ಗಾಳಿಪಟದ ಬಗೆಗೆ ಏನ್ಗುರು ಏನ್ ಹೇಳತ್ತೆ ಗುರು?
"ಗಾಳಿಪಟ". ಇತ್ತೀಚೆಗೆ ಈ ಪದ ಯಾರಿಗ್ ಗೊತ್ತಿಲ್ಲ? ಮುಂಗಾರುಮಳೆ ಗಣೇಶ್ ಮತ್ತೆ ನಿರ್ದೇಶಕ ಯೋಗರಾಜ್ ಭಟ್ ಇವರಿಬ್ಬರ ಚಮತ್ಕಾರಾನ ಜನ ಮತ್ತೊಮ್ಮೆ ನಿರೀಕ್ಷಿಸಿ ಮೊನ್ನೆ ಈ ಚಿತ್ರ ಬಿಡುಗಡೆಯಾದ ದಿನ ಅದೇನು ನಾಮುಂದು ತಾಮುಂದು ಅಂತ ಚಿತ್ರಮಂದಿರಗಳಿಗೆ ನುಗ್ಗುದ್ರು ಗುರು!
ಈ ವರ್ಷ ಬಿಡುಗಡೆಯಾದ "ಪ್ರೀತಿ ಯಾಕೆ ಭೂಮಿ ಮೇಲಿದೆ?" ಒಟ್ಟು ತೊಂಬತ್ತೊಂಬತ್ತು ಪ್ರತಿ ಬಿಡುಗಡೆ ಆಗಿದ್ದರೆ "ಗಾಳಿಪಟ" ಎಪ್ಪತ್ತೈದು ಪ್ರತಿ ಬಿಡುಗಡೆ ಆಗ್ತಾ ಇದೆ. ಇದು ಹೈದರಾಬಾದ್, ಚೆನ್ನೈ, ಪುಣೆ, ಮುಂಬೈಗಳಲ್ಲೂ ಬಿಡುಗಡೆಯಾಗ್ತಿರೋ ಸುದ್ದಿ ಕನ್ನಡ ಚಲನ ಚಿತ್ರರಂಗದ ಮಾರುಕಟ್ಟೆ ಬೆಳೀತಿರೋ ಶುಭ ಸೂಚನೆಗಳಾಗಿವೆ. ಕನ್ನಡನಾಡಲ್ಲಿ ಪರಭಾಷಾ ಚಿತ್ರಗಳಿಗೆ ಮಾರುಕಟ್ಟೆ ಇದೆ ಅಂತ ವಿತರಣೆಗೆ ತೊಗೊಳೋ ಚಿತ್ರರಂಗದ ಜನ ಹಾಗೇ ಹೊರರಾಜ್ಯದಲ್ಲೂ ಕನ್ನಡಕ್ಕೆ ಮಾರುಕಟ್ಟೆ ಇರುತ್ತೆ ಅಂತ ಇವತ್ತಾದರೂ ಮನವರಿಕೆ ಮಾಡಿಕೊಳ್ತಾ ಇರೋದು ಖುಷಿಯ ವಿಷಯ. ಒಟ್ನಲ್ಲಿ ಕನ್ನಡ ಮನರಂಜನಾ ಕ್ಷೇತ್ರವೆಂಬ ಗಾಳಿಪಟಾನೂ ಹೊಸ ಹೊಸ ಮಾರುಕಟ್ಟೇನ ಬೆಳುಸ್ಕೊಳ್ತಾ ಎಲ್ಲೆಯಿಲ್ಲದ ಅವಕಾಶಗಳ ಆಕಾಶದಲ್ಲಿ ಮತ್ತಷ್ಟು ಎತ್ತರಕ್ಕೇರಿಸಬೇಕು ಗುರು!
ಒಳ್ಳೇ ಫಸಲಾಗೋ ಮೊದಲು ಸುರಿಯೋ ಮಳೆಯಾಗಿ ಕಳೆದ ವರ್ಷ ಮುಂಗಾರುಮಳೆ ಸಖತ್ತಾಗ್ ಹೊಯ್ದಿದ್ದೇ ಹೊಯ್ದದ್ದು, ಹಳೆ ಕೊಳೆಯೆಲ್ಲ ತೊಳೆದುಹೋಗಿ ಝಗಝಗಸ್ತಾ ಇದೆಯೇನೋ ನಮ್ ಕನ್ನಡ ಚಿತ್ರರಂಗ ಅನ್ನೋ ಭರವಸೆಯ ಮಿಂಚುಗಳು ಮೂಡ್ತಾ ಇವೆ.
ದುನಿಯಾ ಮತ್ತು ಮುಂಗಾರುಮಳೆ ಕಳೆದ ವರ್ಷದಲ್ಲಿ ಕನ್ನಡ ಚಿತ್ರರಂಗಕ್ಕೆ ಹೊಸ ನಿರ್ದೇಶಕರನ್ನು, ಹೊಸ ನಟರನ್ನು, ಹೊಸ ಸಾಹಿತ್ಯಕಾರರನ್ನು ಮಾತ್ರ ಪರಿಚಯ ಮಾಡಿಕೊಡ್ಲಿಲ್ಲ, ಇವು ಕನ್ನಡ ಚಿತ್ರರಂಗಕ್ಕಿರೋ ಬಹುದೊಡ್ದ ಮಾರುಕಟ್ಟೆಯ ಸಾಧ್ಯತೆಯನ್ನೂ ಅನಾವರಣ ಮಾಡಿದವು. ಉತ್ತಮ ಗುಣಮಟ್ಟದ ಸರಕನ್ನು ಉತ್ತಮವಾದ ಮಾರಾಟ ತಂತ್ರದ ಮೂಲಕ ಮಾರುಕಟ್ಟೆಗೆ ತಂದರೆ ಲಾಭಕರ ವಹಿವಾಟು ನಡೆಸೋಕ್ಕೂ ಸಾಧ್ಯ ಅನ್ನೋದನ್ನೂ ತೋರಿಸಿಕೊಡ್ತು. ಇಂದು ಕನ್ನಡ ಚಿತ್ರೋದ್ಯಮ ಒಳ ಮತ್ತು ಹೊರ ನಾಡುಗಳಲ್ಲಿ ನೂರಾರು ಕೋಟಿ ವಹಿವಾಟು ನಡೆಸಲು ಕಾರಣವಾಗಿದೆ.
ಸುಂದರವಾದ ವಿಷ್ಣುವರ್ಧನ್ ನಾಯಕನಾಗಿ, ಅತ್ಯುತ್ತಮವಾದ ನಿರೂಪಣೆ ಹೊಂದಿರೋ ಆಪ್ತಮಿತ್ರಕ್ಕಿಂತ ಹೆಚ್ಚಿನ ಮಾರುಕಟ್ಟೆಯನ್ನು ರಜನಿಕಾಂತರ ಚಂದ್ರಮುಖಿ ಹೇಗೆ ಪಡೆದುಕೊಳ್ಳಲು ಸಾಧ್ಯವಾಯಿತು? ಕನ್ನಡ ಚಿತ್ರರಂಗಕ್ಕೇ ಅಂತಹ ವಿಸ್ತಾರವಾದ ಮಾರುಕಟ್ಟೆ ಕನ್ನಡ ಚಿತ್ರಗಳಿಗೂ ಇದೆ ಎನ್ನುವ ಕಲ್ಪನೆಯೇ ಇರಲಿಲ್ಲವೇನೋ ಅನ್ಸುತ್ತೆ. ಹಿಂದೆಲ್ಲಾ ಯಾವುದು ಅಸಾಧ್ಯವಾಗಿತ್ತೋ ಇವತ್ತು ಅದು ಸಾಧ್ಯವಾಗ್ತಿದೆ. ಕನ್ನಡ ಚಿತ್ರಗಳು ಹೊರನಾಡಿನಲ್ಲಿ, ಹೊರದೇಶಗಳಲ್ಲಿ ಇದೀಗ ಬಿಡುಗಡೆಯಾಗುತ್ತಾ ಇರುವುದು ಒಳ್ಳೆ ಬೆಳವಣಿಗೆ ಗುರು. ಇದು ಕನ್ನಡ ಚಿತ್ರರಂಗದಲ್ಲೇ ಒಂದು ಆತ್ಮವಿಶ್ವಾಸಕ್ಕೆ ಆ ಮೂಲಕ ಹೊಸ ಹೊಸ ಸಾಹಸಗಳಿಗೆ ಪ್ರೇರಣೆಯಾಗಿರುವುದು ನಿಜ.