ರಾಮನಗರದ ರಣಹದ್ದು, ರಾಮ ದೇಗುಲ, ವಾರಾಂತ್ಯದ ಚಾರಣ

ದಿನದಿನಕ್ಕೂ ನಾವೆಲ್ಲ ವಿಪರೀತ ಬಿಜಿಯಾಗಿದ್ದೇವೆ. ಒಂದೇ ಉತ್ತರ ಪದೇ ಪದೇ ಕೇಳಿಬರುತ್ತದೆ: "ಇಲ್ಲ, ನನಗೆ ಬಿಡುವಿಲ್ಲ'. ಇದು ಎಲ್ಲಿಗೆ ತಲುಪಿದೆ ಅಂದರೆ ನಮಗೆ ಆರೋಗ್ಯದ ಬಗ್ಗೆಯೇ ಗಮನವಿಲ್ಲ. ಇನ್ನು ವ್ಯಾಯಾಮದ ಮಾತು ದೂರ ಉಳಿಯಿತು ಬಿಡಿ. ವಾರವಿಡೀ ಕೆಲಸ. ವಾರಾಂತ್ಯದಲ್ಲಿ ಬಿಡುವು ಬೇಕು ಅನ್ನೋ ಕಾರಣಕ್ಕಾಗಿ ಯಾವ ವ್ಯಾಯಾಮವೂ ಮಾಡೊಲ್ಲ.

ವ್ಯಾಯಾಮವೂ ಅನ್ನಿಸಬೇಕು, ಮನಸ್ಸಿಗೆ ಉಲ್ಲಾಸವೂ ಬೇಕು. ಅದಕ್ಕಿರುವ ಅತ್ಯುತ್ತಮ ಮಾರ್ಗವೆಂದರೆ ಚಾರಣ (ಟ್ರೆಕ್ಕಿಂಗ್). ಬೆಂಗಳೂರಿಗೆ ತುಂಬ ಹತ್ತಿರ ಇರುವ, ತನ್ನಲ್ಲೊಂದು ವಿಶೇಷತೆ ಬಚ್ಚಿಟ್ಟುಕೊಂಡಿರುವ ಸ್ಥಳದ ಬಗ್ಗೆ ಈ ಸಲ ಹೇಳ್ತೀನಿ. ನೀವು ಸಹ ಅಲ್ಲಿಗೆ ಹೋಗಿರಬಹುದು. ಆದರೂ ಒಮ್ಮೆ ಓದಿಕೊಂಡು ಬಿಡಿ. ರಾಮನಗರದ ರಾಮದೇವರ ಬೆಟ್ಟದ ಪರಿಚಯ ಮಾಡಿಸ್ತಿದೀನಿ.[ಮಡಿಕೇರಿಯ ನಿಶಾನೆಮೊಟ್ಟೆ ಏರೋಕೆ ಗುಂಡಿಗೆ ಬೇಕು]

Sholay

ಹಿಂದಿ ಸಿನಿಮಾ ಶೋಲೆ ಶೂಟಿಂಗ್ ಆಗಿದ್ದು ಇದೇ ರಾಮದೇವರ ಬೆಟ್ಟದಲ್ಲಿ ಅನ್ನೋದು ನಿಮಗೆ ಗೊತ್ತಿರುತ್ತದೆ. ಅಲ್ಲಿಗೆ ಹೋಗುವುದಕ್ಕೂ ಮುಂಚೆ ಆ ಸಿನಿಮಾ ನೋಡಿದರೆ, ಅಲ್ಲಿಗೆ ಹೋದಾಗ ಶೂಟಿಂಗ್ ಆದ ಸ್ಥಳಗಳು ಕಣ್ಣೆದುರು ಬಂದಂತಾಗುತ್ತದೆ. ಬೆಂಗಳೂರಿನಿಂದ ಮೈಸೂರಿಗೆ ಹೋಗುವ ಮಾರ್ಗದಲ್ಲಿ ಐವತ್ತೇ ಕಿಲೋಮೀಟರ್ ದೂರದಲ್ಲಿರುವ ಈ ಬೆಟ್ಟಕ್ಕೆ ಬರೀ ಒಂದು ಗಂಟೆ ಪ್ರಯಾಣ ಅಷ್ಟೇ.

ದೇಶದ ಏಕೈಕ ರಣಹದ್ದುಗಳ ಸಂರಕ್ಷಿತ ಪ್ರದೇಶ

ದೇಶದ ಏಕೈಕ ರಣಹದ್ದುಗಳ ಸಂರಕ್ಷಿತ ಪ್ರದೇಶ

ರಾಮದೇವರ ಬೆಟ್ಟ ನಮ್ಮ ದೇಶದ ಏಕೈಕ ಹಾಗೂ ಪ್ರಪ್ರಥಮ ರಣಹದ್ದುಗಳ ಸಂರಕ್ಷಿತ ಪ್ರದೇಶ. ರಾಮ- ಸೀತೆ ಹಾಗೂ ಲಕ್ಷ್ಮಣರು ವನವಾಸದಲ್ಲಿದ್ದಾಗ ಇಲ್ಲಿಯೂ ತಂಗಿದ್ದರಂತೆ. ಈ ಜಾಗದಲ್ಲಿ ಒಂದು ನೀರಿನ ಕೊಳವಿದೆ, ಅದನ್ನು ಸೀತೆಯ ಸ್ನಾನಕ್ಕಾಗಿ ರಾಮನು ತನ್ನ ಬಾಣದಿಂದ ನಿರ್ಮಿಸಿದ ಎಂಬುದು ಸ್ಥಳೀಯರ ನಂಬಿಕೆ.

ರಾಮಾಯಣದ ನಂಟು

ರಾಮಾಯಣದ ನಂಟು

ಅಲ್ಲಿ ಶ್ರೀರಾಮನಿಗೊಂದು ಗುಡಿಯುಂಟು. ಸೀತಾ ದೇವಿಯು ಶ್ರೀರಾಮನ ತೊಡೆಯ ಮೇಲೆ ಕುಳಿತಿರುವ ವಿಗ್ರಹವನ್ನು ನಾವಲ್ಲಿ ನೋಡಬಹುದು. ಶತಶತಮಾನಗಳಷ್ಟು ಹಳೆಯ ದೇಗುಲವಿದು. ರಾಮಾಯಣದಲ್ಲಿ ಬರುವ ಜಟಾಯು ಎಂಬ ರಣಹದ್ದು ರಾವಣನಿಂದ ಸೀತಾ ದೇವಿಯನ್ನು ಉಳಿಸಿಕೊಳ್ಳಲು ಇದೇ ಜಾಗದಲ್ಲಿ ಹೋರಾಡಿ ಸೋತು, ರಾಮ ಬರುವ ತನಕ ಪ್ರಾಣ ಹಿಡಿದು ರಾವಣನ ವಿಷಯವನ್ನು ತಿಳಿಸಿ, ಉಸಿರು ಬಿಟ್ಟ ಪ್ರದೇಶ ಇದಂತೆ. ಆದ್ದರಿಂದ ಈ ಜಾಗದಲ್ಲಿ ರಣಹದ್ದುಗಳು ಈಗಲೂ ಇವೆ ಎನ್ನುತ್ತಾರೆ.

ರಣಹದ್ದುಗಳಿಂದ ಕಾಡು ಶುದ್ಧ

ರಣಹದ್ದುಗಳಿಂದ ಕಾಡು ಶುದ್ಧ

ಅಂದಹಾಗೆ, ರಣಹದ್ದುಗಳು ಕಾಡನ್ನು ಶುಚಿಯಾಗಿಡುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಏಕೆಂದರೆ ಇವುಗಳ ಆಹಾರ ಸತ್ತ ಪ್ರಾಣಿಗಳು. ಹುಲಿ ಅಥವಾ ಚಿರತೆಗಳು ಬೇಟೆಯಾಡಿದ ಪ್ರಾಣಿಯನ್ನು ಪೂರ್ತಿಯಾಗಿ ತಿನ್ನುವುದಿಲ್ಲ. ಹೀಗೆ ಉಳಿದ ಪ್ರಾಣಿಗಳ ಭಾಗಗಳನ್ನು ರಣಹದ್ದುಗಳು ತಮ್ಮ ಆಹಾರವನ್ನಾಗಿಸಿಕೊಳ್ಳುತ್ತವೆ.

ಅಳಿವಿನಂಚಿನ ಜೀವಿ

ಅಳಿವಿನಂಚಿನ ಜೀವಿ

ಬೋಳುತಲೆ ಅಗಲನೆ ರೆಕ್ಕೆಗಳು, ಮೋಟನೆ ಬಾಲ, ಉದ್ದನೆಯ ಬೋಳು ಕತ್ತು ಮತ್ತು ಚೂಪಾದ ಕೊಕ್ಕು ಇರುವ ಇವುಗಳ ರೂಪ ಕೊಂಚ ಭಯ ಉಂಟು ಮಾಡಬಹುದು. ಇವುಗಳ ತೂಕ ಸುಮಾರು 5-6 ಕೆ.ಜಿ. ಹಾಗೂ ರೆಕ್ಕೆಯನ್ನು ಹರಡಿದಾಗ 6-8 ಅಡಿ ಅಗಲ ಬರುತ್ತವೆ. ಹೆಚ್ಚಾಗಿ ಇವು ಗುಂಪಿನಲ್ಲಿರುವುದನ್ನು ಕಾಣಬಹುದು. ರಣಹದ್ದುಗಳ ಸಂಖ್ಯೆ 1980ರಲ್ಲಿ 80 ಮಿಲಿಯನ್ ಇತ್ತು. 2007ರಷ್ಟೊತ್ತಿಗೆ 99% ರಷ್ಟು ಕಡಿಮೆಯಾಗಿ ಬಿಟ್ಟಿತ್ತು. ಹಾಗಾಗಿ ರಣಹದ್ದುಗಳನ್ನು ಅಳಿವಿನಂಚಿನಲ್ಲಿರುವ ಜೀವಿ ಎಂದು ಘೋಷಿಸಲಾಗಿದೆ.

ಔಷಧ ತಂದ ಸಾವು

ಔಷಧ ತಂದ ಸಾವು

ರಣಹದ್ದುಗಳ ಸಂಖ್ಯೆ ಕಡಿಮೆಯಾಗುವುದಕ್ಕೆ ಮುಖ್ಯ ಕಾರಣವೆಂದರೆ Diclofenac ಎಂಬ ನೋವು ನಿವಾರಕ ಔಷಧಿ. ಅದನ್ನು ಪ್ರಾಣಿಗಳಿಗೆ ವಯಸ್ಸಾದ ಸಂದರ್ಭದಲ್ಲಿ ಕೊಡುತ್ತಿದ್ದರು. ಸತ್ತ ನಂತರ ಆ ಪ್ರಾಣಿಯನ್ನು ತಿಂದಾಗ ರಣಹದ್ದುಗಳ ಕಿಡ್ನಿಗಳು ಹಾನಿಯಾಗಿ ಸಾಯುತ್ತಿದ್ದವು. ಈ ಔಷಧಿಯನ್ನು 2006ರಲ್ಲಿ ತಡೆಹಿಡಿಯಲಾಯಿತು. ಇದರ ತೀವ್ರತೆಯನ್ನು ಕಂಡು ರಾಮನಗರದ ಪ್ರದೇಶದ ರಾಮದೇವರ ಬೆಟ್ಟ ಸಮೀಪವಿರುವ ಸುಮಾರು 860 ಎಕರೆ ಜಾಗವನ್ನು ರಣಹದ್ದುಗಳ ಸಂರಕ್ಷಿತ ಪ್ರದೇಶವನ್ನಾಗಿ ಜನವರಿ 31, 2012ರಲ್ಲಿ ಘೋಷಿಸಲಾಯಿತು.

ಎರಡು ಪ್ರಭೇದ

ಎರಡು ಪ್ರಭೇದ

ಈಗ ನಾವು ಇಲ್ಲಿ ಎರಡು ಪ್ರಭೇದದ ರಣಹದ್ದುಗಳನ್ನು ಕಾಣಬಹದು. ಮೊದಲನೆಯದು ಲಾಂಗ್ ಬಿಲ್ಡ್ ರಣಹದ್ದು, ಎರಡನೇದು ವೈಟ್ ಬ್ಯಾಕ್ ರಣಹದ್ದು. ಇವುಗಳು ಒಂದು ಬಾರಿಗೆ ಒಂದೇ ಮೊಟ್ಟೆಯಿಡುವ ಕಾರಣ ಇವುಗಳ ಸಂತತಿ ಬೇಗನೆ ಹೆಚ್ಚಾಗುವುದಿಲ್ಲ. ಹಾಗಾಗಿ ಸೂಕ್ಷ್ಮವಾಗಿ ಇವುಗಳನ್ನು ಕಾಪಾಡಬೇಕಾಗಿದೆ. ಕರ್ನಾಟಕ ಅರಣ್ಯ ಇಲಾಖೆ ರಾಮದೇವರ ಬೆಟ್ಟದ ಸುತ್ತಲು ಸಸಿಗಳನ್ನು ನೆಟ್ಟು ಹಸಿರನ್ನು ಹೆಚ್ಚಿಸುವ ಪ್ರಯತ್ನದಲ್ಲಿದೆ. ಈ ಜಾಗಕ್ಕೆ ಭೇಟಿ ನೀಡಲು ನಿಮಗೆ ಇಲಾಖೆಯಿಂದ ಅನುಮತಿ ಬೇಕಾಗುತ್ತದೆ. ಒಮ್ಮೆ ಭೇಟಿ ನೀಡಿ. ಇದರ ಹತ್ತಿರವೇ ಜನಪದ ಲೋಕ ಕೂಡ ಇದೆ. ಕಂಸಾಳೆ, ಡೊಳ್ಳು ಕುಣಿತ, ಮಾರಿ ಕುಣಿತ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತವೆ. ಅಲ್ಲಿಗೂ ಭೇಟಿ ನೀಡಬಹುದು. ವಾರಾಂತ್ಯ ಸುಖಕರವಾಗಿರಲಿ,

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+