ಮರದ ಮ್ಯಾಲ ಕುಂತೈತಿ ನೋಡ್ರೋ ಹೊಸಾ ಕೋಗಿಲೆ
ಕನ್ನಡ ಚಲನಚಿತ್ರ ಸಂಗೀತ ಪ್ರೇಮಿಗಳಿಗೆ ಇದೀಗ ಸುಗ್ಗೀ ಸೀಸನ್ ಕಣ್ರೀಪಾ. ಒಂದಕ್ಕಿಂತ ಒಂದು, ಒಂದಕ್ಕಿಂತ ಒಂದು ಮಸ್ತ್ ಮಸ್ತ್ ಹಾಡುಗಳು ಬರ್ತಾ ಐತ್ರೀಪಾ ಈಗ. ಏನಾತು ನಮ್ಮ ಸಿನಿಮಾ ಮಂದೀಗ? ಇದ್ಕಿದ್ ಹಾಂಗ ಛಲೋ ಹಾಡು ಕೊಡಾಕ್ ಹತ್ಯಾರಲ್ಲಾ?
ಹೊಸತನದ ತಂಗಾಳಿ
ಏನರ ಹೊಸ ನಮೂನಿ ಮಾಡಬೇಕು, ಎಂಥದಾರ ಸಾಧುಸ್ಬೇಕು ಅಂತ ಭಾಳ ಪ್ರತಿಭೆಗಳು ಸದಾ ಕಾಲ ಪ್ರಯತ್ನ ಮಾಡ್ತಲೇ ಇರ್ತವೇ ಗುರು. ಅಂಥಾ ಪ್ರತಿಭೆಗಳಿಗೆ ಅವಕಾಶ ಕೊಡಬೇಕು ಅಂದ್ರ ಮೊದಲಿಗೆ ಗಟ್ಟಿ ಗುಂಡಿಗಿ ಬೇಕ ಮತ್ತ. ಮುಂಗಾರು ಮಳಿ ಕೃಷ್ಣಪ್ಪ ಅಂಥಾ ಒಂದು ಛಲೋ ಕೆಲ್ಸ ಮಾಡುದ್ರಲಾ... ಜಯಂತ್ ಕಾಯ್ಕಿಣಿಯೋರ ಹಾಡಂತು ಮನಿ ಮಾತಾಯ್ತು. ಭಾಳ ಮಂದಿ ಹೊಸಬರ ಇದ್ರೂನು ಮಳಿ ಛಲೋತ್ನಾಗ್ ಓಡ್ತಲ್ರೀ, ಅದ ನೆಪ ಆಗಿ ಹಾಂಗ ಇದರ ಜಾಡು ಹಿಡಿದು ಸಾಲು ಸಾಲು ಚಿತ್ರಗಳು ಬರಾಕ್ ಹತ್ತುದ್ವು. ಇದೂ ಒಂಥರಾ ಜೊಳ್ಳು, ಜೊಳ್ಳಿನ ಕೂಡಾ ಕಾಳು ಸುರಿಯೋ ಮಳಿ ಆತು. ಇಂಥಾ ಮಳಿ ಜಡ್ಯಾಕ್ ಹತ್ತಿದ್ದೇ ತಡ ಕಾಯ್ಕೊಂಡು ಕುಂತಿದ್ದ ಭಾಳ ಮಂದಿ ಹೊಸಬರಿಗೆ ಅವ್ರ ಪ್ರತಿಭೆ ತೋರ್ಸಾಕ್ಕ ಅವಕಾಶ ಆಯ್ತು. ಬರ್ರಲಾ, ಎಂಥಾ ಮಂದಿ ಬಂದಾರ? ಎಂಥಾ ಹಾಡು ಬಂದಾವ ನೋಡೋಣು.
ಕೋಗಿಲೆಗಳು ಹಾಡಿದವು...
ಒರಟ ಐ ಲವ್ ಯೂ ನ್ಯಾಗ "ಯಾರೋ ಕಣ್ಣಲ್ಲಿ ಕಣ್ಣನ್ನಿಟ್ಟು, ಮನಸ್ಸಿನಲ್ಲಿ ಮನಸ್ಸನಿಟ್ಟು..." ಅನ್ನೋ ಹಾಡು ಭಾಳ ಜನಪ್ರಿಯ ಆತು. ಇದರ ಸಂಗೀತ ನಿರ್ದೇಶಕರು ಜಿ.ಆರ್.ಶಂಕರ್ ಅವ್ರು. "ಜಿಂಕೆ ಮರೀನಾ, ಜಿಂಕೆ ಮರೀನಾ..." ಅನ್ನೋ ಹಾಡಿನ ಮೂಲಕ ತೊಟ್ಲಾಗಿನ ಕೂಸು ಹಾಡೂ ಹಾಂಗ ಮೋಡಿ ಮಾಡಿದ ಎಮಿಲ್, "ಆಹಾ ಒಂಥರಾ ಥರಾ..." ಅನ್ನೋ ಒಡಲಾಳದ ಭಾವ್ನಿ ಉಕ್ಕೂ ಹಾಂಗ ಹಾಡಿರೋ ಮುಸ್ಸಂಜೆ ಮಾತು ಚಿತ್ರಕ್ಕ ಸಂಗೀತ ನೀಡಿರೂ ವಿ.ಶ್ರೀಧರ್... "ನಿನ್ನಾ ಪೂಜೆಗೆ ಬಂದೆ ಮಹದೇಶ್ವರಾ...." ಅನ್ನೂ ಸೈಕೋ ಚಿತ್ರದ ಹಾಡಿನ ಮೂಲಕ ಹುಚ್ಚೆಬ್ಸಿರೋ ರಘು ದೀಕ್ಷಿತ್ ಅವ್ರೂ.... ಎಷ್ಟು ಛಲೋ ಛಲೋ ಪ್ರತಿಭೆಗಳು ಮೂಡಿ ಬರ್ಲಿಕ್ ಹತ್ಯಾವ ಅಂದ್ರ... ಕನ್ನಡ ಮಂದಿ ಇನ್ ಮುಂದ ಬರೀ ಸಂಗೀತ ಸುಧೆಯೊಳ್ಗ ತೇಲೇ ತೇಲೋಣು.
ಬೆಳಿ ಅಂದ್ರ ಜೊಳ್ಳು ಕಾಳೂ ಎರಡೂ ಇರೋದು ಸಹಜ ಐತಿ. ಆದ್ರ ಕಡಲಾಗ ನೂರು ಕಪ್ಪಿಚಿಪ್ಪು ಹುಡುಕಿದ ಮ್ಯಾಲ ಮುತ್ತು ಸಿಗೋದು. ಹಾಂಗ, ನಮ್ಮ ಕನ್ನಡ ಸಿನಿಮಾ ಮಂದಿ ಹೊಸಬರಿಗೆ ಅವಕಾಶ ಕೊಟ್ಟಾಗ ಮಾತ್ರ ಇಂಥಾ ಪ್ರತಿಭೆಗಳು ಬೆಳಕಿಗೆ ಬರ್ತಾವ. ಹ್ಞಾಂ.. ಇದು ಬರೀ ಸಂಗೀತದ ಮಾತಲ್ರೀಪಾ. ಕಥಿ, ಸಂಭಾಷಣಿ, ಸಾಹಿತ್ಯ, ಛಾಯಾಗ್ರಹಣ, ಸಂಕಲನ, ನಿರ್ದೇಶನ ಹೀಂಗ ಎಲ್ಲಾ ಕ್ಷೇತ್ರದಾಗೂ ಹೊಸ ಹೊಸ ಮಂದಿ ಬರ್ತಿರಬೇಕು. ಹಾಂಗ ಆಗಲಿಕ್ಕ, ನಾವೂ ಕೂಡಾ ಇಕಾ ಇವ ಹೊಸಬ ಅದಾನ, ಛಲೋ ಅದಾನ ಅಂತ ಬೆನ್ನು ತಟ್ಟಿ ಹುರಿದುಂಬಿಸಬೇಕ್ರೀ ಗುರುಗಳ!
(ಸ್ನೇಹಸೇತು : ಏನ್ ಗುರು?)