ಜಗಚ್ಚಕ್ಷುಕ ಶಿವನನ್ನು ಗುರ್ತಿಸುವುದೆಂದರೆ..

ಸಧ್ಯಕ್ಕೆ ಪೌರಾಣಿಕ ದೇವತೆ ಶಿವನನ್ನ, ಶಿವಪುರಾಣದ, ಮಹಾಭಾರತದ ‘ಶಿವೋಪಾಖ್ಯಾನ’ಗಳ, ಕಾಳಿದಾಸನ ‘ಕುಮಾರಸಂಭವ’ ದ, ಹರಿಹರನ ‘ಗಿರಿಜಾಕಲ್ಯಾಣ’ದ, ಭಾರವಿಯ ‘ಕಿರಾತಾರ್ಜುನೀಯ’ದ ಶಿವನನ್ನು ಸ್ವಲ್ಪಕಾಲ ಮರೆಯಿರಿ. ವಿಶ್ವತೋಮುಖ, ಸರ್ವಸಾಕ್ಷಿ, ಭುವನವನ್ನೆಲ್ಲ ಸದಾ ನೋಡುತ್ತಿರುವ ಕಣ್ಣು (ಜಗಚ್ಚಕ್ಷು), ಅಣುವಿಗಿಂತ ಸಣ್ಣದು (ಅಣೋರ್‌ ಅಣೀಯ), ದೊಡ್ಡದಕ್ಕಿಂತ ಹಿರಿದಾದದ್ದು (ಮಹತೋ ಮಹೀಯ), ‘ಜೀವ ಜಡರೂಪ ಪ್ರಪಂಚವನು ಆವರಿಸಿಕೊಂಡುಂ ಒಳನೆರೆದುಂ’ ಇರುವ (ಶ್ವೇತಾ. ಉಪ 3.3) ಈ ರುದ್ರನನ್ನು ಗುರುತಿಸಿರಿ.

ಎರಡಲ್ಲ ಅವ ಒಬ್ಬನೇ; ಹುಟ್ಟು, ಇರುವು, ಅಳಿವು ಮೂರನ್ನೂ ನಿರ್ವಹಿಸುತ್ತಿರುವ ಏಕೈಕ ಸರ್ವ ಶಕ್ತಿ ‘ಅದು’! (ಏಕೋ ಹಿ ರುದ್ರೊ, ನ ದ್ವಿತೀಯಾಯ ತಸ್ಥುರ್‌, ಯ ಇಮಾಂಲ್‌ ಲೋಕಾನ್‌ ಅಶೀತ ಈಶಾನೀಭಿ:। ಪ್ರತ್ಯಂಗ್‌ ಜನಾಂಸ್‌ ತಿಷ್ಠತಿ ಸಂಚುಕೋಚ, ಅನ್ತಕಾಲೇ ಸಂಸೃಜ್ಯ ವಿಶ್ವಾ ಭುವನಾನಿ ಗೋಪಾ।। -ಶ್ವೇತಾಶ್ವತರ ಉಪ. 3.2). ದೇವರು ಒಬ್ಬನೇ. ಅವನು ಹೊರಗೆ ಕಾಣದೆ ಹೋದರೂ, ಎಲ್ಲ ಜೀವಿಗಳಲ್ಲೂ ಒಳಗೆ ಅಡಗಿ ಕುಳಿತಿದ್ದಾನೆ, ನಾವು ಮಾಡುವ, ಯೋಚಿಸುವ, ಯೋಜಿಸುವ ಎಲ್ಲಾ ‘ಕರ್ಮ’ಗಳಿಗೂ ಸಾಕ್ಷಿಯಾಗಿ ಹೃದಯದೊಳಗೆ ಆ ನಿರ್ಗುಣ ಇದ್ದಾನೆ- ಎಂಬುದು ‘ದೇವರ ಬಗ್ಗೆ ಉಪನಿಷತ್ತಿನ ಒಂದು ಸುಂದರ ವ್ಯಾಖ್ಯೆ! (ಏಕೋ ದೇವ:, ಸರ್ವ ಭೂತೇಷು ಗೂಢ:; ಸರ್ವವ್ಯಾಪೀ, ಸರ್ವಭೂತ-ಅನ್ತರಾಥ್ಮಾ। ಕರ್ಮಾಧ್ಯಕ್ಷ:, ಸರ್ವ-ಭೂತ-ಅಧಿವಾಸ:; ಸಾಕ್ಷೀ ಚೇತಾ, ಕೇವಲೋ ನಿರ್ಗುಣಶ್ಚ।। -ಶ್ವೇತಾಶ್ವತರ ಉಪ. 6.11). ಇದನ್ನೇ ಶಿವಧರ್ಮೋತ್ತರ ಪುರಾಣದಲ್ಲಿ,
‘ಪ್ರತಿಮೆಯಲಿ ಪರಶಿವನ ಹುಡುಕುವಿರೇ’- ಎನ್ನುವರು,
ಎದೆಯಾಳಗೆ ಕುಳಿತಿಹನ ಕಂಡವರು, ಬಲ್ಲವರು!
(ಶಿವಂ ಆತ್ಮನಿ ಪಶ್ಯನ್ತಿ, ಪ್ರತಿಮಾಸು ನ ಯೋಗಿನ:।।) -ಎಂದಿರುವುದು.

ಆದರೆ, ನಿರ್ಗುಣೋಪಾಸನೆಯ ಹಂತಕ್ಕೆ ಮುಟ್ಟುವ ಮುನ್ನ ಮೊದಲ ಮೆಟ್ಟಿಲುಗಳಲ್ಲಿದ್ದಾಗ, ‘ದೇವರು’ಗಳಿಗೆ ಕೈಮುಗಿದಾಗಲೆಲ್ಲ ನಮ್ಮ ಒಳಮನ ಮಿಡಿಯುತ್ತಲೇ ಇತ್ತು:
ಮೇಲೆ ಬಾಂದಳದಿಂದ ಬಿದ್ದು, ಹರಿ ಹರಿಯುತ್ತ
ಕೊನೆಗೊಮ್ಮೆ ಸೇರುವುದು ಸಾಗರವ ನೀರು;
ಈ ಪರಿಯೆ ನಮ್ಮೆಲ್ಲ ನಮನಗಳು ‘ಅವನ’ತ್ತ
ಸಾಗುವುವು; ‘ದೇವನೊಬ್ಬನೆ, ಅವನ ನಾಮ ಹಲವು’!
(ಆಕಾಶಾತ್‌ ಪತಿತಂ ತೋಯಂ, ಯಥಾ ಗಚ್ಛತಿ ಸಾಗರಮ್‌। ಸರ್ವ-ದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ।।) ಎಲ್ಲಾ ನೀರೂ ಸಮುದ್ರ ಸೇರುವುದಿಲ್ಲ; ಬಹುಭಾಗ ಇಂಗಿ ನೆಲದೊಳಕ್ಕೆ ಹೋಗಿ ಬಿಡುತ್ತೆ- ಎನ್ನುವಿರೇನು? ಎಷ್ಟೋ ಬಾರಿ ನಮ್ಮ ನಮಸ್ಕಾರಗಳೂ ಹಾಗೇನೇ ಅಲ್ಲವೇ; ಎಲ್ಲವನ್ನೂ ಮನಸಾರೆ ಎಲ್ಲಿ ಮಾಡುತ್ತೇವೆ? ಇರಲಿ, ಒಳಗಿರುವ ಬೆಳಕನ್ನು ಗುರುತಿಸಿಕೊಂಡವರೇ ಧನ್ಯರು!

***

ಶಿವನಿಗೆ ಅಭಿಷೇಕ ಮಾಡುವಾಗ, ಸಾಮಾನ್ಯವಾಗಿ ಎಲ್ಲ ವೇದಗಳ ಶಾಖೆಯವರೂ ಯಜುರ್ವೇದದ ಸಂಹಿತಾಭಾಗದಲ್ಲಿರುವ ‘ಶತರುದ್ರೀಯ’ ವೆಂದು ಪ್ರಸಿದ್ಧವಾಗಿರುವ ಮಂತ್ರಗಳನ್ನು ಬಳಸುತ್ತಾರೆ. (ವಾಜಸನೇಯೀ ಸಂಹಿತೆಯ 16ನೇ ಅಧ್ಯಾಯ; ಕೃಷ್ಣಯಜುರ್ವೇದ, ತೈತ್ತಿರೀಯ ಶಾಖೆ, ಸಂಹಿತಾ ಭಾಗ, ನಾಲ್ಕನೆಯ ಆಗ್ನೇಯ ಕಾಂಡ, ಐದನೆಯ ಪ್ರಶ್ನ) ಇದು ಭಗವಂತನ ಒಂದು ಸುಂದರ ಕಾವ್ಯಮಯ ಗುಣಗಾನದ ಭಂಡಾರ. ಚೆನ್ನಾಗಿ ಬಲ್ಲವರು ಕ್ರಮವರಿತು ಸಸ್ವರ ಮಂತ್ರ ಪಠನ ವಾಚನ ಮಾಡಿದರೆ, ಅರ್ಥ ತಿಳಿಯದೇ ಹೋದರೂ, ಕೇಳಲು ಬಲು ಚೆನ್ನು.

ಸಂಸ್ಕೃತದಲ್ಲಿಯೂ, ಕನ್ನಡದಲ್ಲಿಯೂ, ಇಂಗ್ಲೀಷಿನಲ್ಲಿಯೂ ಇರುವ ಹಲವಾರು ಅತ್ಯುತ್ತಮ ಭಾಷ್ಯಗಳು ವೈದಿಕ ವಾಂಗ್ಮಯದ ಈ ಅಣಿಮುತ್ತನ್ನು ಅರ್ಥೈಸಲು ನಮಗೆ ನೆರವಾಗುತ್ತವೆ. ಉಪನಿಷತ್ತಿನಷ್ಟು ತೀವ್ರ ಚಿಂತನೆಯ ಭಾಗಗಳು ಇಲ್ಲಿ ದಟ್ಟವಾಗಿಲ್ಲವೆಂದೆನಿಸಿದರೂ, ಶತರುದ್ರೀಯವನ್ನು ಹಲವು ಅಥರ್ವವೇದೀಯ (ಶೈವ) ಉಪನಿಷತ್ತುಗಳು ಉಲ್ಲೇಖಿಸಿವೆ. (ಉದಾಹರಣೆಗೆ, ಜಾಬಾಲ ಉಪ. 3, ಕೈವಲ್ಯ 24, ಅಥರ್ವಶಿರಸ್‌ 7, ಮಹಾ 4, ನೃಸಿಂಹತಾಪನೀಯ 5.10 ಇತ್ಯಾದಿ. ನೀಲರುದ್ರ ಉಪನಿಷತ್ತಂತೂ (4ರಿಂದ 17ರವರೆಗೆ) ವಾಜಸನೇಯೀ ಸಂಹಿತೆಯ 16ನೇ ಅಧ್ಯಾಯಕ್ಕೆ ತುಂಬಾ ಋಣಿಯಾಗಿದೆ. ‘ರುದ್ರಾಧ್ಯಾಯ’ ಎಷ್ಟೇ ರಮಣೀಯವಾಗಿದೆ, ಸರಿ, ತುಂಬಾ ದೂರ ಈಜುತ್ತ ಹೋಗುವ ಚಪಲ ಬೇಡ, ದಡದ ಬಳಿಯೇ ಇರೋಣ, ‘ನೀರಿ’ನ ಬಗ್ಗೆ ಮಾತ್ರ ಗಮನಹರಿಸೋಣ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+