏಳು ಬೀಳುಗಳು ಇದ್ದೆ ಇರುತ್ತವೆ. ಸೋಲು ಮತ್ತು ಗೆಲುವು ಒಂದರ ಹಿಂದೆ ಇನ್ನೊಂದು ಸಜ್ಜಾಗಿ ನಿಂತಿರುತ್ತವೆ. ಗೆದ್ದಾಗ ಬೀಗದೆ ಸೋತಾಗ ಕುಗ್ಗದೆ ನೆಡೆಯುವುದೇ ನಿಜವಾದ ಜೀವನ.

ಆದರೇನು ಜಗತ್ತಿನ 95 ಪ್ರತಿಶತ ಜನ ಸೋತಾಗ ಕುಗ್ಗಿ ಹೋಗುತ್ತಾರೆ. ಮುಂದೇನು ? ಎನ್ನುವ ಭೀತಿ ಅವರಲ್ಲಿನ ಶಕ್ತಿಯನ್ನ ಕುಗ್ಗಿಸಿಬಿಡುತ್ತದೆ. ಗೆದ್ದಾಗ ಹಿಂದೆ ಮುಂದೆ ಜೈಕಾರ ಹಾಕುತ್ತಿದ್ದ ಜನರೆಲ್ಲಾ ಸೋತಾಗ ಮಾಯವಾಗಿ ಬಿಡುತ್ತಾರೆ. ನಿಜಾರ್ಥದಲ್ಲಿ ಸೋಲು ನಿಜವಾಗಿಯೂ ನಮ್ಮೊಂದಿಗೆ ಯಾರು ನಿಂತಿದ್ದಾರೆ ಎನ್ನುವುದನ್ನ ತೋರಿಸುತ್ತದೆ . ಇದೊಂದರ ಜರಡಿ ಹಿಡಿದ ಹಾಗೆ ಟೊಳ್ಳು ಸಂಬಂಧಗಳು ಹಾರಿ ಹೋಗಿ ಗಟ್ಟಿಯಾದವು ಮಾತ್ರ ನಿಲ್ಲುತ್ತವೆ . ಗೆದ್ದಾಗ ಇದ್ದ ಆತ್ಮ ಬಲ ಸೋತಾಗ ಮಂಗಮಾಯವಾಗಿಬಿಡುತ್ತದೆ .

ಸ್ಥಳೀಯ ಭಾವನೆಗಳಿಗೆ ಬೆಲೆ ಕೊಡದೆ ಬದುಕು ಸುಂದರ ಹೇಗಾದೀತು?ಸ್ಥಳೀಯ ಭಾವನೆಗಳಿಗೆ ಬೆಲೆ ಕೊಡದೆ ಬದುಕು ಸುಂದರ ಹೇಗಾದೀತು?

ಇದಕ್ಕೆ ಬಹತೇಕರು ಹೂರತಲ್ಲ!. ಬಿದ್ದ ನಂತರ ಮತ್ತೆ ಎದ್ದು ಬದುಕು ಕಟ್ಟಿಕೊಳ್ಳುವುದು ಇದೆಯಲ್ಲ ಅದು ನಿಜಕ್ಕೂ ಕಷ್ಟದ ಕೆಲಸ. ಕೆಲವರಿಗೆ ಮೊದಲ ಯತ್ನದಲ್ಲಿ ಜಯ ಸಿಕ್ಕಿರುತ್ತದೆ ನಂತರ ಸೋಲು ಅವರನ್ನ ಕೆಳೆಗೆ ಬೀಳಿಸಿರುತ್ತದೆ, ಇನ್ನು ಕೆಲವರಿಗೆ ಹತ್ತಾರು ಬಾರಿ ಪ್ರಯತ್ನ ಪಟ್ಟರೂ ಜಯದ ರುಚಿ ಸಿಕ್ಕಿರುವುದಿಲ್ಲ. ಅವರೆಲ್ಲರಿಗೂ ನಮ್ಮ ಹಿರಿಯರು ಹೇಳುವ ಜಯದ ಮಂತ್ರ 'ಮರಳಿ ಯತ್ನವ ಮಾಡು ನೀ ಮನುಜ ಗುರಿ ಮುಟ್ಟುವ ತನಕ ಇರುವುದೊಂದು ಬದುಕು ಬಿಡಬೇಡ ಗೆಲ್ಲುವ ತವಕ ' ಎನ್ನುವುದಾಗಿದೆ.

ಇನ್ನು ನನ್ನಿಂದ ಸಾಧ್ಯವಿಲ್ಲ ಎಂದು ನೀವು ಕೈಚಲ್ಲಿ ಕೂರುವವರೆಗೆ ಸೋಲು ಸೋಲೇ ಅಲ್ಲ! ಸಾಕು ಇನ್ನು ನನ್ನಿಂದ ಸಾಧ್ಯವಿಲ್ಲ ಎಂದು ನೀವು ನಿರ್ಧರಿಸಿದ ಮರುಕ್ಷಣದಿಂದ ಅದು ಸೋಲು. ನಮ್ಮಲ್ಲಿ ಹುರಿಯಾಳುಗಳ ಮನೋಸ್ಥೈರ್ಯ ಹೆಚ್ಚಿಸಲು ಸೋಲೇ ಗೆಲುವಿನ ಸೋಪಾನ ಎನ್ನುವ ನಾಣ್ನುಡಿಯನ್ನ ಕೂಡ ಬಳಸುತ್ತೇವೆ. ಒಟ್ಟಿನಲ್ಲಿ ಬಿಡದೆ ಮರಳಿ ಪ್ರಯತ್ನವ ಮಾಡಿದರೆ ಗೆಲುವು ಶತಸಿದ್ಧ ಎನ್ನುವುದು ನಮ್ಮಲ್ಲಿರುವ ನಂಬಿಕೆ.

ಸ್ಪಾನಿಷ್ ಜನರಲ್ಲಿ ಕೂಡ ಇದೆ ನಂಬಿಕೆ ಬೇರೂರಿದೆ. ಅವರು ಹೇಳುತ್ತಾರೆ El que la sigue la consigue. (ಎಲ್ ಕೆ ಲ ಸೀಗೆ ಲ ಕೋನ್ಸಿಗೆ ). ಅಂದರೆ ಯಾರು ಬಿಡದೆ ಹಿಂಬಾಲಿಸುತ್ತಾರೆ ಅವರಿಗೆ ಅವರು ಬಯಸಿದ್ದು ಸಿಗುತ್ತದೆ ಎಂದರ್ಥ. ಅದೆಷ್ಟು ನಿಜ ನೋಡಿ ಬಿಡದೆ ಯಾವುದರ ಹಿಂದೆ ತಪ್ಪಸ್ಸಿನಂತೆ ಏಕ ಚಿತ್ತದಿಂದ ಬೀಳುತ್ತೇವೆ ಅದು ನಮಗೆ ದಕ್ಕಿಯೇ ತಿರುತ್ತದೆ. ಬದುಕಿನಲ್ಲಿ ಮೊದಲ ಹೆಜ್ಜೆ ಏನು ಬೇಕು ಎನ್ನುವುದರ ನಿಖರ ಅರಿವು , ಎರಡನೆಯದು ಬಿಡದೆ ಅದರ ಕಾರ್ಯಸಾಧನೆಯೆಡೆಗೆ ನೆಡೆಯುವುದು.

ಇಷ್ಟಾದರೆ ಸಾಕು ಜಯವು ನಮ್ಮದೆ. ಇಂದಿಗೂ ಸ್ಪಾನಿಷ್ ಜನರ ಆಡು ಮಾತಿನಲ್ಲಿ ಜೀವಂತವಾಗಿದೆ. ಎಲ್ ಕೆ ಲ ಸೀಗೆ ಲ ಕೋನ್ಸಿಗೆ ಜೊತೆಗೆ ಕೆ ಸೆರಾ ಸೇರ ಕೂಡ ಸೇರಿಕೊಂಡು ಬಿಟ್ಟರೆ ಅವನನ್ನ ಅದ್ಯಾವ ಶಕ್ತಿ ಸೋಲಿಸಲು ಸಾಧ್ಯ. ಎಲ್ಲವನ್ನೂ ಮೀರಿದ ಮನಸ್ಥಿತಿ, ಕರ್ಮ ಸಿದ್ದಾಂತಗಳು ಕಾರ್ಯಸಾಧನೆಯ ಹಾದಿಯಲ್ಲಿ ಬಲಿಷ್ಠ ಸಂಗಾತಿಗಳು. ಇಂದು ಎಲ್ಲೆಡೆ ಇದರ ಕೊರತೆಯಿದೆ. ಅಂದಿನ ದಿನದ ಜನರ ಮನಸ್ಥಿತಿ ಹೇಗೆ ಒಂದೇ ಆಗಿತ್ತೂ ಇಂದು ಕೂಡ ಜನರ ಮನಸ್ಥಿತಿ ಒಂದೇ., ಸಂಶಯ , ವಿವೇಚನೆಯ ಕೊರತೆ, ಭಯ, ಅಜ್ಞಾನ ತುಂಬಿದೆ. ಇವೆಲ್ಲವುಗಳ ನಡುವೆ ಇಂದಿಗೂ ಜೀವಂತವಿರುವ ಧ್ವನಿಯನ್ನ ನಾವು ಗುರುತಿಸಬೇಕಾಗಿದೆ.

English summary
Barcelona Memories Column By Rangaswamy Mookanahalli Part 81
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X