ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ್ಯೋತಿ-ಷ್ಯ

By * ಕೆ. ಆರ್.ಶರ್ಮಾ.ತಲವಾಟ
|
Google Oneindia Kannada News

ಯಾರಿಗೆ ತಮ್ಮ ಭವಿಷ್ಯ ತಿಳಿಯುವ ಆಸೆ ಇರುವುದಿಲ್ಲ? ನಡೆದದ್ದು ನಡೆದಂತೆ ಹೇಳಿ ನಡೆಯುವುದನ್ನು ಹೇಗೆ ಹೇಳಿದರೂ ಸಾಕು ನಂಬುತ್ತದೆ ಮನಸ್ಸು. ಹಾಗಾಗಿ ಎಲ್ಲರಿಗೂ ಅದೊಂದು ಭವಿಷ್ಯ ಅರಿಯುವ ಆಸೆ ಇರುತ್ತದೆ. ಪಾಮರರಿಗೆ ಬಿಡಿ ಪಂಡಿತರೆನ್ನಿಸಿಕೊಂಡ ಸ್ವತಃ ಜ್ಯೋತಿಷಿಗೂ ಆ ಆಸೆ ಇರುತ್ತದೆ. ಆದರೆ ಮನಸ್ಸು ಸೂಕ್ತ ಜ್ಯೋತಿಷಿಯನ್ನು ಅರಸುತ್ತಿರುತ್ತದೆ ಅಷ್ಟೆ. ಅವರವರ ಜೇಬಿನ ಗಾತ್ರಕ್ಕನುಗುಣವಾಗಿ ಗಿಣಿ ಶಾಸ್ತದಿಂದ ಹಿಡಿದು ಉದ್ದಾಮ ಪಂಡಿತರವರೆಗೆ ಇದೊಂದು ಅಧಮ್ಯ ಆಸೆ ಮನೆಮಾಡಿರುತ್ತದೆ.

ಒಮ್ಮೆ ಹೀಗೆ ಪುಟ್ಟ ಜ್ಯೋತಿಷಿಯೊಬ್ಬನಿಗೆ 58ರ ಹರಯದಲ್ಲಿ ತಮ್ಮ ಭವಿಷ್ಯವನ್ನು ತಿಳಿಯುವ ಆಸೆ ಆಯಿತು. ಆವರು ಸೀದಾ ದೊಡ್ದ ಜ್ಯೋತಿಷಿಯ ಬಳಿಗೆ ಹೋದರು. ಜಾತಕ ತನ್ನದೆಂದು ಹೇಳಿದರೆ ಗ್ರೇಡಿಗೆ ಕಡಿಮೆಯೆಂಬ ಲೆಕ್ಕಾಚಾರಕ್ಕಿಳಿದ ಮರಿಜ್ಯೋತಿಷಿ ಹೆಸರು ಬದಲಿಸಿ ಇದು ನನ್ನ ಆಪ್ತರೊಬ್ಬರ ಜಾತಕ ಎಂದು ಕೊಟ್ಟರು. ಅವರು ಜಾತಕ ನೋಡಿ ಹೊರಳಿಸಿ ಭಾಗಿಸಿ ಗುಣಿಸಿ ಅಂತಿಮವಾಗಿ ಇದು ಒಳ್ಳೆಯ ಜಾತಕ ಕಣಯ್ಯಾ. ಕಳತ್ರ ಸ್ಥಾನಕ್ಕೆ ಎರಡು ಗ್ರಹಗಳ ದೃಷ್ಟಿಯಿದೆ ಹಾಗಾಗಿ ಈ ಜಾತಕಕ್ಕೆ ಶೀಘ್ರದಲ್ಲಿ ಜ್ಯೋತಿಯ ಸನಿಹ ಪವಡಿಸುವ ಯೋಗವಿದೆ ಎಂದರು. ಮರಿಗೆ ಒಳಗೊಳಗೆ ತಡೆಯಲಾರದ ಖುಷಿ. ಹರೆಯಕ್ಕೆ ಬಂದ ಕಾಲೇಜು ಕನ್ಯೆ ಜ್ಯೋತಿಗೂ ತನಗೂ ಆಹಾ..... ಎಂದು ಮರಿಜ್ಯೋತಿಷಿ 58ರ ಮರುಪ್ರಾಯದಲ್ಲಿ ಕನಸುಕಾಣತೊಡಗಿದರು. ಹಾಗೂ ಆ ಕನಸಿನ ಬೆನ್ನು ಹತ್ತಿ ಮನೆಸೇರಿದರು. ಮನೆಯಲ್ಲಿ ಹೆಂಡತಿಯ ಬಳಿಯೂ ಮಾತಿಲ್ಲ ಅಮ್ಮನ ಬಳಿಯೂ ಜೋರಿಲ್ಲ. ತಥ್, ಯಾವಾಗ ಎಂದು ಕೇಳುವುದು ಮರೆತೆ ಎಂಬ ಗೊಣಗಾಟದ ಜತೆ ಶತಪತ ಮನೆಯೊಳಗಡೆ ತಿರುಗಿದರು. ಅಂತೂ ಒಂದು ರಾತ್ರಿ ಹೇಗೋ ಕಳೆಯಿತು.

ಮಾರನೆ ದಿನ ಕಾಲೇಜು ಹುಡುಗಿಯರು ರಸ್ತೆಯಲ್ಲಿ ಹೋಗುವ ಸಮಯದಲ್ಲಿ ಇವರು ಮನೆಯೆದುರು ಠಳಾಯಿಸತೊಡಗಿದರು. ಬೆಳಿಗ್ಗೆ ಕಾಲೇಜಿಗೆ ಹೊರಟ ಜ್ಯೋತಿ ದೂರದಿಂದ ಇವರಿಗೆ ಕಂಡು ರೋಮಾಂಚನಗೊಂಡರು. ಮನಸ್ಸಿನಲ್ಲಿಯೇ ಜಾತಕದಲ್ಲಿನ ಕಳತ್ರ ಸ್ಥಾನದ ಗ್ರಹಗಳಿಗೆ ನಮಿಸಿ ಮುಗುಳ್ನಗಲು ತಯಾರಾಗಿ ನಿಂತರು. ಆದರೆ ಜ್ಯೋತಿ ಮಾತ್ರಾ ಇವರನ್ನು ನೋಡದೇ ಮುನ್ನಡೆದಳು. ಪಾಪ ಅವಳಿಗೆ 58ರ ಹರೆಯದ ಜ್ಯೋತಿಷಿ ಜಾತಕ ತೋರಿಸಿ ಬಂದಿದ್ದಾನೆ ಅವರ ಕಳತ್ರ ಸ್ಥಾನಕ್ಕೆ ಎರಡು ಗ್ರಹಗಳ ದೃಷ್ಟಿಯಿದೆ. ಅದನ್ನು ಗಮನಿಸಿ ದೊಡ್ಡಜ್ಯೋತಿಷಿ ಭವಿಷ್ಯ ಹೇಳಿದ್ದಾರೆ ಎಂದು ಹೇಗೆ ಗೊತ್ತಿರಬೇಕು?

ಆದರೆ ಜ್ಯೋತಿಷಿ ಹತಾಶರಾಗಲಿಲ್ಲ. ಅವರು ಶೀಘ್ರದಲ್ಲಿ ಎಂದಿದ್ದಾರಲ್ಲ ನಾಳೆ ಆಗಬಹುದು ಎಂದು ಒಳನಡೆದರು. ಶಿವ ಪೂಜೆಯಲ್ಲಿ ಕರಡಿಗೆ ಬಿಟ್ಟಂತೆ ಎಂಬಂತೆ ಅವತ್ತು ರಾತ್ರಿ ಮರಿ ಜ್ಯೋತಿಷಿಯ ತಾಯಿ ಅನಿರೀಕ್ಷಿತವಾಗಿ ಹೃದಯಾಘಾತದಿಂದ ಶಿವನ ಪಾದ ಸೇರಿದಳು. ರಾತ್ರೋ ರಾತ್ರಿ ಹೆಣವನ್ನು ಭೂಷಣಕ್ಕೆ ಹಾಕಿ ಜ್ಯೋತಿ ಬೆಳಗಿಸಿಟ್ಟರು. ಮರಿಜ್ಯೋತಿಷಿಗೆ ಬೆಳಗಿನವರೆಗೂ ಅಲ್ಲಿಯೇ ಪವಡಿಸುವಂತಾಯಿತು.

ಮಾರನೆ ದಿನ ದಹನಕಾರ್ಯಕ್ಕೆ ಬಂದ ದೊಡ್ಡ ಜ್ಯೋತಿಷಿ ಮರಿ ಜ್ಯೋತಿಷಿಯ ಬಳಿ. ಅಲ್ಲ ನೀನು ತಂದ ಜಾತಕಕ್ಕೆ ಜ್ಯೋತಿಯ ಬಳಿ ಪವಡಿಸುವ ಯೋಗ ಇತ್ತು. ಆದರೆ ಅದನ್ನು ತೋರಿಸಲು ತಂದ ನಿನ್ನ ಜಾತಕದಲ್ಲಿ ಇಷ್ಟು ಬೇಗ ಹೀಗೆ ಜ್ಯೋತಿಯ ಬಳಿ ರಾತ್ರಿ ಇಡೀ ಪವಡಿಸಬೇಕಾಗುತ್ತದೆಯೆಂದು ನನಗೂ ಗೊತ್ತಿರಲಿಲ್ಲ ಕಣಯ್ಯಾ.. ಎಂದರು. ಮರಿ ಜ್ಯೋತಿಷಿಗೆ ಜ್ಯೋತಿಯ ಜತೆ ರಾತ್ರಿ ಇಡೀ ಪವಡಿಸುವ ಯೋಗ ಅರ್ಥವಾಗಿ ಉಮೇದು ಜರ್ರನೆ ಇಳಿಯಿತು.

ಮತ್ತೊಂದು ಹಾಸ್ಯ ಲೇಖನ

ಪ್ರಮಿಳಾ ನೇಸರ್ಗಿಯೂ ಮಂತ್ರಿಸಿದ ನಿಂಬೆಹಣ್ಣೂಪ್ರಮಿಳಾ ನೇಸರ್ಗಿಯೂ ಮಂತ್ರಿಸಿದ ನಿಂಬೆಹಣ್ಣೂ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X