'ಜೀವನ ಮತ್ತು ಸಾಹಿತ್ಯ' ಅಂಕಣಕಾರ ಡಾ.ಜಿ.ವಿ. ಕುಲಕರ್ಣಿ
ವರಕವಿ ಬೇಂದ್ರೆಯವರಿಂದ 'ಜೀವಿ" ಎಂಬ ಕಾವ್ಯನಾಮವನ್ನು ಪಡೆದ ಪ್ರೊ.(ಡಾ।) ಜಿ.ವಿ.ಕುಲಕರ್ಣಿಯವರು ಭಾವಜೀವಿ, ಸ್ನೇಹಜೀವಿ, ಯೋಗಜೀವಿ ಎಂದೇ ಪ್ರಸಿದ್ಧರು. ವಿಜಾಪುರದಲ್ಲಿ ಜನಿಸಿ, ಧಾರವಾಡದಲ್ಲಿ ಬೆಳೆದು, ಮುಂಬಯಿಯಲ್ಲಿ ಸ್ಥಾಯಿಯಾದ 'ಜೀವಿ"ಯವರು ಕನ್ನಡ-ಸಂಸ್ಕೃತ-ಆಂಗ್ಲ ಭಾಷೆಗಳಲ್ಲಿ ಸ್ನಾತಕೋತ್ತರ ಪದವಿ ಪಡೆದು, ಕನ್ನಡ ಮಹಾಕವಿ ವಿನಾಯಕರ ಬಗ್ಗೆ ಇಂಗ್ಲೀನಲ್ಲಿ ಸಂಪ್ರಬಂಧ ಬರೆದು ಡಾಕ್ಟರೇಟ್ ಗಳಿಸಿದ್ದಾರೆ. ನವೋದಯ ಕನ್ನಡ ಸಾಹಿತ್ಯದ ತ್ರಿಮೂರ್ತಿಗಳಾದ 'ಬೇಂದ್ರೆ-ಗೋಕಾಕ-ಮಧುರಚೆನ್ನ"ರ ಪ್ರಭಾವಲಯದಲ್ಲಿ ಅರಳಿದರೂ ತಮ್ಮ ಸ್ವಂತಿಕೆಯನ್ನು ಉಳಿಸಿಕೊಂಡಿದ್ದಾರೆ.
ಕಾವ್ಯ, ಕತೆ, ಕಾದಂಬರಿ, ನಾಟಕ, ವಿಮರ್ಶೆ, ಪ್ರವಾಸ, ಪ್ರಬಂಧ, ಚರಿತ್ರೆ ಮೊದಲಾದ ಸಾಹಿತ್ಯ ಪ್ರಕಾರಗಳಲ್ಲಿ ಕೈಯಾಡಿಸಿದರೂ ಇವರ ಜೀವಸ್ವರದ ಮಿಡಿತ ಕಾವ್ಯ. ಏಳು ಕವನ ಸಂಗ್ರಹಗಳಲ್ಲಿ'ಹುಚ್ಚ-ಹುಚ್ಚಿ" ಇವರಿಗೆ ಅ-ಕ ಪ್ರಸಿದ್ಧಿ ತಂದಿತು. ವಿಮರ್ಶೆಯ ಕ್ಷೇತ್ರದಲ್ಲಿ ಹೊಸ ಹೆಜ್ಜೆ ಇಟ್ಟ ಇವರ ಕೃತಿಗಳಾದ 'ನಾ ಕಂಡ ಬೇಂದ್ರೆ - ಜೀವನ ಮತ್ತು ಸಾಹಿತ್ಯ", 'ನಾ ಕಂಡ ಗೋಕಾಕ - ಜೀವನ ಮತ್ತು ಸಾಹಿತ್ಯ" ಆಕರ ಗ್ರಂಥಗಳಾಗಿವೆ.
'ಯೋಗ ಮತ್ತು ಪ್ರಕೃತಿಚಿಕಿತ್ಸೆ"ಗಳಲ್ಲಿ ಪರಿಣಿತರಾದ ಇವರು ದೇಶವಿದೇಶಗಳಲ್ಲಿ ಯೋಗಶಿಬಿರ ನಡೆಸಿದ್ದಾರೆ. ಇವರ 'ಔಷಧಿಯಿಲ್ಲದೆ ಬದುಕಲು ಕಲಿಯಿರಿ" ಎಂಬ ಪುಸ್ತಕ ಅಪಾರ ಜನಾನುರಾಗ ಗಳಿಸಿದೆ. 'ಜೀವಿ ಕಂಡ ಅಮೇರಿಕಾ" ಒಂದು ವಿನೂತನ ಪ್ರವಾಸಕಥನ. ಶ್ರೀ ತ್ರಿವಿಕ್ರಮಪಂಡಿತಾಚಾರ್ಯರು ಸಂಸ್ಕೃತದಲ್ಲಿ ಬರೆದ 'ಶ್ರೀ ನೃಸಿಂಹಸ್ತುತಿ" ಮತ್ತು ಶ್ರೀಹರಿವಾಯುಸ್ತುತಿ"ಗಳನ್ನು ಇವರು ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಪದ್ಯರೂಪದಲ್ಲಿ ಭಾವಾನುವಾದ ಮಾಡಿದ್ದಾರೆ.