Get Updates
Get notified of breaking news, exclusive insights, and must-see stories!

ಹಿಂದೀ ದಿವಸ ಆಚರಣೆ ಪ್ರಜಾಪ್ರಭುತ್ವದ ವಿಡಂಬನೆ

ಭಾರತದ ಕೇಂದ್ರಸರ್ಕಾರದ ಆಡಳಿತ ಭಾಷೆ ಹಿಂದೀ ಎಂದು ಬರೆಯುವಾಗ 'ಇದು ಬರೀ ಕೇಂದ್ರಸರ್ಕಾರದ ಕಛೇರಿಗಳಿಗೆ ಮಾತ್ರಾ ಸೀಮಿತ ಎಂದು ಮರುಳು ಮಾಡಿ, ಇದೀಗ ಕನ್ನಡನಾಡಿನ ಹಳ್ಳಿಹಳ್ಳಿಗಳ ಶಾಲೆಗಳ ಮಕ್ಕಳಿಗೂ ಏಕೆ ಹಿಂದೀ ಕಲಿಕೆಯನ್ನು ಕಡ್ಡಾಯ ಮಾಡಲಾಗಿದೆ? ಏಕೆ ನಮ್ಮೂರುಗಳ ಬ್ಯಾಂಕಿನಲ್ಲಿ, ರೈಲ್ವೇಯಲ್ಲಿ ಕೆಲಸ ಸಿಗಬೇಕೆಂದರೂ ಹಿಂದೀ ಗೊತ್ತಿರಬೇಕಾದ್ದು ಕಡ್ಡಾಯವೆಂದು ಮಾಡಲಾಗಿದೆ? ತ್ರಿಭಾಷಾಸೂತ್ರ ಎಂದು ಸ್ಥಳೀಯ ಭಾಷೆಯನ್ನೂ ಬಳಸಲು ಅಡ್ಡಿಯಿಲ್ಲ ಎನ್ನುವ ಉದಾರತೆಯನ್ನು ತೋರಿಸುವ ದೊಡ್ಡಸ್ತಿಕೆ ಏಕೆ? ನಮ್ಮ ನಾಡಿನಲ್ಲಿ ನಮ್ಮ ಭಾಷೆಯಲ್ಲಿ ನಾವು ಸೇವೆ ಕೇಳುವುದು, ನಮ್ಮೂರ ವ್ಯವಸ್ಥೆಗಳನ್ನು ಹೊಂದುವುದು ನಮ್ಮ ಹಕ್ಕಲ್ಲವೇ? ಹಾಗೆ ಸೇವೆ ನೀಡುವುದು, ವ್ಯವಸ್ಥೆ ರೂಪಿಸುವುದು ಸರ್ಕಾರದ ಹೊಣೆಯಲ್ಲವೇ? ಇಷ್ಟಕ್ಕೂ ತ್ರಿಭಾಷಾಸೂತ್ರದ ಜಾರಿ ಎಲ್ಲಾ ಕೇಂದ್ರಸರ್ಕಾರಿ ಕಛೇರಿಗಳಲ್ಲಿ ಎಲ್ಲಾಗಿದೆ? ವಾಸ್ತವವಾಗಿ ಈ ತ್ರಿಭಾಷಾಸೂತ್ರವನ್ನು ಜಾರಿಗೊಳಿಸಿರುವುದೂ ಕೂಡಾ ಹಿಂದೀ ಭಾಷೆಗೆ ಜಾಗ ಮಾಡಿಕೊಡಲು ಮಾತ್ರವೇ ಆಗಿದೆ.

ಒಂದು ಭಾಷೆಯ ಜನರಿಗೆ ಮಾತ್ರ ಅನುಕೂಲ ಮಾಡಿಕೊಡುವ ಉದ್ದೇಶವನ್ನು ಕೇಂದ್ರ ಸರ್ಕಾರವು ಹೊಂದಿರುವುದನ್ನು ಕಣ್ಣೆದುರು ಕಾಣುವಾಗ, ಇಂತಹ ತಾರತಮ್ಯಕ್ಕೆ ಭಾರತ ಅನುಸರಿಸುತ್ತಿರುವ ಭಾಷಾನೀತಿಯೇ ಕಾರಣವಾಗಿರುವಾಗ ಅಂತಹ ನೀತಿಗೆ ಕೊನೆಹಾಡಬೇಕಾದ, ಸಮಾನತೆ-ಸಮಾನ ಸೌಕರ್ಯದ (ಅಥವಾ ಸಮಾನ ತೊಡಕಿನ)-ಸಮಾನ ಗೌರವದ ಭಾಷಾನೀತಿಯನ್ನು ರೂಪಿಸಿ, ಜಾರಿಗೊಳಿಸುವ ಪ್ರಜಾತಾಂತ್ರಿಕ ಪ್ರಕ್ರಿಯೆಯೊಂದು ತುರ್ತಾಗಿ ಆರಂಭ ಆಗಬೇಕಾಗಿದೆಯಲ್ಲವೇ? ಆಡಳಿತ ಭಾಷೆ ಎನ್ನುವುದು ಬರಿಯ ಭಾಷೆಗೆ ಮಾತ್ರಾ ಸೀಮಿತವಾಗಿಲ್ಲದೆ ಇಡೀ ಒಕ್ಕೂಟ ವ್ಯವಸ್ಥೆಯ ಕನ್ನಡಿಯಾಗಿದೆ. ಎಲ್ಲ ಭಾಷೆಗಳ ಜನರೂ, ಎಲ್ಲ ಪ್ರದೇಶಗಳ ಜನರೂ ಸಮಾನ ಅವಕಾಶ ಮತ್ತು ಗೌರವ ಹೊಂದಲು ಇಂದಿನ ಭಾರತದ ಭಾಷಾನೀತಿಯು ಮಾರಕವಾಗಿದೆ. ಉಳಿದ ಭಾಷೆಗಳ ಅಳಿಯುವಿಕೆಗೆ ಕಾರಣವಾಗಿರುವ, ಆಡಳಿತ ಭಾಷೆ ಎನ್ನುವ ಪಟ್ಟ ದಕ್ಕಿಸಿಕೊಂಡದ್ದಕ್ಕಾಗಿ ವಿಜಯೋತ್ಸವವಾಗಿ ಹಿಂದೀ ದಿವಸವನ್ನು ಆಚರಿಸುವುದು, ಪ್ರಜಾಪ್ರಭುತ್ವದ ವಿಡಂಬನೆಯಾಗಿದ್ದು ಭಾರತ ಒಕ್ಕೂಟಕ್ಕಂಟಿದ ಕಪ್ಪುಮಸಿಯಾಗಿದೆ.

ಭಾರತದ ಒಗ್ಗಟ್ಟಿಗೆ ಸಾಧನ ಒಂದು ಭಾಷೆಯನ್ನು ಎಲ್ಲರಿಗೂ ಕಲಿಸುವುದಲ್ಲ. ಬದಲಿಗೆ ಎಲ್ಲಾ ಭಾಷೆಗಳಿಗೂ ಅವುಗಳ ನೆಲದಲ್ಲಿ ಸಾರ್ವಭೌಮತ್ವ ಹೊಂದಿರಲು ಬಿಡುವುದೇ ಆಗಿದೆ. ಇದಕ್ಕೆ ಪರಿಹಾರ ಸರಿಯಾದ ಭಾಷಾನೀತಿಯನ್ನು ರೂಪಿಸುವುದೊಂದೇ ಆಗಿದೆ. ವಿಶ್ವಸಂಸ್ಥೆಯು ಬಾರ್ಸಿಲೋನಾ ಭಾಷಾ ಹಕ್ಕುಗಳ ಮೂಲಕ ಘೋಷಿಸಿರುವ ಎಲ್ಲಾ ಹಕ್ಕುಗಳೂ ಭಾರತದ ಎಲ್ಲಾ ಭಾಷಿಕ ಜನಾಂಗಗಳಿಗೆ ಸಿಗಬೇಕೆಂದರೆ ಇಂದಿನ ಭಾಷಾನೀತಿಯನ್ನು ಕೈಬಿಡಬೇಕಾಗಿದೆ. ಭಾರತದ ಎಂಟನೇ ಪರಿಚ್ಛೇಧದ ಎಲ್ಲಾ ಭಾಷೆಗಳೂ ರಾಷ್ಟ್ರಭಾಷೆಗಳೆಂದು ಘೋಷಣೆಯಾಗಬೇಕು. ಆಯಾ ರಾಜ್ಯಗಳ ಆಡಳಿತ ಆಯಾ ರಾಜ್ಯಭಾಷೆಗಳಲ್ಲಿ ಆಗಬೇಕು. ನಾಡಿನ ಜನರನ್ನು ಕಡೆಗಣಿಸಿ ವಲಸಿಗರಿಗಾಗಿ ವ್ಯವಸ್ಥೆ ಕಟ್ಟುವ ಪರಿಪಾಠ ನಿಲ್ಲಬೇಕು. ರಾಜ್ಯ ರಾಜ್ಯಗಳ ಸಂಪರ್ಕಭಾಷೆಯ ಆಯ್ಕೆ ರಾಜ್ಯಗಳಿರಬೇಕು. ಕೇಂದ್ರ ರಾಜ್ಯಗಳೊಂದಿಗೆ ವ್ಯವಹರಿಸುವಾಗ ರಾಜ್ಯಭಾಷೆಯಲ್ಲಿ ವ್ಯವಹರಿಸಬೇಕು. ಅಂತರ್‌ರಾಜ್ಯ ಸಭೆಗಳಲ್ಲಿ ಅನುವಾದದ ಉಪಯೋಗ ಪಡೆದುಕೊಳ್ಳಬೇಕು. ಸಮಾನ ಗೌರವದ, ಸಮಾನ ಅವಕಾಶದ ಭಾಷಾನೀತಿಯೊಂದು ಭಾರತದೇಶವು ಒಂದಾಗಿ ಉಳಿಯಲು ಬೇಕಾಗಿರುವ ತುರ್ತುಚಿಕಿತ್ಸೆಯಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+