ಮೊಮ್ಮಕ್ಕಳು ಹೇಳಿದ ಅಜ್ಜೀ ಕತೆ

ನನ್ನ ವಿದ್ಯಾರ್ಥಿಮಿತ್ರ ಶ್ರೀನಿವಾಸ ರಾವ್ ವೃತ್ತಿಯಲ್ಲಿ ಸುವರ್ಣಾಲಂಕಾರದಲ್ಲಿ ತೊಡಗಿದ್ದಾನೆ ಆದರೆ ಪ್ರವೃತ್ತಿಯಲ್ಲಿ ಕವಿಮನದ ವಾಚಕ, ಸೂಕ್ಷ್ಮಗ್ರಾಹಿಯಾದ ರಸಿಕ ವಿಮರ್ಶಕ. ಒಮ್ಮೆ ಅವನೊಡನೆ ಫೊನ್ನಲ್ಲಿ ಸಂವಾದಿಸುವಾಗ, ಸರ್, ನಾನೊಂದು ಒಳ್ಳೆಯ ಪುಸ್ತಕ ಓದಿದೆ, ತಾವು ನೋಡಿದ್ದೀರಾ?' ಎಂದು ಕೇಳಿದ. ಆ ಪುಸ್ತಕ ಎಚ್.ವಾಯ್.ಶಾರದಾಪ್ರಸಾದ ಸಂಪಾದಿಸಿದ 'ಮೊಮ್ಮಕ್ಕಳು ಹೇಳಿದ ಅಜ್ಜೀ ಕಥೆ'. ಅವನನ್ನು ಕಂಡು ಪುಸ್ತಕವನ್ನು ಪಡೆದೆ. ಅಕ್ಷರ ಪ್ರಕಾಶನದವರು 1994ರಲ್ಲಿ ಪ್ರಕಟಿಸಿದ ಚಿಕ್ಕ ಪುಸ್ತಕವದು.
ಎಚ್.ವಾಯ್. ಶಾರದಾಪ್ರಸಾದರ ಹೆಸರು ಕನ್ನಡಿಗರಿಗೆ, ಭಾರತೀಯರಿಗೆ ಚಿರಪರಿಚಿತ. ಅವರು ಭಾರತದ ಪ್ರಧಾನಿಗಳಾಗಿದ್ದ ಇಂದಿರಾ ಗಾಂಧಿ, ರಾಜೀವ ಗಾಂಧಿ, ನಂತರ ವಾಜಪೆಯಿ ಇವರುಗಳ ಮಾಧ್ಯಮ ಸಲಹೆಗಾರರಾಗಿದ್ದರು. ಅವರ ಭಾಷಣಗಳನ್ನು ತಯಾರಿಸಿ ಕೊಡುತ್ತಿದ್ದರು. ಸಾಹಿತ್ಯದಲ್ಲೂ ಅವರಿಗೆ ಒಲವು ಇತ್ತು. ಕಾರಂತರ ಕೆಲವು ಕಾದಂಬರಿಗಳನ್ನು ಇಂಗ್ಲೀಷಿಗೆ ಅನುವಾದಿಸಿದ್ದರು. ನಾಡಿನ ಹಿರಿಯ ಪತ್ರಕರ್ತರೆಂಬ ಹೆಸರು ಪಡೆದಿದ್ದರು. ಲಾಲ ಬಹಾದುರ ಶಾಸ್ತ್ರಿಗಳ ತರಹದ ಪ್ರಾಮಾಣಿಕ ವ್ಯಕ್ತಿ ಅವರು. ಅತ್ಯಂತ ಪ್ರಭಾವಶಾಲಿ ಹುದ್ದೆಯಲ್ಲಿದ್ದೂ ತಮಗಾಗಿ ದೆಹಲಿಯಲ್ಲಿ ಒಂದು ಸೈಟು, ಇಲ್ಲವೆ ಆಸ್ತಿ ಪಡೆದಿರಲಿಲ್ಲ. ಅವರು ಸಂಪಾದಿಸಿದ್ದು ಒಳ್ಳೆಯ ಹೆಸರು ಮಾತ್ರ.
ಎಂಟು ಜನ ಮೊಮ್ಮಕ್ಕಳು ನೂರರ ಅಂಚಿಗೆ ಬಂದು ಸ್ವರ್ಗಸ್ಥರಾದ ಅಜ್ಜಿಯ ನೆನಪು ಮಾಡಿಕೊಂಡು ಬರೆದ ಪುಸ್ತಕ ಎನ್ನುವ ಸಂಗತಿಯೇ ಒಂದು ರೋಮಾಚನಕಾರಿ ಭಾವನೆಯನ್ನು ಹುಟ್ಟಿಸುವಂಥಹದು. ಈ ಅಜ್ಜಿ ಸಾಮಾನ್ಯ ಅಜ್ಜಿಯಲ್ಲ. ಹಳೆಯ ಸಂಪ್ರದಾಯದ ಪ್ರತಿನಿಧಿ, ಮಡಿ-ಮೈಲಿಗೆಯ ಅಪರಾವತಾರ. ಅವಳ ಹಟಮಾರಿತನ, ಛಲ, ಧೈರ್ಯ, ಸಾಹಸ, ಜಗಳಗಂಟಿತನ, ಕಲಾವಂತಿಕೆ ಮುಂತಾದ ಹತ್ತಾರು ಮುಖಗಳನ್ನು ಈ ಕಿರು ಹೊತ್ತಿಗೆಯಲ್ಲಿ ಎಂಟು ಜನ ಮೊಮ್ಮಕ್ಕಳು ಚಿತ್ರಿಸಿದ್ದಾರೆ. ಇಂಥ ಬರವಣಿಗೆಯನ್ನು ವ್ಯಕ್ತಿಚಿತ್ರವೆನ್ನಬೇಕೋ, ಸಾಮಾಜಿಕ ಇತಿಹಾಸವೆನ್ನಬೇಕೋ, ಲಲಿತ ಪ್ರಬಂಧವೆನ್ನಬೇಕೋ ಎಂಬುದು ಪ್ರಕಾಶಕರಿಗೆ ಸ್ಪಷ್ಟವಾಗಿಲ್ಲ. ಆದರೆ ಇವೆಲ್ಲವುಗಳನ್ನು ಒಳಗೊಂಡ ವಿಶೇಷ ಸಾಹಿತ್ಯ ಇಲ್ಲಿ ನಿರ್ಮಿತವಾಗಿದೆ ಎನ್ನಬಹುದು. ಕನ್ನಡದಲ್ಲಿ ಅಷ್ಟೇ ಏಕೆ ಭಾರತೀಯ ಭಾಷೆಗಳಲ್ಲಿಯೂ ಇದು ಅನನ್ಯ ಪ್ರಯೋಗವೆಂದೇ ಹೇಳಬೇಕು. ಇಲ್ಲಿರುವ ಅಜ್ಜಿಗಳಂತಹ ವ್ಯಕ್ತಿಗಳಿಗೆ ಕೊರತೆಯಿಲ್ಲ, ಅಂಥವರ ಬಗ್ಗೆ ಬರೆಯುವ ಮೊಮ್ಮಕ್ಕಳ ಕೊರತೆ ಮಾತ್ರ ಇದೆ.
ಶಾರದಾಪ್ರಸಾದರು ಮೊದಲು ಒಂದು ಪ್ರಬಂಧವನ್ನು ಬರೆದು, ಅದನ್ನು ಇತರ ಮೊಮ್ಮಕ್ಕಳಿಗೆ ಕಳಿಸಿ, ಅವರಿಗೂ ಬರೆಯಲು ಆಹ್ವಾನಿಸುತ್ತಾರೆ. ಇವರದು ದೀರ್ಘವಾದ ಪ್ರಬಂಧ. "ನಮ್ಮಜ್ಜಿ . . ಆಗಾಗ ದೇವರ ಪೂಜೆಯ ದ್ರಾಕ್ಷೆಯನ್ನೋ, ಕಲ್ಲುಸಕ್ಕರೆಯ ತುಂಡನ್ನೋ, ಸಾಯಂಕಾಲ ಬೆಲ್ಲ ಕೊಬ್ಬರಿಗಳ ಚೂರನ್ನೊ ಕೊಟ್ಟದ್ದುಂಟು. ಕಾಗೆಗುಬ್ಬಮ್ಮನ ಕತೆಗಿಂತ ಪುರಾಣದ ಕತೆ ಹೇಳಿದ್ದೇ ಹೆಚ್ಚು. ಕತೆಗಿಂತ ಹೆಚ್ಚಾಗಿ ಹಾಡು ಹೇಳಿಕೊಟ್ಟಂದ್ದುಂಟು. ಆದರೆ ಚಿಕ್ಕಂದಿನಲ್ಲಿ ಯಾರನ್ನೂ ಮುದ್ದಿಸಿಲ್ಲ. ತಮ್ಮ ಹಾಸಿಗೆಯಲ್ಲಿ ಕೂಡಿಸಿಕೊಂಡಿದ್ದಿಲ್ಲ. ಎಷ್ಟೋ ಮನೆಯಲ್ಲಿ ಅಜ್ಜಿ ಏಕವಚನದವರಾದರೆ ನಮ್ಮಜ್ಜಿ ಬಹುವಚನದವರು. ನವಿರಾದ ವ್ಯಕ್ತಿಯಲ್ಲ. ಹಟಮಾರಿ, ಛಲಗಾತಿ, ಜಗಳಗಂಟಿ, ಮಾತಿನಲ್ಲಿ ಹುಳುಕಿ ಹಿಡಿಯುವದರಲ್ಲಿ ಎತ್ತಿದ ಕೈ." ಎನ್ನುತ್ತಾರೆ. ಇವರ ಅಜ್ಜಿ ಮಡಿ ಹೆಂಗಸು. ಕೆಂಪುವಸ್ತ್ರ ಧರಿಸಿದವರು. ತಮ್ಮದೇ ಕೋಣೆಯಲ್ಲಿ ಪಟ, ವಿಗ್ರಹ, ಸಾಲಿಗ್ರಾಮ ಪೂಜಿಸುವವರು. ತಮ್ಮದೇ ಇದ್ದಲು ಅಗ್ಗಿಷ್ಟಿಗೆಯಲ್ಲಿ ಹುಗ್ಗಿ ಗೊಜ್ಜನ್ನು, ಗೊಡ್ಡಸಾರನ್ನು ಮಾಡಿಕೊಳ್ಳುವವರು. ಒಂದೇ ಹೊತ್ತು ಊಟಮಾಡುವವರು. ರಾತ್ರಿ ಮೊಸರವಲಕ್ಕಿ ಇಲ್ಲವೆ ಬೇರೆ ಫರಾಳ ತಿನ್ನುವವರು. ಹೀಗೆ ಚಿತ್ರವತ್ತಾಗಿ ವಿವರ ಕೊಡುತ್ತಾರೆ. ಅಜ್ಜಿಯ ಜಗಳದ ಬಗ್ಗೆ ಬರೆಯುತ್ತಾರೆ. ಯಾವದೋ ಮಾತಿನಿಂದ, ಯಾರದೋ ನಡತೆಯಿಂದ, ತಮ್ಮ ಆತ್ಮಾಭಿಮಾನಕ್ಕೆ ಚ್ಯುತಿಯಾಯಿತೆಂದು ಭಾವಿಸಿ ಜಗಳಾಡುವದು. ಇವರ ತಾಯಿಯ ಮದುವೆಯ ದಿನದಿಂದ ಹಿಡಿದು ಅಂದಿನವರೆಗೆ ತಮಗಾದ ಅನ್ಯಾಯಗಳ ಪಟ್ಟಿಮಾಡುತ್ತಿದ್ದರಂತೆ. ಕೆಲಸಲ ಊರೇ ಬಿಟ್ಟು ಹೋಗುತ್ತಿದ್ದರಂತೆ. ಯಾವುದೋ ಬಾಡಿಗೆ ಮನೆಯಲ್ಲಿ ತಿಂಗಳುಗಟ್ಟಲೆ ಇದ್ದುಬಿಡುತ್ತಿದ್ದರಂತೆ. ಅಲ್ಲಿಂದ ಕಾರ್ಡು ಬರೆಸಿ ಮನಿ ಆರ್ಡರ ತರಿಸುತ್ತಿದ್ದರಂತೆ. ಇವರ ತಾಯಿಯ ಬಲವಂತಕ್ಕೆ ಇವರ ತಂದೆ ಹೋಗಿ ಅಜ್ಜಿಯನ್ನು ಕರೆದುಕೊಂಡು ಬರುತ್ತಿದ್ದರಂತೆ. ಅಜ್ಜಿಗೆ ಆರು ವರ್ಷಕ್ಕೆ ಮದುವೆ ಆಗಿತ್ತು. ಅಜ್ಜ ನಾರಣಪ್ಪ. ಭೂಮಿ ಇಲ್ಲದ ವೈದಿಕ ಮನೆತನದವರು. ಹನ್ನೆರಡು ವರ್ಷಕ್ಕೆ ಇಂಗ್ಲೀಷು ಕಲಿಯಲು ಹೊಳೆನರಸೀಪುರದಿಂದ ಮೈಸೂರಿಗೆ ಓಡಿಹೋಗಿ, ಬಳಗದವರ ಮನೆಯಲ್ಲಿದ್ದುಕೊಂಡು ಮೆಟ್ರಿಕ್ಯುಲೇಶನ್ ಪಾಸಾಗಿದ್ದರಂತೆ. ಒಳ್ಳೆಯ ಕೆಲಸದಲ್ಲಿದ್ದರು. ಶಾರದಾಪ್ರಸಾದರು ಎರಡು ವರ್ಷದವರಿದ್ದಾಗಲೇ ಅಜ್ಜ ತೀರಿದ್ದರಿಂದ ಅವರ ಮುಖದ ನೆನಪಿಲ್ಲ ಎಂದು ಬರೆಯುತ್ತಾರೆ. ಅಜ್ಜಿ ಇವರಿಗೆ ಶೌರಿ ಎಂದು ಕರೆಯುತ್ತಿದ್ದರಂತೆ. ಅವರಿಗೆ ಮೊಣಕಾಲ ನೋವಿನಿಂದಾಗಿ. ಕುರ್ಚಿಯ ಮೇಲೆ ಕೂತು ಊಟಮಾಡುವ ಪ್ರಸಂಗ ಬಂದಾಗ, "ಎಲೋ ಶೌರಿ, ನಾನೀಗ ಲೇಡಿ ಆಗಿಬಿಟ್ಟಿದ್ದೇನೆ ಕಣೋ" ಎಂದು ಹೇಳಿ ತಮ್ಮ ಹಾಸ್ಯ ಪ್ರಜ್ಞೆ ತೋರಿಸಿದ್ದರಂತೆ. ಅಜ್ಜಿ ಹೇಳಿದ ಅನೇಕ ಕತೆಗಳ ಬಗ್ಗೆ ಬರೆಯುತ್ತಾರೆ. ಅಜ್ಜಿಗೆ ಸಂಗೀತ ಮೊದಲನೆಯ ಚಟವಾದರೆ ವೈದ್ಯ ಎರಡನೆಯ ಚಟವಾಗಿತ್ತಂತೆ. ಯಾವುದೇ ಕಾಯಿಲೆಯಾದರೆ ಸುತ್ತಲಿನವರಿಗೆ ಔಷಧಿ ಕೊಡುತ್ತಿದ್ದರಂತೆ. ರಾಜಣ್ಣ ಎಂಬ ಸಂಬಂಧಿಕ ಅಜ್ಜಿಯನ್ನು ನಿಯಮಿತವಾಗಿ ಕಂಡು ಅವರ ಬಗ್ಗೆ ವಿಚಾರಿಸಿಕೊಂಡು ಹೋಗುತ್ತದ್ದನಂತೆ. ಅವನು ಹತ್ತು ತಿಂಗಳ ಕೂಸಾಗಿದ್ದಾಗ, ಒಂದು ಮದುವೆಗೆ ಹೋಗಿದ್ದರಂತೆ. ಅವನ ತಾಯಿ ಹತ್ತಿರ ಎಲ್ಲಿಯೋ ಹೋದಾಗ ಮಗು ವಿಪರೀತ ಅತ್ತಾಗ ಅಜ್ಜಿ ಅವನಿಗೆ ತಮ್ಮ ಮೊಲೆಹಾಲು ಕುಡಿಸಿ ಸಮಾಧಾನ ಮಾಡಿದ್ದರಂತೆ. ಆ ಹಾಲಿನ ಋಣ ತೀರಿಸಲು ಅವನು ಆಗಾಗ ಬಂದು ಕ್ಷೇಮ ವಿಚಾರಿಸಿಕೊಂಡು ಹೋಗುತ್ತಾನೆ ಎನ್ನುತ್ತಿದ್ದರಂತೆ.
ಅಜ್ಜಿಯ ಆತ್ಮಾಭಿಮಾನದ ಬಗ್ಗೆ ಜಯಮ್ಮ ವೆಂಕಟರಾಮಯ್ಯ ಬರೆಯುತ್ತಾರೆ. ಅಜ್ಜಿಗೆ ಮೊಮ್ಮಕ್ಕಳ ಕೂದಲು ಬಾಚುವುದು ಇಷ್ಟವಾಗಿತ್ತಂತೆ. ಎರಡು ಗಂಟೆ ಅಲ್ಲಾಡದೆ ಕೂಡಬೇಕಾಗುತ್ತಿತ್ತು. ಅಲ್ಲಾಡಿದರೆ ಗುದ್ದು. ಒಂದು ಸಲ ಹಾಕಿದ ಜಡೆ ಎರಡುದಿನ ಬಿಚ್ಚುವಂತಿಲ್ಲ. ಲಕ್ಷ್ಮೀ ರಾಮಣ್ಣ ಅಜ್ಜಿಯ ವಾಚನಾಭಿರುಚಿಯ ಬಗ್ಗೆ ಬರೆಯುತ್ತಾರೆ. ಮುಪ್ಪಿನ ಕಾಲದಲ್ಲಿ ಅವರು ಓದುಬರೆಯಲು ಕಲಿತ ಬಗ್ಗೆ ಬರೆಯುತ್ತಾರೆ. ಅಜ್ಜಿ ತಮ್ಮ 87ನೆಯ ವಯಸ್ಸಿನಲ್ಲಿ ಕನ್ನಡಕ ಹಾಕಿಕೊಂಡು ವಿನೋಬಾ ಭಾವೆಯವರ ಗೀತಾಪ್ರವಚನ ಪುಸ್ತಕ ತಮ್ಮ ತಂಗಿಗೆ ಓದಿಹೇಳುತ್ತಿದ್ದರಂತೆ. ಮೈಸೂರು ಆಕಾಶವಾಣಿಯಲ್ಲಿ ಮೈಸೂರು ಸದಾಶಿವರಾಯರ ಬಗ್ಗೆ ಇದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಾಡಿದ ವಿವರ ಬರೆಯುತ್ತಾರೆ. ತಮ್ಮ ಹಾಡಿನ ರೆಕಾರ್ಡ್ ತಾವೇ ಕೇಳಿದಾಗ ಧ್ವನಿ ಮುದಿಯಾಗಿದೆ ಎಂಬ ಉದ್ಗಾರ ತೆಗೆದಿದ್ದರಂತೆ. ಆಗ ಅವರ ವಯಸ್ಸು 86 ಆಗಿತ್ತು. ಅವರ ಅಗಾಧ ಸ್ಮರಣ ಶಕ್ತಿಯಬಗ್ಗೆ ಬರೆಯುತ್ತಾರೆ. ಉಳಿದವರು ಹಾಡುಗಳನ್ನು ನೋಟ್ಬುಕ್ನಲ್ಲಿ ಬರೆದುಕೊಳ್ಳುತ್ತಿದ್ದರೆ ಅಜ್ಜಿಗೆ ಬಾಯಿಯೇ ನೋಟ್ಬುಕ್ ಆಗಿತ್ತಂತೆ. ಆ ಕಾಲದ ವಿಶ್ವಕೋಶವಿದ್ದಂತೆ ಇದ್ದರು ಎನ್ನುತ್ತಾರೆ. ಅಜ್ಜಿ ರಚಿಸಿದ ಒಂದು ಹಾಡನ್ನು ಉದ್ಧರಿಸುತ್ತಾರೆ. ಶಾಲೆಗೆ ಹೋಗದೇ ಇದ್ದ ಅಜ್ಜಿ ಮುಪ್ಪಿನ ಕಾಲದಲ್ಲಿ ಹಟದಿಂದ ಅಕ್ಷರಾಭ್ಯಸ ಮಾಡಿದವಳು. ಅವಳು ಬರೆದ ಪದ್ಯ ನಿಜವಾಗಿಯೂ ಪ್ರಶಂಸನೀಯವಾಗಿದೆ.
ರಾಗ: ಭೈರವಿ.
ಪೂರ್ಣಮಂಗಳೇ ಕಾಮಾಕ್ಷೀ || ಪಲ್ಲವಿ||
ಭಕ್ತಪಾಲಿನೀ ಭಯವಿದೂರಿನೀ
ಮೃತ್ಯುನಾಶಿನೀ ಮುಕ್ತಿದಾಯಕೀ || ಅನು||
1)
ನಿನ್ನ ನಂಬಿದೆ ನನ್ನ ಪಾಲಿಸು |
ಕನ್ನೆ ಶಿರೋಮಣೀ ಕಾಮಹರಪ್ರಿಯೇ |
ಸನ್ನುತಾಂಗಿ ಸುಗುಣರೂಪೇ |
ಪನ್ನಗವೇಣಿ ಪಾರಿಜಾತ ಪ್ರಿಯೇ || ಪೂರ್ಣ||
2)
ತ್ರಿಜಗೋದ್ಧಾರಿನೀ ತ್ರಿನೇತ್ರಿನೀ |
ಅಜವಂದಿತೇ ಆದಿ ಪಾರ್ವತೀ |
ಭುಜಗಭೂಷಣನರಸಿ ಸುಂದರೀ |
ಭಜಿಪೆ ನಿನ್ನನು ಭರದಿ ಪಾಲಿಸು ||ಪೂರ್ಣ||
3)
ಶ್ರಮಪರಿಹಾರಿನೀ ತ್ರಿಕುಟವಾಸಿನೀ |
ಕಮಲದಳಾಕ್ಷಿ ನೀ ಕಾತ್ಯಾಯಿನೀ |
ಭ್ರಮರಕುಂತಳೇ ಭಾಸುರತೇಜಳೇ |
ವಿಮಲಚರಿತೇ ವೀಣಾಗಾನ ಪ್ರಿಯೇ || ಪೂರ್ಣ||
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications