ಅಂತರರಾಜ್ಯ ವಲಸೆ ಬಗ್ಗೆ ಏನಂತೀರಾ? ಧಣಿಗಳೇ...
ಸನ್ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಗ್ರಾಮೀಣ ಅಭಿವೃದ್ಧಿಯ ಬಗ್ಗೆ ಒಳ್ಳೆ ಆಲೋಚನೆಯನ್ನು ಹರಿಬಿಟ್ಟಿದ್ದಾರೆ ಗುರು! ಬೆಂಗಳೂರು ಒಂದು ಬೆಳವಣಿಗೆ ಆದ್ರೆ ಮಾತ್ರಾ ಸಾಲ್ದು, ಕನ್ನಡ ನಾಡು ಉದ್ಧಾರ ಆಗಬೇಕು ಅಂದ್ರೆ ಬೇರೆ ಬೇರೆ ಕಡೆ ಬೆಳವಣಿಗೆಗಳು ಆಗಬೇಕು ಅಂದಿದ್ದಾರೆ. ನಿಜಕ್ಕೂ ಇದು ಮುಖ್ಯಮಂತ್ರಿಗಳು ನಾಡಿನ ಸರ್ವಾಂಗೀಣ ಏಳಿಗೆ ಬಗ್ಗೆ ಹೊಂದಿರೋ ಕಾಳಜಿ ತೋರುಸ್ತಿದೆ. ಆದರೆ ಇದಕ್ಕೆ ಸಾಹೇಬರು ಕೊಟ್ಟಿರೋ ಸಮರ್ಥನೆ ಮಾತ್ರಾ ಸೊಲ್ಪ ಎಡವಟ್ಟಾಗಿದೆ ಗುರು.
ನಗರಗಳಿಗೆ ವಲಸೆ ತಡೀಬೇಕು ಅನ್ನೋ ಕಾರಣ!
ಕನ್ನಡ ನಾಡಿನಲ್ಲಿರೋ ಜನರಲ್ಲಿ ಭಾಳಾ ಜನ್ರು ನಗರಗಳಿಗೆ ವಲಸೆ ಬರ್ತಾ ಇದಾರೆ, ಇದಕ್ಕೆ ಉದ್ದಿಮೆಗಳು ಬೆಂಗಳೂರಿನಲ್ಲಿ ಕೇಂದ್ರಿತವಾಗ್ತಿರೋದು ಕಾರಣ, ಹಾಗಾಗಿ ಬೆಳವಣಿಗೆ ಚಟುವಟಿಕೆಯನ್ನು ಬೆಂಗಳೂರಿನಿಂದ ಆಚೆಗೂ ವಿಸ್ತರಿಸಬೇಕು ಅಂತಾ ಹೇಳಿದಾರೆ. ಇದಕ್ಕೆ ಮೂಲ ಕಾರಣ ನಗರಗಳನ್ನು ನಿಭಾಯಿಸಕ್ಕೆ ಬರ್ತಾ ಬರ್ತಾ ಬಲೇ ತ್ರಾಸು ಉಂಟಾಗುತ್ತೆ ಅನ್ನೋದು ಒಂದ್ಕಡೆ ಆಗಿದ್ರೆ ಬೆಂಗಳೂರೊಂದೇ ಬೆಳವಣಿಗೆ ಹೊಂದ್ತಾ ಉಳಿದ ಕಡೆ ಹಿಂದುಳಿದೇ ಇದ್ರೆ ಸರಿಯಲ್ಲ ಅನ್ನೋದು ಇನ್ನೊಂದು ಕಡೆ. ಒಪ್ಪಲೇಬೇಕಾದ ಮಾತಂದ್ರೆ ಬೆಂಗಳೂರನ್ನ ಬಿಟ್ಟೂ ಹತ್ತಾರು ಕಡೆ ಆರ್ಥಿಕ ಚಟುವಟಿಕೆಗಳು ನಡೀಬೇಕು. ಅದಕ್ಕೆ ಬೇಕಾದ ಮೂಲಸೌಕರ್ಯಗಳಾದ ರಸ್ತೆ, ರೈಲು, ನೀರು, ವಿದ್ಯುತ್ ಎಲ್ಲಾ ಮಾಡಿಕೊಡಬೇಕು. ಇದು ನಿಜಕ್ಕೂ ಕನ್ನಡಿಗರಿಗೆ ಕೆಲಸ ಕೊಡ್ಸುತ್ತೆ, ನಮ್ಮ ಪರಿಣಿತಿ ಹೆಚ್ಚಿಸುತ್ತೆ, ನಮ್ಮ ಏಳಿಗೆ ಉಂಟಾಗಲು ಪೂರಕವಾಗುತ್ತೆ. ಆದ್ರೆ ಇದು ನಗರಗಳಿಗೆ ವಲಸೆ ತಡ್ಯಲ್ಲ, ಬದಲಾಗಿ ಬೆಂಗಳೂರಿಗೆ ವಲಸೆ ತಡೆದೀತು ಅಷ್ಟೇ. ಏನೇ ಅಂದ್ರು ಇದು ಆದ್ಯತೆ ಮೇಲೆ ಆಗಲೇ ಬೇಕಾದ ಕೆಲಸ ಗುರು.
ಅಂತರರಾಜ್ಯ ವಲಸೇನ್ನೇ ತಡೀಬೇಕಾದ್ದಲ್ವಾ?
ಒಳನಾಡಿನಿಂದ, ಹಳ್ಳಿಗಾಡಿನಿಂದ ನಗರಗಳಿಗೆ ವಲಸೆ ಬರ್ತಾರೆ ಜನಾ ಅನ್ನೋದಕ್ಕೆ ಇಷ್ಟು ಮಹತ್ವ ಕೊಟ್ಟಿರೋ ಮಾನ್ಯ ಮುಖ್ಯಮಂತ್ರಿಗಳು ಜೊತೆಯಲ್ಲೇ ಬಂಡವಾಳ ಹರಿವು ಯಾವ ಕಾರಣಕ್ಕೂ ಕೈ ತಪ್ಪದಂತೆ ನೋಡಿಕೊಳ್ಳೋ ಭರವಸೇನೂ ಕೊಟ್ಟಿದಾರೆ. "ಈಗ ಹೊಸ ಹೊಸ ಉದ್ದಿಮೆಗಳು ಆರಂಭ ಮಾಡೋದಾಗ್ಲೀ, ಇಲ್ಲಿ ಬಂಡವಾಳ ಹರಿದು ಬರಲಿ ಅಂತ ಅನೇಕ ರಿಯಾಯ್ತಿಗಳನ್ನು ಉದ್ದಿಮೆದಾರರಿಗೆ ಒದಗಿಸೋದಾಗ್ಲೀ, ನಮ್ಮ ನೆಲ, ಜಲವನ್ನೆಲ್ಲಾ ಕಡಿಮೆ ದರದಲ್ಲಿ ಒದಗಿಸಿ ಕೊಡೋದಾಗ್ಲಿ, ತೆರಿಗೆ ರಜಾ ವರ್ಷದ ಸವಲತ್ತು ಕೊಡೋದಾಗ್ಲೀ ಯಾಕೆ? ನಮ್ಮ ಜನರಿಗೆ ಉದ್ಯೋಗ ಸಿಗಲಿ, ನಮ್ಮೂರು ಆರ್ಥಿಕವಾಗಿ ಬೆಳೀಲಿ ಅನ್ನೋ ಕಾರಣಕ್ಕೆ ತಾನೆ? ಹಾಗಿದ್ರೆ ಕನ್ನಡ ನಾಡೆಂಬ ನಲ್ ತೋಟದಲ್ಲಿ ಮಸ್ತ್ ಮಸ್ತು ಹಣ್ಣು ಬೆಳ್ಸೋ ಮೊದಲು ಆ ಹಣ್ಣುಗಳು ನಮ್ಮೋರಿಗೆ ದಕ್ಕುತ್ತೆ ಅಂತ ಖಚಿತ ಮಾಡ್ಕೊಬೇಕಲ್ವಾ? ಅದುಕ್ಕೊಸ್ಕರ ಬೇಕಾಗೋ ಬೇಲಿ ಹಾಕಬೇಕಲ್ವಾ?ನಮ್ಮದನ್ನೆಲ್ಲಾ ತ್ಯಾಗ ಮಾಡಿ ಬಂಡವಾಳ ಹೂಡಿಕೆಗೆ ಅವಕಾಶ ಮಾಡಿಕೊಡೋದೂ, ಆದ್ರೆ ನಮ್ಮ ಜನರಿಗೆ ಅಲ್ಲಿ ಕೆಲಸ ಇಲ್ಲವಾಗೊದೂ ಯಾವ ನ್ಯಾಯಾ? ಇಲ್ಲಿನ ಉದ್ದಿಮೆಗಳಿಗೆ ಹೊರ ರಾಜ್ಯಗಳ ನೌಕರರನ್ನು ಕರೆ ತರೋದು ತಪ್ಪಲ್ವಾ ಧಣಿಗಳೇ" ಅಂತ ಕನ್ನಡಿಗರು ಮುಖ್ಯಮಂತ್ರಿಗಳಾದ ಯಡ್ಯೂರಪ್ಪ ಅವರನ್ನು ಕೇಳ್ತಾ ಔರೆ ಗುರು.
ಹೊರರಾಜ್ಯದೋರು ನಮ್ಮೂರಿಗೆ ಅಡೆತಡೆಯಿಲ್ಲದೆ ಪ್ರವಾಹವಾಗಿ ನುಗ್ಗಿ ಬರ್ತಿರೋದನ್ನು ತಡ್ಯಕ್ಕೆ ಏನಾದರೂ ಮಾಡಬೇಕೂ ಅನ್ನುಸ್ತಿಲ್ವಾ ಧಣಿಗಳೇ? ಅಂತರ ರಾಜ್ಯ ವಲಸೆ ನಿಯಂತ್ರಣದ ಬಗ್ಗೆ ನಿಮ್ಮ ಮತ್ತು ನಿಮ್ಮ ಸರ್ಕಾರದ ನಿಲುವೇನು? ಅದ್ರು ಬಗ್ಗೆನೂ ದನಿ ಎತ್ತಿ ಧಣಿಗಳೇ ಅಂತಾ ಕೇಳ್ತಾ ಔರೆ ಗುರು. ಅಂತರ ರಾಜ್ಯ ವಲಸೆ ನಿಯಂತ್ರಣಕ್ಕೆ ಬೇಕಾದ ಕಾಯ್ದೆಯೊಂದನ್ನು ಜಾರಿಗೆ ತರಲು ಬೇಕಾದ ಎಲ್ಲಾ ಕ್ರಮ ಕೈಗೊಳ್ಳಲು ಮುಂದಾಗ್ತೀರಾ ಧಣಿಗಳೇ ಅಂತಾ ಕೇಳ್ತಾ ಔರೆ ಗುರು!
(ಸ್ನೇಹಸೇತು
:
ಏನ್ಗುರು)