ಒಂದು ಎಂಪಿ ಸೀಟು ಸಾಕು, ಎರಡು ಎಂಎಲ್ಎ ಸೀಟು ಬಿಟ್ಟು ಕೊಡ್ತೀವಿ ಇಟ್ಕೊಳ್ಳಿ !

ಬೆಂಗಳೂರು, ಏಪ್ರಿಲ್ 08: ರಾಜ್ಯದಲ್ಲಿ ನಡೆಯಲಿರುವ ಎರಡು ವಿಧಾನಸಭಾ ಹಾಗೂ ಒಂದು ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಬಗ್ಗೆ ಕೈ ನಾಯಕರು "ಮಹಾ ಚಾಣಾಕ್ಷ" ರಣತಂತ್ರ ರೂಪಿಸಿದ್ದಾರೆ. ಎರಡು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಳು ಸೋತರೂ ಪರವಾಗಿಲ್ಲ, ಆದರೆ, ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಕೈ ಪಕ್ಷದ ನಾಯಕರು ಪಣ ತೊಟ್ಟಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಈಗಾಗಲೇ ಎದ್ದಿರುವ ಜನ ವಿರೋಧಿ ನೀತಿ ಅಲೆಯನ್ನು ಮತ್ತಷ್ಟು ಹೆಚ್ಚಿಸಿ ಜನರಲ್ಲಿ ಅಸಹನೆ ಮಡುಗಟ್ಟುವಂತೆ ಮಾಡಬೇಕು. ಮೈತ್ರಿ ಸರ್ಕಾರವನ್ನು ಕೆಡವಿದ ರಮೇಶ್ ಜಾರಕಿಹೊಳಿ ಕೋಟೆ ಛಿದ್ರಗೊಳಿಸುವ ಜತೆಗೆ ಬಿಜೆಪಿ ವರಿಷ್ಠರಿಗೆ ಕೈ ಪವರ್ ತೋರಿಸಲು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಮೇಲಷ್ಟೇ ಕೈ ನಾಯಕರು ಕೇಂದ್ರೀಕರಿಸಿದ್ದಾರೆ. ಕೈ ರೂಪಿಸಿರುವ ಇವತ್ತಿನ ಸೋಲು- ಭವಿಷ್ಯದ ಗೆಲುವಿನ ಭವಿಷ್ಯದ ನೂರಾರು ಲೆಕ್ಕಾಚಾರಗಳು ಇಲ್ಲಿ ಅನಾವರಣಗೊಂಡಿದೆ.

ಸೋಲಲ್ಲಿ ಕೈ ನದ್ದು ದೊಡ್ಡ ಲೆಕ್ಕಾಚಾರ: ಕೊರೋನಾ ಲಾಕ್‌ಡೌನ್ ಕಿರಿಕಿರಿ, ಪದೇ ಪದೇ ಸಾರಿಗೆ ನೌಕರರ ಮುಷ್ಕರ, ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ, ಪೆಟ್ರೊಲ್ ಡೀಸೆಲ್ ಬೆಲೆ ಏರಿಕೆ, ರೈತರ ಹೋರಾಟ ಒಂದಲ್ಲಾ ಒಂದು ಹೋರಾಟ ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿವೆ. ಯಡಿಯೂರಪ್ಪ ಸರ್ಕಾರದ ವಿರುದ್ಧ ಅಲೆಗಿಂತಲೂ ಬಿಜೆಪಿ ವಿರುದ್ಧದ ಅಲೆ ಎಂದರೂ ತಪ್ಪಾಗಲಾರದು.

By elections 2021: Is Congress Plan helping BJP to Win two Assembly Constituencies

ವಯಸ್ಸು ಕಾರಣ ನೀಡಿ ಯಡಿಯೂರಪ್ಪ ಅವರನ್ನು ಸಿಎಂ ಖುರ್ಚಿಯಿಂದ ಇಳಿಸಿ ಡ್ಯಾಮೇಜ್ ಕಂಟ್ರೋಲ್ ಮಾಡಿಕೊಳ್ಳಲು ಬಿಜೆಪಿ ವರಿಷ್ಠರು ಚಿಂತನೆ ನಡೆಸಿದ್ದಾರೆ ಎಂಬುದರಲ್ಲಿ ಅನುಮಾನವೇ ಇಲ್ಲ. ಜನ ಪರ ಯೋಜನೆಗಳನ್ನು ಘೋಷಣೆ ಮಾಡಿ ಉತ್ತಮ ಆಡಳಿತ ನೀಡುವ ಪ್ರಯತ್ನ ಮಾಡಿದರೂ ಬಿಜೆಪಿ ಪರ ಜನರ ಒಲವು ಮುಂದಿನ ಚುನಾವಣೆ ವೇಳೆಗೆ ಬದಲಾಗುವ ಸಾಧ್ಯತೆಯಿದೆ. ಯಡಿಯೂರಪ್ಪ ಅವರನ್ನು ಸಿಎಂ ಖುರ್ಚಿಯಿಂದ ಇಳಿಸಲು ಕೇಂದ್ರ ವರಿಷ್ಠರು ಉಪ ಚುನಾವಣೆಯ ಕದನ ಸೋಲನ್ನೇ ಮಾನದಂಡ ಇಟ್ಟುಕೊಂಡು ತೆಗೆದರೂ ಅಚ್ಚರಿ ಪಡಬೇಕಿಲ್ಲ. ಇದೇ ಕಾರಣಕ್ಕೆ ಯತ್ನಾಳ್ ಪದೇ ಪದೇ ಸಿಎಂ ಚೇಂಜ್ ಭವಿಷ್ಯದ ಮೇಲೆ ಭವಿಷ್ಯ ನುಡಿಯುತ್ತಿದ್ದಾರೆ.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಸುಲಭವಾಗಿ ಜಯ ಗಳಿಸಬೇಕಾದರೆ, ಯಡಿಯೂರಪ್ಪ ಸರ್ಕಾರ ಅಸ್ತಿತ್ವದಲ್ಲಿರಬೇಕು. ರಾಜ್ಯಕ್ಕೆ ಕೆಟ್ಟ ಆಡಳಿತ ಕೊಡಿಸಿ ಜನ ರೋಸಿ ಹೋಗಬೇಕು. ಅಲ್ಲಿಗೆ ಕಾಂಗ್ರೆಸ್ ಮೇಲಿನ ಒಲವಿಗಿಂತಲೂ ಬಿಜೆಪಿ ವಿರೋಧಿ ಮತಗಳು ಸೃಷ್ಟಿಯಾಗುವುದರಲ್ಲಿ ಅನುಮಾನವೇ ಬೇಡ. ಹೀಗಾಗಿ ಕೈ ಮುಖಂಡರು ಎರಡೂ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಬಗ್ಗೆ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಬದಲಿಗೆ ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣೆ ಬಗ್ಗೆ ಕೇಂದ್ರೀಕರಿಸಿದ್ದಾರೆ.

ಯಡಿಯೂರಪ್ಪ ಸಿಎಂ ಆಗಿ ಉಳಿಯಬೇಕಾದರೆ, ಮಸ್ಕಿ ಹಾಗೂ ಬಸವ ಕಲ್ಯಾಣ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಬೇಕು. ಒಂದು ವೇಳೆ ಎರಡು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳೇ ಗೆದ್ದು ಬಿಟ್ಟರೆ, ಯಡಿಯೂರಪ್ಪ ಅವರನ್ನು ಸಿಎಂ ಖುರ್ಚಿಯಿಂದ ಕೆಳಗೆ ಇಳಿಸುತ್ತೀವಿ ಎಂಬ ಮಾತು ಆಡುವುದಕ್ಕೂ ಸಾಧ್ಯವಾಗಲ್ಲ. ಕೆಲ ದಿನಗಳ ಹಿಂದೆ ನಡೆದ ಶಿರಾ ಕ್ಷೇತ್ರದ ವಿಧಾನಸಭೆ ಉಪ ಚುನಾವಣೆಯಲ್ಲಿ ವೈದ್ಯರೊಬ್ಬರನ್ನು ನಿಲ್ಲಿಸಿ ವಿಜಯ ಸಾಧಿಸಿ ಯಡಿಯೂರಪ್ಪ ಕೇಂದ್ರದ ಬಿಜೆಪಿ ವರಿಷ್ಠರಿಗೆ ದೊಡ್ಡ ಸಂದೇಶ ರವಾನಿಸಿದ್ದರು.

ಇದೀಗ ಸಿಎಂ ಬದಲಾಗುತ್ತಾರೆ ಎಂಬ ಕೂಗಿನ ಬೆನ್ನಲ್ಲೇ ಯಡಿಯೂರಪ್ಪ ಸಿಎಂ ಆಗಿ ಉಳಿಯಬೇಕಾದರೆ ಎರಡು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬೇಕು. ಕೈ ನಾಯಕರ ಆಸೆಯು ಕೂಡ ಯಡಿಯೂರಪ್ಪ ಸರ್ಕಾರದಿಂದ ಹದಗೆಟ್ಟ ಆಡಳಿತ ಕೊಡಿಸಿ ಜನ ರೋಸಿ ಹೋಗುವಂತೆ ಮಾಡಬೇಕು ಎಂಬುದು. ಹೀಗಾಗಿ ಮಸ್ಕಿ ಮತ್ತು ಬಸವ ಕಲ್ಯಾಣದಲ್ಲಿ ಬಿಜೆಪಿ ಗೆದ್ದರೂ ಅಚ್ಚರಿ ಪಡಬೇಕಿಲ್ಲ.

By elections 2021: Is Congress Plan helping BJP to Win two Assembly Constituencies

ಡಿ.ಕೆ. ಶಿವಕುಮಾರ್ ಮತ್ತು ಸಾಹುಕಾರ್: ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್ ಮತ್ತು ಜೆಡಿಎಸ್ ನೇತೃತ್ವದ ಸರ್ಕಾರವನ್ನು ಉರುಳಿಸಿದ್ದು ರಮೇಶ್ ಜಾರಕಿಹೊಳಿ. ಇತ್ತೀಚೆಗೆ ಸಿಡಿ ಸ್ಫೋಟದ ಪೆಟ್ಟಿನಿಂದ ರಮೇಶ್ ಜಾರಕಿಹೊಳಿ ಇನ್ನೂ ಹೊರಗೆ ಬಂದಿಲ್ಲ. ಸಿಡಿ ಹಿಂದೆ ಮಹಾ ನಾಯಕನ ಕೈವಾಡವಿದೆ. ಮುಂದಿನ ಚುನಾವಣೆಯಲ್ಲಿ ಕನಕಪುರದಲ್ಲಿ ಸೋಲಿಸುತ್ತೇನೆ ಎಂದು ಸವಾಲು ಹಾಕಿದ್ದು ರಮೇಶ್ ಜಾರಕಿಹೊಳಿ.

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಾಣೆಯಲ್ಲಿ ಸತೀಶ್ ಜಾರಕಿಹೊಳಿರನ್ನು ಕಣಕ್ಕೆ ಇಳಿಸುವ ಮೂಲಕ ಡಿ.ಕೆ. ಶಿವಕುಮಾರ್ ಒಂದೇ ಏಟಿಗೆ ಎರಡು ಹಕ್ಕಿ ಹೊಡೆಯುವ ಮಹಾ ಯೋಜನೆ ರೂಪಿಸಿದ್ದಾರೆ. ಸತೀಶ್ ಜಾರಕಿಹೊಳಿರನ್ನು ಗೆಲ್ಲಿಸುವ ಮೂಲಕ ರಮೇಶ್ ಜಾರಕಿಹೊಳಿಗೆ "ನಿಮ್ಮ ಊರಿನಲ್ಲೇ ಗೆಲುವು ತಂದುಕೊಂಡವ ನಾನು" ನನ್ನೂರಿಗೆ ಬಂದು ನೀನೇನು ಮಾಡಬಲ್ಲೆ ಎಂಬ ಸಂದೇಶ ರವಾನಿಸುವುದು. ಇದರ ಜತೆಗೆ ಮುಂದಿನ ಚುನಾವಣೆ ವೇಳೆಗೆ ಬಹುತೇಕ ಲೋಕಸಭಾ ಕ್ಷೇತ್ರಗಳು ಕೈ ವಶವಾಗಲಿವೆ ಎಂಬ ಎಚ್ಚರಿಕೆಯನ್ನು ಬಿಜೆಪಿ ವರಿಷ್ಠರಿಗೆ ಕಳುಹಿಸುವುದು ಕೈ ನಾಯಕರ ಪ್ಲಾನ್. ವಿಶೇಷ ವೆಂದರೆ, ಬೆಳಗಾವಿಯಲ್ಲಿ ಕೈಗೆ ಎಲ್ಲಾ ಅಯಾಮದಲ್ಲೂ ಗೆಲುವಿನ ವಾತವರಣ ಸೃಷ್ಟಿಯಾಗಿದೆ.

By elections 2021: Is Congress Plan helping BJP to Win two Assembly Constituencies

ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ಪರ ಅಲೆ:
ಚುನಾವಣೆ ವಿಚಾರಕ್ಕೆ ಬಂದರೆ ಬೆಳಗಾವಿ ಪ್ರಾಂತ್ಯದಲ್ಲಿ ಪಂಚಮಸಾಲಿಗಳದ್ದೇ ಪಾರುಪತ್ಯ. 2ಎ ಮೀಸಲಾತಿಗಾಗಿ ಆಗ್ರಹಿಸಿ ಸ್ವಾಮಿ ವಚನಾನಂದ ನೇತೃತ್ವದಲ್ಲಿ ಬಹುದೊಡ್ಡ ಹೋರಾಟ ನಡೆದರೂ ಯಡಿಯೂರಪ್ಪ ಸರ್ಕಾರ ಸೊಪ್ಪು ಹಾಕಲಿಲ್ಲ. ಕನಿಷ್ಠ ಪಕ್ಷ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಕಣಕ್ಕೆ ನಮ್ಮ ಸಮುದಾಯದ ವ್ಯಕ್ತಿಯನ್ನು ಬಿಜೆಪಿಯಿಂದ ಕಣಕ್ಕೆ ಇಳಿಸಬೇಕೆಂಬ ಸ್ವಾಮಿಗಳ ಮಾತಿಗೆ ಯಡಿಯೂರಪ್ಪ ಕಿವಿಗೊಟ್ಟಿಲ್ಲ. ಹೀಗಾಗಿ ಸಾಮೂಹಿಕವಾಗಿ ಪಂಚಮಸಾಲಿ ಮತಗಳು ಬಿಜೆಪಿ ವಿರುದ್ಧವಾಗಿ ಚಲಾವಣೆಯಾದರೂ ಸಾಕು ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಸತೀಶ್ ಜಾರಕಿಹೊಳಿಗೆ ಗೆಲುವು ಕಟ್ಟಿಟ್ಟ ಬುತ್ತಿ.

ಪಂಚಮಸಾಲಿ ಮತಗಳನ್ನು ಸೆಳೆಯುವಲ್ಲಿ ಅನುಮಾನವೇ ಬೇಡ. ಹೀಗಾಗಿ ರಾಜ್ಯದಲ್ಲಿ ಮುಂದಿನ ಚುನಾವಾಣೆಯಲ್ಲಿ ಕೈ ಸುಲಭವಾಗಿ ಜಯಗಳಿಸುವ ಹಾದಿಯನ್ನು ಕೈ ನಾಯಕರು ಸುಗಮಗೊಳಿಸಿಕೊಳ್ಳುತ್ತಿದ್ದಾರೆ. ಸೋಲಿನಿಂದಲೂ ಭವಿಷ್ಯದ ದೊಡ್ಡ ಲೆಕ್ಕಾಚಾರ ಹಾಕಿಕೊಂಡಿದ್ದಾರೆ. ಹೀಗಾಗಿ ಮಸ್ಕಿ ಮತ್ತು ಬಸವ ಕಲ್ಯಾಣದಲ್ಲಿ ಗೆಲುವಿಗಿಂತಲೂ ಸೋಲೇ ಕಾಂಗ್ರೆಸ್ ಭವಿಷ್ಯಕ್ಕೆ ಹಾದಿ ಮಾಡಿಕೊಡಲಿದೆ ಎಂಬ ಲೆಕ್ಕಾಚಾರ ಹಾಕಿದ್ದಾರೆ.

By elections 2021: Is Congress Plan helping BJP to Win two Assembly Constituencies

ಆರಂಭದಲ್ಲಿ ಲೋಕಸಭಾ ಉಪ ಚುನಾವಣೆ ವಿಚಾರವೇ ಬೇಡ ಎಂದಿದ್ದ ಸತೀಶ್ ಜಾರಕಿಹೊಳಿ ಮತ್ತೆ ಒಪ್ಪುವ ಹಿಂದೆಯೂ ದೊಡ್ಡ ಕಾರಣವಿದೆ. ಯಮಕನಕರಡಿ ವಿಧಾನಸಭಾ ಕ್ಷೇತ್ರದ ಶಾಸಕನಾಗಿರುವ ಸತೀಶ್ ಜಾರಕಿಹೊಳಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇ ಆದಲ್ಲಿ, ತನ್ನ ಪುತ್ರ ಅಥವಾ ಪುತ್ರಿಯನ್ನು ಮುಂದಿನ ಚುನಾವಣೆಗೆ ಅಣಿಗೊಳಿಸುವ ಮೂಲಕ ಮಕ್ಕಳಿಗೂ ರಾಜಕೀಯ ಪ್ರವೇಶಕ್ಕೆ ಮುಹೂರ್ತ ಇಟ್ಟಂತಾಗುತ್ತದೆ. ಪುತ್ರ ರಾಹುಲ್, ಪುತ್ರಿ ಪ್ರಿಯಾಂಕ ಇಬ್ಬರಲ್ಲಿ ಒಬ್ಬರನ್ನು ರಾಜಕೀಯವಾಗಿ ಮುನ್ನೆಲೆಗೆ ತರಲು ಸಿಕ್ಕ ಬಹುದೊಡ್ಡ ಅವಕಾಶ. ಹೀಗಾಗಿ ಸತೀಶ್ ಜಾರಕಿಹೊಳಿ ಕೂಡ ಗೆಲುವಿಗಾಗಿ ಸೆಣಸಾಡಲು ಸಿದ್ಧರಾಗಿದ್ದಾರೆ.

ಈ ಹಿಂದೆ ಕೂಡ ಯಡಿಯೂರಪ್ಪ ಸರ್ಕಾರದ ಆಡಳಿತ ವೈಫಲ್ಯಗಳನ್ನೇ ಮುಂದಿಟ್ಟು ಕಾಂಗ್ರೆಸ್ ಚುನಾವಣೆ ಎದುರಿಸಿತ್ತು. ಸಿದ್ದು ನೇತೃತ್ವದಲ್ಲಿ ಎದುರಿಸಿದ ಚುನಾವಣೆಯಲ್ಲಿ ಕಾಂಗ್ರೆಸ್ ಎದುರಾಳಿ ಪಕ್ಷಗಳನ್ನು ಧೂಳಿಪಟ ಮಾಡಿತ್ತು. ಯಾವ ಪಕ್ಷದ ಸಖ್ಯವಿಲ್ಲದೇ ಸ್ವತಂತ್ರ ಸರ್ಕಾರ ಮಾಡುವಲ್ಲಿ ಕಾಂಗ್ರೆಸ್ ಯಶಸ್ವಿ ಸಾಧಿಸಿತ್ತು. ಇದೀಗ ಸಿದ್ಧು ಅದೇ ರೀತಿಯ ಸ್ಕೆಚ್ ಹಾಕಿ ಯಡಿಯೂರಪ್ಪ ಅವರನ್ನು ಸಿಎಂ ಖುರ್ಚಿಯಲ್ಲಿಯೇ ಮುಂದುವರೆಸಲು ಕಾಂಗ್ರೆಸ್ ಪ್ಲಾನ್ ರೂಪಿಸಿತೇ ಎಂಬ ಪ್ರಶ್ನೆ ಕಾಡುತ್ತಿದೆ !

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+