ಅಪ್ಪಾ… ಐ ಲವ್ ಯೂ ಪಾ.. ಅಪ್ಪನೇ ಆಕಾಶದ ಪ್ರತಿರೂಪ
ಪ್ರತಿ ಹೆಣ್ಣು ಮಗುವಿಗೆ ತನ್ನ ಅಪ್ಪನೇ ಮೊದಲನೆಯ ಹೀರೋ. ಒಮ್ಮೊಮ್ಮೆ ಅಮ್ಮನಿಗೆ ಹೇಳಿದಷ್ಟು ಭಾವನೆಗಳನ್ನು ಅಪ್ಪನಿಗೆ ನಾವು ಹೇಳಿರುವುದಿಲ್ಲ. ಹೇಳೋದು ಸಹ ಅಷ್ಟೇ ಕಷ್ಟ. ಈ ಸರ್ತಿ ಅಪ್ಪನ ಬಗ್ಗೆ ಬರೆದು ಹೇಳೋಣ ಅನ್ನಿಸಿತು. ನನ್ನಪ್ಪನ ಬಗ್ಗೆ ಬರೆದರೆ ಅಪ್ಪನಿಗೆ ವಿಪರೀತ ಮುಜುಗರ, ಆದರೂ ಈ ಸಾಹಸಕ್ಕೆ ಕೈ ಹಾಕುತ್ತಿದ್ದೇನೆ.
ಅಪ್ಪ ಹುಟ್ಟಿದ್ದು ಬಿಳಿಕೆರೆಯಲ್ಲಿ. ನಮ್ಮ ತಾತ ತಾಯಿನಾಡು ನಂತರ ಸಂಯುಕ್ತ ಕರ್ನಾಟಕದಲ್ಲಿ ಸುದ್ದಿ ಸಂಪಾದಕರಾಗಿದ್ದರು. ಹೀಗೆ ಇಂತಹ ಒಳ್ಳೆಯ ವಾತಾವರಣದಲ್ಲಿ ಅಪ್ಪ ಬೆಳೆದಿದ್ದು. ಮನೆ ತುಂಬಾ ಜನ ಅನ್ನುವುದು ಭಾರತದ ಯಾವುದೇ ಮಿಡಲ್ ಕ್ಲಾಸಿನ ಮನೆಯ ಅವಿಭಾಜ್ಯ ಅಂಗ. ಮನೆಗೂ ಜಾತ್ರೆಗೂ ವ್ಯತ್ಯಾಸವೇ ಇರುವುದಿಲ್ಲ. ಹಾಲ್ದೊಡ್ದೇರಿ ತಾತನ ಊರು. ಅವರು ಅಲ್ಲಿ ಸ್ವಲ್ಪ ವರ್ಷಗಳು ಇದ್ದು, ನಂತರ ಬೆಂಗಳೂರಿಗೆ ವಲಸೆ ಬಂದವರು. ಈಗ ನನ್ನಪ್ಪನ ಕಿರು ಪರಿಚಯ ನಿಮಗಾಗಿರಬಹುದು.

ಪ್ರತಿ ವಾರ ಸುಮಾರು ಹದಿನೆಂಟು ವರ್ಷಗಳಿಂದ ಕನ್ನಡದಲ್ಲಿ ವಿಜ್ಞಾನದ ಕಬ್ಬಿಣದ ಕಡಲೆಯನ್ನು ಸುಲಿದ ಬಾಳೆಹಣ್ಣಿನಂತೆ ಪರಿವರ್ತಿಸುತ್ತಿರುವವರು ನನ್ನ ಅಪ್ಪ.
ಚಿಕ್ಕವಳ್ಳಿದ್ದಾಗ ಅಪ್ಪ ನಮ್ಮ ಮನೆಯ ಖಾಯಂ ಅತಿಥಿ . ಬೆಳಗ್ಗೆ ಬೇಗ ಹೋದರೆ ಅಪ್ಪ ಬರುತ್ತಿದ್ದುದು ರಾತ್ರಿಯೆ; ಹಿಂದೊಮ್ಮೆ ಲೇಖನದಲ್ಲಿ ಪ್ರಸ್ತಾಪಿಸಿದ್ದ ಹಾಗೆಯೆ ಅಪ್ಪನ ಕೆಲಸದ ಬಗ್ಗೆ ತಾತ ನನಗೆ ತಿಳಿಸಿ ಹೇಳಿದ್ದರು. ದೇಶ ಕಾಯೋ ಯೋಧನಿಗಿಂತ ಕಡಿಮೆ ಕೆಲಸ ಅಪ್ಪನದ್ದಲ್ಲ ಎಂದು. ಅಪ್ಪ ಡಿಆರ್'ಡಿಓ ದಲ್ಲಿ ಕೆಲಸ ಮಾಡುತ್ತಿದ್ದರು . ಪ್ರತಿ ವಾರ ಅಂಕಣ ಬರೆಯಬೇಕಿದ್ದ ಕಾರಣ ಅಪ್ಪ ಭಾನುವಾರ ಕಂಪ್ಯೂಟರ್ ಮುಂದೆ ಕಟ ಕಟ ಶಬ್ದ ಮಾಡಿ ಬರೆಯುತ್ತಿದ್ದರು. ಅಲ್ಲಿಯೇ ಪ್ರಥಮ ಬಾರಿ ನಾನು ಕನ್ನಡವನ್ನು ಗಣಕ ಯಂತ್ರದಲ್ಲಿ ಕಂಡಿದ್ದು. ಅಪ್ಪನ ಬಗ್ಗೆ ವಿಪರೀತ ಕುತೂಹಲ ಬಂದಿದ್ದು.

ಒಮ್ಮೊಮ್ಮೆ ಅಪ್ಪನ ಬಗ್ಗೆ ಅಸಾಧ್ಯ ಕೋಪವು ಬರುತ್ತಿತ್ತು. ನನ್ನ ಜತೆಗೆ ಸಮಯ ಕಳೆಯುವುದಿಲ್ಲ ಅಪ್ಪ ಎಂದು. ಅಲ್ಲಿ ಯಾವುದೋ ಊರಿಗೆ ಸಣ್ಣ ಹಳ್ಳಿಗೆ ಅಪ್ಪ ಹೋಗಿ ಭಾಷಣ ಮಾಡುತ್ತಿದ್ದುದನ್ನು ಮರು ದಿವಸ ಪೇಪರಿನಲ್ಲಿ ಕಂಡು ನನ್ನ ಶಾಲೆಯ ಛದ್ಮವೇಷದ ಸ್ಪರ್ಧೆಗೆ ಬರದೆ ಇಲ್ಲಿ ಹೋಗಿದ್ದರು ಎಂದು ತಿಳಿಯುತ್ತಿತ್ತು. ಶಾಲೆಯಲ್ಲಿ ಅಪ್ಪನ ಮಗಳಾಗಿದ್ದರಿಂದಲೋ ಏನೋ ಒಮ್ಮೊಮ್ಮೆ ವಿಪರೀತ ಆಸ್ಥೆ ಅಥವಾ ವಿಪರೀತ ಬೈಗುಳವು ಸಿಗುತ್ತಿತ್ತು. ಅವರ ಮಗಳು ಹೀಗೆಯೇ ಇರಬೇಕು ಎಂಬ ಇರಲಾರದ ತಲೆಭಾರ ನನ್ನ ಮೇಲೆ. ಒಮ್ಮೊಮ್ಮೆ ಅವರ ಮಗಳೆಂದು ಹೇಳದೇ ಇರುತ್ತಿದ್ದೆ.
ಅಪ್ಪ ಅವರ ಕೆಲಸಕ್ಕೆ ಬಹಳ ನಿಷ್ಟರು. ಎಂದೂ ಸಹ ಹಿಡಿದ ಕೆಲಸವನ್ನು ಮಾಡದೇ ಬಿಡುವುದಿಲ್ಲ. ಅದಕ್ಕೆ ಬೇಕಾದ ಶ್ರದ್ಧೆ , ಸಹನೆ ಎಲ್ಲವನ್ನೂ ಮೈಗೂಡಿಸಿಕೊಂಡವರು. ದಿನಾ ಎದ್ದು ಓದುವ ಅಭ್ಯಾಸ ಮಾಡಬೇಕು ಎಂಬುದು ಅಪ್ಪನ ಮಾತು. ನನಗೆ ನೆನಪಿದ್ದ ಹಾಗೆ ಅಪ್ಪ ನನಗೆ ಒಮ್ಮೆ ಮಾತ್ರ ಅವರ ಕನ್ನಡಕ ಬಿಸಾಕಿದ್ದೆ ಎಂದು ಏಟು ಕೊಟ್ಟಿದ್ದು ನೆನಪು. ಮಕ್ಕಳಿಗೆ ವಿಪರೀತ ಸಲಿಗೆ ಅಥವಾ ದಂಡ ಎಂದೂ ಹಾಕಿದ್ದಲ್ಲ.

ಅಪ್ಪನ ಬಾಸ್ ಅಬ್ದುಲ್ ಕಲಾಮ್ ಆಗಿದ್ದರ ಕಾರಣವೇನೋ ಒಮ್ಮೊಮ್ಮೆ ಕೆಲಸದ ಬಗ್ಗೆ ಅವರು ಹೇಳುತ್ತಿದ್ದ ಮಾತುಗಳು ತುಂಬಾ ಸ್ವಾರಸ್ಯಕರವಾಗಿರುತ್ತಿತ್ತು. ದೊಡ್ಡ ಮಿಸೈಲ್ ನ ತಂತ್ರಜ್ಞಾನವನ್ನು ಸುಲಭವಾಗಿ ಕನ್ನಡದಲ್ಲಿ ವಿವರಿಸಿದ್ದು ಅಪ್ಪನೇ. ಒಮ್ಮೊಮ್ಮೆ ಅನ್ನಿಸೋದು ಒಂದು ಸಾವಿರ ಕೆಲಸಗಳನ್ನ ಅಪ್ಪ ಹೇಗೆ ಮಾಡುತ್ತಾರೆ ಅಂತ.
ಅಪ್ಪ ಮನೆಗೆ ವಿಪರೀತ ಬುದ್ಧಿವಂತ ಹುಡುಗ; ಎಲ್ಲರೂ ಭೇಷ್ ಎನ್ನುವ ಹಾಗೆ ಅಂಕಗಳು, ಗುಣಗಳನ್ನು ಬೆಳೆಸಿಕೊಂಡಿದ್ದಾರೆ. ರಾಜ್ಯಕ್ಕೆ ಉನ್ನತ ಶ್ರೇಣಿಯೆಲ್ಲಾ ಪಡೆದುಕೊಂಡಿದ್ದರಂತೆ. ರಾಜ್ಯದ ಬೆಸ್ಟ್ ಕಾಲೇಜಿನಲ್ಲಿ ಇಂಜಿಯನಿಯರಿಂಗ್ ಮಾಡಿ ಐಐಟಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಸಹ ಪಡೆದಿದ್ದಾರೆ. ಇಷ್ಟಾದರೂ ಸಹ ತುಂಬಾ ಆರಾಮಾಗಿ ಎಲ್ಲರ ಹತ್ತಿರ ಬೆರಿತಾರೆ. ಅಷ್ಟೆಲ್ಲಾ ಸಾಧನೆ ಮಾಡಿಯೂ ಅವರಿಗೆ ಕೋಡು ಮೂಡದೇ ಇರುವುದು ತುಂಬಾ ಆಶ್ಚರ್ಯವಾಗುತ್ತದೆ. ತಮ್ಮನ್ನೇ ಟೀಕೆ ಮಾಡಿ, ಆಡಿಕೊಳ್ಳುವರನ್ನು ವಿರುದ್ಧ ಸಹ ಅವರು ಜೋರಾಗಿ ಮಾತಾಡಿದ್ದನ್ನು ಕಂಡಿಲ್ಲ.
ಭಾರತದ ಅಗ್ನಿ, ಬ್ರಹ್ಮೋಸ್ ಕ್ಷಿಪಣಿ, ತೇಜಸ್ ಹಾಗೂ ಐಜೆಟಿ ವಿಮಾನಗಳು ಮತ್ತು ಧ್ರುವ ಹೆಲಿಕಾಪ್ಟರ್ ಗಳ ಸಾಮರ್ಥ್ಯ ಪರೀಕ್ಷೆ, ಅದರ ಇಂಜಿನ್ ನ ವಿನ್ಯಾಸದ ಗುಂಪಿನಲ್ಲಿಯೂ ಕೆಲಸ ಮಾಡಿದವರು ನನ್ನ ತಂದೆ.

ಇಲ್ಲಿ ಬಾರ್ಸಿಲೋನಾಗೆ ಬಂದಾದ ನಂತರ, ನನ್ನ ಲೇಖನಗಳನ್ನು ಓದಿ ಕೆಲವರು ಪ್ರತಿಕ್ರಿಯೆಗಳನ್ನು ಬರೆದಿದ್ದಾರೆ. ಇದರಲ್ಲಿ ಅಪ್ಪನ ಲೇಖನಗಳನ್ನೂ ಸಹ ಓದಿದ್ದನ್ನ ನೆನಪಿಸಿಕೊಂಡಿದ್ದಾರೆ. ಅವರ ಸಲಹೆಗಳೇ ಅಪ್ಪನ ಯಶಸ್ಸಿಗೆ ಕಾರಣವಾಗಿದೆ ಎಂದೂ ಸಹ ನನಗೆ ಅಪ್ಪ ತಿಳಿಸಿದ್ದರು.
ಅಮ್ಮ ಭಾವಜೀವಿಯಾಗಿ ಕಂಡರೆ ಅಪ್ಪ ಅದಕ್ಕಿಂತಲೂ ಜಾಸ್ತಿ. ನನಗೆ ಇಂಜೆಕ್ಷನ್ ಕೊಟ್ಟಾಗ ಅಪ್ಪನ ಬೀಪಿ ಸರ್ರನೆ ಏರಿದ್ದನ್ನು ನಮ್ಮ ವೈದ್ಯರು ತೋರಿಸಿದ್ದನ್ನು ನಾನು ಮರೆಯಲಸಾಧ್ಯ. ಜಗತ್ತಿಗೆ ಹೆದರಿ ಮಗಳ ವಿರುದ್ಧವಾಗಿ ಅಪ್ಪ ನಡೆದದ್ದೇ ಇಲ್ಲ. ನಾವಿಬ್ಬರು ಹೆಣ್ಣು ಮಕ್ಕಳನ್ನು ತುಂಬಾ ಆಸೆಯಿಂದ ಬೆಳೆಸಿದ್ದಾರೆ. ಒಮ್ಮೊಮ್ಮೆ ಮನೆಯವರೇ ಇಬ್ಬರೂ ಹೆಣ್ಣು ಮಕ್ಕಳು ಎಂದು ಮೂಗು ಮುರಿದರೂ ಅಪ್ಪ ಎಂದಿಗೂ ಅವರ ಮಾತನ್ನು ತಲೆಗೆ ಹಾಕಿಕೊಂಡಿಲ್ಲ. ಇಷ್ಟು ಸಮಾನತೆಯನ್ನು ಮನೆಯಲ್ಲಿ ತಂದಿದ್ದು ಅಮ್ಮ, ಗಂಡ, ಗಂಡಸು ಹೇಗಿರಬೇಕೆಂಬ ಆದರ್ಶ ಹಾಕಿಕೊಟ್ಟು ನಡೆದಿದ್ದು ಅಪ್ಪನೇ ಎಂಬುವುದರಲ್ಲಿ ಸಂಶಯವಿಲ್ಲ.
ಅವರು ಸ್ನೇಹವನ್ನ ನಿಭಾಯಿಸುವ ರೀತಿ, ಅವರ ನಗು, ತಮಾಶೆ ಇವೆಲ್ಲಾ ನೆನಪಿಗೆ ಬರುತ್ತಲೇ ಇರುತ್ತದೆ. ನ್ಯೂನ್ಯತೆಗಳು ಎಲ್ಲರಲ್ಲೂ ಇರುತ್ತದೆ; ಒಮ್ಮೊಮ್ಮೆ ಅದನ್ನು ಅಲಕ್ಷ್ಯ ಮಾಡುವುದು ಉತ್ತಮ. ಅಪ್ಪ ಆಕಾಶ, ಭೂಮಿ, ಸ್ವರ್ಗ ಎಲ್ಲವೂ ಆಗಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.
ಅಪ್ಪನ ಬಗ್ಗೆ ಎಷ್ಟು ಬರೆದರೂ ಮುಗಿಯದ ಕಥೆ ಸುಮಾರಿದೆ. ಅಪ್ಪನ ದಿನಾಚರಣೆಗೆ ನನ್ನಿಂದ ಬರೆಯಲು ಸಾಧ್ಯವಾಗಿದ್ದು ಇಷ್ಟೆ.
ಜಯಂತ ಕಾಯ್ಕಿಣಿ ಅವರ ಪಪ್ಪನಿಗೆ ಪದ್ಯದಲ್ಲಿ ಬರೆದಂತೆ ನನ್ನ ಅಪ್ಪನಿಗೆ ಈ ಲೇಖನ ಅರ್ಪಿತ.
-
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ?












Click it and Unblock the Notifications