ಪಿಎಂ ಕಿಸಾನ್ ಯೋಜನೆ: ಡಿಸೆಂಬರ್ ತಿಂಗಳಿನಲ್ಲಿ ರೈತರ ಖಾತೆಗೆ 2,000 ರೂಪಾಯಿ
ನವದೆಹಲಿ, ನವೆಂಬರ್ 23: ಭಾರತದಲ್ಲಿ ಮುಂದಿನ ತಿಂಗಳು ರೈತರ ಖಾತೆ ಮತ್ತೆ 2,000 ರೂಪಾಯಿ ಹಣ ಜಮೆ ಆಗಲಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಥವಾ ಪಿಎಂ ಕಿಸಾನ್ ಯೋಜನೆಯ ಅಡಿಯಲ್ಲಿ ರೈತರ ಖಾತೆಗೆ ಜಮೆ ಮಾಡುವುದಕ್ಕಾಗಿ ಕೇಂದ್ರ ಸರ್ಕಾರ 22,000 ಕೋಟಿ ರೂಪಾಯಿ ಹಣವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಹಣವು FY22 ರ ಡಿಸೆಂಬರ್ನಿಂದ ಮಾರ್ಚ್ ತ್ರೈಮಾಸಿಕಕ್ಕೆ ಮೂರನೇ ಕಂತಾಗಿದೆ. ಇದುವರೆಗೆ ಕೇಂದ್ರ ಸರ್ಕಾರವು ಈ ಯೋಜನೆಯಡಿ ರೈತ ಕುಟುಂಬಗಳಿಗೆ ಸುಮಾರು 1.57 ಲಕ್ಷ ಕೋಟಿ ರೂಪಾಯಿ ಆರ್ಥಿಕ ನೆರವು ನೀಡಿದೆ.
ವರದಿಗಳ ಪ್ರಕಾರ, 10 ನೇ ಕಂತು ಡಿಸೆಂಬರ್ 15 ರಿಂದ 25 ರ ನಡುವೆ ಯೋಜನೆ ಅಡಿಯಲ್ಲಿ ಸರ್ಕಾರದಿಂದ ಬಿಡುಗಡೆ ಮಾಡಲಾಗುತ್ತದೆ. ರೈತರ ಕುಟುಂಬಗಳಿಗೆ ಸಹಾಯ ಮಾಡಲು 2022ರ ಹಣಕಾಸು ವರ್ಷದಲ್ಲಿ ಪ್ರಧಾನಮಂತ್ರಿ ಕಿಸಾನ್ ಯೋಜನೆಗಾಗಿ ಕೇಂದ್ರವು ಇದುವರೆಗೆ 43,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ.
ಡಿಸೆಂಬರ್ನಿಂದ ಮಾರ್ಚ್ ತ್ರೈಮಾಸಿಕಕ್ಕೆ ಮೂರನೇ ಕಂತಿನ ಬಿಡುಗಡೆಯೊಂದಿಗೆ, ಈ ಹಣಕಾಸು ವರ್ಷದಲ್ಲಿ ಯೋಜನೆಗಾಗಿ ನಿಗದಿಪಡಿಸಿದ 65,000 ಕೋಟಿ ರೂಪಾಯಿ ಖರ್ಚು ಮಾಡಿದಂತೆ ಆಗುತ್ತದೆ. ಹೆಚ್ಚು ಹೆಚ್ಚು ರೈತರು ಯೋಜನೆಗೆ ಹೆಸರು ನೋಂದಾಯಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಎಫ್ವೈ 22 ರಲ್ಲಿ ಪಿಎಂ ಕಿಸಾನ್ ಯೋಜನೆಗೆ ಹೆಚ್ಚುವರಿಯಾಗಿ 500 ರಿಂದ 1,000 ಕೋಟಿ ರೂಪಾಯಿ ಬೇಕಾಗಬಹುದು ಎಂದು ಹೇಳಲಾಗುತ್ತಿದೆ.
ಪ್ರಧಾನಮಂತ್ರಿ ಕಿಸಾನ್ ಯೋಜನೆಗೆ ಹೊಸ ಸೇರ್ಪಡೆ:
ಪಶ್ಚಿಮ ಬಂಗಾಳದಲ್ಲಿ ಇನ್ನೂ 15 ಲಕ್ಷ ರೈತರನ್ನು ಯೋಜನೆಗೆ ಸೇರಿಸುವ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ. ಅದರಿಂದ ರಾಜ್ಯದಲ್ಲಿ ಈಗಿರುವ 35 ಲಕ್ಷ ರೈತರ ಸಂಖ್ಯೆಯು 50 ಲಕ್ಷಕ್ಕೆ ಏರಿಕೆ ಆಗಲಿದೆ ಎಂದು ಮೂಲಗಳು ತಿಳಿಸಿವೆ. ಸರ್ಕಾರವು ಈ ವರ್ಷ ಸುಮಾರು 11 ಕೋಟಿ ಫಲಾನುಭವಿಗಳನ್ನು ಪಿಎಂ ಕಿಸಾನ್ ಯೋಜನೆಗೆ ಹೆಸರು ನೋಂದಾಯಿಸಿದೆ. ಪಿಎಂ ಕಿಸಾನ್ ಯೋಜನೆಗೆ ಸಂಬಂಧಿಸಿದಂತೆ ಪ್ರಸ್ತುತ ನಿಯಮಗಳಲ್ಲಿ ಯಾವುದೇ ಬದಲಾವಣೆಯನ್ನು ತರಲು ಕೇಂದ್ರವು ಬಯಸುತ್ತಿಲ್ಲ ಎಂದು ವರದಿಯಾಗಿದೆ.
ರೈತ ಕುಟುಂಬಕ್ಕೆ 6,000 ರೂ ಆರ್ಥಿಕ ನೆರವು:
ಪ್ರಧಾನಮಂತ್ರಿ ಕಿಸಾನ್ ಯೋಜನೆ ಅಡಿಯಲ್ಲಿ ಅರ್ಹ ಫಲಾನುಭವಿಗಳಿ ಬ್ಯಾಂಕ್ ಖಾತೆಗೆ ವರ್ಷದಲ್ಲಿ ಒಟ್ಟು 6,000 ರೂಪಾಯಿ ಆರ್ಥಿಕ ನೆರವು ನೀಡಲಾಗುತ್ತದೆ. ಪ್ರತಿ ನಾಲ್ಕು ತಿಂಗಳಿಗೆ ಒಂದು ಬಾರಿ ಫಲಾನುಭವಿ ರೈತ ಕುಟುಂಬದವರ ಖಾತೆಗೆ 2,000 ರೂಪಾಯಿ ಜಮೆ ಮಾಡಲಾಗುತ್ತದೆ. ಫೆಬ್ರವರಿ 2019 ರಲ್ಲಿ ಬಜೆಟ್ನಲ್ಲಿ ಈ ಯೋಜನೆಯನ್ನು ಘೋಷಿಸಲಾಯಿತು. ಮೊದಲ ಕಂತು ಡಿಸೆಂಬರ್ 2018- ಮಾರ್ಚ್ 2019 ಅವಧಿಗೆ ಆಗಿತ್ತು. ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಯಿತು.
ದೇಶದ 11 ಕೋಟಿ ಫಲಾನುಭವಿಗಳಿಗೆ ಹಣ ವರ್ಗಾವಣೆ:
2021ರ ಆಗಸ್ಟ್ನಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಪಿಎಂ ಕಿಸಾನ್ ಯೋಜನೆಯಡಿ ಸುಮಾರು 9.75 ಕೋಟಿ ಫಲಾನುಭವಿಗಳಿಗೆ ಸುಮಾರು 19,500 ಕೋಟಿ ರೂ.ಗಳನ್ನು ವರ್ಗಾಯಿಸಲಾಗಿದೆ ಎಂದು ಹೇಳಿದ್ದರು. ಪ್ರಧಾನಮಂತ್ರಿಯವರ ಸಮ್ಮುಖದಲ್ಲಿ ನಡೆದ ವರ್ಚುವಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಒಂಬತ್ತನೇ ಕಂತಿನ ಮೊದಲು ಕೇಂದ್ರ ಸರ್ಕಾರವು ಸುಮಾರು 11 ಕೋಟಿ ಫಲಾನುಭವಿಗಳಿಗೆ ಸುಮಾರು 1.37 ಲಕ್ಷ ಕೋಟಿ ರೂ.ಗಳನ್ನು ಯೋಜನೆಯಡಿಯಲ್ಲಿ ವಿತರಿಸಲಾಗಿದೆ ಎಂದು ಹೇಳಿದ್ದರು.
ಸರ್ಕಾರವು 2.28 ಕೋಟಿ ಪಿಎಂ ಕಿಸಾನ್ ಫಲಾನುಭವಿಗಳನ್ನು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯೊಂದಿಗೆ ಲಿಂಕ್ ಮಾಡಿದೆ, ಇದರ ಅಡಿಯಲ್ಲಿ ಅವರು ಇಲ್ಲಿಯವರೆಗೆ 2.32 ಲಕ್ಷ ಕೋಟಿ ರೂಪಾಯಿಗಳವರೆಗೆ ಸಾಲವನ್ನು ಪಡೆಯಲು ಸಮರ್ಥರಾಗಿದ್ದಾರೆ. COVID-19 ರ ಸವಾಲುಗಳ ನಡುವೆಯೂ ರೈತರು ಶ್ರಮದಿಂದಾಗಿ ಕಳೆದ ವರ್ಷ ಬಂಪರ್ ಉತ್ಪಾದನೆಯನ್ನು ಮಾಡಿದ್ದಾರೆ. ರೈತರ ನಿರಂತರ ಪ್ರಯತ್ನದಿಂದಾಗಿ ಮುಂದಿನ ದಿನಗಳಲ್ಲಿ ಉತ್ತಮ ಉತ್ಪಾದನೆ ನಿರೀಕ್ಷಿಸಲಾಗಿದೆ ಎಂದು ತೋಮರ್ ಹೇಳಿದ್ದಾರೆ.
ರೈತರಿಗಾಗಿ ಹಲವು ಯೋಜನೆ:
ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಮತ್ತು ಪಿಎಂ ಕಿಸಾನ್ ಯೋಜನೆಗಳು ರೈತರು ಸರ್ಕಾರದಿಂದ ಪಡೆಯುವ ಹಲವಾರು ಪ್ರಯೋಜನಗಳಲ್ಲಿ ಒಂದಾಗಿವೆ. ರೈತರಿಗೆ ಪಿಂಚಣಿಗಳನ್ನು ಒದಗಿಸುವ ಕೇಂದ್ರ ಸರ್ಕಾರದ ಯೋಜನೆಯು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ, ಪಿಎಂ ಕಿಸಾನ್ ಮನ್ಧನ್ ಯೋಜನೆ, ಪಿಎಂ ಕಿಸಾನ್ ಕ್ರೆಡಿಟ್ ಕಾರ್ಡ್ ಮತ್ತು ಪಿಎಂ ಕಿಸಾನ್ ಐಡಿ ಕಾರ್ಡ್ಗಳನ್ನು ಒಳಗೊಂಡಿದೆ.