Get Updates
Get notified of breaking news, exclusive insights, and must-see stories!

ಸಾಡೇಸಾತಿ 2ನೇ ಹಂತದಲ್ಲಿ ತುಲಾ ರಾಶಿ

ತುಲಾ ರಾಶಿಯವರು ತಗ್ಗಿ, ಬಗ್ಗಿ ನಡೆಯುವವರು. ಎಲ್ಲರಿಗೂ ಗೌರವಾದರ ಕೊಡುತ್ತಿರುತ್ತಾರೆ. ಆದರೆ ಇದನ್ನೆ ಕೆಲ ದುಷ್ಟರು ದುರುಪಯೋಗಪಡಿಸಿಕೊಳ್ಳುವುದರಿಂದ ಜಾಗೃತೆಯಿಂದಿರುವುದು ಕ್ಷೇಮಕರ. ತುಲಾ ರಾಶಿಯವರೆ, ನಿಮ್ಮ ಸ್ನೇಹಿತರ ಬಳಗದಲ್ಲಿ ಎಂಥವರಿದ್ದಾರೆ ಎಂದು ಒಮ್ಮೆ ಸೂಕ್ಷ್ಮವಾಗಿ ಅವಲೋಕಿಸಿಕೊಳ್ಳಿ. ಯಾಕೆಂದರೆ ನಂಬಿದವರೆ ನಿಮಗೆ ಮೋಸ ಮಾಡುತ್ತಾರೆ. ದುಷ್ಟರ ಸಹವಾಸ ನಿಮಗಿದ್ದರೆ ಬಿಟ್ಟರೆ ಒಳ್ಳೆಯದು. ಇಲ್ಲವಾದರೆ, ಇನ್ನೂ ಶನಿದೇವನು ಕೊನೆ ಹಂತದವರೆಗೆ ಕಾಡಾಟ ನೀಡುತ್ತಾನೆ. ಆವಾಗ ಅನುಭವಿಸಿ ಕಷ್ಟ. "ಸಂಗತಿ ಸಹವಾಸ, ಮನೆಮಂದಿಯೆಲ್ಲ ಉಪವಾಸ" ಎಂಬ ಮಾತು ನಿಮ್ಮ ಜೀವನದಲ್ಲಿ ಸತ್ಯವಾಗುತ್ತದೆ.

"ಏನೂ ಹೇಳಬೇಡಿ ಬಿಡಿ ಸಾಮಿ, ನಾನೀರೋದೆ ಹೀಗೆ" ಎನ್ನುವವರು ಆಮೇಲೆ ತಲೆ ಎತ್ತಿ ಓಡಾಡುವುದಕ್ಕಾಗುವುದಿಲ್ಲ. ಶನಿದೇವನ ಪ್ರಭಾವವೆಂದರೆ ಈಗಲೂ ಎಷ್ಟೊ ಜನ ಹುಡುಗಾಟಿಕೆ ಅಂದುಕೊಂಡಿದ್ದಾರೆ. ನಾಸ್ತಿಕರನ್ನೂ ಬಿಡಲ್ಲ, ಆಸ್ತಿಕರನ್ನೂ ಬಿಡಲ್ಲ ಮಹಾತ್ಮನು. ಆದ್ದರಿಂದ ಶನಿದೇವನ ಕೆಟ್ಟ ದೃಷ್ಟಿಯಿಂದ ಜೀವನ ಹಾಳು ಮಾಡಿಕೊಳ್ಳದೆ ಬುದ್ಧಿವಂತಿಕೆಯಿಂದಿರುವವರು ಬುದ್ಧಿವಂತರು.

ಸ್ವಾತಿ, ಚಿತ್ತಾ 3, 4, ವಿಶಾಖ 1, 2, 3ನೇ ಚರಣಗಳಲ್ಲಿ ಜನಿಸಿದವರು ತುಲಾ ರಾಶಿಯವರಾಗುತ್ತಾರೆ. ಸದ್ಯ ಶನಿಮಹಾತ್ಮನು ಇವರಿಗೆ 1ನೇ ಸ್ಥಾನದಲ್ಲಿದ್ದಾನೆ (ಮುಂದಿನ ದಿನಗಳಲ್ಲಿ ಶನಿದೇವನು ವೃಶ್ಚಿಕ ರಾಶಿಯವರಿಗೆ 1ನೇ ಸ್ಥಾನದಲ್ಲಿರುತ್ತಾನೆ). ನಂತರ 2ನೇ ಸ್ಥಾನದವನಾಗುತ್ತಾನೆ. (ಈಗ ಕನ್ಯಾ ರಾಶಿಯವರಿಗೆ 2ನೇ ಸ್ಥಾನದಲ್ಲಿದ್ದಾನೆ ಮಹಾತ್ಮ).

Sade Sati : Shani effect on Libra zodiac sign

ಏಳರಾಟದಲ್ಲಿರುವ ತುಲಾ ರಾಶಿಯವರು ಶನಿದೇವನ 2ನೇ ಹಂತ ಮುಗಿಸುತ್ತಿದ್ದಾರೆ. 2018ರ ಹೊತ್ತಿಗೆ ಶನಿದೇವನಿಂದ ಸಂಪೂರ್ಣ ಬಿಡುಗಡೆ ಹೊಂದುತ್ತಾರೆ. ಅಲ್ಲಿಯವರೆಗೆ ಶನಿಮಹಾತ್ಮನೇ ಇವರಿಗೆ ಆರಾಧ್ಯ ದೈವ. ದೇವನ ಕೃಪೆಗೆ ಕಾಯಬೇಕು. ಏಕೆಂದರೆ ರಾಯನ ಏಳರಾಟದಲ್ಲಿ ಯಾರ ಆಟವೂ ನಡೆಯುವುದಿಲ್ಲ! ಧನಸ್ಸು ರಾಶಿಯವರಿಗೆ ಮುಂದೆ ಮಹಾತ್ಮನ ಏಳರಾಟ ಶುರುವಾಗುತ್ತದೆ. ಶನಿದೇವನು ಆರು ತಿಂಗಳು ಮೊದಲೇ ತನ್ನ ಪ್ರಭಾವ ತೋರಿಸಲು ಆರಂಭಿಸುತ್ತಾನೆ. ಹೀಗಾಗಿ ನಿರ್ಲಕ್ಷ್ಯ ಸಲ್ಲದು.

ಏನೇ ಮಾಡಿದರೂ ಹತ್ತು ಸಲ ಯೋಚಿಸಿ : ಆರೋಗ್ಯ ಒಂದೆಡೆ ಕೈ ಕೊಡುತ್ತಿದ್ದರೆ, ಮನಸ್ಸು ಕೂಡ ಹಿಡಿತದಲ್ಲಿರದೆ ಏನೇನೋ ಯೋಚನೆಗಳು ಬರುತ್ತಿರುತ್ತವೆ. ತುಲಾ ರಾಶಿಯವರನ್ನು ಉದ್ವಿಗ್ನ ಮಾಡುವ ಸಮಯವಿದು. ಹೀಗಾಗಿ ಏನೇ ಮಾಡಿದರೂ ಕೂಡ ಹತ್ತತ್ತು ಸಲ ಯೋಚಿಸಬೇಕು. ಕೆಲವೊಮ್ಮೆ ಮಾತನಾಡಲೂ ಯೋಚಿಸಬೇಕಾಗುತ್ತದೆ. ಮಾತಿನಲ್ಲಿ ತಪ್ಪು ಹುಡುಕುವ ಜನ ಈಗ ಹುಟ್ಟುತ್ತಾರೆ.

ಸುಖವಾಗಿ ಜೀವನ ಸಾಗಿಸಬೇಕೆಂಬ ಬಯಕೆ ಕನಸಾಗಿರುತ್ತದೆ. ನೆಂಟರು ನಿಮ್ಮ ತಪ್ಪುಗಳನ್ನೆ ಎಲ್ಲರಿಗೆ ಹೇಳುತ್ತ ಆನಂದಿಸುತ್ತಿರುತ್ತಾರೆ. ಸಹಾಯ ಬೇಕೆಂದರೆ ಎಲ್ಲರೂ ಮಾರುದ್ದ ಓಡುತ್ತಾರೆ. ಆದ್ದರಿಂದ ಆದಷ್ಟು ಸಹನೆ, ತಾಳ್ಮೆ ವಹಿಸಿಕೊಂಡಿರಬೇಕು. ಅತಿಯಾದ ಆಲಸ್ಯ, ಸೋಮಾರಿತನ, ದರಿದ್ರತನ ಬಿಟ್ಟು ಬಿಡಬೇಕು. ಉತ್ಸುಕತೆಯಿಂದ ಮುಂಜಾನೆಯನ್ನು ಆರಂಭಿಸಬೇಕು.

ನೆನಪಿರಲಿ, ಶನಿದೇವನ ಈ ಕಾಡಾಟ ತಾತ್ಕಾಲಿಕ ಮಾತ್ರ. ಆರೋಗ್ಯದಲ್ಲಿ ಚಿಕ್ಕ ಏರುಪೇರಾದರೆ ಕೂಡಲೇ ಪರೀಕ್ಷಿಸಿಕೊಳ್ಳಿ. ನಿರ್ಲಕ್ಷ್ಯ ಮಾಡಿ "ಉಗುರಿಗೆ ಹೋಗುವುದನ್ನು ಕೊಡ್ಲಿಗೆ ತಂದು ಹಚ್ಚಿದರು" ಎಂದು ಅನ್ನಿಸಿಕೊಳ್ಳಬೇಡಿ. ಮನೆ ಹಿರಿಯರು ಹೇಳಿದ್ದನ್ನು ಅಕ್ಷರಶಃ ಪಾಲಿಸಬೇಕು. ಪಾಲಿಸದಿದ್ದರೆ "ನಿಮ್ಮ ಕಾಲಿನ ಮೇಲೆ ನೀವೇ ಕಲ್ಲು ಚಪ್ಪಡಿ ಎಳೆದುಕೊಂಡಂತೆ". ಆದ್ದರಿಂದ ಅತಿ ಬುದ್ಧಿವಂತಿಕೆ ತೋರಿಸುವುದು ಈ ಸಮಯದಲ್ಲಿ ಒಳ್ಳೆಯದಲ್ಲ. ಹೇಳಿದಷ್ಟು ಮಾಡಿ. ಏಕೆಂದರೆ, ಕೆಟ್ಟದ್ದಾಗಲು ಕೆಲವೇ ಕ್ಷಣಗಳು ಸಾಕು. ಆದ ಮೇಲೆ ವರ್ಷಗಟ್ಟಲೆ ಬೇಕಾಗುತ್ತದೆ ಸುಧಾರಿಸಿಕೊಳ್ಳಲು. ಎಲ್ಲರೊಂದಿಗಿನ ವ್ಯವಹಾರವನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳಬೇಕು.

ಆನಂದವಾಗಿರಬೇಕಾದರೆ ಹೀಗೆ ಮಾಡಿ : ಮನೆ ಮಂದಿಯಲ್ಲಿ ಸಾಡೇಸಾತಿ ರಾಶಿಗಳವರು ತಮಗಿರುವ ಶನಿದೇವನ ಕಾಡಾಟದ ಬಗ್ಗೆ ಮುನ್ನೆಚ್ಚರಿಕೆ ನೀಡಿಡಬೇಕು. ನನ್ನಿಂದ ಏನಾದರೂ ತಪ್ಪಾಗಿದ್ದರೆ ತಿದ್ದಿಕೊಳ್ಳಿ. ಅಥವಾ ನನ್ನಲ್ಲೇನಾದರೂ ತಪ್ಪಿದ್ದರೆ ಹುಡುಕಿ ಹೇಳಿ ಎಂದು ನೀವೆ ಕೇಳಿಕೊಳ್ಳಬೇಕು. ಮನೆಯಲ್ಲಿ ಎಲ್ಲರ ಜೀವನ ಆನಂದಮಯವಾಗಿರಬೇಕಾದರೆ ಹೀಗೆ ಮಾಡಬೇಕು. ದೇವಸ್ಥಾನಕ್ಕೆ ಹೋಗುವಾಗ ಮನೆಮಂದಿಯನ್ನೂ ಜೊತೆಗೆ ಕರೆದುಕೊಂಡು ಹೋದರೆ ಒಳ್ಳೆಯದು. ಅನವಶ್ಯಕವಾಗಿ ಯಾರೊಂದಿಗೂ ವಾದ ಮಾಡಬೇಡಿ. ನಿಮ್ಮ ತಪ್ಪಿಲ್ಲದಿದ್ದರೂ ಸೋಲು ಗ್ಯಾರಂಟಿ. ಹೀಗಾಗಿ ಹುಷಾರಾಗಿರಬೇಕು.

ಸಾಡೇಸಾತಿ ನಡೆಯುತ್ತಿರುವ ಎಲ್ಲ ರಾಶಿಯವರಿಗೆ ಹೀಗೆ ಆಗುತ್ತದೆ ಎಂದೇನಿಲ್ಲ. ಅವರವರ ಜಾತಕದಲ್ಲಿ ಗುರು ಮತ್ತು ಶನಿ ಸ್ಥಾನ ಹಾಗೂ ದಶಾ-ಭುಕ್ತಿ ಮೇಲೆ ಅವಲಂಬಿತವಾಗಿರುತ್ತದೆ ಮಹಾತ್ಮನ ಫಲ. ಎಲ್ಲರೂ ಸಾಕಷ್ಟು ಹಣ ಖರ್ಚು ಮಾಡುತ್ತ ಹಬ್ಬಗಳ ಸಂಭ್ರಮದಲ್ಲಿದ್ದಾರೆ ಎಂದು ಸಾಡೇಸಾತಿಯಲ್ಲಿರುವವರು ಬೇಸರ ಪಟ್ಟುಕೊಳ್ಳಬಾರದು. ಸಾಲ ಮಾಡಿ ಹಬ್ಬ, ಹರಿದಿನಗಳನ್ನು ವಿಜೃಂಭಣೆಯಿಂದ ಆಚರಿಸುವುದು ಬೇಡ. ಇದ್ದುದರಲ್ಲಿ ಸುಧಾರಿಸಿಕೊಂಡು ಸಂತಸ ಪಡಬೇಕು.

ಕೆಲವರಿಗೆ ಪಂಚಪ್ರಾಣಗಳಲ್ಲಿ ಹಣವೂ ಒಂದಾಗಿದೆ ಈಗ. ಬೇಕಾದ್ದಂತಹ ಹಣವಂತನಿರಲಿ, ಅವನು ಹಸಿವೆ ಮುಚ್ಚಿಟ್ಟುಕೊಳ್ಳಲು ಆಗುವುದಿಲ್ಲ. ಹಸಿವೆಯಾದಾಗ ಕೇಳಲೇಬೇಕಾಗುತ್ತದೆ ಏನಾದರೂ ತಿನ್ನೋಕೆ ಕೊಡ್ತೀರಾ? ಅಂತ ಎಂಬುದನ್ನು ನೆನಪಿನಲ್ಲಿಡಿ. ಸೊಕ್ಕಿನಿಂದ ಅಂಥವರು ಮೆರೆಯುತ್ತಿದ್ದರೆ ಭಿಕ್ಷೆ ಬೇಡುವ ಹಾಗೆ ಮಾಡುತ್ತಾನೆ ಮಹಾತ್ಮನು! ಆದರೆ ಒಳ್ಳೆಯತನದಿಂದ ಜೀವನ ಮಾಡುತ್ತ, ಮರ್ಯಾದೆಗೋಸ್ಕರ ಪ್ರಾಣ ಕೊಡೊ ಜನರಿಗೆ ಶನಿದೇವನೇ ತಲೆಬಾಗಿ ಅವರು ಬಯಸಿದ್ದಕ್ಕಿಂತ ಹೆಚ್ಚಿನದನ್ನು ನೀಡುತ್ತಾನೆ. ಹೀಗೆಂದು, ಒಳ್ಳೆಯವರ ಒಳ್ಳೆಯತನ ಒರೆಗೆ ಹಚ್ಚಲು ಹೋಗಬೇಡಿ. ಹೋದಿರೆನ್ನಿ, ಶನಿದೇವನ ಚಾಟಿ ಏಟಿನ ಹೊಡೆತ ತಾಳಲಾರದೆ ಕುಗ್ಗಿಹೋಗಬೇಕಾಗುತ್ತದೆ ಎಚ್ಚರವಿರಲಿ.

"ಸಾಡೇಸಾತಿ : ವೃಶ್ಚಿಕ ರಾಶಿಗೆ ಹೀಗಿದೆ" ಎಂಬುದು ಮುಂದಿನ ಲೇಖನದಲ್ಲಿ. (ಒನ್‌ಇಂಡಿಯಾ ಕನ್ನಡ)

ವಾಸ್ತು ಟಿಪ್ಸ್ : ಮನೆಯಲ್ಲಿ ಹೂ ಗಿಡ ಬೆಳೆಸಿ ಪೂಜೆಗೆ ಬಳಸಬೇಕು.

ಶನಿದೇವನ ಕೃಪೆಗೆ : ಶನಿಪ್ರದೋಷ ಸಮಯದಲ್ಲಿ ಶಿವನ ದರ್ಶನ ಮಾಡಬೇಕು.

ಸಂಪಾದಕರ ಮಾತು : ಓದುಗರು, ಸಾಡೇಸಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರಿಗೆ ನೇರವಾಗಿ ಪೋನಾಯಿಸಿ ತಿಳಿದುಕೊಳ್ಳಬಹುದು (ಲೇಖಕರ ಮೊಬೈಲ್ : 94815 22011)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+