ಹಿಂದೀಯೇತರರಿಗೆ ವಾಕರಿಕೆ ತಂದ ಹಿಂದೀ ಹೇರಿಕೆ
ಇದೀಗ ಅರವತ್ತು ವರ್ಷಗಳ ನಂತರ, ಭಾರತದ ಭಾಷಾನೀತಿಯಿಂದಾಗಿ ಇಂದು ಹಿಂದೀಯೇತರ ನಾಡುಗಳ ಜನರ ಬದುಕಿನ ಮೇಲಾಗಿರುವ ಪರಿಣಾಮಗಳನ್ನು ಪರಾಮರ್ಶಿಸಿದಾಗ, ಹಿಂದೀಯನ್ನು ಭಾರತದ ಆಡಳಿತ ಭಾಷೆಯನ್ನಾಗಿಸಲು ಹೇಳಲಾದ ಯಾವ ಉದ್ದೇಶವನ್ನೂ ಈಡೆರಿಸಿಕೊಳ್ಳಲು ಆಗಿಲ್ಲದಿರುವುದು ಕಾಣುತ್ತದೆ. ತನ್ನದೇ ಏಕಸ್ವಾಮ್ಯ ಇದ್ದ ಕಾರಣದಿಂದಾಗಿ ದೂರದರ್ಶನ ಮತ್ತು ಆಕಾಶವಾಣಿಗಳನ್ನು ಹಿಂದೀ ಪ್ರಚಾರಕ್ಕೆ ಕೇಂದ್ರ ಸರ್ಕಾರವು ಬಳಸಿ ಹಿಂದೀಯೇತರರಿಗೆ ತಮ್ಮ ತಾಯ್ನುಡಿಯಲ್ಲಿಯೇ ಮನರಂಜನೆ ಸಿಗದಂತೆ ಮಾಡಿ ಹಿಂದೀ ಚಿತ್ರಗಳಿಗೆ ಮಾರುಕಟ್ಟೆ ಕಟ್ಟಿಕೊಟ್ಟಿತು. ಇದರ ಪರಿಣಾಮವಾಗಿ ಒಂದೊಮ್ಮೆ ಸಮೃದ್ಧವಾಗಿದ್ದ ಮರಾಠಿ, ಪಂಜಾಬಿ, ಗುಜರಾತಿ ಮೊದಲಾದ ಚಿತ್ರರಂಗಗಳು ತತ್ತರಿಸುವಂತಾಯಿತು.
ಇನ್ನು ಕೇಂದ್ರ ಸರ್ಕಾರಿ ನೌಕರಿಯ ಅವಕಾಶಗಳಿಗೆ ಬಂದಲ್ಲಿ ಭಾರತೀಯ ರೈಲ್ವೇಯೂ ಸೇರಿದಂತೆ ಎಲ್ಲಾ ಕೇಂದ್ರ ಸರ್ಕಾರಿ ಸಂಸ್ಥೆಗಳೂ ಹಿಂದೀಯೇತರರಿಗೆ ಹಿಂದೀ ಹೇರುವ ಸಾಧನಗಳಾದವು. ಬ್ಯಾಂಕುಗಳಲ್ಲಿ ಕೆಲಸ ಬೇಕೆಂದರೆ ಎಸೆಸ್ಸೆಲ್ಸಿ ಅಂಕಪಟ್ಟಿಯಲ್ಲಿ ಹಿಂದೀ ಎಂದು ಬರೆದಿರಬೇಕು ಅನ್ನಲಾಯಿತು. ರೈಲ್ವೇಯ ಡಿ ದರ್ಜೆ ಹುದ್ದೆಗೆ ಅರ್ಜಿ ಸಲ್ಲಿಸಲು ಹಿಂದೀಯಲ್ಲೇ ಬರೆಯಬೇಕು ಎನ್ನಲಾಯಿತು. ಭೂಸೇನಾ ನೇಮಕಾತಿಗೆ ಬರುವ ಅಭ್ಯರ್ಥಿಗಳ ಜನನ ಪ್ರಮಾಣಪತ್ರಗಳು ಕನ್ನಡದಲ್ಲಿವೆ, ಹಿಂದೀ/ ಇಂಗ್ಲಿಷುಗಳಲ್ಲಿಲ್ಲ ಎಂದು ವಾಪಸ್ಸು ಕಳಿಸಿದ ಘಟನೆಗಳೂ ನಡೆದವು. ತ್ರಿಭಾಷಾಸೂತ್ರದ ಮೂಲಕ ಕನ್ನಡದ ಮಕ್ಕಳ ಕಲಿಕೆಯಲ್ಲೂ ಹಿಂದೀಯನ್ನು ಕಡ್ಡಾಯ ಮಾಡಲಾಯಿತು. ನಮ್ಮ ಜನಪ್ರತಿನಿಧಿಗಳು ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತಾಡಬೇಕಾದರೆ ಸಭಾಧ್ಯಕ್ಷರ ಅನುಮತಿ ಪಡೆಯಬೇಕೆನ್ನಲಾಯಿತು. ನಮ್ಮ ರಾಜ್ಯದ ಹೈಕೋರ್ಟಿನ ಭಾಷೆ ಹಿಂದೀ/ ಇಂಗ್ಲೀಷ್ ಎನ್ನಲಾಯಿತು. ಇಂದು ಕರ್ನಾಟಕದಲ್ಲೇ ಕನ್ನಡದಲ್ಲಿ ತೀರ್ಪು ಕೊಡುವ ನ್ಯಾಯಾಧೀಶರುಗಳನ್ನು ಸನ್ಮಾನಿಸಬೇಕಾದ ದುಸ್ಥಿತಿಗೆ ಈ ಭಾಷಾನೀತಿಯೇ ಪರೋಕ್ಷವಾಗಿ ಕಾರಣವಾಗಿದೆ ಎಂದರೆ ತಪ್ಪಾಗಲಾರದು.
ಇದರ ಪರಿಣಾಮವಾಗಿ ವೈವಿಧ್ಯತೆಯಲ್ಲಿ ಏಕತೆ ಎನ್ನುವುದು ಬರೀ ಬಾಯಿಮಾತಿಗೆ ಮಾತ್ರಾ ಎನ್ನುವುದು ಗೋಚರವಾಗುತ್ತಿದೆ. ಏಕೆಂದರೆ ಭಾರತದ ಭಾಷಾನೀತಿಯು ನೀಡುತ್ತಿರುವ ಸಂದೇಶವೇನೆಂದರೆ ನಿಮ್ಮ ನಿಮ್ಮ ಭಾಷೆಗಳನ್ನು ನಿಮ್ಮ ಮನೆಯಲ್ಲಿಟ್ಟುಕೊಳ್ಳಿ, ಬೀದಿಗೆ ಬಂದರೆ ಹಿಂದೀಯಲ್ಲಿ ವ್ಯವಹರಿಸಿ ಎನ್ನುವುದಾಗಿದೆ. ಹಿಂದೀ ಭಾಷೆಗೆ ಭಾರತದ ಕೇಂದ್ರಸರ್ಕಾರದ ಆಡಳಿತ ಭಾಷೆ ಎಂದು ನೀಡಿರುವ ಪಟ್ಟವು ಇಡೀ ಭಾರತದ ಭೌಗೋಳಿಕ ಅಸಮಾನತೆಗೆ, ಹಿಂದೀಯೇತರರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿಸುವುದಕ್ಕೆ ಕಾರಣವಾಗಿದೆ ಎನ್ನುವುದನ್ನು ಕಣ್ತೆರೆದು ನೋಡಿ ಅರಿಯಬೇಕಾಗಿದೆ. ಇದಿಷ್ಟೇ ಅಲ್ಲದೆ ಈ ಎಲ್ಲಾ ನಡೆಯುತ್ತಿರುವುದು ಜನಸಂಖ್ಯಾ ಸ್ಫೋಟದಿಂದ ನರಳುತ್ತಿರುವ ಹಿಂದೀ ಪ್ರದೇಶದ ಜನರನ್ನು (ಬಿಹಾರ್ 1102, ಉತ್ತರಪ್ರದೇಶ 828 ಜನ/ ಚ.ಕಿ) ಕರ್ನಾಟಕದಂತಹ ಜನಸಂಖ್ಯೆ ಕಡಿಮೆಯಿರುವ ನಾಡುಗಳಿಗೆ (319 ಜನ/ಚ.ಕೀ) ವಲಸೆ ಮಾಡಿಸಲು ಭಾರತದ ಭಾಷಾನೀತಿ ನೀರೆರೆಯುತ್ತಿರುವುದು ಕಾಣುತ್ತಿದೆ. ಆ ಮೂಲಕ ಅನೇಕ ಹಿಂದೀಯೇತರ ಪ್ರದೇಶಗಳ ಜನಲಕ್ಷಣವನ್ನು ಬದಲಾಯಿಸುವ, ಅನೇಕ ಸಂಸ್ಕೃತಿಗಳನ್ನು ಮಣ್ಣುಗೂಡಿಸುವ ಪ್ರಯತ್ನಗಳು ನಡೆಯುತ್ತಿರುವುದನ್ನು ಕಾಣಬಹುದಾಗಿದೆ.
ಒಂದೆಡೆ ಭಾರತದೇಶದಲ್ಲಿ ಪ್ರತಿಯೊಬ್ಬ ನಾಗರೀಕನೂ ಸಮಾನ. ದೊರೆ ಆಳು ಎನ್ನುವ ಬೇಧವಿಲ್ಲದೆ ಎಲ್ಲರಿಗೂ ಸಮಾನ ಹಕ್ಕುಗಳಿವೆ ಅನ್ನುವ ಭಾರತವು ಮತ್ತೊಂದೆಡೆ ಹಿಂದೀಭಾಷೆಯ ಜನರಿಗೆ ದೇಶದ ಯಾವಮೂಲೆಗೆ ಹೋದರೂ ತೊಂದರೆಯಾಗದಂತಹ ವ್ಯವಸ್ಥೆಯನ್ನು ಕಟ್ಟಿಕೊಡಲು ಪಣತೊಟ್ಟಿರುವುದು ವೈರುಧ್ಯವೆನ್ನಿಸುತ್ತದೆ. ಕನ್ನಡನಾಡಿಗೆ ವಲಸೆ ಬಂದ ಹಿಂದೀಯವನಿಗೆ ಇಲ್ಲಿನ ಮೆಟ್ರೋ ರೈಲಿನಲ್ಲಿ, ರೈಲು, ಬಸ್ಸುಗಳಲ್ಲಿ, ವಿಮಾನ ನಿಲ್ದಾಣದಲ್ಲಿ, ಪೋಸ್ಟ್ಆಫೀಸ್, ಪಾಸ್ಪೋರ್ಟ್ ಕಛೇರಿಯೇ ಮೊದಲಾದ ಕಡೆಗಳಲ್ಲಿ ಹಿಂದೀಯಲ್ಲಿಯೇ ಎಲ್ಲಾ ಸೇವೆಯ ಸೌಕರ್ಯಗಳನ್ನೂ ಕಾಯ್ದೆ ಕಾನೂನುಗಳ ಮೂಲಕ ಒದಗಿಸಿಕೊಡುತ್ತದೆ. ಭಾರತೀಯರೆಲ್ಲಾ ಒಂದೇ ಎನ್ನುವ, ಸಮಾನತೆಯೇ ಜೀವಾಳ ಎನ್ನುವ, ವೈವಿಧ್ಯತೆಯಲ್ಲಿ ಏಕತೆ ಎನ್ನುವ ಭಾರತಸರ್ಕಾರವು ಕನ್ನಡದವರಿಗೆ ನವದೆಹಲಿಯ ಮೆಟ್ರೋ ರೈಲಿನಲ್ಲಿ, ಕೊಲ್ಕೊತ್ತಾದ ಪೋಸ್ಟ್ಆಫೀಸಿನಲ್ಲಿ, ಮುಂಬೈಯ ಪಾಸ್ಪೋರ್ಟ್ ಕಛೇರಿಯಲ್ಲಿ ಕನ್ನಡದಲ್ಲಿ ಸೇವೆ ಒದಗಿಸುತ್ತದೇನು?
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications