ನೆತ್ತಿಗೆ ಏರಿತು ನೋಡಿ, ಅದೆಲ್ಲಿಂದ ಆಪರಿ ಸಿಟ್ಟು ಉಕ್ಕೇರಿಬಂತೋ!
ಕುಡಿದು, ಕುಣಿದು, ದಣಿದು ಹಳೆಯ ವರ್ಷಾಂತ್ಯ ಕಳೆಯದಿದ್ದರಿಂದ ಹೊಸ ವರ್ಷದ ಆರಂಭ ಸೊಗಸಾಗಿತ್ತು. ಏಕಾದಶಿ ಪೂಜೆಯ ನಂತರ ಹಾಫ್ ಸ್ವೆಟರ್ ಹಾಕಿಕೊಂಡು ಬೈಕನ್ನೇರಿದಾಗ, 'ಆಹಾಹಾ ಮಾಗಿಯ ಚಳಿಯಲ್ಲಿ ಈ ಬಿಸಿಲೇಕೋ' ಎಂದು ಹಾಡಿ ನಲಿಯುವಂಥ, ಚುಮುಚುಮು ಕಚಗುಳಿ ಇಡುವಂಥ ಹಿತವಾದ ಬಿಸಿಲು.
ಹಲವಾರು ಸ್ನೇಹಿತರು ನ್ಯೂ ಇಯರ್ ಹ್ಯಾಂಗೋವರ್ ನಲ್ಲಿ ಮನೆಯಲ್ಲಿ ಬಿದ್ದುಕೊಂಡಿರುವಾಗ ಕಚೇರಿಯ ದಾರಿ ಹಿಡಿದಿದ್ದ ನನ್ನ ತಲೆಯಲ್ಲಿ ಮೊಟ್ಟಮೊದಲ ಬಾರಿಗೆ ಏಕೆ ಹೊಸ ವರ್ಷದ ನಿರ್ಣಯ ತೆಗೆದುಕೊಳ್ಳಬಾರದು ಎಂಬ ವಿಚಾರ ಹೊಳಹು ಹಾಕಿತ್ತು. ವಾವ್, ಅನ್ನುವ ಮೊದಲೇ ತಿಳಿದುಕೊಂಡು ಬಿಡಿ, ಹತ್ತೇ ನಿಮಿಷದಲ್ಲಿ ಆ ನ್ಯೂ ಇಯರ್ ರೆಸೊಲ್ಯೂಷನ್ ವಯೊಲೇಟ್ ಮಾಡಿದ್ದೆ.
ಜನುಮದಲ್ಲೇ ನ್ಯೂ ಇಯರ್ ರೆಸೊಲ್ಯೂಷನ್ ನನ್ನು ಮೇಲೆ ಹೇರಿಕೊಂಡಿಲ್ಲ, ಅವುಗಳನ್ನು ಯಾವತ್ತೂ ಗಂಭೀರವಾಗಿ ಪರಿಗಣಿಸಿಲ್ಲ, ಹೊಸ ವರ್ಷದ ನಿರ್ಣಯ ತೆಗೆದುಕೊಳ್ಳುವುದರಲ್ಲಿ ನಂಬಿಕೆಯೂ ಇಲ್ಲ, ಇನ್ನೂ ಪಾಲನೆ ಮಾಡುವುದು ಸಾಧ್ಯವೂ ಇಲ್ಲ ಎಂದ ಮೇಲೆ ನ್ಯೂ ಇಯರ್ ರೆಸೊಲ್ಯೂಷನ್ ಉಲ್ಲಂಘನೆ ಮಾಡುವುದು ಎಷ್ಟು ಹೊತ್ತಿನ ಮಾತು?

ಯಾವುದಕ್ಕೂ ಇರಲಿ, ಎಲ್ಲರಂತೆ ನಾನೂ ಇರೋಣ ಎಂದು, ಈ ವರ್ಷ, ಈ ತಿಂಗಳು, ಕನಿಷ್ಠ ಇವತ್ತಿನ ದಿನವಾದರೂ ನಾನು ಬೈಕ್ ಓಡಿಸುವಾಗ ಅಡ್ಡಡ್ಡ ಬರುವವರನ್ನು, ಹೆಲ್ಮೆಟ್ ಹಾಕದೆ ಭರ್ರನೆ ಗಾಡಿ ಓಡಿಸುವವರನ್ನು, ಹೆಗಲು ಮತ್ತು ಕಿವಿಯ ನಡುವೆ ಮೊಬೈಲ್ ಇಟ್ಟುಕೊಂಡು ಸ್ಕೂಟರ್ ಓಡಿಸುವವರನ್ನು, ಅಡ್ಡಾದಿಡ್ಡಿ ಆಟೋ ಚಲಾಯಿಸುವವರನ್ನು, ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿ ರೊಯ್ಯನೆ ಹೋಗುವವನ್ನು ಕಂಡಾಪಟ್ಟೆ ಬೈಯಬಾರದು, ಸಂಯಮದಿಂದ ಅವರು ಹೇಗಿರುತ್ತಾರೋ ಹಾಗೆಯೇ ಇರಲು ಬಿಡಬೇಕು ಎಂದು ನಿರ್ಣಯ ಠರಾವು ಮಾಡಿದ್ದೆ.
ರಿಂಗ್ ರೋಡ್ ನಲ್ಲಿರುವ ಅಂಬೇಡ್ಕರ್ ಕಾಲೇಜಿನ ಬಳಿ ರೈಟ್ ಟರ್ನ್ ತೆಗೆದುಕೊಂಡೆ ನೋಡಿ, ಬಿಎಂಟಿಸಿ ಬಸ್ ಚಾಲಕ ರಸ್ತೆ ಮಧ್ಯದಲ್ಲಿಯೇ ಬಸ್ ನಿಲ್ಲಿಸಿದ್ದ. ಅದಕ್ಕೆ ಕಾರಣವೇನೆಂದರೆ, ಇನ್ನೊಬ್ಬ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಎಡಬದಿಗೆ ಬಸ್ ನಿಲ್ಲಿಸಿದ್ದ. ಎಡಬದಿಯವ ಹೋದಮೇಲೆ ಟ್ರಾಫಿಕ್ ರೂಲೀಸು ಉಲ್ಲಂಘನೆ ಮಾಡಿ ಬಲಬದಿಯಲ್ಲಿ ನಿಲ್ಲಿಸಿದ್ದವ ಎಡಬದಿಗೆ ಬರಲು ಆರಂಭಿಸಿದ. ಅಷ್ಟರಲ್ಲಾಗಲೇ ನಾನು ಆ ಬಸ್ಸಿನ ಎಡಬದಿಗೆ ಬಂದಿದ್ದೆ.

ನೆತ್ತಿಗೆ ಏರಿತು ನೋಡಿ, ಅದೆಲ್ಲಿಂದ ಆಪರಿ ಸಿಟ್ಟು ಉಕ್ಕೇರಿಬಂತೋ, ಬಸ್ ಡ್ರೈವರನ್ನು ಬೈಯಲು ಆರಂಭಿಸಿದೆ. ಬಹುವಚನದಲ್ಲಿ ಆರಂಭವಾಗಿದ್ದ ಬೈಗುಳ, ನನ್ನ ಜೊತೆ ಕೆಲವರೂ ಸೇರುತ್ತಿದ್ದಂತೆ ಏಕವಚನಕ್ಕೆ ತಿರುಗಿತು. ಕಂಡಕ್ಟರ್ ಸಾಹೇಬರು ಬಂದು ಆಯ್ತುಆಯ್ತು ಹೋಗಿಹೋಗಿ ಅಂತ ಹೇಳಿದ್ದರಿಂದ ನನ್ನ ದಾರಿ ನಾನು ಹಿಡಿದೆ, ಅವನ ದಾರಿ ಅವನು ಹಿಡಿದ. ಹೋಗುತ್ತ ಹೋಗುತ್ತ ಬೆಂಗಳೂರು ಭಾಷೆಯಲ್ಲಿ ಬೈಯುತ್ತಿದ್ದ ಬೈಗುಳಗಳು, ನೇರವಾಗಿ ಹುಬ್ಬಳ್ಳಿಯ ಸುಸಂಸ್ಕೃತ ಬೈಗುಳದ ಭಾಷೆಗೆ ತಿರುಗಿದವು.
ಬೆಂಕಿ ಕೆಂಡದ ಮೇಲೆ ಊದು ಹಾಕಿದಂತೆ ನನ್ನ ಹೊಸ ವರ್ಷದ ನಿರ್ಣಯ ಹೊಗೆಯ ರೂಪದಲ್ಲಿ ಹಾರಿಹೋಗಿತ್ತು. ಆಕ್ಷಣವೇ ಬೈಗುಳವೊಂದೇ ಅಲ್ಲ, ಇನ್ನು ಮುಂದೆ ಯಾವುದೇ ನಿರ್ಣಯಗಳನ್ನೂ ತೆಗೆದುಕೊಳ್ಳುವುದಿಲ್ಲ ಎಂದು ಭೀಷಣ ಪ್ರತಿಜ್ಞೆ ಮಾಡಿದ್ದೆ. ಬೇರೆ ಏನನ್ನೂ ನಿಯಂತ್ರಿಸಿಕೊಳ್ಳಬಹುದು, ಆದರೆ ಬೈಗುಳವನ್ನು ನಿಯಂತ್ರಿಸಿಕೊಳ್ಳುವುದು ಬಲುಕಷ್ಟವಲ್ಲ, ಸಾಧ್ಯವೇ ಇಲ್ಲ ಎಂಬ ಕಠಿಣ ನಿರ್ಣಯಕ್ಕೆ ಬಂದಿದ್ದೆ.
ಅದ್ಯಾಕೋ ಗೊತ್ತಿಲ್ಲ, ಜೊತೆಯಲ್ಲಿ ಹೆಂಡತಿ ಮಕ್ಕಳಿದ್ದರೂ ಬೈಗುಳಗಳು ಪುಂಖಾನುಪುಂಖವಾಗಿ ಹೊರಬೀಳಲು ಆರಂಭಿಸುತ್ತವೆ. "ಜೋಡಿ ಮಕ್ಳವ ಅಲ್ಲೆ, ಬೈಯೋಮುಂದ ಸ್ವಲ್ಪ ಖಬರ ಇರಲಿ" ಅಂತ ಹೆಂಡತಿ ಎಚ್ಚರಿಸಿದಾಗ, ನನ್ನ ಮೇಲೆ ನಾನೇ ನಿಯಂತ್ರಣ ಹೇರಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಸಫಲನಾಗಿಲ್ಲ. ಅವನೌನ, ಅವನಾಪ್ನ ಅನ್ನುವ ಪದಗಳು ಲೀಲಾಜಾಲವಾಗಿ ಮನದಾಳದಿಂದ ಹೊರಬರುತ್ತವೆ. ಕೆಲವೊಮ್ಮೆ ನಾನಾಡುವುದನ್ನು ನೋಡಿ ಮಕ್ಕಳು ನಕ್ಕಿದ್ದೂ ಉಂಟು.
ಸಂಚಾರಿ ನಿಮಯ ಪಾಲಿಸುವುದರಲ್ಲಿ ನಾನು ಸ್ವಲ್ಪ ಮಟ್ಟಿಗೆ ಕಟ್ಟುನಿಟ್ಟಾಗಿರುವುದರಿಂದ ಅವನ್ನು ಉಲ್ಲಂಘಿಸುವುವವರ ಮೇಲೆ ನಖಶಿಖಾಂತ ಉರಿದುಬೀಳುವುದು ಸಹಜವೇ. ತಪ್ಪು ಅಂತೀರಾ? ನಿರ್ಣಯ ತೆಗೆದುಕೊಳ್ಳಬೇಕಾಗಿರುವುದು ನಾನಲ್ಲ, ರಸ್ತೆಯಲ್ಲಿ ಸಂಚಾರಿ ನಿಮಯಗಳನ್ನು ಉಲ್ಲಂಘಿಸಿಕೊಂಡು ಅಡ್ಡಾಡುವವರು, ರಸ್ತೆ ಸಂಚಾರವನ್ನು ನಿಯಂತ್ರಿಸಲು ಸತತವಾಗಿ ವಿಫಲರಾಗುತ್ತಿರುವ ಪೊಲೀಸರು ಎಂಬುದು ನನ್ನ ವಾದ. ಮೊದಲನೇ ನಿರ್ಣಯವೇ ವಿಫಲವಾಗಿರುವುದರಿಂದ ಎರಡನೇ ನಿರ್ಣಯದ ಬಗ್ಗೆ ಸದ್ಯಕ್ಕೆ ಮುಂದೂಡಿದ್ದೇನೆ.
-
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ












Click it and Unblock the Notifications