ಸತೀಶ್ ರೆಡ್ಡಿ ಮನೆ ಮುಂದೆ ಕಾರುಗಳಿಗೆ ಬೆಂಕಿ: ಇಬ್ಬರು ಶಂಕಿತರ ಅಜ್ಞಾತ ಸ್ಥಳದಲ್ಲಿ ವಿಚಾರಣೆ
ಬೆಂಗಳೂರು, ಆಗಸ್ಟ್ 13: ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಮನೆ ಮುಂದೆ ಕಾರಿಗೆ ಬೆಂಕಿ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ. ಬೆಡ್ ಬ್ಲಾಕಿಂಗ್ ದಂಧೆ ಮತ್ತು ಬೇಗೂರು ಕೆರೆಯಲ್ಲಿ ಶಿವನ ವಿಗ್ರಹ ಸ್ಥಾಪನೆ ವಿಚಾರದಲ್ಲಿ ಸತೀಶ್ ರೆಡ್ಡಿ ಅವರ ಕಾರುಗಳಿಗೆ ಬೆಂಕಿ ಇಟ್ಟಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಎರಡೂ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ.
ಕೊರೊನಾವೈರಸ್ ಸೋಂಕು ಹೆಚ್ಚಾದ ವೇಳೆ ಸಾರ್ವಜನಿಕರು ಬೆಡ್ ಸಿಗದೇ ಪರದಾಡುತ್ತಿದ್ದರು. ಈ ವೇಳೆ ದಕ್ಷಿಣ ವಾರ್ ರೂಮ್ನಲ್ಲಿ ಬೆಡ್ ಬ್ಲಾಕಿಂಗ್ ದಂಧೆ ಮಾಡುತ್ತಿದ್ದರು ಎಂಬ ಗಂಭೀರ ಆರೋಪವನ್ನು ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದರು. ಶಾಸಕ ಸತೀಶ್ ರೆಡ್ಡಿ ಕೂಡ ಸುದ್ದಿಗೋಷ್ಠಿಯಲ್ಲಿ ಮುಂದಾಳತ್ವ ವಹಿಸಿದ್ದರು. ಒಂದು ಕೋಮನ್ನು ಉದ್ದೇಶವಾಗಿಟ್ಟುಕೊಂಡು ತೇಜಸ್ವಿ ಸೂರ್ಯ ಮಾಡಿದ ಆರೋಪ ದೊಡ್ಡ ವಿವಾದಕ್ಕೆ ನಾಂದಿ ಹಾಡಿತ್ತು.
ಈ ಕುರಿತು ಸಿಸಿಬಿ ಪೊಲೀಸರು ತನಿಖೆ ನಡೆಸಿದಾಗ ಬೊಮ್ಮನಹಳ್ಳಿ ಶಾಸಕನ ಆಪ್ತನೇ ಬಂಧನಕ್ಕೆ ಒಳಗಾಗಿದ್ದರು. ಇದರ ಜತೆಗೆ ದಕ್ಷಿಣ ವಾರ್ ರೂಮ್ನಲ್ಲಿ ಕೆಲಸ ಮಾಡುತ್ತಿದ್ದ ಒಂದು ಸಮುದಾಯಕ್ಕೆ ಸೇರಿದ ಯುವಕರನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಇದು ರಾಜಕೀಯವಾಗಿ ದೊಡ್ಡ ವಿವಾದವನ್ನೇ ಹುಟ್ಟು ಹಾಕಿತ್ತು. ಈ ದ್ವೇಷದ ಹಿನ್ನೆಲೆಯಲ್ಲಿ ಸತೀಶ್ ರೆಡ್ಡಿ ಮನೆ ಕಾರುಗಳಿಗೆ ಬೆಂಕಿ ಇಡುವ ಮೂಲಕ ದ್ವೇಷ ತೀರಿಸಿಕೊಳ್ಳಲು ಮುಂದಾದರೇ ಎಂಬ ಅಯಾಮದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಶಿವನ ಮೂರ್ತಿ ಪ್ರತಿಷ್ಠಾಪನೆ ವಿವಾದ ಕಾರಣವೇ?
ಇನ್ನು ಬೇಗೂರು ಕೆರೆಯಲ್ಲಿ ಪುರಾತನ ಶಿವನ ವಿಗ್ರಹ ಪ್ರತಿಷ್ಠಾಪನೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ತಡೆಯಾಜ್ಞೆ ಭಾಗವಾಗಿ ಶಿವನ ವಿಗ್ರಹಕ್ಕೆ ಟಾರ್ಪಲ್ ಸುತ್ತಲಾಗಿತ್ತು. ಒಂದು ವಾರದ ಹಿಂದೆ ಈ ಶಿವನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವ ವಿಚಾರವಾಗಿ ಹಿಂದೂಪರ ಸಂಘಟನೆಗಳು ಸಾಮಾಜಿಕ ಜಾಲ ತಾಣದಲ್ಲಿ ದೊಡ್ಡ ಅಭಿಯಾನ ಕೈಗೊಂಡಿದ್ದರು. ಅಭಿಯಾನದ ನಡುವೆ ಶಿವನ ವಿಗ್ರಹಕ್ಕೆ ಹಾಕಿದ್ದ ಟಾರ್ಪಲ್ ತೆಗೆದಿದ್ದ ಹಿಂದೂ ಪರ ಸಂಘಟನೆಗಳು ಭಾಗವಾಧ್ವಜ ಹಾರಿಸಿದ್ದರು. ಈ ವಿಚಾರವಾಗಿ ವಿವಾದಿತ ಸ್ಥಳಕ್ಕೆ ತೆರಳಿದ್ದ ಬಿಜೆಪಿ ಶಾಸಕ ಸತೀಶ್ ರೆಡ್ಡಿ, ವಿವಾದವನ್ನು ಇತ್ಯರ್ಥ ಪಡಿಸುವ ಸಂಬಂಧ ಮಧ್ಯ ಪ್ರವೇಶಿಸಿದ್ದರು. ಇದಾಗಿ ಎರಡು ದಿನದ ಬಳಿಕವೇ ಸತೀಶ್ ರೆಡ್ಡಿ ಅವರ ಮನೆ ಮುಂದೆ ನಿಲ್ಲಿಸಿದ್ದ ಎರಡು ಕಾರುಗಳಿಗೆ ಬೆಂಕಿ ಹಚ್ಚಲಾಗಿತ್ತು.

ಇದೀಗ ಬೊಮ್ಮನಹಳ್ಳಿಯಲ್ಲಿ ಶಾಸಕರ ಕಾರುಗಳಿಗೆ ಬೆಂಕಿ
ಒಂದು ವರ್ಷದ ಹಿಂದೆ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆ ಮುಂದೆ ಕಿಡಿಗೇಡಿಗಳು ಪ್ರತಿಭಟನೆ ಹೆಸರಿನಲ್ಲಿ ಬೆಂಕಿ ಹಚ್ಚಿದ್ದರು. ಇದು ದೊಡ್ಡ ಘರ್ಷಣೆಗೆ ನಾಂದಿ ಹಾಡಿತ್ತು. ಡಿ.ಜೆ. ಹಳ್ಳಿ ಹಾಗೂ ಕೆ.ಜಿ ಹಳ್ಳಿ ಗಲಭೆಗೆ ಕಾರಣವಾಗಿ ಅನೇಕ ವಾಹನಗಳು ಸುಟ್ಟು ಹೋಗಿದ್ದವು. ಪೊಲೀಸ್ ಠಾಣೆಗೆ ಬೆಂಕಿ ಇಡಲಾಗಿತ್ತು. ವಿಪರ್ಯಾಸವೆಂದರೆ 2020 ರಲ್ಲಿ ಡಿ.ಜೆ. ಹಳ್ಳಿ ಘಟನೆ ನಡೆದ ದಿನವೇ ಬೊಮ್ಮನಹಳ್ಳಿ ಶಾಸಕ ಶತೀಶ್ ರೆಡ್ಡಿ ಅವರ ಮನೆ ಕಾರುಗಳಿಗೆ ಬೆಂಕಿ ಇಟ್ಟಿರುವುದು ಕಾಕತಾಳೀಯ. ಇದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ನಾಂದಿ ಹಾಡಿದೆ.

ಸಿಸಿಟಿವಿ ದೃಶ್ಯಗಳ ಅನ್ವೇಷಣೆ
ಡಿ.ಜೆ. ಹಳ್ಳಿ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ಪೊಲೀಸರು ಸತೀಶ್ ರೆಡ್ಡಿ ಅವರ ಕಾರುಗಳಿಗೆ ಬೆಂಕಿ ಇಟ್ಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಿದ್ದಾರೆ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕಾಲಮಿತಿಯಲ್ಲಿ ಆರೋಪಿಗಳ ಎಡೆಮುರಿ ಕಟ್ಟಲು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೂರು ಪ್ರತ್ಯೇಕ ತನಿಖಾ ತಂಡಗಳನ್ನು ರಚನೆ ಮಾಡಿ ಆರೋಪಿಗಳ ಪತ್ತೆಗೆ ಶೋಧ ನಡೆಸಲಾಗುತ್ತಿದೆ. ಘಟನೆ ಸಂಬಂಧ ಸಿಸಿಟಿವಿ ದೃಶ್ಯ ಆಧರಿಸಿ ಸುಮಾರು 20 ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಇದರಲ್ಲಿ ಇಬ್ಬರು ಪ್ರಮುಖ ಆರೋಪಿಗಳನ್ನು ವಶಕ್ಕೆ ಪಡೆದಿರುವ ಬೊಮ್ಮನಹಳ್ಳಿ ಪೊಲೀಸರು ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಿದ್ದಾರೆ. ಇಬ್ಬರು ಶಂಕಿತರನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಅನೀಲ್ ಎಂಬಾತ ಶಂಕಿತ ಆರೋಪಿಗೂ ಘಟನೆ ಸಂಬಂಧದ ಸಾಂದರ್ಭಿಕ ಸಾಕ್ಷಿಗಳಿಗೂ ಹೋಲಿಕೆಯಾಗದ ಕಾರಣ ವಿಚಾರಣೆ ಇನ್ನೂ ಮುಂದುವರೆಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸತೀಶ್ ರೆಡ್ಡಿಗೆ ಸಾಂತ್ವನ ಹೇಳಿದ ಕ್ರಿಶ್ಚಿಯನ್ ಫಾದರ್
ಬೇಗೂರು ಕೆರೆಯಲ್ಲಿ ಶಿವನ ವಿಗ್ರಹ ಪ್ರತಿಷ್ಠಾಪನೆ ವಿಚಾರದಲ್ಲಿ ಶಾಸಕರ ಕಾರುಗಳಿಗೆ ಬೆಂಕಿ ಇಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕ್ರಿಶ್ಚಿಯನ್ ಸಮುದಾಯದ ಫಾದರ್ ಸತೀಶ್ ರೆಡ್ಡಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ಮಾಡಿದರು. ಇದಕ್ಕೂ ಮೊದಲು ಸತೀಶ್ ರೆಡ್ಡಿ ಅವರನ್ನು ಭೇಟಿ ಮಾಡಿದ ಸಂತೋಷ್ ಗುರೂಜಿ, ರಾಜ್ಯದಲ್ಲಿ ಬೆಂಕಿ ಹಚ್ಚುವ ಕೃತ್ಯಗಳು ಜಾಸ್ತಿಯಾಗುತ್ತಿವೆ. ಬೇಗೂರು ಕೆರೆಯಲ್ಲಿ ಶಿವಮೂರ್ತಿ ಪ್ರತಿಷ್ಠಾಪನೆ ವಿಚಾರದ ಬಳಿಕ ಈ ಕೃತ್ಯ ಆಗಿದೆ. ಇದನ್ನು ಪೊಲೀಸ್ ಆಯುಕ್ತ ಕಮಲಪಂತ್ ಅವರೇ ಸ್ವತಃ ಮುಂದಾಳತ್ವ ವಹಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಬೈಕ್ನಲ್ಲಿ ಎಸ್ಕೇಪ್ ಶಂಕೆ
ಶಾಸಕ ಸತೀಶ್ ರೆಡ್ಡಿ ಅವರ ಕಾರುಗಳಿಗೆ ಬೆಂಕಿ ಇಟ್ಟ ಪ್ರಕರಣ ಸಂಬಂಧ ಪೊಲೀಸರು ಈವರೆಗೂ ನಾನೂರು ಸಿಸಿಟಿವಿ ಫೂಟೇಜ್ ಸಂಗ್ರಹಿಸಿ ಪರಿಶೀಲನೆ ನಡೆಸಿದ್ದಾರೆ. ಮೂವರು ಆರೋಪಿಗಳು ಬೈಕ್ ನಲ್ಲಿ ಬಂದು ಕೃತ್ಯ ಎಸಗಿ ಪರಾರಿಯಾಗಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಕೃತ್ಯ ಎಸಗಲು ಮನೆ ಸಮೀಪ ಬೈಕ್ ಇಲ್ಲದೇ ಬಂದಿದ್ದು, ಬೆಂಕಿ ಇಟ್ಟ ಬಳಿಕ ಹೊಂಗಸಂದ್ರದ ಮೂಲಕ ಪರಾರಿಯಾಗಿದ್ದಾರೆ. ಹೊಂಗಸಂದ್ರದ ಎಲ್ಲಾ ರಸ್ತೆಗಳ ಸಿಸಿಟಿವಿಯನ್ನು ಸಂಗ್ರಹಿಸಿ ತಪಾಸಣೆ ನಡೆಸಲಾಗುತ್ತಿದೆ. ಇನ್ನು ಸತೀಶ್ ರೆಡ್ಡಿ ಅವರ ಮನೆಗೆ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಹಾಗೂ ಮೈಕೋ ಲೇಔಟ್ ವಿಭಾಗದ ಎಸಿಪಿ ಕರಿಬಸವನಗೌಡ ಆಗಮಿಸಿ ಪರಿಶೀಲನೆ ನಡೆಸಿ ಕೆಲವು ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ. ಯಾವುದೋ ಕಾರಣದಿಂದ ನನ್ನನ್ನು ಹೆದರಿಸಲು ಈ ಕೃತ್ಯ ಎಸಗಿರಬಹುದು. ಇಲ್ಲವೇ ರಾಜಕೀಯ ಪ್ರೇರಿತವಾಗಿ ನಡೆದಿರಬಹುದು. ನಾನು ಈ ರೀತಿಯ ಬೆದರಿಕೆಗಳಿಗೆ ಹೆದರುವನು ಅಲ್ಲ. ಕೆಲವು ಆಯಾಮದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಾರುಗಳಿಗೆ ಬೆಂಕಿ ಇಟ್ಟಿರುವ ಆರೋಪಿಗಳನ್ನು ಪತ್ತೆ ಮಾಡಿ ಪೊಲೀಸರು ಬಂಧಿಸಲಿದ್ದಾರೆ ಎಂದು ಶಾಸಕ ಸತೀಶ್ ರೆಡ್ಡಿ ತಿಳಿಸಿದ್ದಾರೆ.












Click it and Unblock the Notifications